ಕೊರೊನಾ ವೈರಸ್ ಸೋಂಕು; ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
ಬಳ್ಳಾರಿ, ಜೂನ್ 15: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಈ ನಡುವೆ ಬಳ್ಳಾರಿಯಲ್ಲಿ ಜೂನ್ 14 ರಂದು 15 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿವೆ. ಜಿಂದಾಲ್ ನಲ್ಲೇ ಮತ್ತೆ 5 ಕೊರೊನಾ ವೈರಸ್ ಪ್ರಕರಣ ಕಂಡುಬಂದಿದೆ. ಬಳ್ಳಾರಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 196ಕ್ಕೆ ಏರಿಕೆ ಆಗಿದೆ. ಇದರಲ್ಲಿ ಜಿಂದಾಲ್ ಸೋಂಕಿತರ ಸಂಖ್ಯೆ 110 ಆಗಿದೆ.
ಜೊತೆಗೆ ಬಳ್ಳಾರಿಯ ಹೊಸಪೇಟೆಯಲ್ಲಿ ಕಂಡುಬಂದಿರುವ ಮೂರು ಪ್ರಕರಣಗಳು ಜಿಲ್ಲಾಡಳಿತಕ್ಕೆ ತಲೆನೋವಾಗಿವೆ. ಮೂರು ಸೋಂಕಿತರ ಟ್ರಾವೆಲ್ ಹಿಸ್ಟರಿ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇನ್ನಿತರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಎಷ್ಟಿವೆ ಇಲ್ಲಿ ನೋಡೋಣ...
ಕೋಲಾರದಲ್ಲಿ 48ಕ್ಕೆ ಏರಿದ ಸೋಂಕಿತರ ಸಂಖ್ಯೆ
ಕೋಲಾರದಲ್ಲಿ ನಿನ್ನೆ ಏಳು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಮಾಲೂರಿನಲ್ಲಿ ಒಂದು, ಶ್ರೀನಿವಾಸಪುರದಲ್ಲಿ ಮೂವರು, ಕೋಲಾರ ನಗರದಲ್ಲಿ ಮೂವರಲ್ಲಿ ಸೋಂಕು ದೃಢವಾಗಿದೆ. ರಾಜಸ್ಥಾನದಿಂದ ಹಿಂದಿರುಗಿದ್ದ 36 ವರ್ಷದ ವ್ಯಕ್ತಿಯಲ್ಲಿ, 85 ವರ್ಷದ ವೃದ್ಧೆಯಲ್ಲಿ ಹಾಗೂ 79 ವರ್ಷದ ವೃದ್ಧ, 17 ವರ್ಷದ ಯುವತಿ, ಮಧ್ಯಪ್ರದೇಶದಿಂದ ಬಂದಿದ್ದ 21 ವರ್ಷದ ಕಾರ್ಮಿಕನಲ್ಲಿ, 35 ವರ್ಷದ ಕಾರ್ಮಿಕನಲ್ಲಿ ಹಾಗೂ 35 ವರ್ಷದ ಆಟೋ ಚಾಲಕನಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರನ್ನು ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರು ಪತ್ತೆಯಾದ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಘೋಷಣೆ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 48 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, 26 ಜನ ಬಿಡುಗಡೆಯಾಗಿ 22 ಸಕ್ರಿಯ ಪ್ರಕರಣಗಳಿವೆ.
ಜುಲೈ, ಆಗಸ್ಟ್ ಅಲ್ಲ ಭಾರತದಲ್ಲಿ ನವೆಂಬರ್ನಲ್ಲಿ ಕೊರೊನಾ ಸೋಂಕು ತಾರಕಕ್ಕೆ!
ಹಾವೇರಿಯಲ್ಲಿ 46 ವರ್ಷದ ವ್ಯಕ್ತಿಯಲ್ಲಿ ಸೋಂಕು
ಹಾವೇರಿ ಜಿಲ್ಲೆಯಲ್ಲಿ 46 ವರ್ಷದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಗೌಡರ ಓಣಿ ನಿವಾಸಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕಿತ ತಾಯಿಯ ಪ್ರಾಥಮಿಕ ಸಂಪರ್ಕದಿಂದ ಇವರಿಗೆ ಸೋಂಕು ತಗುಲಿದೆ. ಜೂನ್ 10 ರಂದು ಈ ವ್ಯಕ್ತಿಯ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಲ್ಯಾಬ್ ಗೆ ಕಳಿಸಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಸೋಂಕು ದೃಢಪಡುತ್ತಿದ್ದಂತೆ ಸೋಂಕಿತನನ್ನು ಕೋವಿಡ್19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 343ಕ್ಕೆ ಏರಿಕೆ
ಮುಂಬೈನಿಂದ ಮಂಡ್ಯಕ್ಕೆ ಬಂದ 4 ಜನರಲ್ಲಿ ಸೋಂಕು ದೃಢಪಟ್ಟಿದೆ. ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಒಬ್ಬರಿಗೆ ಸೋಂಕು ತಗುಲಿದೆ. 4 ಜನ ಪುರುಷರು ಹಾಗೂ ಒಬ್ಬ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ. 3 ಜನ ನಾಗಮಂಗಲ ತಾಲ್ಲೂಕಿನವರು ಹಾಗೂ ಒಬ್ಬರು ಕೆ.ಆರ್.ಪೇಟೆ ತಾಲ್ಲೂಕಿನವರು ಎಂದು ತಿಳಿದುಬಂದಿದೆ. 1 ಮಳವಳ್ಳಿ ತಾಲ್ಲೂಕಿನವರಾಗಿದ್ದು, ಬೆಂಗಳೂರಿನ ನಿಗದಿತ ಆಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗಿನ 343 ಸೋಂಕಿತರಲ್ಲಿ 315 ಸೋಂಕಿತರು ಮುಂಬೈನಿಂದ ಬಂದವರಾಗಿದ್ದಾರೆ.
ಕೊವಿಡ್19 ಭೀತಿಯಿಂದ ಆತ್ಮಹತ್ಯೆಗೆ ಶರಣಾದ IRS ಅಧಿಕಾರಿ
ಬೆಳಗಾವಿಯಲ್ಲಿ 304ಕ್ಕೆ ಏರಿದೆ ಪ್ರಕರಣ
ಮಹಾರಾಷ್ಟ್ರದಿಂದ ಬೆಳಗಾವಿಗೆ ವಾಪಸ್ ಬಂದ ಓರ್ವನಿಗೆ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ನಿನ್ನೆ ಬೆಳಗಾವಿಯಲ್ಲಿ ಒಬ್ಬನಲ್ಲಿ ಸೋಂಕು ಕಂಡುಬಂದಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 304ಕ್ಕೆ ಏರಿದೆ.
ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 896
ಕಲಬುರಗಿಯಲ್ಲಿ ನಿನ್ನೆ ಹದಿಮೂರು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ನಾಲ್ವರು ಮಕ್ಕಳು, ಐವರು ಮಹಿಳೆಯರು, ನಾಲ್ವರು ಪುರುಷರು ಮೂವರಿಗೆ ಎರಡನೆಯ ಸಂಪರ್ಕದಿಂದ ಸೋಂಕು ತಗುಲಿದೆ. ಉಳಿದವರು ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 896 ಕ್ಕೆ ಏರಿಕೆಯಾಗಿದೆ. ನಿನ್ನೆ 50 ಜನ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಡಿಸ್ಚಾರ್ಜ್ ಆದವರ ಸಂಖ್ಯೆ 427ಕ್ಕೆ ಏರಿಕೆಯಾಗಿದೆ.
ಬೀದರ್ ನಲ್ಲಿ 370ಕ್ಕೆ ಏರಿದ ಪ್ರಕರಣಗಳು
ಬೀದರ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ನಾಲ್ಕು ನೂರು ಗಡಿಯತ್ತ ಸಾಗುತ್ತಿದೆ. ನಿನ್ನೆ ಇಪ್ಪತ್ತು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 370ಕ್ಕೆ ಏರಿಕೆ ಕಂಡಿದೆ. ಹುಮನಾಬಾದ 2, ಭಾಲ್ಕಿ 2, ಬೀದರ್ ನಗರ 1, ಬಸವಕಲ್ಯಾಣ 5 ಹಾಗೂ ಔರಾದ ತಾಲೂಕಿನಲ್ಲಿ 10 ಪ್ರಕರಣಗಳು ದಾಕಲಾಗಿವೆ. ಇಲ್ಲಿಯವರೆಗೆ 203 ಜನರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ161 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 6 ಜನರು ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಬಹುತೇಕ ಎಲ್ಲಾ ಕೇಸ್ ಗಳಿಗೆ ಮಹಾರಾಷ್ಟ್ರ ನಂಟು ಇರುವುದು ತಿಳಿದುಬಂದಿದೆ.
ಉಡುಪಿಯಲ್ಲಿ 1026 ಪಾಸಿಟಿವ್ ಪ್ರಕರಣ
ಉಡುಪಿಯಲ್ಲಿ ನಿನ್ನೆ 21 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಮಹಾರಾಷ್ಟ್ರದಿಂದ ಬಂದ 18 ಮಂದಿಯಲ್ಲಿ, ಉತ್ತರ ಪ್ರದೇಶದಿಂದ ಬಂದ ಒಬ್ಬರಲ್ಲಿ, ತಮಿಳುನಾಡಿನಿಂದ ಬಂದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 1026 ಪಾಸಿಟಿವ್ ಪ್ರಕರಣ ದಾಖಲಾಗಿವೆ.