ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಹೆಚ್ಚಿನ ಶುಲ್ಕ; ಜನರಲ್ಲಿ ಡಿಕೆಶಿ ಮನವಿ...
ಬೆಂಗಳೂರು, ಮೇ 24: ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲಂಘಿಸಿ ಯಾವುದಾದರೂ ಆಸ್ಪತ್ರೆ ಅಧಿಕ ಶುಲ್ಕ ಪಡೆಯುತ್ತಿದ್ದರೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಗಮನಕ್ಕೆ ತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಅವರು, "ಕೊರೊನಾದಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಸ್ಪತ್ರೆಯ ಬಿಲ್ಲುಗಳೂ ಶಾಕ್ ನೀಡುತ್ತಿವೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಹಲವು ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ. ಆಸ್ಪತ್ರೆಗಳ ಈ ಕೃತ್ಯ ಕೂಡಲೇ ಕೊನೆಯಾಗಬೇಕು. ನೀವು ಇಂತಹ ಸಮಸ್ಯೆ ಎದುರಿಸುತ್ತಿದ್ದರೆ ನನ್ನನ್ನು ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಟ್ಯಾಗ್ ಮಾಡಿ. ಕೂಡಲೇ ಆ ಕುರಿತು ಮಾಹಿತಿ ಪಡೆದು, ಸೂಕ್ತ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಎಂದಿದ್ದಾರೆ. ಮುಂದೆ ಓದಿ...
"ಕರ್ನಾಟಕ ಸರ್ಕಾರ ಇಂಥವರನ್ನು ಪೋಷಿಸುತ್ತಿದೆ"
ಜನರಿಂದ ಅತ್ಯಧಿಕ ಶುಲ್ಕ ಪಡೆದು ಶೋಷಿಸುತ್ತಿರುವವರನ್ನು ಕರ್ನಾಟಕ ಸರ್ಕಾರ ಪೋಷಿಸುತ್ತಿದೆ. ಮನುಕುಲದ ಸಂಕಷ್ಟದ ಸಮಯದಲ್ಲಿ ಲಾಭ ಮಾಡಿಕೊಳ್ಳುವ ಮನಃಸ್ಥಿತಿ ಅಪರಾಧ ಎಂದ ಅವರು, ಭರಿಸಲಸಾಧ್ಯವಾದ ವೈದ್ಯಕೀಯ ಶುಲ್ಕಗಳು ಹಾಗೂ ಬಡಜನರ ಸಂಕಷ್ಟ ನೋಡಲು ನೋವೆನಿಸುತ್ತದೆ ಎಂದರು. ಜನರ ಸಂಕಷ್ಟದ ಜೊತೆಗೆ ವೈದ್ಯಕೀಯ ಶುಲ್ಕವೂ ಏರುತ್ತಿದೆ. ಈ ಕುರಿತು ಬಿಜೆಪಿ ಸರ್ಕಾರ ಜಾಣಕುರುಡು ಪ್ರದರ್ಶಿಸುತ್ತಿದೆ. ಆಸ್ಪತ್ರೆಗಳು ಆಮ್ಲಜನಕ, ಹಾಸಿಗೆ, ಕೋವಿಡ್ ಪರೀಕ್ಷೆ ಹಾಗೂ ಆಂಬುಲೆನ್ಸ್ಗಳಿಗೆ ಅಧಿಕ ಶುಲ್ಕ ಪಡೆಯುತ್ತಿರುವಾಗ ರಾಜ್ಯದ ಮುಖ್ಯಮಂತ್ರಿಗಳು ಮೌನವಹಿಸಿರುವುದು ದುರಂತ ಎಂದರು.
ಬಿಜೆಪಿಯವರು ಎಷ್ಟೇ ಮುಚ್ಚಿಟ್ಟರೂ ನನಗೆ ಮಾಹಿತಿ ಸಿಗುತ್ತದೆ; ಡಿಕೆಶಿ
"ಈಗ ಕ್ರಮಕ್ಕೆ ಮುಂದಾಗಿದ್ದೇನೆ"
"ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯಕ್ಕೆ ಮುಂದಾಗಬೇಕು. ಈ ಕುರಿತು ಹಲವು ದಿನಗಳಿಂದ ದೂರು ಕೇಳುತ್ತಿದ್ದೆ, ಇದೀಗ ಕ್ರಮಕ್ಕೆ ಮುಂದಾಗಿದ್ದೇನೆ. ವೈದ್ಯಕೀಯ ಶುಲ್ಕ ಭರಿಸಲಾಗದೆ ಯಾರೂ ಜೀವ ಕಳೆದುಕೊಳ್ಳಬಾರದು" ಎಂದು ಹೇಳಿದರು. ಆಸ್ಪತ್ರೆಗಳಿಂದ ತೊಂದರೆಗೊಳಗಾದರೆ ಟ್ವಿಟರ್ನಲ್ಲಿ @DKShivakumar ಎಂದು ಅವರು ಟ್ಯಾಗ್ ಮಾಡಲು ತಿಳಿಸಿದ್ದಾರೆ.
"ಇಂಥ ಸಮಯದಲ್ಲಿ ಲಾಭ ನೋಡುತ್ತಿದ್ದಾರೆ"
"ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ವೈದ್ಯಕೀಯ ಸೌಕರ್ಯಗಳಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಲಸಿಕೆ ವಿತರಿಸುವ ನಮ್ಮ ಯೋಜನೆಗೆ ಅನುಮತಿ ನೀಡದ ಸರ್ಕಾರ ಜನರ ಜೀವವನ್ನು ಅಪಾಯದಂಚಿಗೆ ನೂಕುತ್ತಿದೆ." ಎಂದು ದೂರಿದರು.
ಕೊರೊನಾ ಲಸಿಕೆ ವಿರೋಧಿಸಿದ್ದರೆ ಏಕೆ ತೆಗೆದುಕೊಳ್ಳುತ್ತಿದ್ದೆವು?: ಡಿಕೆ ಶಿವಕುಮಾರ್
ಕೊರೋನಾ ಪಿಡುಗು ಬಾಧಿಸುತ್ತಿರುವಾಗ ಅನೇಕ ವೈದ್ಯಕೀಯ ಸಂಸ್ಥೆಗಳು ಲಾಭದ ಉದ್ದೇಶದಿಂದ ಕೆಲಸ ಮಾಡುತ್ತಿವೆ. ಕೆಲವು ಪ್ರಕರಣದಲ್ಲಿ ಸರಿಯಾದ ಆರೈಕೆಯ ಕೊರತೆಯಿಂದ ಅನಾಹುತಗಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
Recommended Video
"ಕರ್ನಾಟಕ ಅತಿ ಹೆಚ್ಚು ಸಾವು ದಾಖಲಿಸಿದೆ"
ಹಲವು ವಿಷಯಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕ ಇದೀಗ ಒಂದೇ ದಿನದಲ್ಲಿ ಅತಿಹೆಚ್ಚು ಸಾವನ್ನು ದಾಖಲಿಸಿರುವ ರಾಜ್ಯವಾಗಿರುವುದು ಅತ್ಯಂತ ನೋವಿನ ಸಂಗತಿ. ಈಗಾಗಲೇ ನೂರಾರು ಜನರು ಸಹಾಯ ಕೋರಿ ನಮ್ಮನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದಾರೆ ಎಂದು ತಿಳಿಸಿದರು.