ತನ್ನನ್ನು ರಕ್ಷಿಸಿದ್ದ ಡಿಕೆಶಿಗೆ, ಅಹಮದ್ ಪಟೇಲ್ ಕಡೆಯಿಂದ ಸಂದಿದ್ದು ಇಷ್ಟೇನಾ?
Recommended Video
ತನಗೆ ರಾಜಕೀಯ ಪುನರುಜ್ಜೀವನ ನೀಡಿದ್ದ ಡಿ ಕೆ ಶಿವಕುಮಾರ್ ಗೆ, ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಅಹಮದ್ ಪಟೇಲ್ ನೀಡಿದ ಪ್ರತಿಫಲ ಏನು? ದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯದಿಂದ ಡಿ. ಕೆ. ಶಿವಕುಮಾರ್ ಬಂಧನವಾಗುತ್ತಿದ್ದಂತೆ, 'ಆಡಳಿತ ಯಂತ್ರದ ದುರುಪಯೋಗ' ಎಂದು ಹೇಳಿ ಪಟೇಲ್ ಸುಮ್ಮನಾದರೆ ಸಾಕೇ? ಬೀದಿಯಲ್ಲಿರುವ ಡಿಕೆಶಿ ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆಯಿದು.
ಆಡಳಿತ ಯಂತ್ರದ ದುರುಪಯೋಗ ಎನ್ನುವ ಪದವನ್ನು ಬಳಸಲು, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಅರ್ಹತೆ ಇದೆಯಾ? ಅವರವರ ಕಾಲಘಟ್ಟದಲ್ಲಿ, ತಮಗೆ ಬೇಕಾದ ಹಾಗೇ ಇಡಿ/ಸಿಬಿಐ/ಐಟಿ ಇಲಾಖೆಗಳನ್ನು ಬಳಸಿಕೊಂಡಿದ್ದನ್ನು ಒಮ್ಮೆ ಅವಲೋಕನ ಮಾಡಿ, ಎರಡೂ ಪಕ್ಷಗಳು ಹೇಳಿಕೆ ನೀಡಿದರೆ ಇಬ್ಬರಿಗೂ ಶೋಭೆ.
ವಿಚಾರಕ್ಕೆ ಬರುವುದಾದರೆ, ಗುಜರಾತಿನ ರಾಜ್ಯಸಭಾ ಸೀಟಿನಿಂದ ಆಯ್ಕೆಯಾಗಲು ಅಮಿತ್ ಶಾ ಮತ್ತು ಅಹಮದ್ ಪಟೇಲ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಅಕ್ಷರಸಃ ಸೇಡಿನ ರಾಜಕಾರಣ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದ ಈ ಚುನಾವಣೆಯ ಫಲಿತಾಂಶ, ಇಡೀ ದೇಶವನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.
619 ಕೋಟಿ ಒಡೆಯ ಡಿಕೆಶಿ; 8 ಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಯಾಕೆ?
ಅಮಿತ್ ಶಾ ಮತ್ತು ಇನ್ನೊಬ್ಬರು ಬಿಜೆಪಿ ಅಭ್ಯರ್ಥಿಯಾಗಿದ್ದ ಸ್ಮೃತಿ ಇರಾನಿ ನಿರಾಯಾಸವಾಗಿ ಗೆಲ್ಲುವುದು ನಿಶ್ಚಿತವಾಗಿದ್ದರೂ, ಇನ್ನೂಂದು ಸ್ಥಾನದ ಲೆಕ್ಕಾಚಾರದಿಂದ ಸ್ಪರ್ದಿಸಿದ್ದ ಅಹಮದ್ ಪಟೇಲ್ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎನ್ನುವ ಜಿದ್ದು ಶಾ ಅವರದ್ದಾಗಿತ್ತು. ಇಬ್ಬರೂ, ಗುಜರಾತ್ ಮೂಲದವರಾಗಿರುವುದರಿಂದ, ಶಾ ಸೇಡಿಗೆ ಕಾರಣವೂ ಇಲ್ಲದಿಲ್ಲ.
ಕಾಂಗ್ರೆಸ್ ಶಾಸಕರು ಕುದುರೆ ವ್ಯಾಪಾರಕ್ಕೆ ಒಳಗಾಗಬಹುದು ಎನ್ನುವ ಭೀತಿ
ಗುಜರಾತ್ ಕಾಂಗ್ರೆಸ್ ಶಾಸಕರು ಕುದುರೆ ವ್ಯಾಪಾರಕ್ಕೆ ಒಳಗಾಗಬಹುದು ಎನ್ನುವ ಭೀತಿಯಿಂದ, ಎಲ್ಲಾ ಜನಪ್ರತಿನಿಧಿಗಳನ್ನು ಬೆಂಗಳೂರಿನ ಈಗಲ್ಟನ್ ರೆಸಾರ್ಟಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಗಲೇ, ಅಹಮದ್ ಪಟೇಲ್ ಪಾಲಿಗೆ 'ನಾಯಕ'ನಾಗಿ ಹೊರಹೊಮ್ಮಿದ್ದು ಡಿ ಕೆ ಶಿವಕುಮಾರ್. ಅಹಮದ್ ಪಟೇಲ್ ಅವರನ್ನು ಸೋಲಿಸಬೇಕು ಎಂದು ಬಿಜೆಪಿ, ಗುಜರಾತ್ ಶಾಸಕರನ್ನು ಹೇಗಾದರೂ ಮಾಡಿ ಹಿಡಿದಿಟ್ಟುಕೊಳ್ಳಬೇಕು ಎನ್ನುವ ರಾಜಕೀಯ ಮೇಲಾಟಕ್ಕೆ ಎರಡೂ ಪಕ್ಷದ ನಾಯಕರು ತಮ್ಮ ಅನುಭವವನ್ನೆಲ್ಲಾ ಧಾರೆ ಎರೆಯಬೇಕಾಯಿತು.
ಡಿ. ಕೆ. ಶಿವಕುಮಾರ್ ಮತ್ತು ಅವರ ಸಹೋದರ ಸುರೇಶ್
ಡಿ. ಕೆ. ಶಿವಕುಮಾರ್ ಮತ್ತು ಅವರ ಸಹೋದರ ಸುರೇಶ್, ಕಣ್ಣಿಗೆ ಎಣ್ಣೆಬಿಟ್ಟುಕೊಂಡು, ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ರಾಜ್ಯಸಭಾ ಚುನಾವಣೆಯ ದಿನ, ಗುಜರಾತ್ ಕಾಂಗ್ರೆಸ್ ಶಾಸಕರನ್ನು ಗಾಂಧಿನಗರಕ್ಕೆ ಯಾವುದೇ ತೊಂದರೆಯಿಲ್ಲದೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.
ಡಿಕೆ ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ನಮ್ಮ ಶಾಸಕರ ಬಗ್ಗೆ ಒಂದಿಷ್ಟು
ಡಿ. ಕೆ. ಶಿವಕುಮಾರ್, ಕಾಂಗ್ರೆಸ್ ಪಾಲಿಗೆ ರಾಷ್ಟ್ರ ಮಟ್ಟದ ಸ್ಟಾರ್
ಇನ್ನೇನು, ಅಹಮದ್ ಪಟೇಲ್ ಚುನಾವಣೆ ಸೋತರು ಎನ್ನುವಷ್ಟರಲ್ಲಿ, ಬಿಜೆಪಿಗೆ ನಿಷ್ಟೆ ತೋರಿದ್ದ ಇಬ್ಬರು ಕಾಂಗ್ರೆಸ್ ಶಾಸಕರು, ತಮ್ಮ ಬ್ಯಾಲೆಟ್ ಪೇಪರ್ ಅನ್ನು ಬಿಜೆಪಿ ಚುನಾವಣಾ ಏಜೆಂಟಿಗೆ ತೋರಿಸಿದ್ದರಿಂದ, ಅವರಿಬ್ಬರ ಮತ ಅನರ್ಹಗೊಂಡು, ಅಹಮದ್ ಪಟೇಲ್ ಗೆಲುವಿನ ನಗೆ ಬೀರುವಂತಾಯಿತು. ಅಲ್ಲಿಗೆ, ಡಿ. ಕೆ. ಶಿವಕುಮಾರ್, ಕಾಂಗ್ರೆಸ್ ಪಾಲಿಗೆ ರಾಷ್ಟ್ರ ಮಟ್ಟದ ಸ್ಟಾರ್ ಎನಿಸಿಕೊಂಡರು.
ಡಿಕೆಶಿಯನ್ನು, ಆ ಘಟನೆ, ಈಗ ಜೈಲಿಗೆ ತಂದು ನಿಲ್ಲಿಸಿದೆ
ಅಹಮದ್ ಪಟೇಲ್ ಅವರನ್ನೇನ್ನೋ ದಡ ಸೇರಿಸಿದರು, ಆದರೆ, ಡಿಕೆಶಿಗೆ, ಇಡಿ/ಐಟಿ ಎನ್ನುವ ತನಿಖೆ ಹೆಗಲೇರಿದ್ದು ಇಲ್ಲಿಂದಲೇ. ಸೋನಿಯಾ ಗಾಂಧಿ ಪರಮಾಪ್ತರಲ್ಲಿ ಮಂಚೂಣಿಯಲ್ಲಿ ಬರುವ ಅಹಮದ್ ಪಟೇಲ್ ಏನೋ ರಾಜಕೀಯ ಪುನರುಜ್ಜೀವನ ಪಡೆದುಕೊಂಡರು. ಆದರೆ, ಅಂದು ಪಕ್ಷದ ಪರವಾಗಿ ಕೆಲಸ ಮಾಡಿದ ಡಿಕೆಶಿಯನ್ನು, ಆ ಘಟನೆ, ಈಗ ಜೈಲಿಗೆ ತಂದು ನಿಲ್ಲಿಸಿದೆ.
|
ಅಹಮದ್ ಪಟೇಲ್ ಕಡೆಯಿಂದ ಸದ್ಯಕ್ಕೆ ಇಷ್ಟೇ ಯಾಕೆ ಎಂಬ ಪ್ರಶ್ನೆ ಡಿಕೆಶಿ ಅಭಿಮಾನಿಗಳದ್ದು
ತನ್ನ ಗೆಲುವಿಗೆ ಬೆನ್ನಿಗೆ ಬೆನ್ನಾಗಿ ನಿಂತಿದ್ದ ಡಿಕೆಶಿ ಈಗ ಜೈಲಿನಲ್ಲಿದ್ದಾರೆ. ಆದರೆ, ಅಹಮದ್ ಪಟೇಲ್ ಕಡೆಯಿಂದ ರಿಟರ್ನ್ ಏನು ಬಂತು? ಒಂದು ಟ್ವೀಟ್ (ಸಾರ್ವಜನಿಕವಾಗಿ ಕಾಣುವಂತೆ). "ಆರ್ಥಿಕತೆ ಕುಸಿದು ಹೋಗಿರುವಾಗ, ಆಡಳಿತ ಪಕ್ಷದ ಪ್ರಾಮುಖ್ಯತೆ, ಪ್ರತಿಪಕ್ಷಗಳನ್ನು ಬೆದರಿಸುವುದು, ಇದು ಅತ್ಯಂತ ದುರದೃಷ್ಟಕರ" ಎಂದು ಪರೋಕ್ಷವಾಗಿ ಡಿಕೆಶಿ ಹೆಸರನ್ನು ಉಲ್ಲೇಖಿಸದೇ ಅಹಮದ್ ಪಟೇಲ್ ಟ್ವೀಟ್ ಒಂದನ್ನು ಮಾಡಿದ್ದಾರೆ. ಅಂದು, ರಾಜಕೀಯ ಜೀವನದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಡಿಕೆಶಿ ಮಾಡಿದ ಸಹಾಯಕ್ಕೆ, ಅಹಮದ್ ಪಟೇಲ್ ಕಡೆಯಿಂದ ಸದ್ಯಕ್ಕೆ ಇಷ್ಟೇ ಯಾಕೆ ಎಂಬ ಪ್ರಶ್ನೆ ಡಿಕೆಶಿ ಅಭಿಮಾನಿಗಳದ್ದು...