ಹೆಲಿಕ್ಯಾಪ್ಟರ್ ತಂದಿಟ್ಟ ಸಂಕಷ್ಟ: ಮೈಲಾರದಲ್ಲಿ ಡಿಕೆಶಿ ಶಾಪ ವಿಮೋಚನೆ ಮಾಡಿಕೊಂಡ ಡಿಕೆಶಿ!
ಬೆಂಗಳೂರು, ಡಿ. 18: ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಪೈಪೋಟಿ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಮೊನ್ನೆಯಷ್ಟೇ ಅಸ್ಸಾಂ ರಾಜ್ಯದ ಗುಹವಾಟಿಯ ಕಾಮಾಕ್ಯ ದೇವಾಲಯಕ್ಕೆ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸಿದ್ದರು. ಟೆಂಪಲ್ ರನ್ ಮುಂದುವರೆಸಿರುವ ಡಿಕೆಶಿ ಅವರು ಇಂದು ಶಾಪವಿಮೋಚನೆಗಾಗಿ ಬಳ್ಳಾರಿ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ. ಹಿಂದೆ ಅರಿಯದೇ ನಡೆದು ಹೋಗಿದ್ದ ಪ್ರಮಾದಕ್ಕೆ ಇಂದು ಕಾಂಗ್ರೆಸ್ ಅಧ್ಯಕ್ಷರು ಬಳ್ಳಾರಿ ಜಿಲ್ಲೆಯ ಮೈಲಾರದ ಮೈಲಾರಲಿಂಗ ದೇವಸ್ಥಾನಕ್ಕೆ ತೆರಳಿದ್ದರು.
Recommended Video
ಹಿಂದೆ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ಗಣಿಧಣಿಗಳನ್ನು ಕಾಂಗ್ರೆಸ್ ನಾಯಕರು ಎದುರಿಸಿದ್ದರು. ಅದಾದ ಬಳಿಕ ನಡೆದ ಚುನಾವಣೆಯಲ್ಲಿ ಭರ್ಜರಿ ಜಯದ ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದರು. ಆದರೇ ಅದೇ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಕಳೆದ ಮೂರು ವರ್ಷಗಳ ಹಿಂದೆ ಅರಿಯದೆ ಒಂದು ತಪ್ಪನ್ನು ಮಾಡಿದ್ದರು ಎನ್ನಲಾಗಿದೆ. ಆಗಿದ್ದ ತಪ್ಪನ್ನು ಸರಿಪಡಿಸಿಕೊಳ್ಳಲು ಬಳ್ಳಾರಿ ಜಿಲ್ಲೆಯ ಪ್ರಮುಖ ದೇವಸ್ಥಾನಕ್ಕೆ ಡಿಕೆಶಿ ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಾರೆ. ಏನದು ತಪ್ಪು? ಡಿಕೆಶಿ ಅವರು ತಪ್ಪುಕಾಣಿಕೆ ಕೊಟ್ಟಿದ್ದು ಏನು? ಮುಂದಿದೆ ಮಾಹಿತಿ.
ಮೈಲಾರಲಿಂಗನ ಶಾಪ
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪೂಜೆ ಸಲ್ಲಿಸಿದ್ದಾರೆ. ಮೈಲಾರ ಲಿಂಗೇಶ್ವರನಿಗೆ ರುದ್ರಸ್ನಾನ ವಿಧಿ, ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆಯಲ್ಲಿ ಭಾಗಿಯಾಗುವ ಮೂಲಕ ಡಿಕೆಶಿ ಶಾಪವಿಮೋಚನೆ ಮಾಡಿಕೊಂಡಿದ್ದಾರೆ. ಆಮೂಲಕ ಕಳೆದ ಮೂರು (2017) ವರ್ಷಗಳ ಹಿಂದೆ ಮಾಡಿದ್ದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರಿಂದ ಆಗಿದ್ದ ತಪ್ಪೇನು ಗೊತ್ತಾ?
ವಿಶೇಶ ಪೂಜೆ, ರುದ್ರಸ್ನಾನ
ಹುಬ್ಬಳ್ಳಿಯಿಂದ ನೇರವಾಗಿ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ ಅವರು, ಶಾಪದಿಂದ ವಿಮುಕ್ತಿ ಹೊಂದುವ ನಿಟ್ಟಿನಲ್ಲಿ ರುದ್ರಸ್ನಾನ ವಿಧಿ, ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆ ಸೇವೆ ಸಲ್ಲಿಸಿದರು. ದೇವಸ್ಥಾನದ ಎದುರು ರುದ್ರಸ್ನಾನ ಮಾಡಿದ ಡಿಕೆಶಿ ಅವರು ಮೈಲಾರಲಿಂಗನ ಕೃಪಗೆ ಪಾತ್ರರಾದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಜೊತೆಗಿದ್ದರು.
ಹೆಲಿಕ್ಯಾಪ್ಟರ್ ತಂದಿಟ್ಟಿದ್ದ ಸಂಕಷ್ಟ
2017ರಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಆಲಿಸಲು ಹೆಲಿಕ್ಯಾಪ್ಟರ್ ಮೂಲಕ ಮೈಲಾರಕ್ಕೆ ಡಿ.ಕೆ. ಶಿವಕುಮಾರ್ ಅವರು ತೆರಳಿದ್ದರು. ಮೈಲಾರ ಲಿಂಗೇಶ್ವರ ದೇವಸ್ಥಾನದ ಮೇಲಿಂದ ಹೋಗಬಾರದು ಎಂಬ ಪ್ರತೀತಿ ಆ ಭಾಗದಲ್ಲಿದೆ. ಹಾಗೆ ಹಾಯ್ದು ಹೋದವರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂಬ ಪ್ರತೀತಿಯೂ ಇದೆ. ಆದರೆ ಅವತ್ತು ಡಿ.ಕೆ. ಶಿವಕುಮಾರ್ ಅವರಿದ್ದ ಹೆಲಿಕ್ಯಾಪ್ಟರ್ ದೇವಸ್ಥಾನದ ಮೇಲ್ಭಾಗದಲ್ಲಿ ಹಾಯ್ದು ಹೋಗಿತ್ತು. ಅದರಿಂದ ಡಿಕೆಶಿ ಸಂಕಷ್ಟಕ್ಕೆ ಒಳಗಾಗಿದ್ದರು ಎನ್ನಲಾಗಿತ್ತು.
ಇಡಿ ಸಂಕಷ್ಟ, ಜೈಲುವಾಸ
ಹೆಲಿಕ್ಯಾಪ್ಟರ್ ಮೂಲಕ ಬಳ್ಳಾರಿ ಜಿಲ್ಲೆಯ ಮೈಲಾರಕ್ಕೆ ಬಂದು ಹೋದ ಮೇಲೆ ತೆರಿಗೆ ಇಲಾಖೆಯಿಂದ ಸಂಕಷ್ಟ ಅನುಭವಿಸಿದ್ದರು. ಜೊತೆಗೆ ಜೈಲುವಾಸವನ್ನೂ ಅನುಭವಿಸಿದ್ದರಿಂದ ಮೈಲಾರಲಿಂಗೇಶ್ವರನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಆಪ್ತರು ಸಲಹೆ ನೀಡಿದ್ದರು. ದೇವಸ್ಥಾನದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹಾಯ್ದು ಹೋದವರಿಗೆ ಸಂಕಷ್ಟ ಎದುರಾಗುತ್ತೆ ಎಂಬ ನಂಬಿಕೆ ಆ ಭಾಗದಲ್ಲಿದೆ. ಹೀಗಾಗಿ ಇಂದು ಮೈಲಾರಾರಕ್ಕೆ ತೆರಳಿದ್ದ ಡಿಕೆಶಿ ಅವರು ಹರಕೆ ತೀರಿಸಿದ್ದಾರೆ. ಆಮೂಲಕ ಉತ್ತರ ಕರ್ನಾಟಕದಲ್ಲಿನ 'ಹೊಂಕಣ ಸುತ್ತಿ ಮೈಲಾರಕ್ಕೆ ಹೋಗೊದು' ಎಂಬ ಮಾತನ್ನು ನಿಜವಾಗಿಸಿದ್ದಾರೆ.