ಸಿಎಂ ಬದಲಾವಣೆ: ಬಿಜೆಪಿ ನಾಯಕರು ಮಠಕ್ಕೆ ಲ್ಯಾಪ್ಟಾಪ್ ತೆಗೆದುಕೊಂಡು ಹೋಗಿದ್ಯಾಕೆ?
ಬೆಂಗಳೂರು, ಜೂ. 08: 'ಮಖ್ಯಮಂತ್ರಿ' ಹುದ್ದೆ ತ್ಯಜಿಸುವ ಕುರಿತು ಸಿಎಂ 'ಯಡಿಯೂರಪ್ಪ' ಅವರು ಹೇಳಿಕೆ ಕೊಟ್ಟ ಬಳಿಕ ಕುತೂಹಲಕಾರಿ ಮಾಹಿತಿಗಳು ಬಹಿರಂಗವಾಗುತ್ತಿವೆ. "ಯಡಿಯೂರಪ್ಪ ನೀವು ಸಾಕು ಎಂದ ದಿನವೇ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ" ಎಂದು ಬಿಎಸ್ವೈ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ ಅಷ್ಟೇ ಅಲ್ಲ ಬಿಜೆಪಿಯೊಂದಿಗೆ ಉಳಿದ ಪಕ್ಷಗಳಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 'ಲ್ಯಾಪ್ಟಾಪ್' ಸ್ಪೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಸಿಎಂ ಹುದ್ದೆ ತ್ಯಾಗದ ಮಾತನ್ನಾಡುವ ಮೊದಲು ಬಿಜೆಪಿಯ ಕೆಲ ನಾಯಕರ ನಡೆಗಳನ್ನು ಡಿಕೆಶಿ ಅವರು ವಿವರಿಸಿದ್ದಾರೆ. ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯ ಕೆಲ ನಾಯಕರು ಲ್ಯಾಪ್ಟಾಪ್ ತೆಗೆದುಕೊಂಡು ಮಠಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಕುತೂಹಲಕಾರಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಲ್ಯಾಪ್ಟಾಪ್ ತೆಗೆದುಕೊಂಡು ಮಠಕ್ಕೆ ಹೋಗಿದ್ದ ಬಿಜೆಪಿ ನಾಯಕರು ಯಾರು? ಲ್ಯಾಪ್ಟಾಪ್ನಲ್ಲಿ ಅಂಥದ್ದೇನಿತ್ತು? ಎಂಬುದು ಇದೀಗ ತೀವ್ರ ಕುತೂಹಲ ಮೂಡಿಸಿದೆ.
ಬಿಜೆಪಿಯ ಕೆಲ ನಾಯಕರ ಕುತೂಹಲಕಾರಿ ನಡೆ?
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗರಂ ಆಗಿದ್ದಾರೆ. "ಜನಸಾಮಾನ್ಯರು ಸಾಯುತ್ತಿರುವಾಗ ಬಿಜೆಪಿ ನಾಯಕರು ಅಧಿಕಾರದ ಆಸೆಗೆ ಚೆಲ್ಲಾಟವಾಡುತ್ತಿದ್ದಾರೆ. ಜನ ಕೊಟ್ಟಿರುವ ಅಧಿಕಾರವನ್ನು ಸಾಧ್ಯವಾದರೆ ನಡೆಸಲಿ, ಇಲ್ಲವೇ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಕೆಳಗಿಳಿಯಿರಿ" ಎಂದು ಆಗ್ರಹಿಸಿದ್ದಾರೆ. ಬಿಜೆಪಿಯಲ್ಲಿನ ಬೆಳವಣಿಗೆಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬಿಜೆಪಿ ನಾಯಕರ ನಡೆಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹೇಳಿದ್ದಾರೆ.
ಮಠಕ್ಕೆ ಲ್ಯಾಪ್ಟಾಪ್ ತೆಗೆದುಕೊಂಡು ಹೋಗಿದ್ಯಾಕೆ?
""ನನಗೆ ಬಂದಿರುವ ಮಾಹಿತಿ ಪ್ರಕಾರ ಕೆಲವು ಸಚಿವರು 14-15 ಮಠಗಳಿಗೆ ಭೇಟಿ ನೀಡಿದ್ದಾರೆ. ಯಾವ ಸಚಿವರು ಯಾವ ಮಠಕ್ಕೆ ಬಂದಿದ್ದಾರೆ, ಯಾವ ಸಚಿವರು ಲ್ಯಾಪ್ಟಾಪ್ ಸಮೇತ ಹೋಗಿದ್ದರು ಎಂದು ನನಗೆ ನಮ್ಮ ಕಾರ್ಯಕರ್ತರೇ ಕರೆ ಮಾಡಿ ಮಾಹಿತಿ ಕೊಟ್ಟಿದ್ದಾರೆ"" ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೀಗಾಗಿ ಲ್ಯಾಪ್ಟಾಪ್ ತೆಗೆದುಕೊಂಡು ಹೋಗಿದ್ದ ಬಿಜೆಪಿ ನಾಯಕರು ಯಾರು ಯಾವ ಯಾವ ಮಠಗಳಿಗೆ ಆ ನಾಯಕರು ಹೋಗಿದ್ದರು? ಲ್ಯಾಪ್ಟಾಪ್ನಲ್ಲಿ ಇದ್ದ ವಿಷಯವಾದರೂ ಏನು ಎಂಬುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಬಿಜೆಪಿಯಲ್ಲಿ ಮತ್ತೊಂದು ಹಂತದ ರಾಜಕೀಯ ವಿಪ್ಲವಕ್ಕೆ "ಮಠಗಳಲ್ಲಿ ಲ್ಯಾಪ್ಟಾಪ್"" ವಿಚಾರ ಕಾರಣವಾಗುವಂತಹ ಎಲ್ಲ ಸಾಧ್ಯತೆಗಳು ಕಂಡು ಬಂದಿವೆ.
ಮಠಕ್ಕೆ ಹೋಗಿದ್ದ ಬಿಜೆಪಿ ನಾಯಕರಾರು
"ನಾನು ಕೂಡ ಈ ಮಾಹಿತಿ ಪರಿಶೀಲಿಸಿದ್ದೇನೆ. ಮಠದವರೇ ಅವರಿಗೆ ಬುದ್ಧಿವಾದ ಹೇಳಲಿ. ಯಾವ ಬುದ್ಧಿಮಾತು ಹೇಳಬೇಕು ಎಂಬುದು ಅವರಿಗೆ ಬಿಟ್ಟದ್ದು, ಅದನ್ನು ಹೇಳುವುದು ನನ್ನ ಕೆಲಸವಲ್ಲ" ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಆದರೆ ಮಠಗಳಿಗೆ ಭೇಟಿ ನೀಡಿದ್ದು ಬಿಜೆಪಿಯ ಯಾವ ನಾಯಕರು ಎಂಬುದನ್ನು ಅವರು ಹೇಳಿರಲಿಲ್ಲ. ಆದರೆ ಡಿಕೆಶಿ ಅವರ ಹೇಳಿಕೆಗೆ ಸಚಿವ ಸಿ.ಪಿ. ಯೋಗೇಶ್ವರ್ ಅವರು ತಿರುಗೇಟು ಕೊಟ್ಟಿದ್ದಾರೆ.
Recommended Video
ನಾನು ಆಗಾಗ ಮಠಕ್ಕೆ ಹೋಗುತ್ತೇನೆ: ಸಿಪಿವೈ
ಬಿಜೆಪಿಯ ಕೆಲ ನಾಯಕರು ಲ್ಯಾಪ್ಟಾಪ್ ಸಮೇತ ಮಠಗಳಿಗೆ ಭೇಟಿ ಕೊಡುತ್ತಿದ್ದಾರೆಂದು ಡಿ.ಕೆ. ಶಿವಕುಮಾರ್ ಅವರು ಹೇಳುತ್ತಿದ್ದಂತೆಯೆ ಸಚಿವ ಸಿಪಿ ಯೋಗೇಶ್ವರ್ ಅವರು ಗರಂ ಆಗಿದ್ದಾರೆ. ಆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಅವರು, "ಡಿ.ಕೆ. ಶಿವಕುಮಾರ್ ಅವರು ನಮ್ಮ ಪಕ್ಷದ ಸಾಮಾನ್ಯ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳುವುದು ಸೂಕ್ತ. ಅವರು ನನ್ನ ರಾಜಕೀಯ ವಿರೋಧಿ, ಸಿಡಿ ಸಂಸ್ಕೃತಿ ಅವರಿಗೆ ಚೆನ್ನಾಗಿ ಗೊತ್ತು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ಯಾರು ಇದ್ದರು ಎಂಬುದು ಎಲ್ಲರಿಗೂ ಗೊತ್ತಿದೆ" ಎಂದಿದ್ದಾರೆ.
"ನಾನು ಜೆಎಸ್ಎಸ್ ಮಠಕ್ಕೆ ಆದಿ ಚುಂಚನಗಿರಿ ಮಠಕ್ಕೆ ಹೋಗುತ್ತಲೇ ಇರುತ್ತೇನೆ. ನಾನು ಮಠಕ್ಕೆ ಹೋಗೋದು ಇದೇ ಮೊದಲಲ್ಲ. ಅನೇಕ ಬಾರಿ ಹೋಗಿದ್ದೇನೆ. ನಾನು ಹೋಗಿ ಬಂದ ತಕ್ಷಣ ಅವರೂ ಮಠಕ್ಕೆ ಹೋಗುತ್ತಾರೆ. ಬಳಿಕ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ" ಎಂದು ಸಿ.ಪಿ. ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ಮಠಗಳಿಗೆ ಲ್ಯಾಪ್ಟಾಪ್ ತೆಗೆದುಕೊಂಡು ಹೋಗಿದ್ದ ಬಿಜೆಪಿ ನಾಯಕರು ಯಾರು ಎಂಬುದನ್ನು ಡಿ.ಕೆ. ಶಿವಕುಮಾರ್ ಅವರು ಹೇಳಿರಲಿಲ್ಲ. ಆದರೆ ಡಿಕೆಶಿ ಆರೋಪಕ್ಕೆ ಬೆಂಗಳೂರಿನಲ್ಲಿ ಸ್ಪಷ್ಟನೆ ಕೊಟ್ಟಿರುವ ಸಚಿವ ಸಿಪಿ ಯೋಗೇಶ್ವರ್ ಅವರು ನಾನು ಮಠಗಳಿಗೆ ಹೋಗುತ್ತಿರುವುದು ಇದೇ ಮೊದಲಲ್ಲ ಎಂದು ಸ್ಪಷ್ಟನೆ ಕೊಟ್ಟಿರುವುದು ಕುತೂಹಲ ಮೂಡಿಸಿದೆ.