ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಬಾಸ್: ಪತರುಗುಟ್ಟಿದ ಬಿಜೆಪಿ
ಹಲವು ತಿಂಗಳ ಸಮಾಲೋಚನೆ, ಚರ್ಚೆ, ಅಳೆದುತೂಗಿ, ಕೊನೆಗೂ ಕರ್ನಾಟಕ ಕಾಂಗ್ರೆಸ್ ಘಟಕಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.
ಮಧ್ಯಪ್ರದೇಶದ ಪ್ರಭಾವಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರಿದ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕೆಪಿಸಿಸಿಯಲ್ಲಿ ಇದೆ ಎನ್ನಲಾಗುವ ಎರಡು ಬಣಗಳಿಗೂ ಸಮಾನ ನ್ಯಾಯ ಕೊಡಿಸುವ ಸ್ಪಷ್ಟ ಉದ್ದೇಶ ಬುಧವಾರದ (ಮಾ 11) ಎಐಸಿಸಿ ಘೋಷಣೆಯಲ್ಲಿ ಇದೆ ಎಂದೇ ಹೇಳಬಹುದಾಗಿದೆ.
ಸಾತನೂರು ಟು ಕೆಪಿಸಿಸಿ : ಡಿಕೆಶಿ ರಾಜಕಾರಣ & 'ಆನೆ ನಡಿಗೆ'
ರೇಸ್ ನಲ್ಲಿದ್ದ ಹಲವು ಹಿರಿಯ ಮುಖಂಡರನ್ನು ಪಕ್ಕಕ್ಕೆ ತಳ್ಳಿ ಡಿಕೆಶಿ ಈ ಆಯಕಟ್ಟಿನ ಹುದ್ದೆಗೇರುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ ವಾರ ಡಿಕೆಶಿ, ದೆಹಲಿಯಲ್ಲಿ ಹಲವು ಸುತ್ತು ವಕೀಲರ ಬಳಿ ಸಮಾಲೋಚಿಸಿದ ವಿಷಯ ಬಹಿರಂಗಗೊಂಡಿತ್ತು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ
ಒಂದು ವೇಳೆ, ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದ ನಂತರ, ಮತ್ತೆ ಇಡಿ/ಸಿಬಿಐ/ಐಟಿ ಕುಣಿಕೆಯಲ್ಲಿ ತಗಲಾಕಿಕೊಂಡರೆ, ಕಾನೂನಾತ್ಮಕವಾಗಿ ಮುಂದಿನ ಹೆಜ್ಜೆ ಯಾವರೀತಿ ಇಡಬೇಕು ಎನ್ನುವ ಸಮಾಲೊಚನೆಯನ್ನು ಡಿಕೆಶಿ ವಕೀಲರ ಬಳಿ ಚರ್ಚಿಸಿದರೆಂದು ಹೇಳಲಾಗುತ್ತಿದೆ. ಡಿಕೆಶಿ ಆಯ್ಕೆಯಿಂದ, ಆಡಳಿತ ಪಕ್ಷ ಬಿಜೆಪಿಗೆ ಮುಂದಿನ ದಿನಗಳಲ್ಲಾಗುವ ಚಾಲೆಂಜ್ ಏನು?
ತಿಹಾರ್ ಜೈಲಿನಿಂದ ಡಿ.ಕೆ.ಶಿವಕುಮಾರ್ ಬಿಡುಗಡೆ
ತಿಹಾರ್ ಜೈಲಿನಿಂದ ಡಿ.ಕೆ.ಶಿವಕುಮಾರ್ ಬಿಡುಗಡೆಯಾಗಿ ಬೆಂಗಳೂರಿಗೆ ಬಂದಾಗ, ಏರ್ಪೋರ್ಟಿನಿಂದ ಕೆಪಿಸಿಸಿ ಕಚೇರಿಯವರೆಗೆ ಅವರಿಗೆ ಸಿಕ್ಕ ವೆಲ್ಕಂ ರಾಷ್ಟ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿರುವ ಡಿಕೆಶಿ, ಬಿಜೆಪಿಯ ದ್ವೇಷದ ರಾಜಕಾರಣದಿಂದ ಜೈಲಿಗೆ ಹೋದೆ ಎನ್ನುವುದನ್ನು ಒಂದು ಹಂತಕ್ಕೆ ಕಾರ್ಯಕರ್ತರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಆ ವೇಳೆ ಪಕ್ಷದಲ್ಲಿ ಪ್ರಮುಖ ಹುದ್ದೆ ಇಲ್ಲದೇ ಇದ್ದಿದ್ದರಿಂದ, ಡಿಕೆಶಿ ಸೈಲೆಂಟ್ ಆಗಿದ್ದರು. ಈಗ, ಹೇಗೂ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗಾಂಧಿ ಕುಟುಂಬದ ಆಪ್ತ ಅಹಮದ್ ಪಟೇಲ್
ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಆಪ್ತ ಅಹಮದ್ ಪಟೇಲ್ ಅವರ ಜಯಕ್ಕಾಗಿ ಠೊಂಕ ಕಟ್ಟಿ, ಕೆಲಸ ಸಾಧಿಸಿದ ವಿದ್ಯಮಾನ, ಡಿಕೆಶಿ ಮತ್ತು ಅಮಿತ್ ಶಾ ಮನಸ್ತಾಪಕ್ಕೆ ಕಾರಣವಾಯಿತು. ಇದಾದ ನಂತರ, ಹಲವು ಬಾರಿ ಕಾಂಗ್ರೆಸ್ ಅನ್ನು ರಕ್ಷಿಸಿದ್ದರಿಂದ, ಸ್ವಾಭಾವಿಕವಾಗಿ ಅಮಿತ್ ಶಾ ಕಣ್ಣು, ಡಿಕೆಶಿ ಮೇಲೆ ಬಿತ್ತು. ಅಣ್ಣನಿಗೆ ಬಿಜೆಪಿ ಸೇರಲು ಬಹಳ ಒತ್ತಡವಿತ್ತು ಎನ್ನುವ ವಿಚಾರವನ್ನು ಸಹೋದರ ಸುರೇಶ್ ಬಹಿರಂಗವಾಗಿಯೇ ಹೇಳಿದ್ದರು. ಡಿಕೆಶಿ ಹೇಳಿದಂತೆ, ಒಂದೊಂದು ಪೈಸೆಯನ್ನು ಚುಕ್ತಾ ಮಾಡುತ್ತೇನೆ ಎಂದು ಜೈಲಿಂದ ಹೊರಬಂದ ಮೇಲೆ ಹೇಳಿದ್ದರು. ಹಾಗಾಗಿ, ಡಿಕೆಶಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬಹುದು.
ಯಡಿಯೂರಪ್ಪನವರ ಕಡೆಯಿಂದ ದೊಡ್ಡವರಿಗೆ ದುಡ್ಡು ಸಂದಾಯ
ಮುಖ್ಯಮಂತ್ರಿ ಯಡಿಯೂರಪ್ಪನವರ ಕಡೆಯಿಂದ ದೊಡ್ಡವರಿಗೆ ದುಡ್ಡು ಸಂದಾಯವಾದ ಪತ್ರದ ಕಾಪಿ, ಡಿಕೆಶಿ ಮನೆಯಲ್ಲಿ ಐಟಿ ರೇಡ್ ಆದಾಗ ಸಿಕ್ಕಿತ್ತು. ಬಿಜೆಪಿಯ ನನ್ನ ಸ್ನೇಹಿತರೇ ಇದನ್ನು ನನಗೆ ತಲುಪಿಸಿದ್ದು ಎನ್ನುವ ಮಾತನ್ನು ಡಿಕೆಶಿ ಹೇಳಿದ್ದರು. ಈಗ ಆ ವಿಚಾರ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಯಿಲ್ಲದಿಲ್ಲ.
ಬಿಜೆಪಿಗೆ ಬಿಸಿಮುಟ್ಟಿಸುವುದಂತೂ ಖಂಡಿತ
ಹಿಡಿದ ಪಟ್ಟನ್ನು ಬಿಡದ, ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಬಹುತೇಕ ಯಶಸ್ವಿಯಾಗುವ ಡಿಕೆಶಿ, ಬಿಜೆಪಿ ಸರಕಾರದ ವಿರುದ್ದ ನೇರವಾಗಿ ಆಖಾಡಕ್ಕಿಳಿಯಲು, ಕೆಪಿಸಿಸಿ ಅಧ್ಯಕ್ಷರಾಗುವ ಮೂಲಕ, ಅನುಮತಿ ಸಿಕ್ಕಂತಾಗಿದೆ. ಹಾಗಾಗಿ, ಸರಕಾರದ ವಿರುದ್ದದ ಕಾಂಗ್ರೆಸ್ ಮುಂದಿನ ಹೋರಾಟಗಳು, ಬಿಜೆಪಿಗೆ ಬಿಸಿಮುಟ್ಟಿಸುವುದಂತೂ ಖಂಡಿತ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೊಂದಾಣಿಕೆ
ಸೊರಗಿ ಹೋಗಿರುವ ಕಾಂಗ್ರೆಸ್ಸಿಗೆ, ಹೈಕಮಾಂಡ್ ಘೋಷಣೆ, ಸಂಜೀವಿನಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೊಂದಾಣಿಕೆಯಲ್ಲಿ ಕೆಲಸ ಮಾಡಿಕೊಂಡು ಹೋಗಿದ್ದೇ ಆದಲ್ಲಿ, ಬಿಜೆಪಿಗೆ ಈ ಇಬ್ಬರು ಪ್ರಭಾವೀ ಮುಖಂಡರು ಸಿಂಹಸ್ವಪ್ನವಾಗುವ ಸಾಧ್ಯತೆಯಿಲ್ಲದಿಲ್ಲ.