ಪ್ರತ್ಯೇಕ ಧರ್ಮ: ಕ್ಷಮೆ ಕೋರಿಕೆಯ ಹೇಳಿಕೆಗೆ ಬದ್ಧ ಎಂದ ಡಿಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 19: ಜಾತಿ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ನಾನು ಮತ್ತು ಸರ್ಕಾರ ತಪ್ಪು ಮಾಡಿದೆವು. ನಮ್ಮನ್ನು ಕ್ಷಮಿಸಿ ಬಿಡಿ ಎಂದು ಕ್ಷಮೆ ಕೋರಿದ್ದ ಸಚಿವ ಡಿ.ಕೆ. ಶಿವಕುಮಾರ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಿದ್ದೇನೆ. ನನ್ನ ಹೇಳಿಕೆಗೆ ನಾನು ಬದ್ಧ. ಎಂಬಿ ಪಾಟೀಲ್ ಅವರು ನನ್ನ ಸ್ನೇಹಿತರು. ಅವರು ಧರ್ಮದ ಕುರಿತು ಹೋರಾಟ ನಡೆಸುತ್ತಿದ್ದಾರೆ. ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಹಸ್ತಕ್ಷೇಪ ಮಾಡಬಾರದಿತ್ತು. ನಮ್ಮನ್ನು ತುಂಬು ಹೃದಯದಿಂದ ಕ್ಷಮಿಸಿಬಿಡಿ. ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಹಸ್ತಕ್ಷೇಪ ಮಾಡಿದ್ದು ನಮ್ಮ ಸರ್ಕಾರ ಮಾಡಿದ ಅಪರಾಧ ಎಂದು ಡಿ.ಕೆ. ಶಿವಕುಮಾರ್ ಕೈಮುಗಿದು ಕ್ಷಮಾಪಣೆ ಕೋರಿದ್ದರು.
ಕೈಮುಗಿದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಸಚಿವ ಡಿ.ಕೆ.ಶಿವಕುಮಾರ್
ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ರಾಜ್ಯದಾದ್ಯಂತ ತೀವ್ರ ಸಂಚಲನ ಮೂಡಿದೆ. ಸ್ವತಃ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟುಮಾಡಿದೆ. ಹೆಚ್ಚಿನ ಮುಖಂಡರು ಡಿಕೆ ಶಿವಕುಮಾರ್ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರೆ, ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಎಂಬಿ ಪಾಟೀಲ್, ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವಿವಾದವನ್ನು ಬಿಜೆಪಿ ಚುನಾವಣೆಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಆರಂಭಿಸಿದೆ.
ಹಸ್ತಕ್ಷೇಪ ಮಾಡುವುದಿಲ್ಲ
ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಿದ್ದೇನೆ. ಒಕ್ಕಲಿಗರ ಸಂಘದ ವಿಚಾರದಲ್ಲಿಯೂ ನಾನು ಇನ್ನು ಮುಂದೆ ಹಸ್ತಕ್ಷೇಪ ಮಾಡುವುದಿಲ್ಲ. ಅಗತ್ಯವಿದ್ದರೆ ಸಹಾಯ ಮಾಡುತ್ತೇನೆ. ಆದರೆ, ಸಮುದಾಯದ ವಿಚಾರಕ್ಕೆ ಹೋಗುವುದಿಲ್ಲ. ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ
ಗೆಲ್ಲಿಸುವಷ್ಟು ಪ್ರಭಾವಿ ಅಲ್ಲ
ಎಂಬಿ ಪಾಟೀಲ್ ಅವರಿಗೆ ಉತ್ತರ ನೀಡುವಷ್ಟು ನಾನು ದೊಡ್ಡವನಲ್ಲ. ನನಗೆ ನನ್ನ ಮತವನ್ನು ಬಿಟ್ಟು ಬೇರೆ ಯಾರ ಮತ ಹಾಕಿಸಲೂ ಧೈರ್ಯವಿಲ್ಲ. ನನ್ನ ಹೆಂಡತಿಯ ಮತ ಹಾಕಿಸುವುದಕ್ಕೂ ನನಗೆ ಧೈರ್ಯ ಇಲ್ಲ. ನನ್ನ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಯಾರನ್ನೂ ಗೆಲ್ಲಿಸುವುದಕ್ಕೆ ಶಕ್ತಿಯೂ ಇಲ್ಲ, ಅಷ್ಟು ಪ್ರಭಾವಿಯೂ ಅಲ್ಲ. ನಾನು ಸಾಮಾನ್ಯ ಕಾರ್ಯಕರ್ತ. ಯಾರು ಏನೇ ಶಿಕ್ಷೆ ನೀಡಿದರೂ ನಾನು ಮಾತನಾಡುವುದಿಲ್ಲ. ನನ್ನ ಮನಸ್ಸಿನಲ್ಲಿ ಇರುವುದನ್ನು ನಾನು ಹೇಳಿದ್ದೇನೆಅಷ್ಟೇ. ಅದನ್ನು ಬದಲಿಸುವುದಿಲ್ಲ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮತ್ತೆ ಮುನ್ನೆಲೆಗೆ: ಸಿಎಂ ಹೇಳಿದ್ದು ಏನು?
ಡಿಕೆಶಿಗೆ ಚಟ
ಎಲ್ಲ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಡಿ.ಕೆ. ಶಿವಕುಮಾರ್ ಅವರಿಗೆ ಚಟವಾಗಿದೆ. ಕೇವಲ ಚಟಕ್ಕಾಗಿ ಈ ರೀತಿ ಮಾತನಾಡಬೇಡಿ. ಎಲ್ಲದರಲ್ಲಿಯೂ ಹಸ್ತಕ್ಷೇಪ ಸರಿಯಲ್ಲ. ಚುನಾವಣೆಯ ಹೊಸ್ತಿಲಿನಲ್ಲಿ ಈ ರೀತಿ ಮಾತನಾಡುವುದು ಎಷ್ಟು ಸರಿ? ಪಕ್ಷದ ವೇದಿಕೆ, ಹೈಕಮಾಂಡ್ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಸತ್ಯ ಹೊರಗೆ ಬರುವವರೆಗೂ ಬಿಡುವುದಿಲ್ಲ. ಎಲ್ಲರ ಬಂಡವಾಳ ಬಯಲಾಗಬೇಕು ಎಂದು ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದ್ದರು.
ಡಿಕೆಶಿ ಅಂದರೆ ಕಾಂಗ್ರೆಸ್ ಅಲ್ಲ
ರಾಹುಲ್ ಗಾಂಧಿಗಿಂತ ನೀವು ಮೇಲಿದ್ದೀರಾ? ಕೆಪಿಸಿಸಿ ಅಧ್ಯಕ್ಷರಿಗಿಂತಲೂ ಮೇಲಿದ್ದೀರಾ? ಡಿಕೆಶಿ ಅಂದರೆ ಕಾಂಗ್ರೆಸ್ ಅಲ್ಲ. ನೀವು ಕೆಪಿಸಿಸಿ ಅಧ್ಯಕ್ಷರಲ್ಲ. ಈ ಬಗ್ಗೆ ಮಾತನಾಡಲು ಸರ್ಕಾರ ನಿಮಗೆ ಹೇಳಿದೆಯಾ? ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲಾಗುವುದು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಂಪುಟ ಸಭೆಗಳಲ್ಲಿ ಡಿ.ಕೆ. ಶಿವಕುಮಾರ್ ಪಕ್ಕದ ಕುರ್ಚಿಯಲ್ಲಿಯೇ ಕೂರುತ್ತಿದ್ದರು. ಆಗ ಅವರೇನು ಮಲಗಿರುತ್ತಿದ್ದರಾ? ಆಗ ನನ್ನ ಪಕ್ಕದಲ್ಲಿಯೇ ಕುಳಿತು ಉಗ್ರ ಬೆಂಬಲ ನೀಡಿದ್ದವರು ನೀವು. ಆಗ ಮೌಲ್ಯ, ನೈತಿಕತೆ ಎಲ್ಲಿತ್ತು? ಈಗ ಕ್ಷಮೆ ಕೇಳಿ ಎಂದು ಪಕ್ಷ ಹೇಳಿದೆಯೇ? ನೀವೇನು ಕಾಂಗ್ರೆಸ್ ಸುಪ್ರೀಂ ಎಂದುಕೊಂಡಿದ್ದೀರಾ? ಎಂದು ಪಾಟೀಲ್ ಪ್ರಶ್ನಿಸಿದ್ದಾರೆ.