ದೋಷ ಪರಿಹಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ!
ಬೆಂಗಳೂರು, ಡಿ. 18: ದೋಷ ಪರಿಹಾರಕ್ಕಾಗಿ ಮೈಲಾರಲಿಂಗೇಶ್ವರ ಸ್ವಾಮಿ ಸನ್ನಿಧಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ್ದಾರೆ.
Recommended Video
2017ರಲ್ಲಿ ಕಾರ್ಣಿಕೋತ್ಸವ ಸಮಯದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿದ್ದೆ. ಈ ದೇವಾಲಯಕ್ಕೆ ಹೆಲಿಕಾಪ್ಟರ್ನಲ್ಲಿ ಬರುವಂತಿಲ್ಲ. ದೋಷವಾಗಿದೆ ಎಂದು ಇಲ್ಲಿನ ಗುರುಗಳು ತಿಳಿಸಿದರು. ನಮ್ಮ ಕಾರ್ಯಕರ್ತರು ಹರಕೆ ಮಾಡಿಕೊಂಡು ಬೆಳ್ಳಿ ಹೆಲಿಕಾಪ್ಟರ್ ಮಾಡಿಸಿಕೊಂಡು ದೇವಾಲಯಕ್ಕೆ ನೀಡಿದ್ದಾರೆ. ಇಲ್ಲಿನ ಸಾವಿರಾರು ಜನ ನನಗಾಗಿ ಪೂಜೆ ಸಲ್ಲಿಸಿ ಹರಕೆ ಕಟ್ಟುಕೊಂಡಿದ್ದಾರೆ, ಹೀಗಾಗಿ ಇಲ್ಲಿಗೆ ಬಂದು ದೇವರಲ್ಲಿ ಕ್ಷಮೆಯಾಚಿಸಿ ರಾಜ್ಯದಲ್ಲಿ ನೆಮ್ಮದಿ ನೆಲೆಸಲಿ ಅಂತಾ ಪ್ರಾರ್ಥಿಸಿದ್ದೇನೆ ಎಂದರು.
ಧರ್ಮ ವೈಯಕ್ತಿಕ ವಿಚಾರ, ಅದು ಭಕ್ತ ಹಾಗೂ ಭಗವಂತನ ನಡುವಣ ವಿಚಾರ. ಕೆಲವರು ಮನೆಯಲ್ಲೇ ಪೂಜೆ ಮಾಡಿದರೆ ಮತ್ತೇ ಕೆಲವರು ದೇವಾಲಯಕ್ಕೆ ಬರುತ್ತಾರೆ. ರಾಜರು, ಪಾಳೆಗಾರರು, ಋಷಿ ಮುನಿಗಳು ದೇವಾಲಯ ಕಟ್ಟಿ ಜನ ನೆಮ್ಮದಿಯಾಗಿ ಪೂಜೆ ಮಾಡಿ ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸಿದ್ದಾರೆ. ನಾವು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದು ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.