ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ಚರ್ಚೆ: ಕೊನೆಗೂ ಮೌನ ಮುರಿದ ಡಿಕೆಶಿ!
ಬೆಂಗಳೂರು, ಅ. 24: ರಾಜ್ಯದಲ್ಲಿ ಈಗ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಮಾತ್ರ ನಡೆಯುತ್ತಿದೆ. ಆದರೆ ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲೆದರು ಎಂಬಂತೆ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಭರ್ಜರಿಯಾಗಿ ನಡೆದಿದೆ.
ಮುಂದಿನ ಮುಖ್ಯಮಂತ್ರಿ ವಿಚಾರ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಮುನ್ನುಡಿಯನ್ನೂ ಹಾಡಿದೆ. ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಅವರ ಆಪ್ತ ಶಾಸಕ ಜಮೀರ್ ಅಹಮದ್ ಖಾನ್ ಅವರು ಹೇಳಿದ್ದರು. ಅದಕ್ಕೆ ಪ್ರತ್ಯುತ್ತರ ಎಂಬಂತೆ ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾರ ತಂದೆ ಹನುಮಂತರಾಯಪ್ಪ ಅವರು ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಲ್ಲಿ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಎಂದು ಹೇಳಿದ್ದಾರೆ.
ದೇವರು ನನಗೆ ಏಳೇಳು ಜನ್ಮ ಕೊಟ್ಟರೂ 'ಅವರ' ಸರಿ-ಸಮನಾಗಲು ಸಾಧ್ಯವಿಲ್ಲ!
ಇದು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಮತ್ತಷ್ಟು ಉತ್ತುಂಗಕ್ಕೆ ಹೋಗಲು ಕಾರಣವಾಗಿದೆ. ಮೊನ್ನೆ ಬದಾಮಿಯಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾದರೇ ಅನ್ನಭಾಗ್ಯ ಯೋಜನೆಯನ್ನು ಮತ್ತಷ್ಟು ಸದೃಢಗೊಳಿಸುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೌನ ಮುರಿದಿದ್ದಾರೆ. ಇಂದು ಆರ್ ಆರ್ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ಮೊದಲು ಪಕ್ಷ ಅಧಿಕಾರಕ್ಕೆ ಬರಲಿ
ಕೆಲವು ನಾಯಕರು ನಮ್ಮ ಮೇಲಿನ ಪ್ರೀತಿಗೆ ಮುಖ್ಯಮಂತ್ರಿ ಆಗ್ತಾರೆ ಅಂತಾ ಹೇಳುತ್ತಾರೆ. ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಆಮೇಲೆ ನಮ್ಮ ಹೈಕಮಾಂಡ್ ಹಾಗೂ ಶಾಸಕರು ಸೇರಿಕೊಂಡು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ. ಸಾಕಷ್ಟು ಜನ ಅನೇಕ ಆಸೆಗಳನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.
ಶಾಸಕರ ತೀರ್ಮಾನಕ್ಕೆ ನಾನು ಬದ್ಧ
ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಬಳಿಕ ನಮ್ಮ ನಾಯಕರು, ಶಾಸಕರು ಹಾಗೂ ಪಕ್ಷ ಯಾವ ತೀರ್ಮಾನಕ್ಕೆ ಬರುತ್ತಾರೋ ಅದಕ್ಕೆ ಬದ್ಧವಾಗಿರುತ್ತೇನೆ. ನಾನು ಸಾಮೂಹಿಕ ನಾಯಕತ್ವ ನಂಬುತ್ತೇನೆ ಎಂದು ಹಿಂದೆಯೆ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಜಮೀರ್ ಅಹಮ್ಮದ್ ಖಾನ್ ಅವರು ನನಗೂ ಸ್ನೇಹಿತರೆ, ಭಾವುಕರಾಗಿ ಆ ರೀತಿ ಮಾತನಾಡುತ್ತಾರೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಡಿಕೆಶಿ ಹೇಳಿಕೆ ನೀಡಿದರು.
ಶೋಭಕ್ಕ ನೀನು, ನಿನ್ನ ಮಗಳೋ ಕುಸುಮಾ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದೆ?
ಕಾಂಗ್ರೆಸ್ ಪಕ್ಷಕ್ಕೆ ಚಾಲಕರ ಬೆಂಬಲ
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಓಲಾ, ಉಬರ್ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹಾಗೂ ಅಖಿಲ ಕರ್ನಾಟಕ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರು ಅವರು ತಮ್ಮ ಬೆಂಬಲಿಗ ಸಮೂಹದೊಂದಿಗೆ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತಿತರರು ಹಾಜರಿದ್ದರು.
Recommended Video
ಚಾಲಕರಿಗೆ ಸಹಾಯಧನ ಕೊಡದ ಸರ್ಕಾರ
ಕೊರೋನಾ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಆಟೋ, ಕ್ಯಾಬ್ ಚಾಲಕರಿಗೆ ಸರ್ಕಾರದಿಂದ ಸಹಾಯ ಸಿಗಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ನಾವು ಒತ್ತಡ ಹಾಕಿದ್ದೆವು. ರಾಜ್ಯ ಸರ್ಕಾರ 7.75 ಲಕ್ಷ ಚಾಲಕರಿಗೆ ಒಂದು ಬಾರಿ 5 ಸಾವಿರ ನೀಡುವುದಾಗಿ ಘೋಷಣೆ ಮಾಡಿದರು. ನಮ್ಮ ಆಗ್ರಹದ ಮೇರೆಗೆ ಸರ್ಕಾರ 7.75 ಲಕ್ಷ ಚಾಲಕರಿಗೆ ಪರಿಹಾರ ಘೋಷಿಸಿದರು. ನಂತರ ನಾನು ಬೇರೆ ಕಡೆ ಪ್ರವಾಸ ಕೈಗೊಂಡಾಗ ಸರ್ಕಾರ ಘೋಷಿಸಿರುವ ಪರಿಹಾರ ಹೆಚ್ಚೆಂದರೆ ಶೇ.10ರಷ್ಟು ಮಂದಿಗೆ ತಲುಪಿರಬಹುದು. ಉಳಿದವರಿಗೆ ಒಂದು ರೂಪಾಯಿಯೂ ತಲುಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ವ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಚಾಲಕರ ಸಂಘದ ಅಧ್ಯಕ್ಷರಾಗಿರುವ ಹಾಗೂ ಜೆಡಿಎಸ್ ಸಾರಿಗೆ ವಿಭಾಗದ ಅಧ್ಯಕ್ಷರಾಗಿದ್ದ ತನ್ವೀರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಬೆಂಗಳೂರಿನ ಆರ್ ಆರ್ ನಗರ ಚುನಾವಣೆ ಸಂಧರ್ಭದಲ್ಲಿ ಈ ಕ್ಷೇತ್ರದಲ್ಲೇ 7 ಸಾವಿರ ಚಾಲಕರನ್ನು ಗುರುತಿಸಿದ್ದೇವೆ. ಅವರಿಗೆ ಆಗಿರುವ ಅನ್ಯಾಯಕ್ಕೆ ಉತ್ತರ ನೀಡಲು, ಅವರ ಕುಟುಂಬ ಸದಸ್ಯರು, ಸ್ನೇಹಿತರು ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿರುವ ಎಲ್ಲ ಚಾಲಕರ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿ, ಅವರ ಹಿತ ಕಾಯಲು ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.