ಕರ್ನಾಟಕದಲ್ಲಿ 1,250 ಕೋಟಿ ಲಾಕ್ಡೌನ್ ಪ್ಯಾಕೇಜ್ ಹಿಂದೆ ಹೀಗೊಂದು ಉದ್ದೇಶ: ಡಿಕೆಶಿ
ಬೆಂಗಳೂರು, ಮೇ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ ಕರ್ನಾಟಕ ಸರ್ಕಾರ ಘೋಷಿಸಿದ 1250 ಕೋಟಿ ರೂಪಾಯಿ ಲಾಕ್ಡೌನ್ ಪ್ಯಾಕೇಜ್ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
Recommended Video
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಟ್ಟೆ ಹೊಲೆಯುವ ಟೈಲರ್ಸ್, ಬಟ್ಟೆ ನೇಯುವವರು, ಸವಿತಾ ಸಮಾಜದ ಜನರು ಇದ್ದಾರೆ ಅವರನ್ನೆಲ್ಲ ಬೇಕಿದ್ದರೆ ಹೋಗಿ ಕೇಳಿ ಎಂದರು. 7 ಲಕ್ಷ ಚಾಲಕರ ಪೈಕಿ ಸರ್ಕಾರ ಕೇವಲ 1 ಲಕ್ಷ ಚಾಲಕರಿಗೇನೋ ಸಹಾಯಧನವನ್ನು ಘೋಷಿಸಿದೆ. ಸರ್ಕಾರದಿಂದ ಅವರಿಗೆ ನೆರವು ಸಿಗುತ್ತೆ ಎಂಬ ವಿಶ್ವಾಸ ನಮಗಂತೂ ಇಲ್ಲ ಎಂದು ಕಿಡಿ ಕಾರಿದರು.
ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಪರಿಹಾರ ನೀಡುವ ಉದ್ದೇಶವಿದ್ದರೆ ಬಡವರಿಗೆ ಸಹಾಯವಾಗುವ ರೀತಿ ಕನಿಷ್ಠ 10,000 ರೂಪಾಯಿ ನೀಡಬೇಕು. ಅದನ್ನು ಪಂಚಾಯತಿಗಳಿಗೆ ನೀಡಲಿ, ಪಂಚಾಯತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ಮೂಲಕ ಫಲಾನುಭವಿಗಳಿಗೆ ಪರಿಹಾರ ಧನ ತಲುಪುವಂತಾ ವ್ಯವಸ್ಥೆ ಆಗಬೇಕು. ಅದರ ಹೊರತಾಗಿ ಈ ಘೋಷಣೆ ಕೇವಲ ಕಾಗದದಲ್ಲಿ ಉಳಿದುಕೊಳ್ಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಒತ್ತಾಯಕ್ಕೆ ಮಣಿದು ಸರ್ಕಾರದ ಪ್ಯಾಕೇಜ್ ಘೋಷಣೆ
ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಪ್ರತಿಪಕ್ಷಗಳು ಒತ್ತಾಯ ಮಾಡಿರುವ ಹಿನ್ನೆಲೆ ಸರ್ಕಾರ ಲಾಕ್ಡೌನ್ ಪ್ಯಾಕೇಜ್ ಘೋಷಣೆ ಮಾಡಿದೆ. 2 ಸಾವಿರ ರೂಪಾಯಿ ಅಥವಾ 1,000 ರೂಪಾಯಿ ಹಣದಿಂದ ಏನೂ ಆಗುವುದಿಲ್ಲ. ಏನೋ ಒಂದು ಕೊಡಬೇಕು ಅಂತಾ ಕೊಟ್ಟಿದ್ದಾರೆಯೇ ವಿನಃ ಇದರ ಹಿಂದೆ ಜನರಿಗೆ ತಲುಪಿಸುವ ಯಾವುದೇ ಉದ್ದೇಶವಿದ್ದಂತೆ ತೋರುತ್ತಿಲ್ಲ ಎಂದು ಡಿಕೆಶಿ ಆರೋಪಿಸಿದ್ದಾರೆ.
ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ
ರೈತರ ಸಾಲದ ಮೇಲಿನ ಬಡ್ಡಿ ಮನ್ನಾಗೆ ಕ್ರಮ ತೆಗೆದುಕೊಂಡಿಲ್ಲ
ರಾಜ್ಯದಲ್ಲಿ ಎಪಿಎಲ್ ಕಾರ್ಡ್ ಬಗ್ಗೆ ಹೇಳಿರುವ ಅಂಶಗಳೆಲ್ಲ ಗೊಂದಲಮಯವಾಗಿವೆ. ರೈತರಿಗೆ ಬೆಂಬಲ ಬೆಲೆ ನೀಡುವುದಕ್ಕೆ ಸಂಬಂಧಿಸಿದಂತೆ ಏನಾದರೂ ಕ್ರಮಗಳನ್ನು ತೆಗೆದುಕೊಂಡಿಲ್ಲ, ಬೆಳೆದ ಬೆಳೆಗಳ ಬೆಲೆ ಸಂಪೂರ್ಣ ಇಳಿಕೆಯಾಗಿದೆ. ಬ್ಯಾಂಕಿನ ಅಧಿಕಾರಿಗಳ ಜೊತೆ ನೇರವಾಗಿ ಮಾತನಾಡಿದ್ದಾರಾ. ಸಾಲದ ಮೇಲಿನ ಬಡ್ಡಿಮನ್ನಾ ಮಾಡಿಸುವುದಕ್ಕೆ ಕ್ರಮ ತೆಗೆದುಕೊಂಡಿದ್ದೀರಾ. ಒಂದು ವರ್ಷ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿಸಿ. ಕಟ್ಟಡ ಕಾರ್ಮಿಕರು, ಲೈನ್ ಮೆನ್, ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವವರನ್ನು ಮೊದಲ ಶ್ರೇಣಿ ಕಾರ್ಮಿಕರು ಎಂದು ಪರಿಗಣಿಸಬೇಕು. ಅವರ ಆರೋಗ್ಯ ರಕ್ಷಣೆಗೆ ಅಗತ್ಯವಾದ ಸೌಲಭ್ಯ ಮತ್ತು ವಿಮೆ ಕಾರ್ಡ್ ಅನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
"ಊಟಕ್ಕೆ ಯಾರಾದ್ರೂ ಆಧಾರ್ ಕಾರ್ಡ್ ತರುತ್ತಾರಾ"
ಕೊರೊನಾವೈರಸ್ ಸಂದಿಗ್ಧ ಸ್ಥಿತಿಯಲ್ಲಿ ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಘೋಷಿಸಿದರು. ಇದೀಗ ಇಂದಿರಾ ಕ್ಯಾಂಟೀನ್ ನಲ್ಲಿ ಊಟಕ್ಕೆ ಆಧಾರ್ ಕಾರ್ಡ್ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಊಟಕ್ಕೆ ಬರುವವರು ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕಾ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಅಲ್ಲದೇ ಸರ್ಕಾರವು ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
"ಸರ್ಕಾರದ ಮೇಲೆ ನಂಬಿಕೆ ಇಲ್ಲದ್ದಕ್ಕೆ ಡಿಸಿ ಜೊತೆ ಚರ್ಚೆ"
ಕೊರೊನಾವೈರಸ್ ಸೋಂಕಿನ ತಪಾಸಣೆ ವೇಗವನ್ನು ಹೆಚ್ಚಿಸುವ ಅಗತ್ಯವಿದೆ. ಕರ್ನಾಟಕದಲ್ಲಿ ಇಷ್ಟೊಂದು ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಇಟ್ಟುಕೊಂಡು ಕೊವಿಡ್-19 ಸೋಂಕು ಪರೀಕ್ಷೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಸರ್ಕಾರದ ವೈಫಲ್ಯ ಇದರಿಂದ ಎದ್ದು ಕಾಣುತ್ತದೆ. ಇದನ್ನು ಅರಿತುಕೊಂಡೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ಕಾರದ ಬದಲಿಗೆ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಕೊವಿಡ್-19 ಪರೀಕ್ಷೆಯ ಆಡಳಿತ ಅಧಿಕಾರಿಗಳ ವ್ಯಾಪ್ತಿಗೆ ಬರುತ್ತದೆಯೇ ವಿನಃ ರಾಜಕಾರಣಿಗಳ ಅಡಿಯಲ್ಲಿ ಅಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.