ಸೆಪ್ಟೆಂಬರ್ 8ರ ಕರ್ನಾಟಕದ ಜಿಲ್ಲಾಸುದ್ದಿಗಳು
ಬೆಂಗಳೂರು, ಸೆಪ್ಟೆಂಬರ್ 08; ಕರ್ನಾಟಕದ ಜಿಲ್ಲಾಸುದ್ದಿಗಳು ಇಲ್ಲಿವೆ. ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಮುಂತಾದ ಜಿಲ್ಲೆಗಳ ಸಂಕ್ಷಿಪ್ತ ಸುದ್ದಿಗಳು ಒಂದೇ ಕ್ಲಿಕ್ನಲ್ಲಿ ಇಲ್ಲಿ ಲಭ್ಯವಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಸಮೀಪವಿರುವ ಬಿಳಗುಳ ಗ್ರಾಮದ ಪೊದೆವೊಂದರಲ್ಲಿ ಗಂಡು ಮಗುವೊಂದನ್ನು ಅನಾಥವಾಗಿ ಇಟ್ಟು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದನ್ನು ಕಂಡ ಸ್ಥಳೀಯರು ಮಗುವನ್ನು ಎತಿಕೊಂಡು ಹೋಗಿ ಪಟ್ಟಣದ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಿಲ್ಲೆಗಳಲ್ಲಿ ಗಣೇಶೋತ್ಸವ ಆಚರಣೆ; ಮಾರ್ಗಸೂಚಿ
ಕೂಲಿ ಕೆಲಸ ಮಾಡಿಕೊಂಡಿದ್ದ ತಾಲೂಕಿನ ತ್ರಿಪುರ ಗ್ರಾಮದ ತೀರ್ಥಕುಮಾರ್ ಎಂಬಾತ ಅದೇ ಗ್ರಾಮದ ಗೀತಾ ಎಂಬಾಕೆಯನ್ನು ಕಳೆದ 4 ವರ್ಷದ ಹಿಂದೆ ವಿವಾಹವಾಗಿದ್ದ. ಈ ದಂಪತಿಗೆ 3 ವರ್ಷದ ಗಂಡು ಮಗುವಿತ್ತು. ಈ ಪುಣ್ಯಾತ್ಮ ತನ್ನ ಹೆಂಡತಿಯ ತಂಗಿ ರೀತಾ ಎಂಬಾಕೆಯನ್ನು ತನ್ನ ಜತೆಯಲ್ಲೇ ಇಟ್ಟುಕೊಂಡಿದ್ದು, ಈಕೆಗೆ 2 ವರ್ಷದ ಗಂಡು ಮಗುವಿತ್ತು.
ಗೌರಿ, ಗಣೇಶ ಹಬ್ಬ; ಬೆಂಗಳೂರಿನಿಂದ 1000 ಹೆಚ್ಚುವರಿ ಬಸ್ ವ್ಯವಸ್ಥೆ
ಮತ್ತೆ ಪುನಃ ರೀತಾ ಗರ್ಭಿಣಿಯಾಗಿ 12 ದಿನದ ಹಿಂದೆ ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಪುನಃ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕಳೆದ 4 ದಿನದ ಹಿಂದೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳುವಾಗ ಮಗುವನ್ನು ಬಿಳಗುಳ ಗ್ರಾಮದ ಪೊದೆಯೊಂದರಲ್ಲಿ ಎಸೆದು, ಇಬ್ಬರೂ ಅಕ್ಕ ತಂಗಿಯರು ತನ್ನ ಊರಿಗೆ ಹೋಗಿ ಮಗು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದೆ ಎಂದು ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ.
ಇಬ್ಬರಿಗೂ ಗಂಡು ಮಗುವಿದೆ. ಸಾಕಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮಗುವನ್ನು ಪೊದೆಯಲ್ಲಿ ಎಸೆದು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೇ ಮಗುವಿನ ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದು, ಈ ಕಾರಣದಿಂದ ಮಗುವನ್ನು ಬಿಟ್ಟು ಹೋಗಿದ್ದಾರೆಂದು ಸಾರ್ವಜನಿಕರ ವಲಯದಲ್ಲಿ ನಾನಾ ತರಹದ ಮಾತುಗಳು ಕೇಳಿ ಬರುತ್ತಿದೆ.
ಚಿಕ್ಕಮಗಳೂರು; ಗ್ರಾಮಕ್ಕೆ ಶಾಪ, ಹೋಮ, ಪೂಜೆ ಮೊರೆ ಹೋದ ಜನರು!
ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮಗುವಿನ ಕೈಯಲ್ಲಿ ಆಸ್ಪತ್ರೆಯಲ್ಲಿ ಬರೆದಿರುವ ವಿವರದ ಆಧಾರದ ಮೇಲೆ ಮಗು ತ್ರಿಪುರ ಗ್ರಾಮದ ದಂಪತಿಯದ್ದು ಎಂದು ಗುರುತಿಸಲಾಗಿದೆ. ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ಚಿಕ್ಕಮಗಳೂರು ಮಕ್ಕಳ ಕಲ್ಯಾಣ ಸಮಿತಿಗೆ ಮಗುವನ್ನು ಕಳುಹಿಸಿಕೊಡಲಾಯಿತು.
ಚಿತ್ರದುರ್ಗ ಸುದ್ದಿ; "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂಬಾಗಿಲಿನಿಂದ ಬಂದು ರಾಜಕೀಯ ಮಾಡುತ್ತಿದ್ದಾರೆ" ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪಿಸಿದರು.
ಹಿಂಬಾಗಿಲ ಮೂಲಕ ಬಿಜೆಪಿ ರಾಜಕಾರಣ ಮಾಡುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, "ಸಿದ್ದರಾಮಯ್ಯ ಯಾವ ಪಕ್ಷದವರು. ಅವರು ಹಿಂಬಾಗಿಲ ಮೂಲಕ ಬಂದು ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವತ್ತೂ ಕಾಂಗ್ರೆಸ್ ಹೊಗಳಿಲ್ಲ. ಕಾಂಗ್ರೆಸ್ಗೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಕಟ್ಟಿದವರವರಿಗೆ ಸಿದ್ದರಾಮಯ್ಯ ಅವಕಾಶ ಮಾಡಿಕೊಡುತ್ತಿಲ್ಲ" ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಿಜೆಪಿ ಸೈಡ್ ಲೈನ್ ಮಾಡುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, "ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡುವ ಶಕ್ತಿ ಯಾರಿಗೆ ಇದೆ?. ನಮ್ಮ ಪಾರ್ಟಿಗಲ್ಲ, ವಿರೋಧ ಪಕ್ಷಗಳಿಗೂ ಇಲ್ಲ. ಯಡಿಯೂರಪ್ಪ ರಾಜ್ಯದ ಜನ ನಾಯಕ, ಅವರನ್ನ ಹಿಂದಿಕ್ಕುವ ಎದೆಗಾರಿಕೆ ಯಾವುದೇ ರಾಜಕಾರಣಿಗಿಲ್ಲ" ಎಂದು ತಿಳಿಸಿದರು.
ಕೃಷಿ ಸಚಿವ ಬಿ. ಸಿ. ಪಾಟೀಲ್ ವಿರುದ್ದ ಕೇಳಿ ಬಂದ ಕಿಕ್ ಬ್ಯಾಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, "ನಾನು ಮಾಧ್ಯಮಗಳಲ್ಲಿ ಈ ವಿಚಾರ ನೋಡಿಲ್ಲ. ಈ ಕುರಿತು ನನಗೆ ಮಾಹಿತಿ ಇಲ್ಲ" ಎಂದರು.
ಗಣೇಶೋತ್ಸವ ಷರತ್ತು ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಸಚಿವರು. "ಹಿಂದೂಪರ ಸಂಘಟನೆಗಳು ವಿರೋಧ ಮಾಡಿದ್ದು ಸಿಎಂ ಗಮನಕ್ಕೆ ಹೋಗಿದೆ. ಆದೇಶದ ವರದಿಯನ್ನು ಕೇಳಿದ್ದಾರೆ. ಸಿಎಂ ದೆಹಲಿಯಿಂದ ಬಂದ ಬಳಿಕ ಸೂಕ್ತ ಮಾರ್ಗದರ್ಶನ ನೀಡುತ್ತಾರೆ" ಎಂದು ಹೇಳಿದರು.
ಪಿಓಪಿ ಗಣೇಶ ಮೂರ್ತಿ ಮಾರಾಟ ನಿಷೇಧ; ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಬಳ್ಳಾರಿ ಮಹಾನಗರಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳ ಲೇಪನದಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದನ್ನು ನಿಷೇಧಿಸಿದೆ. ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸಬೇಕು ಎಂದು ತಿಳಿಸಿದ್ದಾರೆ.
ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಲು ನಗರದಲ್ಲಿ ಹಾದು ಹೋಗುವ ತುಂಗಭದ್ರಾ ಕಾಲುವೆಯಲ್ಲಿ ನಿಗದಿಪಡಿಸಿದ ಸ್ಥಳಗಳಾದ ಬೆಂಗಳೂರು ರಸ್ತೆ, ತಾಳೂರು ರಸ್ತೆ, ಕಪ್ಪಗಲ್ಲು ರಸ್ತೆ, ಹೊಸಪೇಟೆ ರಸ್ತೆಯ ಅಲ್ಲಿಪುರ, ಬೆಳಗಲ್ಲು ರಸ್ತೆ (ಡಿ.ಸಿ.ನಗರ), ಸಿರುಗುಪ್ಪ ರಸ್ತೆ ಹವಂಭಾವಿ, ಬಂಡಿಹಟ್ಟಿ ಆಲದಹಳ್ಳಿ ರಸ್ತೆ ಹಾಗೂ ಭತ್ರಿ ಸ್ಥಳಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಮಾಂಸ ಮಾರಾಟ ನಿಷೇಧ; ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯಂದು ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟ ಉದ್ದಿಮೆದಾರರು ಅಂದು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಪಿಂಚಣಿ ಅದಲಾತ್; ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಕ್ಷೇತ್ರೀಯ ಭವಿಷ್ಯ ನಿಧಿ ಕಚೇರಿ ಚಿಕ್ಕಮಗಳೂರಿನಲ್ಲಿ ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಸೆಪ್ಟೆಂಬರ್ 13ರಂದು ಬೆಳಗ್ಗೆ 11 ಗಂಟೆಗೆ ಮಾಸಿಕ ಪಿಂಚಣಿ ಅದಾಲತ್ಅನ್ನು ನಡೆಸಲಿದ್ದಾರೆ. ಪಿಂಚಣಿದಾರರು ಪಿಂಚಣಿ ವಿಚಾರದಲ್ಲಿ ತಮ್ಮ ಕುಂದುಕೊರತೆಗಳನ್ನು ಬಗೆಹರಿಸಲು ಆ ದಿನದಂದು ಮಾಸಿಕ ಪಿಂಚಣಿ ಅದಾಲತ್ನಲ್ಲಿ ಭಾಗವಹಿಸಬಹುದು ಅಥವಾ ಅರ್ಜಿ ಸಲ್ಲಿಸಬಹುದಾಗಿದೆ.
ಮೂಲ ಸೌಕರ್ಯಕ್ಕೆ ಆದ್ಯತೆ; "ಅಗ್ನಿಶಾಮಕ ಇಲಾಖೆ ಬರೀ ಬೆಂಕಿ ನಂದಿಸುವ ಕಾರ್ಯವಲ್ಲದೇ ಪ್ರವಾಹ, ಭೂಕುಸಿತ, ಕಟ್ಟಡ ಕುಸಿತ, ವಾಹನ ಅಪಘಾತ ಹಾಗೂ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂಧಿಸಿ ಕಾರ್ಯಪ್ರವೃತವಾಗುತ್ತದೆ. ಇಲಾಖೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪೂರೈಸಲು ಆದ್ಯತೆ ನೀಡಲಾಗುತ್ತಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಧಾರವಾಡ ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನೂತನ ಅಗ್ನಿಶಾಮಕ ಠಾಣೆಯನ್ನು ಸಚಿವರು ಉದ್ಘಾಟಿಸಿದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿದರು. "ಧಾರವಾಡ ಜಿಲ್ಲೆಯ ಬೇಲೂರು ಆಗ್ನಿಶಾಮಕ ಠಾಣೆಯು ರಾಜ್ಯದ 216ನೇ ಅಗ್ನಿಶಾಮಕ ಠಾಣೆ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ 8ನೇ ಅಗ್ನಿಶಾಮಕ ಠಾಣೆಯಾಗಿದೆ" ಎಂದರು.
30 ಕಡೆ ಗಣೇಶ ವಿಸರ್ಜನೆಗೆ ಅವಕಾಶ; ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಸೆಪ್ಟೆಂಬರ್ 10, 12 ಮತ್ತು 14 ರಂದು ನಗರದ 30 ಸ್ಥಳಗಳಲ್ಲಿ ಟ್ರ್ಯಾಕ್ಟರ್ ಟ್ರೇಲರ್ ನಿಲ್ಲಿಸುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಹಾನಗರ ತಿಳಿಸಿದೆ.
ಅಲ್ಲದೆ ಬಾತಿ ಕೆರೆ ಹಾಗೂ ಹದಡಿ ರಸ್ತೆ ಭದ್ರಾ ಚಾನಲ್ ಬಳಿ ಕೃತಕ ಹೊಂಡ ನಿರ್ಮಿಸಲಾಗಿದೆ. ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ನಿಗದಿತ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.
Recommended Video