ಕಾಮೇಗೌಡರ ಕೆರೆ ಹುಡುಕಲು 'ಸತ್ಯ ಶೋಧನಾ ಸಮಿತಿ'!
ಬೆಂಗಳೂರು, ಜು. 18: ಕೆರೆ ಕಾಮೇಗೌಡರ ಸಾಧನೆಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ಕಾಮೇಗೌಡರ ವಿರುದ್ಧ ಗ್ರಾಮಸ್ಥರಿಂದ ದೂರುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಸಿದ ಬಳಿಕ ಉಪ ವಿಭಾಗಾಧಿಕಾರಿ ಸೂರಜ್ ಅವರು, ಸಮಿತಿ ರಚನೆ ಮಾಡುವುದಾಗಿ ಹೇಳಿದರು. ಕಾಮೇಗೌಡರು ನಿರ್ಮಿಸಿದ್ದಾರೆ ಎಂದಿರುವ ಕೆರೆ-ಕಟ್ಟೆಗಳ ನಿರ್ಮಾಣ ಹಾಗೂ ನೆಟ್ಟಿರುವ ಸಸಿಗಳ ಬಗ್ಗೆಯೂ ಪರಿಶೀಲಿಸಿ ವರದಿ ಕೊಡಲು ತಹಶೀಲ್ದಾರರಿಗೆ ಉಪ ವಿಬಾಗಾಧಿಕಾರಿ ಸೂಚಿಸಿದ್ದಾರೆ. ಜೊತೆಗೆ ಕೆರೆ ಕಾಮೇಗೌಡರ ಮೇಲೆ ಗ್ರಾಮಸ್ಥರು ಮಾಡಿರುವ ಎಲ್ಲ ದೂರುಗಳ ಬಗ್ಗೆ ಪರಿಶೀಲನೆ ಮಾಡುವ ಭರವಸೆಯನ್ನು ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಕೊಟ್ಟಿವೆ.
Recommended Video
ಪ್ರಧಾನಿ ನರೇಂದ್ರ ಮೋದಿ ಅವರಿಂದ ಹೊಗಳಿಸಿಕೊಂಡ ಬಳಿಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾಮೇಗೌಡರ ಸಾಧನೆ ಬಗ್ಗೆ ಊರಿನವರಿಂದಲೇ ಅಪಸ್ವರ ಎದ್ದಿವೆ. ಕೆರೆಗಳ ನಿರ್ಮಾಣದ ಬಗ್ಗೆ ಕಟ್ಟುಕಥೆ ಕಟ್ಟಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಇದೇ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯಲ್ಲಿ ಶಾಂತಿ ಸಭೆ ನಡೆದಿದೆ. ಸಭೆಯಲ್ಲಿ ಏನೇನಾ ಆಯ್ತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಶಾಂತಿ ಸಭೆ
ಕಾಮೇಗೌಡರ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ಕುರಿತಂತೆ ಮಂಡ್ಯ ಜಿಲ್ಲಾಡಳಿತ ಶಾಂತಿ ಸಭೆಯನ್ನು ನಡೆಸಿದೆ. ದಾಸನದೊಡ್ಡಿಯಲ್ಲಿ ನಡೆದ ಶಾಂತಿಸಭೆಯಲ್ಲಿ ಕಾಮೇಗೌಡರ ವಿರುದ್ಧ ಸ್ಥಳೀಯರು ದೂರುಗಳ ಸುರಿಮಳೆಯನ್ನೇ ಮಾಡಿದ್ದಾರೆ. ಕಾಮೇಗೌಡರ ಸಾಧನೆಗಳ ಬಗ್ಗೆ ಮೊದಲು ಸೂಕ್ತ ತನಿಖೆ ನಡೆಸಿ ಎಂದು ಗ್ರಾಮಸ್ಥರು ಅಧಿಕಾರಿಗಳ ಎದುರು ಬೇಡಿಕೆ ಇಟ್ಟಿದ್ದಾರೆ.
ಡ್ರೋಣ್ ಪ್ರತಾಪ್ ಆಯ್ತು, ಇದೀಗ ಕೆರೆ ಕಾಮೇಗೌಡರ ಸರದಿನಾ?
ದಾಸನದೊಡ್ಡಿ ಗ್ರಾಮದ ಸುಮಾರು 2 ನೂರಕ್ಕೂ ಹೆಚ್ಚು ಜನರು ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರು ಎತ್ತಿದ ಪ್ರಶ್ನೆಗಳಿಗೆ ಅಧಿಕಾರಿಗಳು ಮಾತನಾಡಲಾರದೇ ಮೌನಕ್ಕೆ ಶರಣಾಗಿದ್ದರು. ಕಿರಿಯರು ಹಾಗೂ ಹಿರಿಯರು ಕೇಳಿದ ಪ್ರಶ್ನೆಗಳಿಗೆ ಸಮಜಾಯಿಷಿ ಕೊಡುವುದು ಅಧಿಕಾರಿಗಳಿಗೂ ಕೂಡ ಕಷ್ಟವಾಗಿತ್ತು.
ಕೆರೆ-ಕಟ್ಟೆ ಎಂದರೇನು?
ಕೆರೆ ಹಾಗೂ ಕಟ್ಟೆಗಳೆಂದರೆ ಏನು? ಅವುಗಳಿಗೆ ವ್ಯತ್ಯಾಸ ಇಲ್ಲವೆ? ಎಂಬ ಮೂಲಭೂತ ಪ್ರಶ್ನೆಯನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಇಟ್ಟಿದ್ದಾರೆ. 16 ಕೆರೆಗಳನ್ನು ನಿರ್ಮಿಸಿದ್ದಾರೆ ಎಂದಿದ್ದಾರೆ. ಒಂದು ಕೆರೆ ಇದ್ದರೆ ಇಡೀ ಗ್ರಾಮದ ಜಮೀನಿಗೆ ನೀರಿನ ಕೊರತೆ ಆಗುವುದಿಲ್ಲ. ಇನ್ನು 16 ಕೆರೆಗಳಿದ್ದರೆ ಏನೆಲ್ಲ ಅಭಿವೃದ್ಧಿ ಆಗಬಹುದು? ಮೊದಲು ಕೆರೆ, ಕಟ್ಟೆ, ಗುಂಡಿಗಳಿಗೆ ಇರುವ ವ್ಯತ್ಯಾಸದ ಬಗ್ಗೆ ಹೇಳಿ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಕಾಮೇಗೌಡರು ಕಟ್ಟಿಸಿದ್ದಾರೆ ಎನ್ನಲಾದ ಕಟ್ಟೆಗಳ ಪಕ್ಕದಲ್ಲಿಯೇ ಊರಿನ ಇತರರು ಕಟ್ಟಿಸಿರುವ ಕಟ್ಟೆಗಳು ಇವೆ. ಕೇವಲ ಅವರೊಬ್ಬರೆ ಕಟ್ಟೆಗಳ ನಿರ್ಮಾಣ ಮಾಡಿಲ್ಲ. ಊರಿನಲ್ಲಿರುವ ಬಹುತೇಕರು ಕಟ್ಟೆಗಳ ನಿರ್ಮಾಣವನ್ನು ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ.
ಪರಿಸರ ಪ್ರೇಮಿ
ಪರಿಸರ ಪ್ರೇಮಿ ಹೇಗೆ ಮರಳು ತುಂಬುತ್ತಾರೆ ಎಂಬ ಗ್ರಾಮಸ್ಥರ ಪ್ರಶ್ನೆ ಚಿಂತನೆಗೆ ಹಚ್ಚಿತು. ಕಾಮೇಗೌಡರು ಮರಳು ತುಂಬುತ್ತಿದ್ದುದು, ಮರಳು ತುಂಬಿದ್ದ ಗಾಡಿಯನ್ನು ಬೆಳಕವಾಡಿ ಪೊಲೀಸ್ ಸ್ಟೇಶನ್ಗೆ ನಾವು ಹಿಡಿದುಕೊಟ್ಟಿದ್ದಕ್ಕೆ ನಮ್ಮ ಗ್ರಾಮಸ್ಥರೆ ಸಾಕ್ಷಿ.
ಅವರು ಮರಳು ತುಂಬುತ್ತಿದ್ದುದನ್ನು ಹಿಡಿದು ಕೊಟ್ಟಿದ್ದರ ವಿಡಿಯೊ ಫೂಟೇಜ್ ಕೂಡ ನಮ್ಮತ್ರ ಇದೆ. ಅವ್ರು ಪ್ರಭಾವ ಬೀರಿ ಗಾಡಿಯನ್ನು ಬಿಡಿಸಿಕೊಂಡು ಬಂದಿದ್ದೂ ಇದೆ. ಇದೆಲ್ಲವನ್ನೂ ನೀವು ಪರಿಗಣಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ದಯವಿಟ್ಟು ಒಳ್ಳೆಯ ಕ್ರಮಕೈಗೊಳ್ಳಿ ಎಂದು ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ದೂರು ದಾಖಲಾಗಿದೆ
ಇನ್ನು ಸಭೆಯಲ್ಲಿದ್ದ ಸ್ಥಳೀಯ ದಂಪತಿ, ಕಾಮೇಗೌಡರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಮೇಗೌಡರು ಮರಳು ದಂಧೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಈ ಬಗ್ಗೆ 2013-14ರಲ್ಲಿ ಸಮೀಪದ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದ್ದಾರೆ.
ಈಗ ಕಾಮೇಗೌಡರು ನಮ್ಮ ಮೇಲೆಯೇ ಸುಳ್ಳು ಕ್ರಿಮಿನಲ್ ದೂರು ದಾಖಲಿಸಿ ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿ ಇಲ್ಲದಿದ್ದರೆ ನಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಆ ದಂಪತಿ ಕಣ್ಣೀರಿಟ್ಟಿದ್ದಾರೆ.
ಬೇಡದಿರುವ ವಿಚಾರ
ಕಾಮೇಗೌಡರಿಗೆ ರಾಜ್ಯ ಪ್ರಶಸ್ತಿ ಆಗಿರಬಹುದು. ಅಥವಾ ನೂರು ಕೋಟಿ ರೂಪಾಯಿಗಳು ಬರಬಹುದು. ಅದು ನಮಗೆ ಬೇಡದಿರುವ ವಿಚಾರ. ಕಾಮೇಗೌಡರಿಗೆ ಬಂದಿರುವ ಪ್ರಶಸ್ತಿಗಳ ಮೇಲೆ ನಮಗೆ ಅಸಮಾಧಾನವಿಲ್ಲ. ಆದರೆ ಇಡೀ ದಾಸನದೊಡ್ಡಿಯ ಗ್ರಾಮಸ್ಥರೆ ಕಾಮೇಗೌಡರ ವಿರುದ್ಧ ಇದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ಗ್ರಾಮಸ್ಥರು ಕಿಡಿಗೇಡಿಗಳು ಎಂಬು ಬಿಂಬಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಮೇಗೌಡರ ಸಂಬಂಧಿಯೊಬ್ಬರು, ಕಾಮೇಗೌಡರು ತುಂಬಾ ಒರಟು ವ್ಯಕ್ತಿತ್ವದವರು. ತಮ್ಮದೇ ಕುಟುಂಬದ ಏಳು ಜನರು ತೀರಿಕೊಂಡಲಾಗಲೂ ಕೊನೆಯ ಬಾರಿ ಅವರ ಮುಖ ನೋಡಲು ಬಂದಿಲ್ಲ. ಅವರದ್ದು ಕೋಪದ ವ್ಯಕ್ತಿತ್ವ. ಅವರ ವರ್ತನೆಯಿಂದ ಸ್ಥಳೀಯರಿಗೆ ತೊಂದರೆ ಆಗಿರಲೂ ಬಹುದು ಎಂದಿದ್ದಾರೆ.
ವರದಿ ಮಾಹಿತಿಯಿಲ್ಲ
ಕಾಮೇಗೌಡರ ಕುರಿತು ಯಾವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಯಾವ ಅಧಿಕಾರಿಗಳು ವರದಿಯನ್ನು ಕೊಟ್ಟಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ನನ್ನ ಬಳಿ ಇಲ್ಲ ಎಂದು ಉಪ ವಿಭಾಗಾಧಿಕಾರಿ ಸೂರಜ್ ಅವರು ತಿಳಿಸಿದ್ದಾರೆ. ಸರ್ಕಾರ ಪ್ರಶಸ್ತಿ ಕೊಡುವ ಅಥವಾ ಹೊಗಳುವ ಮುನ್ನ ಯಾಕೆ ಈ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ಖಂಡಿತವಾಗಿಯೂ ಹಿಂದಿನ ಅಧಿಕಾರಿಗಳು ಪರಿಶೀಲನೆ ನಡೆಸಿಯೆ ವರದಿ ಕೊಟ್ಟಿರುತ್ತಾರೆ ಎಂದರು.
ಆದರೆ ಗ್ರಾಮಸ್ಥರು, ಅಂತಹ ಯಾವುದೇ ವರದಿಯೆ ಇಲ್ಲ ಎಂದಿದ್ದಾರೆ. ಜೊತೆಗೆ ಗ್ರಾಮ ಪಂಚಾಯತಿಯಲ್ಲಿಯೂ ಯಾವುದೇ ಠರಾವು ಪಾಸ್ ಮಾಡಿಲ್ಲ. ಎಲ್ಲವೂ ಮಾತಿನ ಮೇಲೆಯೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಹಾನಿ ತನಿಖೆ
ದಾಸನದೊಡ್ಡಿಯಲ್ಲಿ ಪರಿಸರದ ಮೇಲೆ ಹಾನಿ ಆಗಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಯಾಕೆಂದರೆ ಪರಿಸರ ತಜ್ಞರು ಅಲ್ಲಿ ಜೆಸಿಬಿ ಬಳಸುವುದು ಸರಿಯಲ್ಲ ಎಂದು ಹೇಳಿದ್ದಾರೆ ಎಂಬುದನ್ನು ಸ್ಥಳೀಯರು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ವೈಜ್ಞಾನಿಕವಾದ ವರದಿಯನ್ನು ಕೊಡಬೇಕಾಗಿದೆ. ಹೀಗಾಗಿ ಭೂಗರ್ಭಶಾಸ್ತ್ರಜ್ಞರನ್ನು ಒಳಗೊಂಡತಹ ಸಮಿತಿಯನ್ನು ಮಾಡುತ್ತೇವೆ. ಎಲ್ಲ ಮಾಹಿತಿಯನ್ನು ಪಡೆದುಕೊಂಡು ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಸೂರಜ್ ಅವರು ತಿಳಿಸಿದ್ದಾರೆ.
ಸತ್ಯಶೋಧನಾ ಸಮಿತಿ
ಗ್ರಾಮಸ್ಥರ ಅಹವಾಲು ಕೇಳಿದ ಬಳಿಕ, ಸತ್ಯಶೋಧನಾ ಸಮಿತಿ ರಚನೆ ಮಾಡಿ ತನಿಖೆ ನಡೆಸುವ ಭರವಸೆಯನ್ನು ಅಧಿಕಾರಿಗಳು ಸ್ಥಳೀಯರಿಗೆ ಕೊಟ್ಟಿದ್ದಾರೆ. ಕಾಮೇಗೌಡರ ವಿರುದ್ಧ ಊರಿನವರು ಮಾಡಿರುವ ಎಲ್ಲ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಅವರು ನಿರ್ಮಿಸಿದ್ದಾರೆ ಎನ್ನಲಾದ ಕೆರೆ-ಕಟ್ಟೆಗಳು ಹಾಗೂ ಸಸಿಗಳನ್ನು ಹಾಕಿರುವ ಬಗ್ಗೆ ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ, ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡುತ್ತೇವೆ.
ಸಮಿತಿಯಿಂದ ವಾಸ್ತವ ವರದಿಯನ್ನು ಪಡೆಯುತ್ತೇವೆ. ಆ ಬಳಿಕ ಮತ್ತೊಂದು ಹಂತದ ಶಾಂತಿ ಸಭೆಯನ್ನು ಗ್ರಾಮದಲ್ಲಿ ನಡೆಸುತ್ತೇವೆ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆಯನ್ನು ಕೊಟ್ಟಿದ್ದಾರೆ. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸೂರಜ್, ತಹಶೀಲ್ದಾರ್ ಚಂದ್ರಮೌಳಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಬಿ.ಎಸ್. ಸತೀಶ್, ಸರ್ಕಲ್ ಇನ್ಸ್ಪೆಕ್ಟರ್ ಧನರಾಜ್, ಪೊಲೀಸ್ ಉಪ ನಿರೀಕ್ಷಕ ಉಮಾ ಪತಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.