ಕರ್ನಾಟಕ; ಮಂಗಳವಾರದ ಜಿಲ್ಲಾಸುದ್ದಿಗಳು ಒಂದೇ ಕ್ಲಿಕ್ನಲ್ಲಿ
ಬೆಂಗಳೂರು, ಆಗಸ್ಟ್ 10; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಅಪರಾಧ, ರಾಜಕೀಯ ಸೇರಿದಂತೆ ವಿವಿಧ ಘಟನೆಗಳು ನಡೆದಿವೆ. ಜಿಲ್ಲಾಸುದ್ದಿಗಳನ್ನು ಒಂದೇ ಕ್ಲಿಕ್ನಲ್ಲಿ ನೀಡುವ ಉದ್ದೇಶ ಈ ಪುಟದ್ದು. ವಿವಿಧ ಜಿಲ್ಲೆಗಳ ಸುದ್ದಿಗಳನ್ನು ಒಂದೇ ಕ್ಲಿಕ್ನಲ್ಲಿ ಓದಿ.
ಮಂತ್ರಿ ಸ್ಥಾನ ನೀಡಲು ಆಗ್ರಹ; ಮಡಿಕೇರಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅಭಿಮಾನಿಗಳು, ಬೆಂಬಲಿಗರು ಅಪ್ಪಚ್ಚು ರಂಜನ್ಗೆ ಮಂತ್ರಿ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿ ಬೆಂಗಳೂರು ಚಲೋ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿರುವ ಎರಡು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಆದರೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಇಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.
ಮಕ್ಕಳ ಮೇಲೆ ಬೀದಿ ನಾಯಿ ದಾಳಿ; ರಾಮನಗರ ಜಿಲ್ಲೆಯ ಚನ್ನಪಟ್ಟಣದ ಇಂದಿರಾ ಕಾಟೇನ್ನಲ್ಲಿ ಮಂಗಳವಾರ ಮಧ್ಯಾಹ್ನ ಮೂವರು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಮಾಡಿವೆ. ಮನೆಯ ಮುಂದೆ ಇದ್ದ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿದ್ದು, ಮಕ್ಕಳ ಕಾಲು, ಕೈ ಹಾಗೂ ಹೊಟ್ಟೆ ಭಾಗಗಳಿಗೆ ಗಾಯವಾಗಿದೆ. ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.
ಕಾಶಿನಾಥ ನಾಯ್ಕ ಬೇಸರ; ಕಾಮನ್ವೆಲ್ತ್ ಗೇಮ್ಸ್ ಪದಕ ಗೆದ್ದವರ ಹೆಸರೇ ಗೊತ್ತಿಲ್ಲದವರು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರೋ ಅಥವಾ ಹೊರ ದೇಶದ ಅಧ್ಯಕ್ಷರೋ ಎಂದು ಕಾಶಿನಾಥ ನಾಯ್ಕ ಬೇಸರ ವ್ಯಕ್ತಪಡಿಸಿದರು.
ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದಾಗ ತುಂಬಾ ಖುಷಿ ಪಟ್ಟಿದ್ದೇವೆ. ಇದು ದೇಶಕ್ಕೆ ಐತಿಹಾಸಿಕ ದಿನ. ಯಾರು ಮಾಡದ ಸಾಧನೆಯನ್ನು ಚೋಪ್ರಾ ಮಾಡಿದ್ದಾರೆ. ನಾನು 2015-2017 ರವರೆಗೆ ಕೋಚ್ ಆಗಿರುವ ಬಗ್ಗೆ ಹೇಳಿದ್ದೇನೆ. ಅಲ್ಲದೆ ನನ್ನ ನಂತರ ವಿದೇಶಿ ಕೋಚ್ಗಳು ಅವರನ್ನು ತರಬೇತಿಗೊಳಿಸಿದ ಬಗ್ಗೆಯೂ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಈ ನಡುವೆ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದ ಅದಿಲ್ಲೆ ಸುಮರುವಾಲ್ಲಾ ಕಾಶಿನಾಥ ನಾಯ್ಕ ಯಾರೆಂಬುದೆ ಗೊತ್ತಿಲ್ಲ ಎಂದು ಹೇಳಿರುವುದು ತಿಳಿದು ಬಂದಿದೆ. ನನ್ನ ಹೆಸರು ಅದಿಲ್ಲೆ ಸುಮರಿವಾಲ್ಲಾ ಅವರಿಗೆ ಗೊತ್ತಿಲ್ಲದೆ ಇರೋದು ದುರಂತ. ಇವರಿಗೆ ಕಾಮನ್ವೆಲ್ತ್ ಗೇಮ್ ನಲ್ಲಿ ಪದಕ ಪಡೆದವರ ಹೆಸರು ಗೊತ್ತಿಲ್ಲ ಎಂದಿರುವುದು ನೋವಾಗಿದೆ. ಅಲ್ಲದೆ ಆಶ್ವರ್ಯದ ಜೊತೆಗೆ ನಗು ಕೂಡ ಬಂದಿದೆ. ಇವರು ನಿಜವಾಗಲ್ಲೂ ಅಥ್ಲೆಟಿಕ್ಸ್ ಅಧ್ಯಕ್ಷರಾ? ಇಲ್ಲ ಹೊರ ದೇಶದ ಅಧ್ಯಕ್ಷರಾ ಅನ್ನೊದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಸಂಸದ ಕೈ ಚೀಲ; "ಶಿವಮೊಗ್ಗ ಜಿಲ್ಲಾಧಿಕಾರಿ ಸಂಸದರ ಕೈ ಚೀಲವಾಗಿದ್ದಾರೆ. ಇವರಿಂದ ಸಂಕಷ್ಟದ ಸ್ಥಿತಿಯಲ್ಲಿರುವ ಜನರಿಗೆ ಯಾವುದೇ ಉಪಯೋಗವಿಲ್ಲ. ಅತಿವೃಷ್ಠಿ ಮತ್ತು ಕೋವಿಡ್ನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ತನಕ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ" ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
14 ದಿನ ನ್ಯಾಯಾಂಗ ಬಂಧನ; ರಾಮನಗರದಲ್ಲಿ 'ಲವ್ ಯೂ ರಚ್ಚು' ಸಿನಿಮಾ ಚಿತ್ರೀಕರಣದ ವೇಳೆ ಫೈಟರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು 14 ದಿನಗಳವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಅಪರ ಹಿರಿಯ ಸಿವಿಲ್ ನ್ಯಾಯಾಧೀಶೆ ಅನುಪಮ ಲಕ್ಷ್ಮೀ ಆದೇಶ ನೀಡಿದ್ದಾರೆ. ನಿರ್ದೇಶಕ ಶಂಕರ್, ಕ್ರೇನ್ ಚಾಲಕ ಮಹದೇವ್, ಫೈಟ್ ಮಾಸ್ಟರ್ ವಿನೋದ್ ಬಂಧನವಾಗಿದೆ.
ಮೊಹರಂ ಹಬ್ಬದ ಆಚರಣೆ ನಿಷೇಧ; ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆಗಸ್ಟ್ 11ರಿಂದ 20ರವರೆಗೆ ಮೊಹರಂ ಹಬ್ಬದ ಆಚರಣೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಪವನಕುಮಾರ ಮಾಲಪಾಟಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Recommended Video