ರಮೇಶ್ ಜಾರಕಿಹೊಳಿ 'ಸಿಡಿ' ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ!
ಬೆಂಗಳೂರು, ಮಾ. 10: 'ಸಿಡಿ' ಬಿಡುಗಡೆ ಹಿಂದೆ 'ಆ ಮಹಾನ್ ನಾಯಕ' ಇದ್ದಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದರು. ಹೀಗಾಗಿ ಆ ಮಾಹಾನ್ ನಾಯಕ ಯಾರು ಎಂದು ಚರ್ಚೆ ನಡೆಯುತ್ತಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 'ಸಿಡಿ' ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. 'ಸಿಡಿ' ಹಿಂದೆ ಇರುವವರು ಯಾರು ಎಂಬುದನ್ನು ವಿವರಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿರುವ ಡಿಕೆಶಿ ಅವರು, ಎಳೆಎಳೆಯಾಗಿ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ನೊಂದಿದ್ದಾನೆ ಎಂದಿದ್ದಾರೆ.
Recommended Video
ರಾಜಕಾರಣದಲ್ಲಿ ಷಡ್ಯಂತ್ರ ಸಹಜ. ಇವರಿಗೆ ಶರ್ಟು, ಪ್ಯಾಂಟ್ ಬಿಚ್ಚಲು ಯಾರಾದರೂ ಹೇಳಿ ಕೊಟ್ಟಿದ್ರಾ? ಅವರು ಆಡಿರುವ ಮಾತುಗಳಿಗೆ ಸ್ಕ್ರಿಪ್ಟ್ ನಾವು ಬರೆದು ಕೊಟ್ಟಿದ್ದೇವಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣದ ಆಡಿಯೋ ಮತ್ತು ವಿಡಿಯೋ ವಿಚಾರವಾಗಿ ಸದಾಶಿವನಗರ ತಮ್ಮ ನಿವಾಸದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
'ಸಿಡಿ' ಮಾಡಿದ್ದು ಯಾರು? ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಫೋಟಕ ಹೇಳಿಕೆ!
ಕಾಂಗ್ರೆಸ್ ಕುರಿತು 'ಸಿಡಿ' ಹಿನ್ನೆಲೆ ಬಗ್ಗೆ ಮಾತನಾಡಿರುವ ಆ ಸಚಿವನನ್ನು ಬಿಜೆಪಿಯವರಗಿಂತ ನಾನು ಹತ್ತಿರದಿಂದ ನೋಡಿದ್ದೇನೆ. ಅವರು ನಮ್ಮ ನಾಯಕರಾಗಿದ್ದವರು. ಪಕ್ಷದ ವಕ್ತಾರರಾಗಿ ಕೆಲಸ ಮಾಡಿದ್ದಾರೆ. ನಾವು ಜೊತೆಯಲ್ಲೇ ರಾಜಕಾರಣ ಮಾಡಿದ್ದೇವೆ. ಹೀಗಿದ್ದಾಗ 20 ವರ್ಷಗಳಿಂದ ಅವರು ಏನೇನು ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ ಎಂದು ಆಗ್ರಹಿಸಿದ್ದಾರೆ.
ಇದನ್ನು ಅವರೇ ಹೇಳಿದ್ದಾರೋ, ಬೇರೆಯವರು ಹೇಳಿಸಿದ್ದಾರೋ, ಅಂತೂ ಬಿಜೆಪಿ ಪಕ್ಷದ ಪರವಾಗಿ ಹೇಳಿದ್ದಾರೆ. ಅವರು ನಮ್ಮ ಪಕ್ಷದಲ್ಲಿದ್ದಾಗ ಏನು ಮಾಡಿದ್ದಾರೆ ಅಂತಾ ಸಾಕ್ಷಿ ಸಮೇತ ಹೇಳಲಿ. ಈ ಪ್ರಕರಣವನ್ನು ನಾವೂ ಗಮನಿಸುತ್ತಿದ್ದೇವೆ. ಸುಮ್ಮನೆ ಏನೂ ಕುಳಿತಿಲ್ಲ ಎಂದು ಡಿಕೆಶಿ ಎಚ್ಚರಿಸಿದ್ದಾರೆ.
'ಸಿಡಿ' ಪ್ರಕರಣಕ್ಕೆ ಮಹತ್ವದ ತಿರುವು; 'ಸಿಡಿ' ಪ್ರಕರಣದ ಸಂತ್ರಸ್ತ ಯುವತಿ ಈಗೆಲ್ಲಿದ್ದಾರೆ?
ಸಿಎಂ ಯಡಿಯೂರಪ್ಪ ವಿರುದ್ಧ ಸೆಡ್ಡು ಹೊಡೆದ ಬಿಜೆಪಿ ಶಾಸಕರೇ ಸಿಡಿ ಬಿಡುಗಡೆ ಅಂತಾ ವಿಶ್ವನಾಥ್ ಅವರು ಹೇಳಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪಗೆ ಸಿಡಿ ಗುಮ್ಮಾ ಎಂದೂ ಕರೆದಿದ್ದರು. ಜೊತೆಗೆ ಬ್ಲ್ಯಾಕ್ಮೇಲ್ ಮಾಡಿ ಕೆಲವರು ಸಚಿವರಾಗಿದ್ದಾರೆ ಅಂತಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಹೇಳಿಕೆ ನೀಡಿದ್ದರು. ಇದೆಲ್ಲ ಬಿಟ್ಟು ಇದೀಗ ಕಾಂಗ್ರೆಸ್ ಕಡೆಗೆ ಕೈತೋರಿಸಿದರೇ ಸುಮ್ಮನಿರ್ತೆವಾ? ಎಂದು ಡಿಕೆಶಿ ಎಚ್ಚರಿಸಿದ್ದಾರೆ. ಜೊತೆಗೆ ಆ 'ಸಿಡಿ' ಹಿಂದಿರುವವರು ಯಾರು ಎಂದು ವಿವರಿಸಿದ್ದಾರೆ.
ಕೋಟ್ಯಂತರ ರೂ. ಸಾಲ ಮಾಡಿಕೊಂಡಿದ್ದ ಯೋಗೇಶ್ವರ್
ಇಷ್ಟಕ್ಕೆ ನಿಲ್ಲಲ್ಲ, ಎಲ್ಲರನ್ನು ಒಗ್ಗೂಡಿಸಲು ಯೋಗೇಶ್ವರ್ ಅವರು 9 ಕೋಟಿ ರೂ. ಸಾಲ ಮಾಡಿಕೊಂಡಿದ್ದರು ಎಂದು ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಸಿ.ಡಿ.ಯಲ್ಲಿ ಸಿಎಂ ಯಡಿಯೂರಪ್ಪ ಭ್ರಷ್ಟಾಚಾರಿ ಅಂತ ಹೇಳಿದ್ದಾರೆ, ಮಾಧ್ಯಮಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಕನ್ನಡಿಗರನ್ನು ಅವಹೇಳನ ಮಾಡಿದ್ದಾರೆ. ಕನ್ನಡಿಗನಾಗಿ ನಾನು ಆ ಮಾತು ಹೇಳಬಾರದು. ಬೆಳಗಾವಿಯನ್ನು ಪ್ರತ್ಯೇಕ ರಾಜ್ಯ ಎಂದಿದ್ದಾರೆ. ಕನ್ನಡ ಹೋರಾಟಗಾರರು ಯಾಕೆ ಇನ್ನೂ ಸುಮ್ನೆ ಇದ್ದಾರೋ ಗೊತ್ತಿಲ್ಲ ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ಈ ಎಲ್ಲ ವಿಚಾರವಾಗಿ ಸರ್ಕಾರವೇ ಸುಮೋಟೋ ಕೇಸ್ ದಾಖಲಿಸಬೇಕಿತ್ತು. ಯಾಕೆ ಇನ್ನೂ ಕೇಸು ಹಾಕಿಲ್ಲ, ಕೇಸು ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ 'ಸಿಡಿ' ಪ್ರಸಂಗ ಬಾಂಬೆಯಲ್ಲಿ ನಡೆಯಿತೋ?
ಈ ವಿಚಾರವಾಗಿ ಕೆಲವರು ಕೋರ್ಟ್ಗೆ ಹೋಗಿ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯಾವುದೇ ಸಿ.ಡಿ. ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿದ್ದಾರೆ. ಯಾಕೆ ಕೋರ್ಟ್ಗೆ ಹೋಗಿದ್ದಾರೆ ಎಂಬುದು ಅವರಿಗೇ ಗೊತ್ತಿದೆ. ನಮಗೇನು ಗೊತ್ತು? ಎಂದು ಲೇವಡಿ ಮಾಡಿದರು.
ಈ 'ಸಿಡಿ' ಪ್ರಸಂಗ ಬಾಂಬೆಯಲ್ಲಿ ನಡೆಯಿತೋ? ಬೆಂಗಳೂರಿನಲ್ಲಿ ನಡೆಯಿತೋ? ಪೂನಾದಲ್ಲಿ ನಡಿತೋ? ಬಿಜೆಪಿ ಸರ್ಕಾರ ಇತ್ತೋ? ಶಿವಸೇನೆ ಸರ್ಕಾರ ಇತ್ತೋ? ಯಾರು? ಏನು? ಎಂಬುದನ್ನು ಅವರೇ ಹೇಳಬೇಕು? ಇದರಲ್ಲಿ ತಿರುಚುವುದು ಏನಿದೆ? ಒಂದೋ ಎರಡೋ ತಿರುಚಬಹುದು. 19 "ಸಿಡಿ' ಗಳನ್ನೂ ತಿರುಚಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ಅಂಗಿ, ಪ್ಯಾಂಟ್ ಬಿಚ್ಚಿ ಎಂದು ಕಾಂಗ್ರೆಸ್ ನವರು ಕೊಟ್ಟಿದ್ರಾ?
ಕಾಂಗ್ರೆಸ್ ನವರು 'ಸಿಡಿ' ಮಾಡಿದ್ದಾರೆ ಅಂದ್ರೆ, ಕಾಂಗ್ರೆಸ್ ಅವರು ಬಂದು ನಿಮ್ಮ ಶರ್ಟು, ಪ್ಯಾಂಟ್ ಬಿಚ್ಚಿ ಎಂದು ಹೇಳಿ ಕೊಟ್ಟಿದ್ರಾ? ಸಿಎಂ ಭ್ರಷ್ಟ ಎಂದು ಹೇಳಲು ಸ್ಕ್ರಿಪ್ಟ್ ಬರೆದು ಕೊಟ್ಟಿದ್ರಾ? ಕನ್ನಡಿಗರ ವಿರುದ್ಧ ಮಾತಾಡಿ ಎಂದು ಹೇಳಿಕೊಟ್ಟಿದ್ದೇವಾ? ನಾವೇನು ಸ್ಕ್ರಿಪ್ಟ್ ಕೊಟ್ಟಿದ್ದೇವಾ? ಇದೇನು ಸಿನಿಮಾನಾ? 'ಸಿಡಿ'ನ ಮಾತುಗಳೆಲ್ಲ ನೇರವಾಗಿ ಅವರ ಬಾಯಿಂದ ಬಂದಂತಹ ನುಡಿಮುತ್ತುಗಳು ಎಂದು ಡಿಕೆಶಿ ವಿವರಿಸಿದರು.
ನಾವು ಸುಮ್ಮನೆ ಕೂರಲ್ಲ. ನಮಗೂ ಗೊತ್ತಿದೆ. 24 ಗಂಟೆಯೊಳಗೇ ಐವರು ಹಿರಿಯ ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದಾಗ ಸಿಎಂ ಯಡಿಯೂರಪ್ಪ ಅವರು ಯಾಕೆ ಮಾತನಾಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು 15 ಜನರ ರಾಜೀನಾಮೆ ಅಂತಾರೆ. ರಾಜಕೀಯ ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತೀರಾ? ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕೂರಬೇಕಾ? ನಮ್ಮ ಪಕ್ಷದ ರಕ್ಷಣೆ ನಾವು ಮಾಡಿಕೊಳ್ಳಬಾರದಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಯಡಿಯೂರಪ್ಪ ಹೇಗೆ ಸಹಿಸಿಕೊಂಡಿದ್ದಾರೊ ಗೊತ್ತಿಲ್ಲ!
ಯಾವ ತನಿಖೆ ಬೇಕಾದರೂ ಮಾಡಲಿ, ಯಾವ ಪಕ್ಷದ ಮೇಲಾದರೂ ಹೇಳಲಿ. ವಿರೋಧ ಪಕ್ಷವಾಗಿ ನಾವು ಭ್ರಷ್ಟಾಚಾರ ಆರೋಪ ಮಾಡುವುದು ಬೇರೆ ವಿಚಾರ. ಆದರೆ ಹಾಲಿ ಮಂತ್ರಿ ಅವರು ಮುಖ್ಯಮಂತ್ರಿ ಭ್ರಷ್ಟ ಎಂದಾಗ ಈ ಬಗ್ಗೆ ತನಿಖೆ ನಡೆಯಬೇಕು ಅಲ್ಲವೇ? ಇದನ್ನು ಮುಖ್ಯಮಂತ್ರಿಗಳು ಹೇಗೆ ಸಹಿಸಿಕೊಳ್ಳುತ್ತಿದ್ದಾರೋ ನನಗಂತೂ ಗೊತ್ತಿಲ್ಲ. ಅವರಿಗೆ ಹಾಲು ಕುಡಿಸಿ, ಇಂತಹ ಮಾತು ಹೇಳಿಸಲು ಅವರೇನು ಚಿಕ್ಕ ಮಕ್ಕಳಾ? ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಅಂತಾ ಕಾಂಗ್ರೆಸ್ಗೆ ಗೊತ್ತಿದೆ. ನಾವು ನಿಭಾಯಿಸುತ್ತೇವೆ ಎಂದು ಖಡಕ್ ಮಾತು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ನನ್ನ ಗೆಳೆಯನೇ!
ಸಿ.ಡಿ. ಫೇಕ್ ಆಗಿದ್ದರೆ ತನಿಖೆ ಯಾಕೆ ಬೇಕು? ಜನರಿಗೆ ಸಾಮಾನ್ಯ ಜ್ಞಾನ ಇಲ್ಲವೇ? ಯಾವುದು ಫೇಕ್, ಯಾವುದು ನಿಜ ಗೊತ್ತಿಲ್ಲವೇ? ರಮೇಶ್ ಜಾರಕಿಹೊಳಿ ನೊಂದಿದ್ದಾನೆ. I feel sorry for him. ನಾನು ಅವನೂ ಒಂದು ಕಾಲದಲ್ಲಿ ಚೆನ್ನಾಗಿದ್ದೆವು. ಅವನಿಗೆ ಒಳ್ಳೆಯದಾಗಲಿ ಎಂದು ಬಯಸಿದ್ದೆ. ನಂತರ ಹುಚ್ಚುಚ್ಚಾಗಿ ಹೇಳಿಕೆ ಕೊಡಲು ಶುರು ಮಾಡಿದ. ಆಮೇಲೆ ನಾನು ಅವನಿಂದ ದೂರ ಉಳಿದೆ ಅಷ್ಟೇ.
ಅವರು ನಮ್ಮ ಪಕ್ಷ ಬಿಟ್ಟ ನಂತರ ನಾನು ಒಂದು ದಿನವೂ ಅವರ ಜತೆ ಮಾತನಾಡಿಲ್ಲ. ಮದುವೆಗೆ ಬಂದಿದ್ದಾಗ ಮಾತನಾಡಿಸಿದ್ದೆ. ರಾಜಕಾರಣ ಅಂದ್ರೆ ಷಡ್ಯಂತ್ರ ಮಾಡೋದು ಸಾಮಾನ್ಯ. ನೀವು ಸರಿ ಇದ್ರೆ ನಿಮ್ಮನ್ನ ಯಾಕೆ ಸಿಕ್ಕಿಸಿ ಹಾಕಿಸುತ್ತಾರೆ? ನಮ್ಮ ಜ್ಞಾನ ನಮ್ಮ ಕೈಯಲ್ಲಿರಬೇಕು. ನಿಮ್ಮ ಬಟನ್ ನೀವೇ ಹಾಕೋಬೇಕು. ಅವರು ನನ್ನ ಮೇಲೆ ಆರೋಪ ಮಾಡಲಿ. ಇದು ರಾಜಕೀಯ ಚೆಸ್ ಗೇಮ್. ಅವರೆಲ್ಲಾ ದೇವರ ಮಕ್ಕಳು ಅವರಿಗೆ ಒಳ್ಳೆಯದಾಗಲಿ ಎಂದು 'ಸಿಡಿ' ಬಿಡುಗಡೆ ಆರೋಪದ ಬಗ್ಗೆ ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ಕೊಟ್ಟರು.