ಜುಲೈ 31: ಕರ್ನಾಟಕದ ಇಂದಿನ ಪ್ರಮುಖ ಸುದ್ದಿಗಳು
ಕರ್ನಾಟಕ, ಜುಲೈ 31: ಕರ್ನಾಟಕದಲ್ಲಿ ಇಂದು ವಿವಿಧ ಜಿಲ್ಲೆಗಳಲ್ಲಿ ಹಲವು ಘಟನೆಗಳು ನಡೆದಿದ್ದು, ಅವುಗಳ ಸಂಕ್ಷಿಪ್ತ ವರದಿ ಇಲ್ಲಿದೆ.
ಸಿ.ಎಲ್ ಪ್ರವೇಶ ಪರೀಕ್ಷೆಯಲ್ಲಿ ರಿಷಬ್ ದೇವಯ್ಯಗೆ ಪ್ರಥಮ ಸ್ಥಾನ
ಇತ್ತೀಚಿಗೆ ನಡೆದ 2021ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ (ಸಿ.ಎಲ್.ಎ.ಟಿ) ಇಡೀ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೊಡಗಿನ ವಿದ್ಯಾರ್ಥಿ, ಅಖಿಲ ಭಾರತ ಮಟ್ಟದಲ್ಲಿ 14ನೇ ಸ್ಥಾನ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ. ಗೋಣಿಕೊಪ್ಪಲಿನ ಇಟ್ಟಿರ ರಿಷಬ್ ದೇವಯ್ಯ ಎಂಬ ವಿದ್ಯಾರ್ಥಿಯೇ ಈ ಸಾಧನೆ ಮಾಡಿದವರಾಗಿದ್ದಾರೆ.
ದೇಶದ ವಿವಿಧೆಡೆಗಳಲ್ಲಿ ಇರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪಿಯುಸಿ ನಂತರದ ವ್ಯಾಸಂಗ ಮುಂದುವರಿಸಲು ನಡೆಸಲಾಗುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ರಿಷಬ್ ದೇವಯ್ಯ ಈ ಸಾಧನೆ ಮಾಡಿದ್ದಾರೆ. ರಿಷಬ್ ದೇವಯ್ಯ ಕೊಡಗಿನ ಗೋಣಿಕೊಪ್ಪಲಿನ ನಿವಾಸಿ ಇಟ್ಟಿರ ಮಧು ನಂಜಪ್ಪ ಮತ್ತು ಪ್ರಣಿತ ನಂಜಪ್ಪ ದಂಪತಿಗಳ ಪುತ್ರರಾಗಿದ್ದಾರೆ.
ಪುತ್ತೂರಿನಲ್ಲಿ ವ್ಯಾಕ್ಸಿನ್ ವಿಚಾರವಾಗಿ ಮಾತಿನ ಚಕಮಕಿ
ವ್ಯಾಕ್ಸಿನ್ ವಿಚಾರವಾಗಿ ಮಾತಿನ ಚಕಮಕಿ ನಡೆದು, ಘರ್ಷಣೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೊಗ್ರಾಲ್ ಪುತ್ತೂರು ಗ್ರಾ.ಪಂ ವ್ಯಾಪ್ತಿಯವರಿಗೆ ವ್ಯಾಕ್ಸಿನ್ ನೀಡಿಕೆ ಕುರಿತು ವಾಗ್ವಾದ ನಡೆದಿದ್ದು, ಮೊಗ್ರಾಲ್ ಪುತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಪಂಚಾಯತ್ನ ಮೊದಲ ಮತ್ತು ಎರಡನೇ ವಾರ್ಡ್ನವರಿಗೆ ಶುಕ್ರವಾರ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿತ್ತು.
ಈ ನಡುವೆ ಹೊರ ವಾರ್ಡ್ನವರು ವ್ಯಾಕ್ಸಿನ್ ಪಡೆಯಲು ಬಂದಿದ್ದಾರೆ ಎಂದು ಘರ್ಷಣೆಯಾಯಿತು. ಬಳಿಕ ಆಗಮಿಸಿದ ಕಾಸರಗೋಡು ಪೊಲೀಸರಿಂದ ಪರಿಸ್ಥಿತಿ ಹತೋಟಿಗೆ ತರಲಾಯಿತು. ಘರ್ಷಣೆಯ ಹಿನ್ನಲೆಯಲ್ಲಿ ಗಂಟೆಗಳ ಕಾಲ ವ್ಯಾಕ್ಸಿನ್ ನೀಡಿಕೆ ಸ್ಥಗಿತಗೊಂಡಿತ್ತು. ಬಳಿಕ ಪೊಲೀಸರ ಭದ್ರತೆಯಲ್ಲಿ ವ್ಯಾಕ್ಸಿನ್ ಪುನರಾರಂಭವಾಯಿತು. ನಿನ್ನೆ ನಡೆದ ಘರ್ಷಣೆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಹಲ್ಲೆಗೊಳಗಾದ
ಸೈನಿಕ
ಅಶೋಕ್
ಮನೆಗೆ
ಸಂಸದ,
ಶಾಸಕರ
ಭೇಟಿ
ಕೊಡಗಿನ ಬೊಯಿಕೇರಿ ಬಳಿ ಕಳೆದ ಭಾನುವಾರ ಸೈನಿಕ ಮತ್ತು ಅವರ ಕುಟುಂಬದವರ ಮೇಲೆ ದುಷ್ಕರ್ಮಿಗಳಿಂದ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಳಿಬೀಡಿನಲ್ಲಿರುವ ಸೈನಿಕ ಅಶೋಕ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಪ್ರತಾಪ್ ಸಿಂಹ, ಕೆ.ಜಿ. ಬೋಪಯ್ಯ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಕಾರಣಕ್ಕೂ ದುಷ್ಕರ್ಮಿಗಳನ್ನು ಹಾಗೇ ಬಿಡುವ ಪ್ರಶ್ನೆಯೇ ಇಲ್ಲ ಮತ್ತಷ್ಟು ಕಠಿಣ ಕಾನೂನು ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಗುರುವಾರದೊಳಗಾಗಿ ದುಷ್ಕಮಿ೯ಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲೇಬೇಕು ಎಂದು ಸೂಚಿಸಿದರು.
ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ನಿಗಮದ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಸೇರಿದಂತೆ ಬಿಜೆಪಿ ಪ್ರಮುಖರು ಹಾಜರಿದ್ದರು.
ಬೊಮ್ಮಾಯಿ ಉತ್ತಮ ಆಡಳಿತ ನೀಡುವ ವಿಶ್ವಾಸ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗ ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರು, ಸಂಸದರನ್ನು ಭೇಟಿಯಾಗಿದ್ದಾರೆ. ಆದರೆ ಇದನ್ನು ಪ್ರತಿಪಕ್ಷಗಳು ರಾಜಕೀಯ ಟೀಕೆಗಳಿಗೆ ಬಳಸುತ್ತಿರುವುದು ಬೇಸರ ತಂದಿದೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಬೊಮ್ಮಾಯಿ ನೂರಾರು ಕಿ.ಮೀ ಪ್ರಯಾಣ ಮಾಡಿ ಅತಿವೃಷ್ಠಿ ಪ್ರದೇಶದ ಸಮೀಕ್ಷೆ ನಡೆಸಿ, ಜನರ ಸಮಸ್ಯೆ ಆಲಿಸಿದ್ದಾರೆ ಎಂದರು.
ನಮ್ಮದು ಪ್ರಬಲ ರಾಷ್ಟ್ರೀಯ ಪಕ್ಷ. ಎಲ್ಲರ ಸಹಮತದೊಂದಿಗೆ ಬಸವರಾಜ ಬೊಮ್ಮಾಯಿಯನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಯಡಿಯೂರಪ್ಪರ ಹಸ್ತಕ್ಷೇಪವೇನಿಲ್ಲ. ಎಲ್ಲ ಶಾಸಕರು, ರಾಷ್ಟ್ರೀಯ ನಾಯಕರು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸಿಎಂ ಸ್ಥಾನಕ್ಕೇರಿಸಿದ್ದಾರೆ ಎಂದರು.
ಮಹಿಳೆಯರ ಸೀರೆ ಎಳೆದವನಿಗೆ ಧರ್ಮದೇಟು
ಮಹಿಳೆಯರ ಸೀರೆ ಎಳೆದು ಕಿರುಕುಳ ನೀಡುತ್ತಿದ್ದವನಿಗೆ ಸ್ಥಳೀಯ ಜನರು ಧರ್ಮದೇಟು ನೀಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಆಶಾಪುರ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ರಸ್ತೆಯಲ್ಲಿ ಓಡಾಡುವ ಮಹಿಳೆಯರಿಗೆ ಸೀರೆ ಎಳೆದು ಕಿರುಕುಳ ನೀಡುತ್ತಿದ್ದ. ಇದನ್ನ ಗಮನಿಸಿದ ಸ್ಥಳೀಯರು ವ್ಯಕ್ತಿಯನ್ನ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಮರಕ್ಕೆ ಕಟ್ಟಿಹಾಕಿದ್ದಾರೆ.
ಹಿಂದೆ ಎಂದೂ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳದ ಈ ವ್ಯಕ್ತಿ ಓಡಾಡುವ ಮಹಿಳೆಯರ ಹಿಂದೆ ಬಿದ್ದು ಸೀರೆ ಎಳೆಯುತ್ತಿದ್ದನು. ಭಯದಿಂದ ಮಹಿಳೆಯರು ಮುಂದೆ ಹೋಗುತ್ತಿದ್ದರು. ಇದನ್ನೆ ಮುಂದುವರೆಸಿದ ವ್ಯಕ್ತಿಯನ್ನು ಹಿಡಿದು ಜನ ಚೆನ್ನಾಗಿ ಥಳಿಸಿದ್ದಾರೆ. ಕೊನೆಗೆ ವ್ಯಕ್ತಿಯನ್ನು ನಗರದ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ.