ಅಷ್ಟಕ್ಕು ಯಡಿಯೂರಪ್ಪ ವಿರುದ್ಧ ಆಪ್ತರ ಇಷ್ಟೊಂದು ಆಕ್ರೋಶಕ್ಕೆ ಕಾರಣ ಏನು?
ಬೆಂಗಳೂರು, ಜ. 15: ಸಂಪುಟ ವಿಸ್ತರಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರೇ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ತಮ್ಮ ವಿರುದ್ಧ ಬಹಿರಂಗ ವಾಗ್ದಾಳಿ ಮಾಡುತ್ತಿರುವವರಿಗೆ ಸಿಎಂ ಯಡಿಯೂರಪ್ಪ ಅವರು ಹೋಗಿ ಹೈಕಮಾಂಡ್ಗೆ ದೂರು ಕೊಡಿ. ಇಲ್ಲಿ ಹೇಳಿಕೆ ಕೊಡುವ ಮೂಲಕ ಗೊಂದಲ ಎಬ್ಬಿಸಬೇಡಿ ಎಂದು ಎಚ್ಚರಿಸಿದ್ದಾರೆ. ಆದರೂ ಸಿಎಂ ವಿರುದ್ಧದ ವಾಗ್ದಾಳಿಯನ್ನು ಆಪ್ತರು ಕಡಿಮೆ ಮಾಡಿಲ್ಲ.
ಅವರಲ್ಲೊಬ್ಬರು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ. ಜೊತೆಗೆ ಹುಬ್ಬಳ್ಳಿ-ಧಾವರಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರಂತಹ ಯಡಿಯೂರಪ್ಪ ಬೆಂಬಲಿಗರು ಕೂಡ ವಾಗ್ದಾಳಿ ನಡೆಸಿದ್ದಾರೆ. ಹೀಗೆ ಆಪ್ತ ಶಾಸಕರೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ. ಆಪ್ತರ ಆಕ್ರೋಶಕ್ಕೆ ಯಡಿಯೂರಪ್ಪ ಅವರು ಕ್ಯಾರೆ ಎಂದಿಲ್ಲ. ಹೈಕಮಾಂಡ್ ಅಣತಿಯಂತೆ ಸಂಪುಟ ವಿಸ್ತರಣೆ ನಡೆಸಲಾಗಿದೆ ಎಂದು ಆಕ್ರೋಶಕ್ಕೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಆಪ್ತರು ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ನಡೆಸಲು ಕಾರಣವೇನು?
ಸಾಮಾಜಿಕ ನ್ಯಾಯಕ್ಕೆ ತೀಲಾಂಜಲಿ
ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಾಮಾಜಿಕ ನ್ಯಾಯ ತತ್ವದಡಿ ಸಂಪುಟ ರಚನೆ ಮಾಡಿದ್ದರು. ಹೀಗಾಗಿ ಐದು ವರ್ಷಗಳ ಕಾಲ ಸಣ್ಣಪುಟ್ಟ ವ್ಯತ್ಯಾಸಗಳು ಬಂದರೂ ಇಷ್ಟೊಂದು ಬಹಿರಂಗ ವಾಗ್ದಾಳಿಯನ್ನು ಆಗ ಸ್ವಪಕ್ಷದವರಿಂದ ಸಿದ್ದರಾಮಯ್ಯ ಅವರು ಅಷ್ಟಾಗಿ ಎದುರಿಸಿರಲಿಲ್ಲ. ಆದರೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಾಮಾಜಿಕ ನ್ಯಾಯ (ಜಾತಿವಾರು ಸಚಿವರ ಲೆಕ್ಕಾಚಾರ) ನೋಡಿದರೆ ಲಿಂಗಾಯತ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಚಿವರಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ಗಂಡಾಂತರ?
ರಾಜ್ಯದಲ್ಲಿ ಕೇವಲ 9 ಸಮುದಾಯಗಳಿಗೆ ಮಾತ್ರ ಯಡಿಯೂರಪ್ಪ ಅವರು ಪ್ರಾತಿನಿಧ್ಯ ಕೊಟ್ಟಿದ್ದಾರೆ. ಉಳಿದೆಲ್ಲ ಸಣ್ಣಪುಟ್ಟ ಸಮುದಾಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ಜಾತಿವಾರು ಪ್ರಾತಿನಿಧ್ಯ
ಸಂಪುಟ ವಿಸ್ತರಣೆಗೆ ಮೊದಲು ಯಡಿಯೂರಪ್ಪ ಅವರ ಸಂಪುಟದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೇರಿ 9 ಲಿಂಗಾಯತ, 6 ಒಕ್ಕಲಿಗ , 2 ಬ್ರಾಹ್ಮಣ, 2 ಕುರುಬ, 3 ಪರಿಶಿಷ್ಟ ಜಾತಿ, 2 ಪರಿಶಿಷ್ಟ ಪಂಗಡ, ರಜಪೂತ್ 1, ಮರಾಠ 1 ಹಾಗೂ ಈಡಿಗ ಸಮುದಾಯಕ್ಕೆ 1 ಸಚಿವ ಸ್ಥಾನ ನೀಡಲಾಗಿತ್ತು. ಈ ಅಸಮಾನತೆಯನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಿವಾರಿಸುತ್ತಾರೆ ಎಂದುಕೊಂಡಿದ್ದ ಶಾಸಕರಿಗೆ ಸಿಎಂ ಶಾಕ್ ನೀಡಿದ್ದಾರೆ.
ಸಂಪುಟ ವಿಸ್ತರಣೆ ಬಳಿಕ ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರ ಸಂಖ್ಯೆ 11ಕ್ಕೇರಿದೆ. ಹಾಗೆಯೇ ಒಕ್ಕಲಿಗ 7, ಬ್ರಾಹ್ಮಣ 2, ಕುರುಬ 4, ಪರಿಶಿಷ್ಟ ಜಾತಿ 4, ಪರಿಶಿಷ್ಟ ಪಂಗಡ 2, ಹಿಂದುಳಿದ ವರ್ಗ 2, ಮರಾಠ ಸಮುದಾಯದ ಒಬ್ಬರಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ರಾಜ್ಯದ ಕೇವಲ 9 ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ.
ಪ್ರಾದೇಶಿಕ ಅಸಮಾನತೆ
ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರ ಅಸಮಾಧಾನಕ್ಕೆ ಮತ್ತೊಂದು ಕಾರಣವಾಗಿದೆ. ಸಂಪುಟ ವಿಸ್ತರಣೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಹಲವು ಪ್ರಮುಖ ಜಿಲ್ಲೆಗಳಿಂದ ಒಬ್ಬೇ ಒಬ್ಬ ಶಾಸಕರು ಸಚಿವರಾಗಿಲ್ಲ. ಹೀಗಾಗಿ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಿಂದ ತಮಗೇ ಸಚಿವಸ್ಥಾನ ಸಿಗುತ್ತದೆ ಎಂದುಕೊಂಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ತೀವ್ರ ಅಸಮಾಧಾನವಾಗಿದೆ. ದಾವಣಗೆರೆ ಜಿಲ್ಲೆಯೂ ಸೇರಿದಂತೆ 12 ಜಿಲ್ಲೆಗಳ ಶಾಸಕರಿಗೆ ಮಂತ್ರಿಯಾಗುವ ಭಾಗ್ಯ ಸಿಕ್ಕಿಲ್ಲ.
'ಕೈ' ತಪ್ಪಿದ ಮಂತ್ರಿ ಪದವಿ; ರಾಜ್ಯ ಸರ್ಕಾರದ ಭವಿಷ್ಯ ಹೇಳಿದ ಆರ್.ಆರ್. ನಗರ ಶಾಸಕ ಮುನಿರತ್ನ!
Recommended Video
ಜಿಲ್ಲಾವಾರು ಪ್ರಾತಿನಿಧ್ಯ
ಸಂಪುಟ ವಿಸ್ತರಣೆಗೆ ಮೊದಲು ರಾಜ್ಯದ 15 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕನಿಷ್ಠ 7 ಜಿಲ್ಲೆಗಳಿಗೆ ಮಂತ್ರಿಸ್ಥಾನಗಳನ್ನು ಸಿಎಂ ಹಂಚುತ್ತಾರೆ ಎಂಬ ಬಿಜೆಪಿ ಶಾಸಕರ ನಿರೀಕ್ಷೆ ಹುಸಿಯಾಗಿದೆ. ಕೇವಲ ಎರಡು ಜಿಲ್ಲೆಗಳಿಗೆ 7 ಮಂತ್ರಿ ಸ್ಥಾನಗಳನ್ನು ಯಡಿಯೂರಪ್ಪ ಅವರು ಹಂಚಿಕೆ ಮಾಡಿದ್ದಾರೆ.
ಹೀಗಾಗಿ ಚಿಕ್ಕಮಗಳೂರು, ಕೋಲಾರ, ದಾವಣಗೆರೆ, ಚಾಮರಾಜನಗರ, ಮೈಸೂರು, ಕೊಡಗು, ಬಳ್ಳಾರಿ, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಹಾಗೂ ಹಾಸನ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.
ನನ್ನ ವಿರುದ್ಧ ಹೈಕಮಾಂಡ್ಗೆ ದೂರು ಕೊಡಿ: ಯಡಿಯೂರಪ್ಪ ಖಡಕ್ ಮಾತು!
ಬೆಂಗಳೂರು ನಗರ ಜಿಲ್ಲೆಯಿಂದ 10 ಸಚಿವರಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 5, ಬೀದರ್ 1, ರಾಮನಗರ 1, ವಿಜಯನಗರ (ನೂತನ ಜಿಲ್ಲೆ)-1, ಬಾಗಲಕೋಟೆ 2, ಧಾರವಾಡ 1, ಗದಗ 1, ಉತ್ತರ ಕನ್ನಡ 1, ಹಾವೇರಿ 2, ಚಿತ್ರದುರ್ಗ 1, ತುಮಕೂರು 1, ಮಂಡ್ಯ 1, ಚಿಕ್ಕಬಳ್ಳಾಪುರ 1, ಶಿವಮೊಗ್ಗ-2 (ಸಿಎಂ ಸೇರಿ), ದಕ್ಷಿಣ ಕನ್ನಡ ಜಿಲ್ಲೆಗೆ 2 ಮಂತ್ರಿ ಸ್ಥಾನ ಹಂಚಿಕೆ ಮಾಡಲಾಗಿದೆ.
ಹೀಗಾಗಿ 30 ಜಿಲ್ಲೆಗಳಲ್ಲಿ ಕೇವಲ 16 ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಂತಾಗಿದೆ. ಇದು ಕೂಡ ಯಡಿಯೂರಪ್ಪ ಅವರ ಆಪ್ತರು ಗರಂ ಆಗಲು ಕಾರಣವಾಗಿದೆ. ಕೇವಲ ತಾವು ಸಿಎಂ ಆಗುವುದಕ್ಕ ಮಾತ್ರ ಯಡಿಯೂರಪ್ಪ ಅವರು ಪ್ರಾದೇಶಿನ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಿದ್ದಾರೆಂದು ಬಿಜೆಪಿ ಶಾಸಕರು ಆರೋಪ ಮಾಡುತ್ತಿದ್ದಾರೆ. ಮುಂದೆ ಈ ಆರೋಪ-ಪ್ರತ್ಯಾರೋಪ ಬಿಜೆಪಿ ಸರ್ಕಾರಕ್ಕೆ ಮುಳುವಾಗಲೂ ಬಹುದು!