ಅತೃಪ್ತರ ನಾಯಕರಾಗಿ ರಾ.ಲಿಂ.ರೆಡ್ಡಿ, ಸಿಎಂ ಆಗಲಿ ಸಿದ್ದು ಎಂಬ ಹೊಸ ಧ್ವನಿ!
ಕಾಂಗ್ರೆಸ್ ನ ಅತೃಪ್ತರ ನಾಯಕತ್ವವನ್ನು ಹಿರಿಯ ಮುಖಂಡರಾದ ರಾಮಲಿಂಗಾ ರೆಡ್ಡಿ ವಹಿಸಿದ್ದಾರಾ? ಈ ಮಾತನ್ನು ಸ್ವತಃ ರಾ.ಲಿಂ.ರೆಡ್ಡಿ ನಿರಾಕರಿಸಿದ್ದರೂ ಕಾಂಗ್ರೆಸ್ ಹೈಕಮಾಂಡ್ ನಿಂದ ಸಂಧಾನಕ್ಕೆ ಬರಲಿರುವ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ರೆಡ್ಡಿ ಮಾತನಾಡುತ್ತಾರೆ ಎಂದು ಅತೃಪ್ತರ ಪೈಕಿ ಹಲವರು ಹೇಳುತ್ತಿದ್ದಾರೆ.
ಇಲ್ಲಿ ಒಂದು ಸ್ಪಷ್ಟವಾಗುತ್ತದೆ. ರಾಮಲಿಂಗಾ ರೆಡ್ಡಿ ಅವರ ಬೆನ್ನಿಗೆ ಕೆಲವು ಶಾಸಕರು ಇದ್ದಾರೆ. ಮತ್ತು ಎಸ್.ಟಿ.ಸೋಮಶೇಖರ್, ಮುನಿರತ್ನ ಅವರು ಮಾಧ್ಯಮಗಳ ಎದುರೇ ಹೇಳಿಕೊಂಡಂತೆ, ರಾಮಲಿಂಗಾ ರೆಡ್ಡಿಯೇ ನಾಯಕರು. ಈ ಸನ್ನಿವೇಶದಲ್ಲಿ ರಾಜೀನಾಮೆ ಹಿಂಪಡೆಯುವುದನ್ನು ನಿರಾಕರಿಸಿರುವ ರಾ.ಲಿಂ.ರೆಡ್ಡಿ, ಹೈಕಮಾಂಡ್ ಜತೆ ಮಾತುಕತೆಗೆ ಒಪ್ಪಿರುವುದನ್ನು ಗಮನಿಸಿದರೆ, ಚೌಕಾಶಿಗೆ ಮುಂದಾಗುವ ಸಾಧ್ಯತೆ ಇದೆ.
ಗಡ್ಡಕ್ಕೆ ಬೆಂಕಿ : ಅತೃಪ್ತರ ಆಕ್ರೋಶ ತಣಿಸಲು ಹಿರಿಯ ಕಾಂಗ್ರೆಸ್ ಮಂತ್ರಿಗಳ ರಾಜೀನಾಮೆ?
ಇನ್ನು ಜೆಡಿಎಸ್ ಸ್ವತಃ ಮುಂದಾಗಿ, ಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್ ಗೆ ಬಿಟ್ಟುಕೊಟ್ಟು, ಈ ಸರಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕಲು ಸಾಧ್ಯವಿಲ್ಲ. ಏಕೆಂದರೆ, ಸದ್ಯದ ಸನ್ನಿವೇಶದಲ್ಲಿ ಚುನಾವಣೆ ನಡೆದರೆ ಅದರ ಲಾಭ ನಿಶ್ಚಿತವಾಗಿಯೂ ಬಿಜೆಪಿಗೆ ಆಗುತ್ತದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿ, ಉಪ ಮುಖ್ಯಮಂತ್ರಿ ಸ್ಥಾನ ಜೆಡಿಎಸ್ ಗೆ ಬಿಟ್ಟುಕೊಟ್ಟರೂ ಪರವಾಗಿಲ್ಲ. ಜತೆಗೆ ಕಾಂಗ್ರೆಸ್ ನ ಹಿರಿಯರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಹೈಕಮಾಂಡ್ ಗೆ ಒತ್ತಡ ಹಾಕಬಹುದು. ಸಿದ್ದರಾಮಯ್ಯ ಅವರ ಬೆಂಬಲಿಗರೇ ಅತೃಪ್ತರ ಪಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದ್ದರಿಂದ ಸಿದ್ದು ಸಿಎಂ ಆಗಬೇಕು ಎಂದು ಬೇಡಿಕೆ ಕೇಳಿಬರುತ್ತಿದೆ.