ಐಟಿ, ಇಡಿಯಿಂದ ಕಿರುಕುಳ: ಹೈಕೋರ್ಟ್ಗೆ ಡಿಕೆಶಿ ತಾಯಿ ದೂರು
Recommended Video
ಬೆಂಗಳೂರು, ಡಿಸೆಂಬರ್ 18: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ನವದೆಹಲಿ ವಿಭಾಗದ ಜಾರಿ ನಿರ್ದೇಶನಾಲಯ (ಇ.ಡಿ) ತಮಗೆ ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವಿರುದ್ಧ ಯಾವುದೇ ಎಫ್ಐಆರ್ ಅಥವಾ ಆರೋಪಪಟ್ಟಿ ದಾಖಲಾಗಿಲ್ಲ. ಜಾರಿ ನಿರ್ದೇಶನಾಲಯ ತನ್ನ ವ್ಯಾಪ್ತಿಯನ್ನು ಮೀರಿದೆ. ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಲು ಜಾರಿ ನಿರ್ದೇಶನಾಲಯ ಪ್ರಯತ್ನಿಸುತ್ತಿದೆ ಎಂದು ಗೌರಮ್ಮ ಆರೋಪಿಸಿದ್ದಾರೆ.
ಡಿಕೆಶಿಗೆ ಸಿಕ್ಕಿದ್ದು ಜಾಮೀನಷ್ಟೇ, ಕ್ರಿಮಿನಲ್ ಕೇಸುಗಳು ಇನ್ನೂ ವಿಚಾರಣೆಯಲ್ಲಿವೆ!
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಅವರ ಏಕಸದಸ್ಯ ನ್ಯಾಯಪೀಠ, ಗೌರಮ್ಮ ಅವರಿಗೆ 85 ವರ್ಷವಾಗಿರುವುದರಿಂದ ಅವರು ತನಿಖೆಗಾಗಿ ನವದೆಹಲಿಗೆ ತೆರಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರ ಮನೆಯಲ್ಲಿಯೇ ಹೇಳಿಕೆ ದಾಖಲು ಮಾಡಲು ಸಾಧ್ಯವೇ ಎಂದು ಬುಧವಾರ ತಿಳಿಸುವಂತೆ ಇ.ಡಿ ಪರ ವಕೀಲರಿಗೆ ಸೂಚಿಸಿತು. ಬಳಿಕ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಇ.ಡಿ ಕ್ರಮ ಅಕ್ರಮವಾಗಿದೆ
2019ರ ಅ. 9ರಂದು ಇ.ಡಿ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಕೋರಿರುವ ಗೌರಮ್ಮ, ಇ.ಡಿಯ ಕ್ರಮಗಳು ಅಕ್ರಮವಾಗಿವೆ. ಅವರು ಕೇಳಿರುವ ವಿವರಗಳಲ್ಲಿ ಕಾಲಾವಧಿಯನ್ನು ಉಲ್ಲೇಖಿಸಿಲ್ಲ. ಮುಖ್ಯವಾಗಿ 2002ರಲ್ಲಿ ಪಿಎಂಎಲ್ ಕಾಯ್ದೆ ಅಸ್ತಿತ್ವಕ್ಕೆ ಬರುವ ಮುನ್ನ ನಡೆದ ಅಪರಾಧಗಳಿಗೆ ಸಂಬಂಧಿಸಿದಂತೆ ಇ.ಡಿ ಮಾಹಿತಿಗಳನ್ನು ಕೇಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಪ್ರಕರಣ ತಮಗೆ ಸಂಬಂಧಿಸಿಲ್ಲ
ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ 2019ರ ಅ. 10ರಂದು ಜಾರಿ ನಿರ್ದೇಶನಾಲಯ ಗೌರಮ್ಮ ಅವರಿಗೆ ನೋಟಿಸ್ ಜಾರಿ ಮಾಡಿತ್ತು. 2017ರ ಆ. 2ರಂದು ಅವರ ಮಗ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ದೆಹಲಿಯ ಅಪಾರ್ಟ್ಮೆಂಟ್ನಲ್ಲಿ ಐಟಿ ದಾಳಿಯ ವೇಳೆ ದೊರೆತ ಅಕ್ರಮ ಹಣದ ಕುರಿತು ನಡೆದ ತನಿಖೆಯ ಬಳಿಕ ಈ ಸಮನ್ಸ್ ನೀಡಲಾಗಿತ್ತು. ಅಕ್ರಮ ಹಣ ವರ್ಗಾವಣೆಯ ಯಾವ ಪ್ರಕರಣವೂ ತಮಗೆ ಸಂಬಂಧಿಸಿಲ್ಲ ಎಂದು ಗೌರಮ್ಮ ಹೇಳಿದ್ದಾರೆ.
'ಕಾಪಿ ಪೇಸ್ಟ್ ಮಾಡಬೇಡಿ': ಡಿಕೆಶಿ ಪ್ರಕರಣದಲ್ಲಿ ಇ.ಡಿಗೆ ಸುಪ್ರೀಂಕೋರ್ಟ್ ತರಾಟೆ
ಯಾವ ಯಾವ ವಿವರಗಳು ಬೇಕು?
ಗೌರಮ್ಮ ಅವರಿಗೆ ವಂಶ ಪಾರಂಪರ್ಯದಿಂದ ಬಂದ ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ಇ.ಡಿ ಕೇಳಿದೆ. ಜತೆಗೆ ಅಗತ್ಯ ದಾಖಲೆಗಳು, ಅವರು ಖರೀದಿ ಮಾಡಿದ ಮತ್ತು ಮಾರಾಟ ಮಾಡಿದ ಆಸ್ತಿ ವಿವರಗಳು, ಬ್ಯಾಂಕ್ ದಾಖಲೆಗಳ ಪ್ರತಿಗಳು ಮತ್ತು ಈವರೆಗಿನ ಐಟಿ ಸಂಬಂಧಿತ ದಾಖಲೆಗಳು, ಅವರ ಪಾಲುದಾರಿಕೆ, ನಿರ್ದೇಶನ, ಸಹಭಾಗಿತ್ವ ಮತ್ತು ಪ್ರಯೋಜನ ಹೊಂದಿರುವ ಕಂಪೆನಿಗಳು ಹಾಗೂ ಸಂಸ್ಥೆಗಳ ವಿವರ, ಯಾವುದೇ ಆಸ್ತಿಯ ಮಾರಾಟ, ಖರೀದಿ ಅಥವಾ ಹಕ್ಕುಗಳ ವರ್ಗಾವಣೆ ಮಾಡುವುದಕ್ಕೆ ಒಪ್ಪಂದ ನಡೆಸಲಾಗಿದೆಯೇ ಮುಂತಾದ ವಿವರಗಳನ್ನು ಕೇಳಲಾಗಿದೆ.
ಉಪಚುನಾವಣೆಯಲ್ಲಿ ಸೈಲೆಂಟ್: ಒಂದೊಂದಾಗಿ ಕಾರಣ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್
ಕಿರುಕುಳ ನೀಡಲು ಪ್ರಯತ್ನ
ಇ.ಡಿ ನಡೆ ರಾಜಕೀಯ ಪಕ್ಷಪಾತದಿಂದ ಕೂಡಿದೆ ಎನ್ನುವುದು ಸ್ಪಷ್ಟ. ಬಾಹ್ಯ ಕಾರಣಗಳಿಂದ ಇ.ಡಿ ಮತ್ತು ಐಟಿಗಳು ತಮಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿವೆ. ತಮಗೆ ಮರೆವಿನ ಸಮಸ್ಯೆ ಇದ್ದು, ವಯೋಸಹಜ ತೊಂದರೆಗಳಿಂದ ಬಳಲುತ್ತಿರುವುದಾಗಿ ಗೌರಮ್ಮ ಹೇಳಿದ್ದಾರೆ. ತಮ್ಮ ಕುಟುಂಬದ ವ್ಯವಹಾರಗಳು ತಮ್ಮ ಪತಿಯಾಗಿದ್ದ ಡಿ.ಕೆ. ಕೆಂಪೇಗೌಡ ಅವರೇ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಈ ರೀತಿಯ ವ್ಯವಹಾರಗಳ ಕುರಿತಾದ ಪ್ರಶ್ನೆಗಳಿಗೆ ತಮ್ಮಿಂದ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.