ಸಿಎಂ ಯಡಿಯೂರಪ್ಪ 'ರಾಜೀನಾಮೆ' ಮಾತಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್
ಬೆಂಗಳೂರು, ಜೂ. 06: ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲವನ್ನುಂಟು ಮಾಡಿದೆ. ಆಡಳಿತ ಪಕ್ಷ ಬಿಜೆಪಿ ನಾಯಕರಲ್ಲಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಕುತೂಹಲ ಮೂಡಿಸಿದ್ದು, ಸಂಪುಟದ ಸದಸ್ಯರು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೊಟ್ಟಿರುವ ಹೇಳಿಕೆ ಬಿಜೆಪಿಯಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ. ಸಿಎಂ ಯಡಿಯೂರಪ್ಪ ಅವರ ಹುದ್ದೆ ತ್ಯಾಗದ ಹಿಂದಿನ ರಹಸ್ಯವನ್ನು ಡಿಕೆಶಿ ಬಿಚ್ಚಿಟ್ಟಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ಕುರಿತಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಹೇಳಿಕೆಯನ್ನು ಬಿಜೆಪಿಯಲ್ಲಿ ಯಾವಾಗಲೂ ವಿಶೇಷವಾಗಿ ಪರಿಗಣಿಸಲಾಗುತ್ತದೆ. ಜೊತೆಗೆ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಅನುಕೂಲವಾಗುವಂಥ ಹೇಳಿಕೆಗಳನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕೊಡುತ್ತಿದ್ದಾರೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರ 'ರಾಜೀನಾಮೆ' ಹೇಳಿಕೆ ಹಿಂದಿನ ರಹಸ್ಯವನ್ನು ಡಿಕೆಶಿ ಬಿಚ್ಚಿಟ್ಟಿದ್ದಾರೆ. ಅವರು ಹೇಳಿರುವ ಆ ರಹಸ್ಯವಾದರೂ ಏನು? ಮುಂದಿದೆ!
ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ ಡಿಕೆಶಿ ಹೇಳಿಕೆ!
ರಾಜಕಾರಣದಲ್ಲಿ ನಾನಾ ತಂತ್ರಗಾರಿಕೆಗಳಿರುತ್ತವೆ. ಹಾಗೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆ ಕುರಿತ ಹೇಳಿಕೆ ಹಿಂದೆ ಬೇರೆಯದೇ ತಂತ್ರವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ತಮ್ಮ ಪಕ್ಷದಿಂದ ಬಿಜೆಪಿ ಹೋಗಿ ಮಂತ್ರಿಯಾದವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಅದು ರಾಜಕೀಯನ ಸಂಚಲನಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಹೇಳುವುದೊಂದು ಮಾಡುವದೊಂದು!
ರಾಜಕಾರಣದಲ್ಲಿ ಬಹಳ ತಂತ್ರಗಳಿರುತ್ತವೆ. ರಾಜಕೀಯದಲ್ಲಿ ಹೇಳುವುದು ಒಂದಾದರೆ ಮಾಡುವುದು ಮತ್ತೊಂದು ಆಗಿರುತ್ತದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರದ್ದು ಬೇರೆಯದ್ದೇ ಆದ ತಂತ್ರವಿದೆ. ರಾಜ್ಯ ಹಾಗೂ ಬಿಜೆಪಿ ರಾಜಕಾರಣದಲ್ಲಿ ಯಡಿಯೂರಪ್ಪ ಅವರು ಗಟ್ಟಿ ನಾಯಕ. ಅವರ ನಾಯಕತ್ವದಲ್ಲಿಯೇ ಕಳೆದ ಸಾರ್ವತ್ರಿಕ ಚುನಾವಣೆ ನಡೆದಿದೆ. ಅವರ ನಾಯಕತ್ವದಲ್ಲೇ ನಮ್ಮ ಪಕ್ಷದ ಸ್ನೇಹಿತರನ್ನು ಕರೆದುಕೊಂಡು ಹೋಗಿ, ಸರಕಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಿಜೆಪಿಗೆ ಹೋಗಿರುವ 17 ಜನರ ಬಗ್ಗೆ ಡಿಕೆಶಿ ಪ್ರಸ್ತಾಪಿಸಿದ್ದಾರೆ.
ಯಡಿಯೂರಪ್ಪ ಸಲಿಸಾಗಿ ಜಗ್ಗಲ್ಲ ಎಂದಿದ್ಯಾಕೆ?
ಜೊತೆಗೆ ಮತ್ತೊಂದು ಮಾತನ್ನು ಡಿಕೆಶಿ ಹೇಳಿದ್ದಾರೆ. ಈಗ ಸಿಎಂ ಯಡಿಯೂರಪ್ಪ ಅವರನ್ನು ಬದಲಿಸುವ ನಿರ್ಧಾರ ಅವರ ಪಕ್ಷಕ್ಕೆ ಸಂಬಂಧಿಸಿದ್ದು. ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ನನ್ನ ಪ್ರಕಾರ ಯಡಿಯೂರಪ್ಪ ಅವರು ಗಟ್ಟಿ ಮನುಷ್ಯ, ಅಷ್ಟು ಸಲೀಸಾಗಿ ಅವರು ಜಗ್ಗಲ್ಲ. ಹೀಗಾಗಿ ಏನೇನಾಗುತ್ತದೆ ಎಂಬುದನ್ನು ಕಾದು ನೋಡೋಣ ಎನ್ನುವ ಮೂಲಕ ಮತ್ತೊಂದು ಕುತೂಹಲವನ್ನು ಡಿ.ಕೆ. ಶಿವಕುಮಾರ್ ಹುಟ್ಟಿಸಿದ್ದಾರೆ.
Recommended Video
ಡಿಕೆಶಿ ಬಿಚ್ಚಿಟ್ಟ 'ರಾಜೀನಾಮೆ' ರಹಸ್ಯ!
ಜನರು ಒಪ್ಪದೆ ಇರಬಹುದು. ಜೊತೆಗೆ ನಾವು ವಿರೋಧ ಪಕ್ಷವಾಗಿ ಏನು ಬೇಕಾದರೂ ಹೇಳಬಹುದು. ಆದರೆ ರಾಜ್ಯದಲ್ಲಿ ಆಡಳಿತ ವೈಫಲ್ಯ, ಆಂತರಿಕ ಬಿಕ್ಕಟ್ಟಿನಿಂದ ಬಿಜೆಪಿಯಲ್ಲಿನ ಪ್ರಮುಖ ಏಳೆಂಟು ನಾಯಕರು ತಾವೇ ಮುಖ್ಯಮಂತ್ರಿ ಆಗಬೇಕು ಎಂದು ಸಿದ್ಧವಾಗಿದ್ದಾರೆ. ಯಡಿಯೂರಪ್ಪ ಅವರ ಮುಂದೆ ಬಿಎಸ್ವೈ ಅವರೇ ಸಿಎಂ ಎನ್ನುವವರು, ಹಿಂದೆ ತಾವೇ ಸೂಟ್ ಹೊಲಿಸಿ, ಯಡಿಯೂರಪ್ಪ ಅವರನ್ನು ಇಳಿಸಲು ಮುಹೂರ್ತ ಇಟ್ಟುಕೊಂಡು ರೆಡಿಯಾಗಿದ್ದಾರೆ. ಎಲ್ಲವೂ ನಮಗೆ ಗೊತ್ತಿದೆ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ.
ದುರ್ದೈವ ಏನೆಂದರೆ, ಬಿಜೆಪಿಯವರು ಶಿಸ್ತು ಕಳೆದುಕೊಂಡಿದ್ದಾರೆ. ಯಡಿಯೂರಪ್ಪ ಅವರ ಹೇಳಿಕೆಯನ್ನು ಎರಡು ಮೂರು ರೀತಿಯಲ್ಲಿ ಬೇಕಾದರೂ ವಿಶ್ಲೇಷಣೆ ಮಾಡಬಹುದು. ನನ್ನನ್ನು ಮುಟ್ಟಿ ನೋಡಿ ಅಂತಾ ಎಚ್ಚರಿಕೆ ಇರಬಹುದು, ನಾನು ಶಿಸ್ತಿನ ಸಿಪಾಯಿ ಅಂತಾನೂ ಇರಬಹುದು. ನೀವು ಹೇಗೆ ವಿಶ್ಲೇಷಣೆ ಮಾಡುತ್ತೀರೋ ಮಾಡಿ ಎಂದಿದ್ದಾರೆ.
ಆದರೆ ತಾವು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಎಂಬ ಎಚ್ಚರಿಕೆಯನ್ನು ಬಿಜೆಪಿ ಹೈಕಮಾಂಡ್ಗೆ ಯಡಿಯೂರಪ್ಪ ರವಾನಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಹೈಕಮಾಂಡ್ ಕೂಡ ಅವಧಿ ಮುಗಿಯುವವರೆಗೆ ಯಡಿಯೂರಪ್ಪ ಅವರೇ ಸಿಎಂ ಎಂಬ ಭರವಸೆ ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಡಿಕೆಶಿ ಅವರು ಹೇಳುವುದರಲ್ಲಿ ಸತ್ಯವಿದೆ ಎನ್ನಲಾಗಿದೆ!