ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ. ಘೋಷಿಸಿದ ಡಿಕೆಶಿ
Recommended Video
ಬೆಂಗಳೂರು, ಆಗಸ್ಟ್ 16 : "ಪ್ರವಾಹ ಪರಿಹಾರದ ವಿಚಾರದಲ್ಲಿ ಹೇಳಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆದುಕೊಳ್ಳಲಿ. ಇದೀಗ ದೆಹಲಿಗೆ ಹೋಗಿದ್ದಾರೆ. ಅಲ್ಲಿಂದ ಎಷ್ಟು ಉಡುಗೊರೆ ತರ್ತಾರೆ ನೊಡೋಣ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾನು 50 ಲಕ್ಷ ನೀಡುತ್ತೇನೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ. ಕೆ. ಶಿವಕುಮಾರ್, 'ಕೊಡಗು, ಮಲೆನಾಡು ಮತ್ತು ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಪ್ರವಾಹ ಪೀಡಿತರ ಪುನರ್ವಸತಿ ಕಾರ್ಯ ತ್ವರಿತವಾಗಿ ನಡೆಯಬೇಕು" ಎಂದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದ ಹಣವೆಷ್ಟು?
"ಮುಖ್ಯಮಂತ್ರಿಗಳು ಪ್ರತಿ ಮನೆಗೆ 5 ಸಾವಿರ ಕೊಡುವೆ, 5 ಲಕ್ಷ ಕೊಡುವೆ ಎಂದು ಘೋಷಣೆ ಮಾಡಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳಲಿ. ಇದೀಗ ದೆಹಲಿಗೆ ಹೋಗಿದ್ದಾರೆ, ಅಲ್ಲಿಂದ ಎಷ್ಟು ಗಿಫ್ಟ್ ತರ್ತಾರೆ ನೋಡೋಣ" ಎಂದು ತಿಳಿಸಿದರು.
ಪ್ರವಾಹ ಪರಿಹಾರಕ್ಕೆ ದೇಣಿಗೆ ನೀಡಲು ಯಡಿಯೂರಪ್ಪ ಮನವಿ
"ಪ್ರವಾಹದಿಂದ ಸಂತ್ರಸ್ತರಾದ ಜನರ ಪುನರ್ವಸತಿ ಆಗಬೇಕು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾನು 50 ಲಕ್ಷ ರೂ. ಹಣ ನೀಡುತ್ತೇನೆ" ಎಂದು ಡಿ. ಕೆ. ಶಿವಕುಮಾರ್ ಘೋಷಣೆ ಮಾಡಿದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ನೆರೆ ಸಂತ್ರಸ್ತರಿಗೆ ಒಂದು ಕೋಟಿ ದೇಣಿಗೆ
ಹಿಂದಿನ ಸರ್ಕಾರದ ಯೋಜನೆ
ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚು ಆದ್ಯತೆ ನೀಡಲು ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕುವ ಸರ್ಕಾರದ ಪ್ರಸ್ತಾಪಕ್ಕೆ ಡಿ. ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದರು. "ಸಿದ್ದರಾಮಯ್ಯ ಅವರು ಬದ್ಧತೆಯಿಂದ ಯೋಜನೆ ಜಾರಿಗೆ ತಂದಿದ್ದಾರೆ.ನಮ್ಮ ಹಳೆಯ ಯೋಜನೆ ಕೈ ಬಿಡುವುದು ಸರಿಯಲ್ಲ.ಯೋಜನೆ ರದ್ಧುಪಡಿಸಬಾರದು" ಎಂದು ಹೇಳಿದರು.
ಹೋರಾಟದ ಎಚ್ಚರಿಕೆ ಕೊಟ್ಟ ಡಿಕೆಶಿ
"ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗೆ ಬಗ್ಗೆ ನಮಗೆ ಬದ್ಧತೆ ಇದೆ.ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳಬೇಕು.ನಮ್ಮ ಕಾರ್ಯಕ್ರಮ ರದ್ದು ಮಾಡಿದರೆ ನಾವು ಸುಮ್ಮನಿರುವುದಿಲ್ಲ.ಅದರ ಬಗ್ಗೆ ವಿಸ್ತೃತ ಹೋರಾಟ ರೂಪಿಸಬೇಕಾಗುತ್ತದೆ" ಎಂದು ಡಿ. ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
ಯಾವ ಫೋನ್ ಟ್ಯಾಪಿಂಗ್ ಆಗಿಲ್ಲ
ಫೋನ್ ಟ್ಯಾಪಿಂಗ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್, "ಯಾವ ಫೋನ್ ಸಹ ಟ್ಯಾಪ್ ಆಗಿಲ್ಲ.ಮಾಧ್ಯಮಗಳಿಗೆ ಅದು ಹೇಗೆ ಇಂತಹ ಸುದ್ದಿ ಸಿಗುತ್ತದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ಇದರ ಬಗ್ಗೆ ಯಾವ ತನಿಖೆ ಬೇಕಾದರೂ ಮಾಡಲಿ. ಇದರಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ. ಅವರು ಏನು ಮಾಡಿದ್ದಾರೆ ಎನ್ನುವುದು ಗೊತ್ತಿದೆ,ಬಿಜೆಪಿಯವರು ನಮ್ಮ ಫೋನ್ ಕದ್ದಾಲಿಸಿದ್ದಾರೆ" ಎಂದು ಡಿ. ಕೆ. ಶಿವಕುಮಾರ್ ಆರೋಪ ಮಾಡಿದರು.
ನಾನೊಬ್ಬ ಜ್ಯುನಿಯರ್
ಕೆಪಿಸಿಸಿ ಪದಾಧಿಕಾರಿಗಳ ನೇಮಕದ ಬಗ್ಗೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಆ ವಿಚಾರವನ್ನು ನಮ್ಮ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ.ನಾನು ಸೀನಿಯರ್ ಅಲ್ಲ, ನಾನೊಬ್ಬ ಜೂನಿಯರ್, ಶಾಸಕನಾಗಿ ಜನರ ಕೆಲಸ ಮಾಡುವುದಕ್ಕೆ ಬಿಟ್ಟರೆ ಸಾಕು.ನನಗೆ ಯಾವ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ" ಎಂದು ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.