ನಿಯೋಗದೊಂದಿಗೆ ದೆಹಲಿಗೆ ಬಂದ್ರೆ ಎಚ್ಚರ, ಹೈಕಮಾಂಡ್
ನವದೆಹಲಿ, ಫೆ 10: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹೈಕಮಾಂಡಿಗೆ ಪಕ್ಷದೊಳಗಿನ ಯಾವುದೇ ಭಿನ್ನಾಭಿಪ್ರಾಯ ಬೇಕಾಗಿಲ್ಲ. ಬೇಕಾಗಿರುವುದು ಒಗ್ಗಟ್ಟಿನ ಮಂತ್ರ, ನಿಮ್ಮ ಯಾವುದೇ ಬೇಡಿಕೆಗಳನ್ನು ತೆಗೆದುಕೊಂಡು ದೆಹಲಿಗೆ ಬರಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಕಳೆದ ವಾರ ಅತೃಪ್ತ ಶಾಸಕರನ್ನು ಎಚ್ಚರಿಸಿ ಕಳುಹಿಸಿತ್ತು. ಆದರೆ ಒತ್ತಡ ತಂತ್ರವನ್ನು ಮುಂದುವರಿಸಿರುವ ಅತೃಪ್ತರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸಚಿವ ಸ್ಥಾನದ ಬಯಕೆ ಅಥವಾ ಇನ್ಯಾವುದೋ ಬೇಡಿಕೆಗಳೊಂದಿಗೆ ದೆಹಲಿಗೆ ನಿಯೋಗ ಕರೆದು ಕೊಂಡು ಬಂದರೆ ಹುಷಾರ್ ಎಂದು ಹೈಕಮಾಂಡ್ ರಾಜ್ಯದ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಕಳೆದ ವಾರ ವಾರ್ನಿಂಗ್ ಕೊಟ್ಟು ಕಳುಹಿಸಿತ್ತು. ಇದರಿಂದ ಪಕ್ಷದೊಳಗೆ ಮತ್ತೆ ಅಸಮಾಧಾನದ ಹೊಗೆ ಭುಗಿಲೆದ್ದಿದ್ದು ಅತೃಪ್ತ ಶಾಸಕರು ಸೋನಿಯಾ ಗಾಂಧಿಗೆ ಬರೆದಿದ್ದ ಪತ್ರದ ಸಾರಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. (ಚುನಾವಣೆಗೆ ಮುನ್ನ ಕವಲು ದಾರಿಯತ್ತ ರಾಜ್ಯ ಕಾಂಗ್ರೆಸ್)
ಕಳೆದ ವಾರ ಮಾಲೀಕಯ್ಯ ಗುತ್ತೆದಾರ್ ಮತ್ತು ಕೋಳಿವಾಡ ನೇತೃತ್ವದಲ್ಲಿ ದೆಹಲಿಗೆ ನಿಯೋಗವೊಂದು ತೆರಳಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿಯಾಗಿದ್ದ ನಿಯೋಗಕ್ಕೆ ಸೋನಿಯಾ ಗಾಂಧಿ ಭೇಟಿ ಲಭ್ಯವಾಗಿರಲಿಲ್ಲ.
ಲೋಕಸಭಾ ಚುನಾವಣೆಯ ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಗುರುತರ ಹೊಣೆ ಎಲ್ಲಾ ಕಾರ್ಯಕರ್ತರ, ಶಾಸಕರ, ಸಂಸದರ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿರುವ ಸರಕಾರದ್ದು. ಈ ಸಮಯದಲ್ಲಿ ಯಾವುದೇ ಅಶಿಸ್ತನ್ನು ನಾವು ಸಹಿಸುವುದಿಲ್ಲ. ಸಚಿವ ಸ್ಥಾನಮಾನ ಬಯಸಿ ದೆಹಲಿಗೆ ಬಂದರೆ ಎಚ್ಚರ ಎನ್ನುವ ಸಂದೇಶವನ್ನು ಹೈಕಮಾಂಡ್ ಅತೃಪ್ತ ಶಾಸಕರ ನಿಯೋಗಕ್ಕೆ ದೆಹಲಿಯಲ್ಲೇ ನೀಡಿತ್ತು. (ಸಚಿವ ಸ್ಥಾನಕ್ಕಾಗಿ ಸೋನಿಯಾಗೆ ಗುತ್ತೇದಾರ್ ಪತ್ರ)
ಮಾಲೀಕಯ್ಯ ಗುತ್ತೆದಾರ್, ಕೆ ಬಿ ಕೋಳಿವಾಡ, ಎ ಬಿ ಮಾಲಕ ರೆಡ್ಡಿ, ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಸೇರಿದಂತೆ ಹತ್ತು ಮಂದಿ ಶಾಸಕರ ಸಹಿವಿರುವ ಪತ್ರವನ್ನು ಸೋನಿಯಾ ಗಾಂಧಿಗೆ ಕಳುಹಿಸಲಾಗಿದೆ.
ಪತ್ರದ ಸಾರಾಂಶ? ಸ್ಲೈಡ್ ನೋಡಿ..
ಹಿರಿಯರಿಗೆ ಮಣೆ ಹಾಕುತ್ತಿಲ್ಲ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಉತ್ತರ ಕರ್ನಾಟಕ ಭಾಗದ ಕಾರ್ಯಕರ್ತರ ಮತ್ತು ಸದಸ್ಯರ ಕೊಡುಗೆಯೂ ಇದೆ. ಆದರೆ ಸಿದ್ದರಾಮಯ್ಯ ಇಲ್ಲಿನ ಭಾಗದ ಪ್ರತಿನಿಧಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಸಚಿವ ಸ್ಥಾನ ಅಥವಾ ಕೊನೇ ಪಕ್ಷ ನಿಗಮ ಮಂಡಳಿಗೆ ಆಯ್ಕೆ ಮಾಡುವಂತೆ ನಮ್ಮ ಕೋರಿಕೆಗೆ ಸಿಎಂ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ.
ಅನುಭವಿಗಳನ್ನು ದೂರವಿಡಲಾಗುತ್ತಿದೆ
ಮೋಟಮ್ಮ, ವೀರಣ್ಣ ಮತ್ತಿಕಟ್ಟೆ, ರಮೇಶ್ ಕುಮಾರ್, ಬಸವರಾಜ್ ರಾಯರೆಡ್ಡಿ ಮುಂತಾದವರನ್ನು ಕಡೆಗಣಿಸಲಾಗುತ್ತಿದೆ. ಅನುಭವಿ ರಾಜಕಾರಣಿಗಳಾದ ಇವರ ಸಲಹೆ ಸರಕಾರಕ್ಕೆ ಅತ್ಯವಶ್ಯಕ. ಆದರೆ ಸಿದ್ದರಾಮಯ್ಯ ಇವರಿಗೆ ಸೂಕ್ತ ಸ್ಥಾನಮಾನ ನೀಡದೇ ದೂರವಿಡುತ್ತಿದ್ದಾರೆ.
ಜನತಾ ಪರಿವಾರದವರಿಗೆ ಮಣೆ
ಮೂಲ ಕಾಂಗ್ರೆಸ್ಸಿಗರಿಗೆ ಪಕ್ಷದಲ್ಲಿ ಬೆಲೆಯೇ ಇಲ್ಲದಂತಾಗಿದೆ. ಜನತಾ ಪರಿವಾರದಿಂದ ಬಂದ ವಲಸಿಗರಿಗೆ ಸಿದ್ದರಾಮಯ್ಯ ಉತ್ತಮ ಖಾತೆ ನೀಡಿದ್ದಾರೆ. ಇದರಲ್ಲಿ ಬಹಳಷ್ಟು ಮಂದಿ ಸಚಿವ ಖಾತೆ ನಿಭಾಯಿಸುವಲ್ಲಿ ಅಸಮರ್ಥರು. ಸರಕಾರ ರಚನೆಯಾಗಿ ಇಷ್ಟು ದಿನವಾದರೂ ಕೆಲ ಸಚಿವರು ರಾಜ್ಯ ಪ್ರವಾಸವೇ ಕೈಗೊಂಡಿಲ್ಲ.
ಹೈದರಾಬಾದ್ ಕರ್ನಾಟಕ
ಸರಕಾರ ಯಾವುದೇ ಒಂದು ಭಾಗಕ್ಕೆ ಸೀಮಿತವಲ್ಲ. ಹೈದರಾಬಾದ್ ಕರ್ನಾಟಕ ಭಾಗದ ಶಾಸಕರನ್ನು ಸಂಪೂರ್ಣವಾಗಿ ಸಿದ್ದರಾಮಯ್ಯ ನಿರ್ಲಕ್ಷಿಸುತ್ತಿದ್ದಾರೆ. ಇದು ಪಕ್ಷಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಸಿದ್ದರಾಮಯ್ಯ ಒಂದು ಭಾಗದ ಶಾಸಕರ/ಸಚಿವರ ಮಾತಿಗೆ ಮಾತ್ರ ಬೆಲೆ ನೀಡುತ್ತಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿ ಅನಾಹುತ ಬೇಡ
ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಕ್ಕೆ ಯಾವುದೇ ಅನಾಹುತವಾಗಬಾರದು. ಸಿದ್ದರಾಮಯ್ಯ ಕೆಲಸದ ಶೈಲಿಯಿಂದ ಲಕ್ಷಾಂತರ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಆದುದರಿಂದ ನಮ್ಮ ಬೇಡಿಕೆಗಳಿಗೆ ಚುನಾವಣೆಗೆ ಮುನ್ನ ಮಣೆಹಾಕಿ.