ಮೂವರು ಶಾಸಕರು ಅನರ್ಹ: ಬದಲಾಗಲಿದೆಯೇ ಅತೃಪ್ತರ ನಿರ್ಣಯ?
ಬೆಂಗಳೂರು, ಜುಲೈ 26: ಮೂವರು ಶಾಸಕರು ಅನರ್ಹರಾಗಿದ್ದರ ಪರಿಣಾಮ, ಅನರ್ಹತೆ ತೂಗುಕತ್ತಿ ತಲೆಯ ಮೇಲೆ ತೂಗಾಡುತ್ತಿರುವ ಉಳಿದ ಅತೃಪ್ತರ ನಿರ್ಣಯ ಬದಲಾಗುತ್ತದೆಯೇ? ಎಂಬ ಅನುಮಾನ ಕಾಡುತ್ತಿದೆ.
ಅತೃಪ್ತ ಶಾಸಕರ ಗುಂಪಿನಲ್ಲಿದ್ದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಪಕ್ಷೇತರರಾಗಿ ಗುರುತಿಸಿಕೊಂಡಿದ್ದ ಕೆಪಿಜೆಪಿಯ ಆರ್.ಶಂಕರ್ ಅವರನ್ನು ಅನರ್ಹ ಮಾಡಿ ಇಂದು ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಇದು ಉಳಿದ ಅತೃಪ್ತ ಶಾಸಕರ ಮೇಲೆ ಒತ್ತಡ ಹೇರುವ ತಂತ್ರವೆಂದು ಬಿಜೆಪಿ ಆರೋಪ ಮಾಡುತ್ತಿದೆ.
'ರಾಜೀನಾಮೆ ನೀಡಿರುವ ಉಳಿದ ಅತೃಪ್ತರನ್ನು ಬೆದರಿಸಲೆಂದೇ ಈ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ' ಎಂದು ಈಗಾಗಲೇ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಇನ್ನೂ ಕೆಲವು ಬಿಜೆಪಿ ಮುಖಂಡರು ಹೇಳಿದ್ದಾರೆ.
ಆತಂಕದಲ್ಲಿರುವ ಉಳಿದ ಅತೃಪ್ತ ಶಾಸಕರು
ತಮ್ಮ ಸಂಗಡಿಗರಾಗಿದ್ದ ಮೂವರು ಶಾಸಕರು ಅನರ್ಹರಾಗಿದ್ದು ಕಂಡು, ತಮ್ಮ ಮೇಲೂ ಅನರ್ಹತೆಯ ಪ್ರಯೋಗ ಆಗಬಹುದೆಂಬ ಕಾರಣಕ್ಕೆ ಮುಂಬೈನಲ್ಲಿ ನೆಲೆಸಿರುವ ಅತೃಪ್ತ ಶಾಸಕರು ಬಂದು ರಾಜೀನಾಮೆ ಹಿಂಪಡೆಯಬಹುದೇನೋ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷಕ್ಕೂ ಈ ಉದ್ದೇಶ ಇಲ್ಲದೆ ಇಲ್ಲ.
ಅತೃಪ್ತರ ಬೆನ್ನಿಗೆ ನಿಂತಿದೆ ಬಿಜೆಪಿ
ಆದರೆ ಅತೃಪ್ತರ ಬೆನ್ನಿಗೆ ಬಿಜೆಪಿಯು ಅಚಲವಾಗಿ ನಿಂತಿದ್ದು, ಈಗಾಗಲೇ ಬಹಿರಂಗವಾಗಿಯೇ ಬಿಜೆಪಿ ಪ್ರಮುಖ ಸದಸ್ಯರು, 'ಅತೃಪ್ತ ಶಾಸಕರನ್ನು ನಮ್ಮ ಜೊತೆಗೆ ಕರೆದುಕೊಂಡು ಹೋಗುತ್ತೇವೆ' ಎಂದು ಹೇಳಿದ್ದಾರೆ. ಹಾಗಾಗಿ ಅವರನ್ನು ಅನರ್ಹತೆಯಿಂದ ತಪ್ಪಿಸಲು ಬಿಜೆಪಿ ಪ್ರಯತ್ನ ಮಾಡುವುದರಲ್ಲಿ ಸಂಶಯವಿಲ್ಲ.
ಉಳಿದ ಅತೃಪ್ತರ ಭವಿಷ್ಯ ಕೆಲವೇ ದಿನಗಳಲ್ಲಿ ನಿರ್ಣಯ
ಉಳಿದ ಅತೃಪ್ತ ಶಾಸಕರ ರಾಜೀನಾಮೆ ಅಥವಾ ಅನರ್ಹತೆಯ ವಿಚಾರವನ್ನು ಕೆಲವೇ ದಿನಗಳ ಒಳಗಾಗಿ ನಿರ್ಣಯ ಮಾಡುವುದಾಗಿ ರಮೇಶ್ ಕುಮಾರ್ ಅವರು ಹೇಳಿದ್ದು. ಇನ್ನು ಕೆಲವೇ ದಿನಗಳ ಒಳಗಾಗಿ ಅವರ ರಾಜಕೀಯ ಹಣೆಬರಹ ನಿರ್ಧಾರವಾಗಲಿದೆ.
ಅತೃಪ್ತರ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು
ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದಕ್ಕೆ ಮುನ್ನಾ, ಬಿಜೆಪಿ ಸರ್ಕಾರ ರಚಿಸಿ ಹೊಸ ಸ್ಪೀಕರ್ ಆಯ್ಕೆ ಮಾಡಿ, ಅನರ್ಹತೆಯಿಂದ ಶಾಸಕರನ್ನು ಕಾಪಾಡುವ ಉಮೇದು ಬಿಜೆಪಿಗೆ ಇದೆ. ಈ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡಲಿದೆ.