ರಾಮಚಂದ್ರ ದೇವ ಇನ್ನಿಲ್ಲ, ಇನ್ನಿತರ ಜಿಲ್ಲಾಸುದ್ದಿಗಳು
ಬೆಂಗಳೂರು, ಸೆ.12: ಕನ್ನಡದ ಹಿರಿಯ ಸಾಹಿತಿ ರಾಮಚಂದ್ರ ದೇವ (67) ಅವರು ಅನಾರೋಗ್ಯದಿಂದ ಬುಧವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಮೂಲತಃ ಸುಳ್ಯ ತಾಲೂಕಿನ ಕಲ್ಮಡ್ಕದವರಾಗಿದ್ದ ರಾಮಚಂದ್ರ ದೇವ, ಕಳೆದ ಕೆಲವು ಸಮಯದಿಂದ ಬೆಂಗಳೂರಿನಲ್ಲಿರುವ ಮಗಳು- ಅಳಿಯನ ಜತೆಗಿದ್ದರು. ಗುರುವಾರ ಬನಶಂಕರಿ ಚಿತಾಗಾರದಲ್ಲಿ ಅಂತಕ್ರಿಯೆ ನೆರವೇರಿಸಲಾಗಿದೆ.
ರಾಮಚಂದ್ರ ಅವರು ‘ಮುತ್ತು ಮತ್ತು ಇತರ ಲೇಖನಗಳು' ಕೃತಿಗೆ ‘ಇನಾಂದಾರ್' ಪ್ರಶಸ್ತಿ' ಗಳಿಸಿದ್ದರು. ಹಲವು ಕತೆ, ಕವಿತೆ, ನಾಟಕ ಹಾಗೂ ವಿಮರ್ಶೆಗಳನ್ನು ಬರೆದಿದ್ದಾರೆ. ಶೇಕ್ಸ್ ಪಿಯರ್ ನ ಹಲವು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪಡೆದಿದ್ದ ರಾಮಚಂದ್ರ ಅವರು, ಕಾಲೇಜು ಶಿಕ್ಷಕ, ಗ್ರಂಥಾಧಿಕಾರಿ, ಪ್ರಜಾವಾಣಿ ಉಪಸಂಪಾದಕ, ಅಂಕಣಕಾರ, ಸಿನಿಮಾ ಚಿತ್ರಕಥೆಗಾರ, ಅಮೆರಿಕದ ಲೈಬ್ರೆರಿ ಆಫ್ ಕಾಂಗ್ರೆಸ್ ಸಲಹೆಗಾರರಾಗಿ ದುಡಿದಿದ್ದರು. ಗಿರೀಶ್ ಕಾಸರವಳ್ಳಿಯವರ ಚಿತ್ರ 'ಬಣ್ಣದ ವೇಷ'ಕ್ಕೆ ಕತೆ- ಚಿತ್ರಕತೆ ಬರೆದಿದ್ದರು.
ದಂಗೆಯ ಪ್ರಕರಣ, ಮೂಗೇಲ (ಕಥಾ ಸಂಗ್ರಹ), ಇಂದ್ರ ಪ್ರಸ್ಥ, ಮಾತಾಡುವ ಮರ(ಕವನ ಸಂಗ್ರಹ), ಮುಚ್ಚು ಮತ್ತು ಇತರ ಲೇಖನಗಳು, ಮಾತುಕತೆ (ಲೇಖನಗಳು), ಹ್ಯಾಮೆಟ್, ಮ್ಯಾಕ್ ಬೆತ್ (ಅನುವಾದ) ಮುಂತಾದ ಕೃತಿಗಳನ್ನು ರಚಿಸಿದ್ದರು. ದೇವಸಾಹಿತ್ಯ ಎಂಬ ಬ್ಲಾಗಿನಲ್ಲಿ ತಮ್ಮ ಅನುಭವ, ವಿಚಾರಧಾರೆ ಹರಿಸುತಿದ್ದರು. ಇನ್ನಿತರ ಜಿಲ್ಲಾಸುದ್ದಿಗಳನ್ನು ಮುಂದೆ ಓದಿ..
ಮೇಯರ್ ಚುನಾವಣೆ ಮುಂದಕ್ಕೆ
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆ ಮೀಸಲಾತಿ ಪ್ರಶ್ನಿಸಿ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೆ.12ರಂದು ನಡೆಯಬೇಕಾಗಿದ್ದ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
ಕಳೆದ ಮಾರ್ಚ್ 7ರಂದು ಮನಪಾ ಸಹಿತ ಉಳ್ಳಾಲ, ಬಂಟ್ವಾಳ, ಮೂಡುಬಿದಿರೆ, ಪುತ್ತೂರು ಪುರಸಭೆ, ಸುಳ್ಯ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದಿದೆ, ಮಾ.11ಕ್ಕೆ ಫಲಿತಾಂಶ ಪ್ರಕಟಗೊಂಡಿತ್ತು. ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇಯರ್-ಉಪಮೇಯರ್, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಸಲು ನೀತಿ ಸಂಹಿತೆ ಅಡ್ಡಿಯಾಗಿತ್ತು. ಬಳಿಕ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದರೂ ನಾನಾ ಕಾರಣದಿಂದ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ.
ಚಿಕ್ಕಬಳ್ಳಾಪುರ
ಗೌರಿಬಿದನೂರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಹೇಮಾವತಿ ನದಿ ನೀರನ್ನು ತರಲು ಚಿಂತನೆ ನಡೆಸಲಾಗಿದೆ ಎಂದು ವಿಧಾಸಭೆ ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದ್ದಾರೆ.
ಹೇಮಾವತಿ ನದಿ ನೀರು ಪಕ್ಕದ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿಗಳವರೆಗೂ ನೀರು ಬಂದಿದೆ. ಇದನ್ನು ಪೈಪ್ ಲೈನ್ ಮೂಲಕ ಗೌರಿಬಿದನೂರು ಪಟ್ಟಣಕ್ಕೆ ತರಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ದಂಡಿಗಾನಹಳ್ಳಿ ಕೆರೆಯ ಹೆಚ್ಚುವರಿ ನೀರನ್ನು ತರಲು ಸರ್ವೆ ಮಾಡಲು ಸರಕಾರ 5 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಶಿವಶಂಕರ ರೆಡ್ಡಿ ಹೇಳಿದರು.
ಆನೆ ದಾಳಿ , ಬೆಳೆ ನಾಶ
ಹಾಸನದ ಆಲೂರು ಕಡೆಯಿಂದ ಮುರ್ನಾಲ್ಕು ಸಲಗಗಳು ಸೇರಿದಂತೆ 8 ರಿಂದ 10 ಆನೆಗಳ ಹಿಂಡು ಪ್ರತಿದಿನ ರಾತ್ರಿ ಮೂಡಿಗೆರೆ ವ್ಯಾಪ್ತಿಯ ತೋಟ ಗದ್ದೆಗಳ ಮೇಲೆ ದಾಳಿ ಮಾಡುತ್ತಿದ್ದು, ಭತ್ತ, ಬಾಳೆ, ಕಾಫಿ, ಮೆಣಸು ಮತ್ತು ಅಡಕೆ ಬೆಳೆಗಳನ್ನು ನಾಶ ಪಡಿಸಿವೆ.
ಕೆಂಜಿಗೆ, ಬಾಳೇಹಳ್ಳಿ, ಬಿದರಹಳ್ಳಿ ಮತ್ತು ಹೊನ್ನಮ್ಮನಹಳ್ಳಿ ಗ್ರಾಮದಲ್ಲಿ ಒಂದು ತಿಂಗಳಿಂದ ಆನೆಗಳು ಸತತವಾಗಿ ದಾಳಿ ಮಾಡುತ್ತಿದ್ದು, ಒಂದು ವಾರದಿಂದ ಈಚೆಗೆ ಅತಿ ಹೆಚ್ಚು ಹಾನಿ ಸಂಭವಿಸಿದೆ.
ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೆಗೊಂಡಿಲ್ಲ. ಈ ಕೂಡಲೇ ಆನೆಗಳನ್ನು ಇಲ್ಲಿಂದ ಓಡಿಸುವ ಅಥವಾ ಸ್ಥಳಾಂತರಿಸುವ ಕಾರ್ಯ ಕೆಗೊಳ್ಳಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬೆಳಗಾವಿಯಲ್ಲಿ ಉಮಾಶ್ರೀ
ಅಧಿಕೃತ ಪ್ರವಾಸದ ಮೇಲೆ ಬುಧವಾರ ನಗರಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರು ಭಾರಿ ಮುಜುಗರ ಅನುಭವಿಸಿದ ಘಟನೆ ನಡೆದಿದೆ.
ರೈಲು ನಿಲ್ದಾಣದಲ್ಲಿ ಸ್ವಾಗತಕ್ಕೆ ಅಧಿಕಾರಿಗಳು ಬಂದಿರಲಿಲ್ಲ. ನಿಲ್ದಾಣದಿಂದ ಪ್ರಯಾಣಕ್ಕೆ ವಾಹನ ವ್ಯವಸ್ಥೆ ಮಾಡದ ಕಾರಣ ಸಚಿವೆ ತೀವ್ರ ಮುಜುಗರಕ್ಕೀಡಾದರು.ಖಾಸಗಿ ವಾಹನ ಕೂಡಾ ಸಚಿವೆಗೆ ಸಿಗದಿದ್ದಾಗ ಹೆಚ್ಚಿನ ಮುಜುಗರ ತಪ್ಪಿಸಿಕೊಳ್ಳಲು ಭದ್ರತೆಗೆ ಅಲ್ಲಿ ನಿಯೋಜಿಸಿದ್ದ ಡಿ.ಎ.ಆರ್. ಪೊಲೀಸ್ ವಾಹನದಲ್ಲೇ ಸರ್ಕಿಟ್ ಹೌಸ್ ಗೆ ಬಂದಿದ್ದರು.
ಬೆಳಗಾವಿಯಲ್ಲಿ ತಾಲೂಕು, ಜಿಲ್ಲಾ ಮತ್ತು ಪ್ರಾದೇಶಿಕ ಮಟ್ಟದ ಅಧಿಕಾರಿಗಳಿದ್ದರೂ ಯಾರೂ ಬಾರದಿರುವುದರಿಂದ ಸಚಿವೆ ಉಮಾಶ್ರೀ ಭಾರಿ ಅಪಮಾನವಾಗಿದೆ.
ಹುಬ್ಬಳ್ಳಿ ಮೂಲದ ಬನ್ನೂರಮಠ
ಲೋಕಾಯುಕ್ತ ನೇಮಕ ಸಂದರ್ಭ ಜಾತಿಯನ್ನು ಮುಂದಿಟ್ಟುಕೊಂಡ ರಾಜ್ಯ ಸರಕಾರ ನನ್ನನ್ನು ಅತ್ಯಂತ ಹೀನವಾಗಿ ಕಂಡಿತು. ತನ್ನ ರಾಜಕೀಯ ಹಿತಾಸಕ್ತಿಗಾಗಿ ನನ್ನನ್ನು ಬಲಿಪಶು ಮಾಡಿತು. ಇದು ನನ್ನ ಮನಸಿಗೆ ಬರೆ ಹಾಕಿದೆ. ಹೀಗಾಗಿ ಸರಕಾರ ಬಯಸಿದರೂ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಾನು ನಿರಾಕರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ನ್ಯಾ. ಬನ್ನೂರಮಠ ಹೇಳಿದ್ದಾರೆ.
ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯ ಮೂರ್ತಿಎಸ್ ಆರ್ ಬನ್ನೂರಮಠ ಅವರು ಮಹಾರಾಷ್ಟ್ರ ರಾಜ್ಯದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಕಾಸರಗೋಡು
ನೂತನ ಮಂಜೇಶ್ವರ ತಾಲೂಕು ಕೇಂದ್ರವನ್ನು ಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಸ್ಥಾಪಿಸಬೇಕೆಂದು ಆಗ್ರಹಿಸಿ ಮಂಜೇಶ್ವರ ಅಭಿವೃದ್ಧಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಬೃಹತ್ ಧರಣಿ ಮುಷ್ಕರ ನಡೆಸಲಾಗಿದೆ.
ಮಂಜೇಶ್ವರ ತಾಲೂಕು ಕೇಂದ್ರವನ್ನು ಉಪ್ಪಳಕ್ಕೆ ಸ್ಥಳಾಂತರಿಸಲು ಸರ್ಕಾರದ ಮೂಲಕ ಮತ್ತೊಮ್ಮೆ ಗಜೆಟ್ ನೋಟಿಫಿಕೇಶನ್ ಹೊರಡಿಸಿದ ಮಂಜೇಶ್ವರ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಮಂಜೇಶ್ವರದ ಪ್ರದೇಶ ಒಂದು ಸಾಂಸ್ಕೃತಿಕ ಘಟಕವಾಗಿದ್ದು, ನೂತನ ತಾಲೂಕು ಕೇಂದ್ರ ಮಂಜೇಶ್ವರದಲ್ಲಿಯೇ ಆಗಬೇಕು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.