ಇದೇನಿದು ಡಿಸಿಎಂ ಗೋವಿಂದ ಕಾರಜೋಳ ಕುರಿತು ಸಿದ್ದರಾಮಯ್ಯ ಮಾತು?
Array
ಬೆಂಗಳೂರು, ಅ. 26: ಕಳೆದ ವಾರ ಡಿಸಿಎಂ ಗೋವಿಂದ್ ಕಾರಜೋಳ್ ಅವರು ಕಣ್ಣೀರು ಹಾಕಿದ್ದರು. ಮನೆಯಲ್ಲಿ ಎಲ್ಲರಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂತಸ-ಸಂಕಟಗಳು ಸಾರ್ವಜನಿಕರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ. ಆದರೆ ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದರಿಗಷ್ಟೇ ಅದರ ಪ್ರಖರತೆ ಗೊತ್ತು. ಇದ ಪರಿಣಾಮವಾಗಿ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರು ಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರೌವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದರು.
ನನ್ನ ಪುತ್ರ ಡಾ. ಗೋಪಾಲ ಕಾರಜೋಳ ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಧರ್ಮ ಪತ್ನಿ ಕೂಡಾ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಹಿಂದಿರುಗಿದ್ದಾರೆ. ನಾನೂ ಕೂಡಾ ಕೋವಿಡ್ 19ಕ್ಕೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ. ನಮ್ಮ ಕುಟುಂಬದಲ್ಲಿ ಒಟ್ಟಾರೆ 8 ಮಂದಿ ಕೊರೊನಾ ಸೋಂಕಿನಿಂದ ಒಳಗಾಗಿದ್ದೇವೆ. ಇದು ವಸ್ತುಸ್ಥಿತಿ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.
ಕಂದಾಯ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿಕ್ನಿಕ್ಗೆ ಬಂದಂತೆ ಬಂದು ಹೋಗಿದ್ದಾರೆ
ಇಂತಹ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಿದ್ದ ಪ್ರಸಂಗದಲ್ಲಿ ಮಾತ್ರ ಮುನ್ನೆಚ್ಚರಿಕೆಯಿಂದ ಆಯಾಸವಾಗದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವೈದ್ಯರು ಸಲಹೆ ಇದೆ. ಹೀಗಾಗಿ ನಾನು ಕಲಬುರಗಿಗೆ ಹೋಗಿಲ್ಲ ಎಂದು ಸಮಾಜಾಯಿಸಿ ಕೊಟ್ಟಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೂ ತಮ್ಮ ಜಿಲ್ಲೆಗೆ ಭೇಟಿ ನೀಡದಿರುವುದನ್ನು ಕಲಬುರಗಿ ಜನರು ಪಶ್ನೆ ಮಾಡಿದ್ದಕ್ಕೆ ಡಿಸಿಎಂ ಕಾರಜೋಳ್ ಅವರು ಈ ಮೇಲಿನ ಸುದೀರ್ಘ ಸ್ಪಷ್ಟನೆಯನ್ನು ಕೊಟ್ಟಿದ್ದರು.
ಆದರೆ ಡಿಸಿಎಂ ಗೋವಿಂದ್ ಕಾರಜೋಳ್ ಅವರು ಹೇಳಿರುವುದೆಲ್ಲ ನಿಜವಲ್ಲ ಎಂದು ಕಳೆದೆರಡು ದಿನಗಳಿಂದ ಕಲಬುರಗಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಹೇಳಿರುವುದಾದರೂ ಏನು?
ಎರಡು ಬಾರಿ ಪ್ರವಾಹ; ಆದರೂ ಭೇಟಿಯಿಲ್ಲ
ವೈದ್ಯರ ಸಲಹೆಯ ಮೇರೆಗೆ ನಾನು ದೂರದ ಪ್ರವಾಸ ಮಾಡುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದ ಡಿಸಿಎಂ ಗೋವಿಂದ್ ಕಾರಜೋಳ್ ಅವರು ಅಂದೇ ಶಿರಾಕ್ಕೆ ತೆರಳಿ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿದ್ದರು. ಅದಕ್ಕಿಂತ ಕುತೂಹಲಕಾರಿ ಅಂಶವೊಂದನ್ನು ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ಬಹಿರಂಗಪಡಿಸಿದ್ದಾರೆ. ಎರಡೇರಡು ಬಾರಿ ಪ್ರವಾಹದ ಹೊಡೆತಕ್ಕೆ ಸಿಕ್ಕಿ ನಲುಗಿರುವ ಕಲಬುರಗಿ ಜಿಲ್ಲೆಗೆ ಕಾರಜೋಳ ಅವರು ಭೇಟಿ ನೀಡಿ ಆರು ತಿಂಗಳುಗಳಾಗಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹರಿಹಾಯ್ದಿದ್ದಾರೆ.
ಆರು ತಿಂಗಳುಗಳಿಂದ ಕಲಬುರಗಿಗೆ ಬಂದಿಲ್ಲ
ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರು, ಜನ ಸಂಕಷ್ಟದಲ್ಲಿದ್ದಾರೆ. ಮುಂಗಾರು ಹಿಂಗಾರಿನ ರೈತರ ಎರಡೂ ಬೆಳೆಗಳು ಅತಿವೃಷ್ಟಿಯಿಂದ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಮಂತ್ರಿಗಳು ಜಿಲ್ಲೆಗಳಲ್ಲಿ ಬೀಡು ಬಿಟ್ಟು ಪರಿಹಾರ ಕೈಗೊಳ್ಳಬೇಕು. ಆದರೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ್ ಕಾರಜೋಳ್ ಅವರು ಕಳೆದ ಮೇ ತಿಂಗಳಿನಿಂದ ಜಿಲ್ಲೆಯತ್ತ ತಲೆ ಹಾಕಿಲ್ಲ.
ಕಳೆದ 8 ತಿಂಗಳುಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್ ಅವರು ಒಂದು ಬಾರಿ ಮಾತ್ರ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳನ್ನು ಕೇಳವುವವರು ಕೇಳುವವರು. ರೈತರ, ಪ್ರವಾಹ ಸಂತ್ರತ್ತರ ಗೋಳು ಕೇಳುವರಿಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.
ಮತ್ತೆ ಇಂದು ಶಿರಾದಲ್ಲಿ ಕಾರಜೋಳ್ ಪ್ರಚಾರ
ದೂರದ ಪ್ರವಾಸ ನನಗೆ ಆಗಿ ಬರಲ್ಲ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಹೀಗಾಗಿ ಕಲಬುರಗಿಗೆ ಹೋಗಿಲ್ಲ ಎಂದು ಸಮಜಾಯಿಸಿ ಕೊಟ್ಟಿದ್ದ ಡಿಸಿಎಂ ಗೋವಿಂದ್ ಕಾರಜೋಳ್ ಅವರು ಮತ್ತೆ ಕಲಬುರಗಿ ಜನಾಕ್ರೋಶಕ್ಕೆ ತುತ್ತಾಗಿದ್ದಾರೆ. ಇಂದು (ಅ.26) ಮತ್ತೆ ಶಿರಾಕ್ಕೆ ತೆರಳಿರುವ ಅವರು ಭರ್ಜರಿ ಪ್ರಚಾರ ಮುಂದುವರೆಸಿದ್ದಾರೆ. ಉಪ ಚುನಾವಣೆ ಘೋಷಣೆ ಆದ ಬಳಿಕ ಮೂರನೇ ಬಾರಿ ಶಿರಾಕ್ಕೆ ತೆರಳಿರುವ ಡಿಸಿಎಂ ಗೋವಿಂದ್ ಕಾರಜೋಳ್ ಅವರು ತಮ್ಮ ಉಸ್ತುವಾರಿ ಜಿಲ್ಲೆಯನ್ನು ಮರೆತಿರುವುದು ಮಾತ್ರ ವಿಪರ್ಯಾಸ.
ಶಿರಾಕ್ಕೆ ತೆರಳಿ ಜಯಚಂದ್ರ ಬದ್ಧತೆ ಪ್ರಶ್ನಿಸಿದ ಕಾರಜೋಳ್
ಶಿರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಡಿಸಿಎಂ ಗೋವಿಂದ್ ಕಾರಜೋಳ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರ ಬದ್ಧತೆಯನ್ನು ಪ್ರಶ್ನೆ ಮಾಡಿದ್ದಾರೆ. ಜಯಚಂದ್ರ ಅವರೇ ತಾವು 6 ಬಾರಿ ಗೆದ್ದಿದ್ದೀರಾ. ಗುಡಿಸಲು ಮುಕ್ತ ಮಾಡಿ ಮನೆ ಕಟ್ಟಿಸಿಕೊಡಬಹುದಿತ್ತು. ಮಂತ್ರಿ ಆಗಿದ್ದಿರಿ, ಸರ್ಕಾರದ ಯೋಜನೆಗಳನ್ನು ಬಳಸಬಹುದಿತ್ತು ಆದರೆ ನೀವು ಏನು ಮಾಡಿದ್ದೀರಿ ಎಂದು ಗೋವಿಂದ್ ಕಾರಜೋಳ್ ಅವರು ಪ್ರಶ್ನಿಸಿದ್ದಾರೆ.
ಇನ್ನು ಜೆಡಿಎಸ್ ನಮಗೆ ಲೆಕ್ಕಕ್ಕೆ ಇಲ್ಲ, ಅವರ ಬಗ್ಗೆ ಹೇಳೋದಕ್ಕೆ ಆಗುವುದಿಲ್ಲ. ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಈ ಚುನಾವಣೆ ಬಂದಿದೆ. ನಮ್ಮ ಅಭ್ಯರ್ಥಿ ರಾಜೇಶ್ ಗೌಡ ಸುಸಂಸ್ಕೃತ ವ್ಯಕ್ತಿ. ವೈದ್ಯರಾಗಿ 15 ವರ್ಷಗಳ ಕಾಲ ಬಡವರ ಸೇವೆ ಮಾಡಿದ್ದಾರೆ. ಅರವನ್ನು ಗೆಲ್ಲಿಸಲು ಜನರು ನೂರಕ್ಕೆ ನೂರರಷ್ಟು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಬಡವ, ದೀನ ದಲಿತರನ್ನು ಭಯದ ವಾತಾವರಣದಲ್ಲಿಟ್ಟು ಮತ ಪಡೆದಿದ್ದಾರೆ. ಈಗ ಜನರೂ ವಿದ್ಯಾವಂತರಾಗಿದ್ದಾರೆ, ಕಾಂಗ್ರೆಸ್ ಬೊಗಳೆ ನಡೆಯುವುದಿಲ್ಲ. ಕಾಂಗ್ರೆಸ್ ವಾರಸದಾರರಿಲ್ಲದ ಮನೆ ಆಗುತ್ತೆ. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಅಳವಿನ ಅಂಚಿನಲ್ಲಿ ಇರುವ ಪಕ್ಷ ಎಂದು ತುಮಕೂರಿನಲ್ಲಿ ಡಿಸಿಎಂ ಗೋವಿಂದ ಕಾರಜೋಳ್ ಹೇಳಿಕೆ ಕೊಟ್ಟಿದ್ದಾರೆ.
Recommended Video
ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಪರಿಹಾರ
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರದೇಶಗಳು ಕಳೆದ ಆಗಸ್ಟ್ ತಿಂಗಳಿನಲ್ಲಿಯೂ ಪ್ರವಾಹಕ್ಕೆ ತುತ್ತಾಗಿದ್ದವು. ಆಗಲೂ ರೈತರ ಬೆಳೆ ಹಾನಿಯಾಗಿತ್ತು. ಇದೀಗ ಎರಡು ತಿಂಗಳುಗಳ ಬಳಿಕ ಮತ್ತೊಮ್ಮೆ ಆ ಭಾಗದ ಜನರು ಅತಿವೃಷ್ಟಿ, ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ್ದ ಹಾನಿಗೆ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ ಎಂದು ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಆದರೆ ಬೆಂಗಳೂರಿನಲ್ಲಿ ಮಳೆಯಿಂದ ಆಗಿರುವ ಅನಾಹುತಕ್ಕೆ 24 ಗಂಟೆಗಳಲ್ಲಿಯೇ ಸಿಎಂ ಯಡಿಯೂರಪ್ಪ ಅವರು ಭೇಟಿ ನೀಡಿ ತಲಾ 25 ಸಾವಿರ ರೂಪಾಯಿಗಳ ತಾತ್ಕಾಲಿಕ ಪರಿಹಾರವನ್ನು ವಿತರಿಸಲು ಸೂಚಿಸಿದ್ದರು. ಅದರಂತೆ ನಿನ್ನೆ (ಅ.25) ಅಧಿಕಾರಿಗಳು ಮಳೆ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಎರಡೇರಡು ಬಾರಿ ಪ್ರವಾಹ ಬಂದಿದ್ದರೂ ಸರ್ಕಾರ ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಆ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಡೆಗೆ ಸರ್ಕಾರ, ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಮೈಸೂರು ದಸರಾ, ಉಪ ಚುನಾವಣೆ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಆ ಕಡೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರವಾಹ ಸಂತ್ರಸ್ತರ ಗೋಳು ಆಲಿಸುತ್ತಿದ್ದಾರೆ.