ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಡಿಕೆಶಿ ತೆರಳಿದ್ದು ಸಿದ್ದರಾಮಯ್ಯ ಮನೆಗೆ
Recommended Video
ಬೆಂಗಳೂರು, ಸೆಪ್ಟೆಂಬರ್ 20: ಅನಾರೋಗ್ಯದಿಂದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ಡಿ.ಕೆ. ಶಿವಕುಮಾರ್, ಗುರುವಾರ ಸಂಜೆ ಬಿಡುಗಡೆ ಹೊಂದಿದ್ದಾರೆ.
ಫುಡ್ ಪಾಯ್ಸನ್ನಿಂದ ಅಸ್ವಸ್ಥಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿಕೆಶಿಯನ್ನು ಕುಮಾರಸ್ವಾಮಿ ಶಾಸಕರೊಂದಿಗೆ ಹಠಾತ್ ಭೇಟಿ ಮಾಡಿದ್ದೇಕೆ?
ಮೂರು ದಿನ ಆಸ್ಪತ್ರೆಯಲ್ಲಿಯೇ ಇರುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಗುರುವಾರವೇ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ರಾಜಕೀಯ ಪ್ರಮುಖರು ಭೇಟಿ ಮಾಡಿದ್ದರು. ಸಂಜೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೂಡ ಆಸ್ಪತ್ರೆಗೆ ಭೇಟಿ ಮಾಡಿ ಸುದೀರ್ಘ ಕಾಲ ಚರ್ಚಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಶಿವಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸಿದ್ದರಾಮಯ್ಯ ಮನೆಗೆ
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿದ್ದು, ಕುತೂಹಲ ಮೂಡಿಸಿದೆ.
ಈ ಸಂದರ್ಭದಲ್ಲಿ ಡಿ.ಕೆ. ಸುರೇಶ್ ಅವರೂ ಸಾಥ್ ನೀಡಿದ್ದಾರೆ. ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ಭೇಟಿ ನೀಡಿರಲಿಲ್ಲ. ದಿನೇಶ್ ಗುಂಡೂರಾವ್ ಮತ್ತು ಪರಮೇಶ್ವರ್ ಕೂಡ ಅಲ್ಲಿಗೆ ತೆರಳಿರಲಿಲ್ಲ. ಸಂಜೆ ದೇವೇಗೌಡರ ಜತೆ ಸಮಾಲೋಚನೆ ನಡೆಸಿದ್ದ ಶಿವಕುಮಾರ್, ನೇರವಾಗಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆಧಾರವಿಲ್ಲದೆ ಮಾತನಾಡುವುದಿಲ್ಲ
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯದಲ್ಲಿ ಹಿರಿಯರು. ಅವರ ವಿರುದ್ಧ ನಾನು ಸುಮ್ಮನೆ ಅರೋಪ ಮಾಡುವುದಿಲ್ಲ. ನಾನು ಯಾವುದೇ ಆಧಾರವಿಲ್ಲದೆ ನಾನು ಮಾತನಾಡುವುದಿಲ್ಲ. ನಮ್ಮ ಶಾಸಕರ ಜತೆಗೆ ಯಡಿಯೂರಪ್ಪ ಮಾತನಾಡಿದ್ದಾರೆ. ಅವರು ಏನು ಮಾತನಾಡಿದ್ದಾರೆಂದು ನನಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡರು
ಮೂರು ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ನಾನು ಈಗ ಆರೋಗ್ಯವಾಗಿದ್ದೇನೆ. ಯಾವುದೇ ತೊಂದರೆಯಿಲ್ಲ.
ಆಸ್ಪತ್ರೆಯಲ್ಲಿದ್ದ ದಿನಗಳು ಚೆನ್ನಾಗಿದ್ದವು. ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಂಡರು. ಅವರಿಗೆ ನನ್ನಿಂದ ತೊಂದರೆಯಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ಹೇಳಿಕೆಗೆ ಸಮರ್ಥನೆ
ಜನರು ಬಿಜೆಪಿ ವಿರುದ್ಧ ದಂಗೆ ಏಳುತ್ತಾರೆ ಎಂಬ ಹೇಳಿಗೆ ಭಾವೋದ್ವೇಗದಿಂದ ಬಂದಿರುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥನೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಎಲ್ಲ ರೀತಿಯಿಂದಲೂ ಟಾರ್ಚರ್ ನೀಡಲಾಗುತ್ತಿದೆ. ಒಂದೆಡೆ ಪ್ರತಿಪಕ್ಷ, ಇನ್ನೊಂದೆಡೆ ಕೇಂದ್ರ ಸರ್ಕಾರ, ಅಮಿತ್ ಶಾ ಮತ್ತು ನರೇಂದ್ರ ಮೋದಿ ಹುನ್ನಾರ ನಡೆಸುತ್ತಿದ್ದಾರೆ. ಪ್ರತಿದಿನವೂ ಮೈತ್ರಿ ಸರ್ಕಾರ ಬೀಳುತ್ತದೆ ಎಂಬ ಸುದ್ದಿ ಪ್ರಸಾರವಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಬೇಸೆತ್ತು ಭಾವುಕರಾಗಿ ಈ ರೀತಿ ಹೇಳಿರಬಹುದು ಎಂದರು.
ಮುಜುಗರ ತರಬೇಡಿ
ಸರ್ಕಾರದ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳಿಗೆ ಹೇಳಿಕೆ ನೀಡಲಾರೆ. ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ಪ್ರಯತ್ನಕ್ಕೆ ಮಾನ್ಯತೆ ಸಿಗುತ್ತಿಲ್ಲ ಎಂದ ದಿನೇಶ್, ಶಾಸಕರು ಪಕ್ಷಕ್ಕೆ ಮುಜುಗರ ಉಂಟುಮಾಡುವ ಯಾವುದೇ ಹೇಳಿಕೆ ನೀಡಬಾರದು. ಆ ರೀತಿ ಹೇಳಿಕೆ ನೀಡಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ದಿಢೀರ್ ಸಭೆ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಪಕ್ಷದ ದಿಢೀರ್ ಸಭೆ ರಾತ್ರಿ ಆರಂಭವಾಗಿದೆ.
ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಗೊಂದಲಗಳು ಮುಗಿದು ಎಲ್ಲವೂ ತಣ್ಣನಾಗುವ ಸೂಚನೆ ದೊರೆತಿತ್ತು. ಆದರೆ, ಸಂಜೆ ದೇವೇಗೌಡ ಅವರು ಆಸ್ಪತ್ರೆಯಲ್ಲಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಹೊರಬಂದ ಬಳಿಕ ಈ ತುರ್ತು ಸಭೆ ಏರ್ಪಡಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.