ಜನರ ತೀವ್ರ ಆಕ್ರೋಶಕ್ಕೆ ಗುರಿಯಾಯ್ತು ಡಿಸಿಎಂ ಗೋವಿಂದ್ ಕಾರಜೋಳ್ ನಡೆ!
ಬೆಂಗಳೂರು, ಅ. 17: ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ನಡೆಗೆ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದರಿಂದ ಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಗೋವಿಂದ ಕಾರಜೋಳ ಅವರನ್ನು ಜನರು ಟೀಕೆ ಮಾಡುತ್ತಿರುವುದಕ್ಕು ಕಾರಣವಿದೆ. ಇದೇ ವಿಚಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಪ್ರಸ್ತಾಪ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಗೋವಿಂದ ಕಾರಜೋಳ ಅವರು ಕೂಡ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಷ್ಟಕ್ಕೂ ಸಚಿವ ಗೋವಿಂದ ಕಾರಜೋಳ ಅವರು ತಮ್ಮ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದಕ್ಕೆ ವಿರೋಧ ಯಾಕೆ ವ್ಯಕ್ತವಾಗಬೇಕು? ಮುಂದೆ ಓದಿ!
ನನಗೆ ಕೊರೊನಾ ಬಂದಿತ್ತು!
ನಿನ್ನೆ ಮುಖ್ಯಮಂತ್ರಿ ಗೃಹ ಕಚೇರಿ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಲಬುರಗಿ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಅವರು, ನನಗೆ ಕೊರೊನಾ ಬಂದಿತ್ತು. ಅದರಿಂದ ಈಗಷ್ಟೇ ಚೇತರಿಸಿಕೊಂಡಿದ್ದೇನೆ. ಹೀಗಾಗಿ ಪ್ರವಾಹ ಪೀಡಿತ ಕಲಬುರಗಿ ಜಿಲ್ಲೆಗೆ ಹೋಗಲಾಗಿಲ್ಲ. ನಾನು ಹೋಗದಿದ್ದರೇ ಏನಾಯ್ತು? ನನಗಿಂತ ಪವರ್ಫುಲ್ ಮಿನಿಸ್ಟರ್, ಕಂದಾಯ ಸಚಿವ ಆರ್. ಅಶೋಕ್ ಅವರು ಅಲ್ಲಿಗೆ ಭೇಟಿ ಕೊಟ್ಟು, ಪ್ರವಾಹ ಪೀಡಿತರನ್ನು ಭೇಟಿ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಕಲಬುರಗಿ ಜಿಲ್ಲೆಯ ಜನರಿಗೆ ಸಮಜಾಯಿಷಿ ಕೊಟ್ಟಿದ್ದರು.
ಅಷ್ಟಕ್ಕೆ ಸುಮ್ಮನಾಗಿದ್ದರೆ ಬಹುಶಃ ಕಲಬುರಗಿ ಜಿಲ್ಲೆಯ ಜನರೂ ಸಚಿವ ಕಾರಜೋಳ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ ಹಾಗೆ ಆಗಲಿಲ್ಲ. ಅದಕ್ಕೆ ಕಾರಣವಾಗಿದ್ದು ಕಾರಜೋಳ ಸಾಹೇಬರ ನಡೆ.
ನಾಮಪತ್ರ ಸಲ್ಲಿಕೆಗೆ ಹಾಜರ್!
ನಂಗೆ ಕೊರೊನಾ ಬಂದಿತ್ತು. ಇನ್ನೂ ಪೂರ್ತಿ ಅರಾಮಾಗಿಲ್ಲ. ರೆಸ್ಟ್ ಮಾಡಬೇಕು ಎಂದಿದ್ದ ಕಾರಜೋಳ ಅವರು ಅದಾದ ಸ್ವಲ್ಪ ಹೊತ್ತಿನಲ್ಲಿಯೇ ನಿನ್ನೆ (ಅ.16) ಶಿರಾಕ್ಕೆ ತೆರಳಿ ಅಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದರು. ತೆರೆದ ವಾಹನದಲ್ಲಿ ನಡೆದ ಭರ್ಜರಿ ಪ್ರಚಾರದ ಮೂಲಕ ನಾಮಪತ್ರ ಸಲ್ಲಿಕೆ ಮಾಡಿ ಬಂದರು. ಇದು ಕಲಬುರಗಿ ಜನರ ಸಹನೆಯ ಕಟ್ಟೆ ಒಡೆಯಲು ಕಾರಣವಾಯ್ತು.
ಆರೋಗ್ಯ ಸರಿಯಿಲ್ಲ ಎಂದು ಕಾರಣ ಕೊಡುವ ಸಚಿವ ಕಾರಜೋಳ ಅವರು ರಾಜಕೀಯ ಮಾಡಲು ಶಿರಾಕ್ಕೆ ಹೋಗಿದ್ದಾರೆ ಎಂದು ತೀವ್ರ ಆಕ್ಷೇಪವನ್ನು ಕಲಬುರಗಿ ಜಿಲ್ಲೆಯ ಜನರು ವ್ಯಕ್ತಪಡಿಸಿದರು. ಜೊತೆಗೆ ಇಡೀ ರಾಜ್ಯಾದ್ಯಂತ ಕಾರಜೋಳ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪ್ರವಾಹಕ್ಕೆ ಸಿಲುಕಿ ನಲಗುತ್ತಿರುವ ಜನರನ್ನು ಕಡೆಗಣಿಸಿ ಚುನಾವಣಾ ಪ್ರಚಾರಕ್ಕೆ ತೆರಳಿರುವುದು ಸರಿಯಲ್ಲ. ನಮ್ಮ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಕಾರಜೋಳ ಅವರು ರಾಜೀನಾಮೆ ಕೊಡಲಿ ಎಂದು ಅಲ್ಲಿನ ಜನರು ಒತ್ತಾಯಿಸಿದ್ದರು.
ಮತ್ತೆ ಕಾರಜೋಳ ಸಮಜಾಯಿಷಿ
ತಮ್ಮ ನಡೆಗೆ ಆಕ್ರೋಶ ವ್ಯಕ್ತವಾಗಿದ್ದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಸಚಿವ ಗೋವಿಂದ ಕಾರಜೋಳ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ. ಜನರ ರಕ್ಷಣೆಗೆ ಕೇಂದ್ರದಿಂದ ಹೆಲಿಕಾಪ್ಟರ್, ಬೋಟ್ ಎಲ್ಲಾ ಬಂದಿವೆ. ಸರ್ಕಾರ ನಿಮ್ಮ ಜೊತೆಗೆ ಇದೆ. ಕಲಬುರಗಿ ಡಿಸಿ ಜೊತೆ ಸಂಪರ್ಕದಲ್ಲಿದ್ದೇನೆ. ಬೇಸಿಗೆಯಲ್ಲಿ ತಂಪಿರಲಿ ಅಂತ ಉತ್ತರ ಕರ್ನಾಟಕ ಭಾಗದ ಜನ ಕಲ್ಲು ಮಣ್ಣಿನಿಂದ ಮನೆ ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಕಲ್ಲು ಮಣ್ಣಿನ ಮನೆಗಳು ಈಗ ಮಳೆಯಿಂದಾಗಿ ಬೀಳುತ್ತಿವೆ.
ಆ ಮನೆಗಳನ್ನು ಸರ್ವೆ ಮಾಡಿ ಪುನರ್ ನಿರ್ಮಾಣ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡಿಸಿಎಂ ಹೇಳಿಕೆ ಕೊಟ್ಟಿದ್ದಾರೆ.
ಇಡೀ ಕುಟುಂಬ ಕೊರೊನಾಕ್ಕೆ ತುತ್ತಾಗಿದೆ
ನನ್ನ ಇಡೀ ಕುಟುಂಬ ಕೊರೋನಾ ಸಂಕಷ್ಟದಲ್ಲಿ ಸಿಲುಕಿದೆ. ನಾನೂ ಕೂಡಾ ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದೆ, ಈಗ ಸುಧಾರಿಸಿಕೊಂಡಿದ್ದೇನೆ. ನನಗೆ 70 ವರ್ಷ ವಯಸ್ಸು, ನನ್ನ ಇಡೀ ಜೀವಮಾನ ನಾನು ಹೇಗೆ ಕೆಲಸ ಮಾಡಿದ್ದೇನೆ ಎಂಬುದನ್ನು ಜನರು ಗಮನಿಸಿದ್ದಾರೆ. ನಾನು ಈ ಸಂದರ್ಭದಲ್ಲಿ ಆರನೂರು ಏಳನೂರು ಕಿ.ಮೀ. ದೂರದ ಕಲಬುರಗಿಗೆ ಪ್ರಯಾಣಿಸಲು ಆಗುತ್ತಿಲ್ಲ. ಕಾರಣ ನನ್ನ ಕುಟುಂಬ ಪೂರ್ತಿ ಕೊರೊನಾ ಸಂಕಷ್ಟಕ್ಕೆ ಸಿಲುಕಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಹೊಸಬರು ಹೀಗಾಗಿ ಹೋಗಿದ್ದೆ!
ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದೆ. ನಮ್ಮ ಬಿಜೆಪಿ ಅಭ್ಯರ್ಥಿ ಹೊಸಬರು. ಅವರ ಭವಿಷ್ಯದ ದೃಷ್ಟಿಯಿಂದ ಒಂದು ಸಲ ಮುಖ ತೋರಿಸಿ ಹೋಗಿ ಎಂದು ಹೇಳಿದ್ದರು. ಅದಕ್ಕೆ ನಾನು ಶಿರಾಕ್ಕೆ ಹೋಗಿ ಬಂದಿದ್ದೇನೆ. ಅನಿವಾರ್ಯವಾಗಿದ್ದರಿಂದ ಹೋಗಿ ಬರಬೇಕಾಯಿತು ಎಂದು ಕಾರಜೋಳ ಹೇಳಿದ್ದಾರೆ.
Recommended Video
ಕೋವಿಡ್ ಆರಂಭದಲ್ಲೂ ಹೋಗಿಲ್ಲ
ರಾಜ್ಯದಲ್ಲಿಯೇ ಕೊರೊನಾ ವೈರಸ್ಗೆ ಮೊದಲ ಬಲಿ ಕಲಬುರಗಿ ಜಿಲ್ಲೆಯಲ್ಲಿ ಆಗಿತ್ತು. ಆಗ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ಶರತ್ ಬಿ. ಅವರು ಇಡೀ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದರು. ಕೊನೆಗೆ ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ತರುವಲ್ಲಿ ಸಫಲರಾಗಿದ್ದರು. ಆಗಲೂ ವಯಸ್ಸಿನ ಕಾರಣದಿಂದ ಡಿಸಿಎಂ ಗೋವಿಂದ ಕಾರಜೋಳ ಅವರು ತಾವು ಉಸ್ತುವಾರಿಯಾಗಿದ್ದ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಇದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿತ್ತು!
ಇದೀಗ ಎರಡನೇ ಬಾರಿಯೂ ಜನರು ಸಂಕಷ್ಟದಲ್ಲಿದ್ದಾಗ ಡಿಸಿಎಂ ನಿರ್ಲಕ್ಷ ತೋರಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.