ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಮುಖ್ಯಮಂತ್ರಿಗಳ ಲೆಕ್ಕಾಚಾರ!
ಬೆಂಗಳೂರು, ಜನವರಿ 24; ಒಂದು ಕಡೆ ಸಚಿವ ಸಂಪುಟ ವಿಸ್ತರಣೆಗೆ ಶಾಸಕರಿಂದ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ನೇಮಕ ಮಾಡಿದ್ದಾರೆ. ಆದರೆ ಈ ನೇಮಕಾತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಮೂಲಕ ಆಕಾಂಕ್ಷಿಗಳಿಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ.
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಮ್ಮ-ತಮ್ಮ ತವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದವರಿಗೆ ಈ ಬಾರಿ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾವಣೆಯ ಬಿಸಿ ತಟ್ಟಿಸಿದ್ದಾರೆ ಬಸವರಾಜ ಬೊಮ್ಮಾಯಿ. ಸರ್ಕಾರ ಅಧಿಕಾರಕ್ಕೆ ಬಂದು ಇದೇ ತಿಂಗಳ 28ಕ್ಕೆ 6 ತಿಂಗಳು ಪೂರೈಸುತ್ತಿರುವ ಸಂದರ್ಭದಲ್ಲೇ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿದ್ದು, ಎಲ್ಲರಿಗೂ ಬಿಸಿ ತಟ್ಟುವಂತೆ ಚಾಣಾಕ್ಷತನವನ್ನು ಸಿಎಂ ಬೊಮ್ಮಾಯಿ ಮೆರೆದಿದ್ದಾರೆ.
Breaking; ಕೋವಿಡ್ ನಿರ್ವಹಣೆ, ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕ
ಬೆಂಗಳೂರು ನಗರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ ಸಚಿವರಾದ ಆರ್. ಅಶೋಕ, ಅಶ್ವಥ ನಾರಾಯಣ, ವಿ. ಸೋಮಣ್ಣಗೂ ಶಾಕ್ ನೀಡಿರುವ ಮುಖ್ಯಮಂತ್ರಿಗಳು ಬೆಂಗಳೂರು ನಗರ ಉಸ್ತುವಾರಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಇದೇ ತಂತ್ರ ಅನುಸರಿಸಿದ್ದರು.
ದಾವಣಗೆರೆಯಲ್ಲಿ ಸಚಿವ ಸ್ಥಾನದ ಫೈಟ್; ರೇಣುಕಾಚಾರ್ಯ v/s ರವೀಂದ್ರನಾಥ್
ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ಗೆ ಪುನಃ ಮೈಸೂರು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಗೆ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿಲ್ಲ. ಕೆಲವು ಸಚಿವರಿಗೆ ಎರಡು ಜಿಲ್ಲೆಯ ಉಸ್ತುವಾರಿ ಸಿಕ್ಕಿದೆ.
ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಂತ ಬಿಜೆಪಿ ಹೈಕಮಾಂಡ್: ಅರುಣ್ ಸಿಂಗ್ ಹೇಳಿದ್ದೇನು?
ಗೋವಿಂದ ಕಾರಜೋಳ ಬೆಳಗಾವಿ
ಸದಾ ಒಂದಿಲ್ಲೊಂದು ಕಾರಣದಿಂದ ರಾಜ್ಯದ ಗಮನಸೆಳೆಯುವ ಗಡಿ ಜಿಲ್ಲೆ ಬೆಳಗಾವಿಯನ್ನು ಜಲಸಂಪನ್ಮೂಲ ಸಚಿವ ಗೋವಿಂದಕಾರಜೋಳ ಹೆಗಲಿಗೆ ನೀಡಿದ್ದಾರೆ. ಈ ಜಿಲ್ಲೆಯಿಂದ ಸಚಿವೆ ಶಶಿಕಲಾ ಜೊಲ್ಲೆ ಇದ್ದರೂ ಉಸ್ತುವಾರಿ ಮಾತ್ರ ಕಾರಜೋಳಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಸಂಪುಟಕ್ಕೆ ಸೇರ್ಪಡೆಯಾದರೂ ಯಾವುದೇ ರೀತಿಯ ತೊಡಕಾಗದಂತೆ ಇಲ್ಲಿಯೂ ಕೂಡ ಎಚ್ಚರಿಕೆ ಹೆಜ್ಜೆ ಇಡಲಾಗಿದೆ.
ಶಿವಮೊಗ್ಗ ಉಸ್ತುವಾರಿ ಕೈ ತಪ್ಪಿದೆ
ಶಿವಮೊಗ್ಗ ಜಿಲ್ಲೆಯಿಂದ ಕೆ. ಎಸ್. ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಇಬ್ಬರು ಪ್ರಭಾವಿ ಸಚಿವರಿದ್ದರೂ ಈ ಜಿಲ್ಲೆಯ ಉಸ್ತುವಾರಿಯನ್ನು ಇಬ್ಬರಿಗೂ ನೀಡಿಲ್ಲ. ಯಾರಿಗೆ ನೀಡಿದರೂ ಮುನಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಮಂಡ್ಯ ಜಿಲ್ಲೆಯ ಕೆ. ಆರ್. ನಾರಾಯಣಗೌಡರಿಗೆ ನೀಡಿರುವುದು ಮತ್ತೊಂದು ವಿಶೇಷವಾಗಿದೆ. ಈಶ್ವರಪ್ಪಗೆ ಚಿಕ್ಕಮಗಳೂರು ಜಿಲ್ಲೆ ನೀಡಲಾಗಿದ್ದು, ಆರಗ ಜ್ಞಾನೇಂದ್ರರಿಗೆ ತುಮಕೂರು ಉಸ್ತುವಾರಿ ಸಿಕ್ಕಿದೆ.
ಶ್ರೀರಾಮುಲುಗೆ ಒಲಿದ ಬಳ್ಳಾರಿ
ಗಣಿ ಜಿಲ್ಲೆ ಬಳ್ಳಾರಿ ನಿರೀಕ್ಷೆಯಂತೆ ಸಾರಿಗೆ ಸಚಿವ ಶ್ರೀರಾಮುಲು ಪರವಾಗಿದೆ. ಆದರೆ ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕರು. ಇನ್ನು ಬೆಂಗಳೂರು ನಗರದ ಮೇಲೆ ಕಣ್ಣಿಟ್ಟಿದ್ದ ವಸತಿ ಸಚಿವ ವಿ. ಸೋಮಣ್ಣಗೆ ಚಾಮರಾಜನಗರ, ಉಮೇಶ್ ಕತ್ತಿಗೆ ವಿಜಯಪುರದ ಉಸ್ತುವಾರಿ ನೀಡಲಾಗಿದೆ. ತುಮಕೂರು ಜಿಲ್ಲೆಯಿಂದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಇದ್ದರೂ ಕೂಡ ಗೃಹ ಸಚಿವ ಆರಗ ಜ್ಞಾನೇಂದ್ರಗೆ ತುಮಕೂರು ಒಲಿದು ಬಂದಿದೆ. ಇತ್ತೀಚೆಗಷ್ಟೇ ಸಂಸದ ಬಸವರಾಜು ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬರುವ ಚುನಾವಣೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಬದಲಾವಣೆ ಮಾಡಲಾಗಿದೆ ಎಂಬ ಮಾತಿದೆ.
ರಾಮನಗರ ಅಶ್ವತ್ಥ ನಾರಾಯಣ
ಕೆಲವು ದಿನಗಳ ಹಿಂದೆ ಡಿಕೆಶಿ ಸಹೋದರರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿದ್ದ ಸಚಿವ ಅಶ್ವತ್ಥ ನಾರಾಯಣರಿಗೆ ಮತ್ತೆ ರಾಮನಗರ ಜಿಲ್ಲೆ ಹೊಣೆಗಾರಿಕೆ ಕೊಡಲಾಗಿದೆ. ಗದಗ ಜಿಲ್ಲೆಯ ಉಸ್ತುವಾರಿಯಾಗಿದ್ದ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಬಾಗಲಕೋಟೆಗೆ ನಿಯೋಜನೆಗೊಂಡಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಆನಂದ್ ಸಿಂಗ್ ಕೊಪ್ಪಳಕ್ಕೆ , ಕೋಟಾ ಶ್ರೀನಿವಾಸ ಪೂಜಾರಿಗೆ ಉತ್ತರ ಕನ್ನಡ ಕೊಡಲಾಗಿದೆ. ಇಬ್ಬರನ್ನು ಕೂಡ ತವರು ಜಿಲ್ಲೆಯಿಂದ ಬದಲಾಯಿಸಿರುವುದು ವಿಶೇಷ.
ಬಿ. ಸಿ. ಪಾಟೀಲ್ಗೆ ಹಾವೇರಿ ಇಲ್ಲ
ಬೀದರ್ ಜಿಲ್ಲಾ ಉಸ್ತುವಾರಿಯಾಗಿದ್ದ ಪ್ರಭು ಚವ್ಹಾಣ್ಗೆ ಯಾದಗಿರಿ ನೀಡಿದರೆ, ಸಚಿವ ಮುರುಗೇಶ್ ನಿರಾಣಿಗೆ ಪುನಃ ಕಲಬುರಗಿಯನ್ನು ವಹಿಸಲಾಗಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಗೆ ಬಿ. ಸಿ. ಪಾಟೀಲ್ ಬದಲಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಯಾಗಿದ್ದ ಶಿವರಾಮ್ ಹೆಬ್ಬಾರ್ ನಿಯೋಜನೆಗೊಂಡಿದ್ದಾರೆ. ಹಾವೇರಿ ಜಿಲ್ಲೆ ಮೇಲೆ ಕಣ್ಣಿಟ್ಟಿದ್ದ ಕೃಷಿ ಸಚಿವ ಬಿ. ಸಿ. ಪಾಟೀಲ್ಗೆ ಮತ್ತೆ ನಿರಾಸೆಯಾಗಿದ್ದು ಚಿತ್ರದುರ್ಗದ ಉಸ್ತುವಾರಿ ನೀಡಲಾಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ಗೆ ಪುನಃ ದಾವಣಗೆರೆ ನೀಡಲಾಗಿದೆ.
ಅಚ್ಚರಿ ಎಂದರೆ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚಿವ ಡಾ. ಕೆ. ಸುಧಾಕರ್ಗೆ ಹಿನ್ನಡೆಯಾಗಿದೆ. ತವರು ಜಿಲ್ಲೆ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಲಾಗಿದ್ದು, ಇದನ್ನು ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ
ಅಬಕಾರಿ ಸಚಿವ ಕೆ. ಗೋಪಾಲಯ್ಯಗೆ ಹಾಸನದ ಜೊತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಏಕೈಕ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆ ನೀಡಲಾಗಿದೆ.
ಅಚ್ಚರಿ ಎಂಬಂತೆ ಎಂಟಿಬಿ ನಾಗರಾಜ್ಗೆ ಚಿಕ್ಕಬಳ್ಳಾಪುರ, ಬಿ. ಸಿ. ನಾಗೇಶ್ಗೆ ಕೊಡುಗು ಉಸ್ತುವಾರಿ ವಹಿಸಲಾಗಿದೆ. ಉಡುಪಿ ಜಿಲ್ಲೆಯವರಾಗಿದ್ದರೂ ವಿ. ಸುನೀಲ್ ಕುಮಾರ್ಗೆ ದಕ್ಷಿಣ ಕನ್ನಡ, ಹಾಲಪ್ಪ ಆಚಾರ್ಗೆ ಧಾರವಾಡ, ಶಂಕರ್ ಪಟೇಲ್ ಮುನೇನಕೊಪ್ಪಗೆ ರಾಯಚೂರು ಜೊತೆಗೆ ಬೀದರ್ ಜಿಲ್ಲೆಯ ಹೊಣೆಗಾರಿಕೆ ನೀಡಲಾಗಿದೆ. ಮುನಿರತ್ನಗೆ ಕೋಲಾರ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
Recommended Video