ಸಿಎಂ ಭೇಟಿ ಮಾಡಿದ ಕಾಂಗ್ರೆಸ್ ಅತೃಪ್ತ ಶಾಸಕರು ಹೇಳಿದ್ದೇನು?
ಬೆಂಗಳೂರು, ಮಾರ್ಚ್ 06: ಕುಮಾರಸ್ವಾಮಿ ಅವರು ಇಂದು ಕಾಂಗ್ರೆಸ್ನ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಅವರನ್ನು ಭೇಟಿ ಆದರು. ಅವರ ಮಾತುಕತೆ ಸಫಲವಾದಂತೆ ತೋರುತ್ತಿದೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಮೇಲೆ ಅಸಮಾಧಾನ ಇದೆ ಆದರೆ ನಾವು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ನ ಅತೃಪ್ತ ಶಾಸಕರ ಮನವೊಲಿಸಲು ಮುಂದಾದ ಕುಮಾರಸ್ವಾಮಿ
ರಾಜ್ಯ ಕಾಂಗ್ರೆಸ್ ಬಗ್ಗೆ ನಮಗೆ ಇರುವ ಅಸಮಾಧಾನವನ್ನು ಹೈಕಮಾಂಡ್ಗೆ ಹೇಳಿದ್ದೇವೆ, ಆದರೆ ಅಲ್ಲಿಂದ ನಮಗೆ ಇನ್ನೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದ ಅವರು ಉಮೇಶ್ ಜಾಧವ್ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ, ನಾವು ಆ ದಾರಿ ತುಳಿಯುವುದಿಲ್ಲ ಎಂದು ಹೇಳಿದರು.
ಸಹೋದರನ ನಿರ್ಣಯ ಸ್ವತಂತ್ರ್ಯ: ಬಿ.ನಾಗೇಂದ್ರ
ಮತ್ತೊಬ್ಬ ಅತೃಪ್ತ ಶಾಸಕ ಬಿ.ನಾಗೇಂದ್ರ ಮಾತನಾಡಿ, ನನ್ನ ಸಹೋದರ ವೆಂಕಟೇಶ್ ಪ್ರಸಾದ್ ಬಿಜೆಪಿ ಟಿಕೆಟ್ನಿಂದ ಸ್ಪರ್ಧೆ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ನಿರ್ಧಾರ ಅವರದ್ದು, ಆದರೆ ನಾನು ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
'ಕಾಂಗ್ರೆಸ್ ಬಗ್ಗೆ ಅಸಮಾಧಾನ ಇದೆ, ಅತೃಪ್ತಿ ಇಲ್ಲ'
ಕಾಂಗ್ರೆಸ್ ಜೊತೆ ಅಸಮಾಧಾನವಿದೆ ಆದರೆ ಆಡಳಿತದ ಬಗ್ಗೆ ಅತೃಪ್ತಿ ಎಲ್ಲ ಎಂದ ಅವರು, ಇಂದಿನ ಸಭೆಯಲ್ಲಿ ಸಿಎಂ ಅವರೊಂದಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದೆವು. ಮುಖ್ಯಮಂತ್ರಿಯವರು ಬೆಳಗಾವಿ, ಬಳ್ಳಾರಿ ಜಿಲ್ಲೆಗಳ ಸಮಸ್ಯೆಗೆ ನಾನೇ ಖುದ್ದಾಗಿ ಸ್ಪಂದನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.
ಜಾರಕಿಹೊಳಿ ಮನೆಗೆ ಅತೃಪ್ತ ಶಾಸಕರ ದೌಡು, ರಾಜೀನಾಮೆ ಮುನ್ಸೂಚನೆಯೇ?
ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದೇನು?
ಮಹೇಶ್ ಕುಮಟಳ್ಳಿ ಸಹ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರ ಬಳಿಯೂ ನಾವು ಅಸಮಾಧಾನ ತೋಡಿಕೊಂಡಿದ್ದೇವೆ ಎಂದು ಹೇಳಿದರು.
ಮೈತ್ರಿ ಸರ್ಕಾರಕ್ಕೆ ಉಂಟಾಗಿತ್ತು ಭೀತಿ
ಅತೃಪ್ತ ಶಾಸಕರ ಗುಂಪಿನಲ್ಲಿ ಇದ್ದ ಉಮೇಶ್ ಜಾಧವ್ ಅವರು , ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಕಾರಣ ಸಿಎಂ ಅವರು ಉಳಿದ ಅತೃಪ್ತರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದರು. ಮಾತುಕತೆ ಸಫಲವಾಗಿದ್ದು, ಮೂರು ಜನ ಅತೃಪ್ತ ಶಾಸಕರು ತಾವು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.