ಬಿಜೆಪಿ ಭಿನ್ನಮತಕ್ಕೆ ಅಲ್ಪವಿರಾಮ: ಸಿಎಂ ಬಿಎಸ್ವೈ ಮನೆಯಲ್ಲಿ ನಡೆದಿದ್ದೇನು?
ಬೆಂಗಳೂರು, ಜೂನ್ 3: ಜೋಳದ ರೊಟ್ಟಿ ಊಟದ ನೆಪದಲ್ಲಿ ಆರಂಭವಾದ ಯಡಿಯೂರಪ್ಪನವರ ವಿರುದ್ದದ ಅಸಮಾಧಾನದ ಸದ್ದು, ಅಮಿತ್ ಶಾ ಅವರ ಮನೆ ಬಾಗಿಲನ್ನು ಬಡಿದಿತ್ತು.
ಕರ್ನಾಟಕ ಬಿಜೆಪಿಯ ಬಂಡಾಯ ಮಾಧ್ಯಮಗಳಲ್ಲಿ ಸದ್ದು ಆಗುತ್ತಿದ್ದಂತೆಯೇ, ಬಿಜೆಪಿ ವರಿಷ್ಠರ ಖಡಕ್ ಸೂಚನೆಯ ನಂತರ ಒಂದು ಹಂತಕ್ಕೆ ಸಣ್ಣದಾಗಿತ್ತು. ಈಗ, ಬಂಡಾಯ ತಾತ್ಕಾಲಿಕವಾದರೂ ಶಮನಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಉತ್ತರ ಕರ್ನಾಟಕ ಭಾಗದ ಪ್ರಭಾವೀ ಮುಖಂಡ ಮತ್ತು ಹುಕ್ಕೇರಿ ಶಾಸಕರೂ ಆಗಿರುವ ಉಮೇಶ್ ಕತ್ತಿ, ಬುಧವಾರ (ಜೂ 3) ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ.
ಬಿಜೆಪಿ ಬಂಡಾಯ ಸಭೆಯಲ್ಲಿ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ!
ಕರ್ನಾಟಕ ಬಿಜೆಪಿಯಲ್ಲಿನ ಭಿನ್ನಮತ ಮತ್ತು ರಾಜ್ಯಸಭಾ ಚುನಾವಣೆಯೂ ಎದುರಾಗುತ್ತಿರುವುದರಿಂದ, ಉಮೇಶ್ ಕತ್ತಿ - ಸಿಎಂ ಭೇಟಿ ಮಹತ್ವವನ್ನು ಪಡೆದುಕೊಂಡಿದೆ. ಸಿಎಂ ಜೊತೆ ಕತ್ತಿ ಸುಮಾರು ಇಪ್ಪತ್ತು ನಿಮಿಷ ಮಾತುಕತೆ ನಡೆಸಿದ್ದಾರೆ.
ಮಾಜಿ ಸಂಸದ, ರಾಜ್ಯಸಭಾ ಟಿಕೆಟ್ ಆಕಾಂಕ್ಷಿ ರಮೇಶ್ ಕತ್ತಿ
ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಹೀಗೆ ಬಂಡಾಯ ಸಭೆ ಮಾಡುವುದು ಎಷ್ಟು ಸರಿ ಎಂಬುದಕ್ಕೆ ಮಾಜಿ ಸಂಸದ, ರಾಜ್ಯಸಭಾ ಟಿಕೆಟ್ ಆಕಾಂಕ್ಷಿ ರಮೇಶ್ ಕತ್ತಿ ಖಡಕ್ಕಾಗಿಯೇ ಉತ್ತರಿಸಿದ್ದರು. "ಕೊರೊನಾ ವೈರಸ್ ಸಂಕಷ್ಟದಿಂದ ಯಾವ ಕೆಲಸ ನಿಂತಿವೆ, ಮದುವೆ, ಮುಂಜಿ, ಮೃತರ ಅಂತ್ಯಕ್ರಿಯೆ ಯಾವುದು ನಿಂತಿಲ್ಲ" ಎನ್ನುವ ಮೂಲಕ, ಬಂಡಾಯ ಸಭೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದರು.
ಯಡಿಯೂರಪ್ಪನವರನ್ನು ಭೇಟಿಯಾದ ಉಮೇಶ್ ಕತ್ತಿ
ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪನವರನ್ನು ಉಮೇಶ್ ಕತ್ತಿ ಭೇಟಿಯಾಗಿದ್ದಾರೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಉಮೇಶ್ ಕತ್ತಿ ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು ಎನ್ನಲಾಗುತ್ತಿದೆ.
ಬಿಜೆಪಿ ಆಂತರಿಕ ಬೇಗುದಿಯ ನಡುವೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿಡಿಸಿದ ಹೊಸ ಬಾಂಬ್
ರಾಜ್ಯಸಭಾ ಟಿಕೆಟ್ ಬಗ್ಗೆ ಯಾವುದೇ ಭರವಸೆ ಸಿಗಲಿಲ್ಲ
ತಮಗೆ ಸಚಿವ ಸ್ಥಾನ ಮತ್ತು ಸಹೋದರನಿಗೆ ರಾಜ್ಯಸಭಾ ಟಿಕೆಟ್ ಬಗ್ಗೆ ಉಮೇಶ್ ಕತ್ತಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದರು. ಇದರಲ್ಲಿ ಸಚಿವ ಸ್ಥಾನದ ಭರವಸೆಯನ್ನು ಯಡಿಯೂರಪ್ಪನವರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯಸಭಾ ಟಿಕೆಟ್ ಬಗ್ಗೆ ಯಾವುದೇ ಭರವಸೆ ಸಿಗಲಿಲ್ಲ ಎನ್ನಲಾಗುತ್ತಿದೆ.
ಯಡಿಯೂರಪ್ಪ ಸಿಎಂ ಅಷ್ಟೇ. ನಮ್ಮ ನಾಯಕರು ಮೋದಿ, ಶಾ, ನಡ್ಡಾ - ಯತ್ನಾಳ್
ಸುಮಾರು ಇಪ್ಪತ್ತು ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಿದ್ದ ಉಮೇಶ್ ಕತ್ತಿಯವರಿಗೆ ಇನ್ನೋರ್ವ ಶಾಸಕ ಬಸನಗೌಡ ಯತ್ನಾಳ್ ಕೂಡಾ ಸಾಥ್ ನೀಡಿದ್ದರು. ಯಡಿಯೂರಪ್ಪ ಸಿಎಂ ಅಷ್ಟೇ. ನಮ್ಮ ನಾಯಕರು ಮೋದಿ, ಶಾ, ನಡ್ಡಾ ಎಂದು ಯತ್ನಾಳ್ ಹೇಳಿದ್ದರು. ಈಗ, ಯಡಿಯೂರಪ್ಪ-ಕತ್ತಿ ಸಭೆಯ ನಂತರ, ಬಂಡಾಯ ತಣ್ಣಗಾಗುವ ಸಾಧ್ಯತೆಯಿಲ್ಲದಿಲ್ಲ.