ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ 'ಹಿಡಿಶಾಪ' ಹಾಕಿದ ಸಿದ್ದರಾಮಯ್ಯ
ಬೆಂಗಳೂರು, ಜುಲೈ 23: ವಿಶ್ವಾಸಮತಯಾಚನೆ ಸಂಬಂಧದ ಚರ್ಚೆ ಅಂತಿಮ ಹಂತ ತಲುಪಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿಯಲ್ಲಿ ಭಾಷಣ ಮಾಡಿ, ಅತೃಪ್ತ ಶಾಸಕರ ವಿರುದ್ದ ಕಿಡಿಕಾರಿದರು.
ಯಾವ ಶಾಸಕರು ಬಾಗಿಲು ಹಾಕಿಕೊಂಡು ಮುಂಬೈನಲ್ಲಿ ಕೂತಿದ್ದಾರೋ, ಅವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಗೆಲ್ಲಲೂ ಬಾರದು ಎಂದು ಸಿದ್ದರಾಮಯ್ಯ ಹಿಡಿಶಾಪ ಹಾಕಿದ್ದಾರೆ.
ಜೈಲು ಮಂತ್ರಿಯಾಗಿದ್ದೆ, ಜೈಲಿಗೆ ಹೋಗಲೂ ಸಿದ್ದ: ಡಿ ಕೆ ಶಿವಕುಮಾರ್
ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದಿದ್ದ ಆರ್ ಶಂಕರ್, ತನ್ನ ಪಕ್ಷವನ್ನು ವಿಲೀನಗೊಳಿಸಿ, ಕಾಂಗ್ರೆಸ್ಸಿಗೆ ಬಂದಿದ್ದರು. ಈಗ ತಮ್ಮ ನಿಲುವನ್ನು ಬದಲಾಯಿಸಿದ್ದಾನೆ. ಅವನು ಈಗ ಕಾಂಗ್ರೆಸ್ಸಿಗೆ ಬಂದರೂ, ನಮಗೆ ಬೇಡ. ಅವನನ್ನು ಯಡಿಯೂರಪ್ಪನವರ ಪಕ್ಕ ಕೂರಿಸಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಿಜೆಪಿಯವರೇ ಕುದುರೆ ವ್ಯಾಪಾರ ಮಾಡಿಸುತ್ತಿರುವುದು, ಪಕ್ಷಾಂತರ ಮಾಡುತ್ತಿರುವುದು. ಈಗ ಮುಂಬೈಗೆ ಹೋದವರು, ನಾಳೆ ಸಚಿವರಾದರೆ ಇಡೀ ರಾಜ್ಯಕ್ಕೆ ಗೊತ್ತಾಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನನಗೆ ಸಂಬಂಧವಿಲ್ಲ ಎಂದು ಬಿಜೆಪಿಯವರು ಎಷ್ಟೇ ಹೇಳಿದರೂ, ಆಪರೇಷನ್ ಕಮಲದ ಬಗ್ಗೆ ಆಡಿಯೋ ಹೊರಬಂದಿಲ್ಲವೇ. ಆಡಿಯೋದಲ್ಲಿರುವ ಧ್ವನಿ ನಂದೇ ಎಂದು ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಬಿಎಸ್ವೈ, ಎಚ್ಡಿಕೆ ಇಬ್ಬರಿಗೂ ದೇವರು ಬಲಗಡೆಯಿಂದ ಹೂವು ಕೊಟ್ಟಾಗ!
ಈ ಹಿಂದೆ ಕೂಡಾ ಆಪರೇಷನ್ ಕಮಲ ನಡೆಸಿದ ಅನುಭವ ಬಿಜೆಪಿಗಿದೆ. ಆಮಿಷಕ್ಕೊಳಗಾದ ಶಾಸಕರು ಮತ್ತೆ ಚುನಾವಣೆಯಲ್ಲಿ ಸೋತ ಉದಾಹರಣೆಯೂ ನಮ್ಮ ಮುಂದಿದೆ. ಈಗ ಮುಂಬೈಗೆ ಹೋಗಿರುವ ಶಾಸಕರಿಗೂ ಮುಂದೆ ಅದೇ ಆಗಲಿದೆ, ಅದೇ ಆಗಬೇಕು ಎಂದು ಸಿದ್ದರಾಮಯ್ಯ ಶಾಪ ಹಾಕಿದ್ದಾರೆ.