ಸಿದ್ದರಾಮಯ್ಯ-ಪರಮೇಶ್ವರ್ ನಡುವೆ ಭಿನ್ನಮತ ಸ್ಫೋಟ!
ಬೆಂಗಳೂರು, ಸೆಪ್ಟೆಂಬರ್ 02: ರಾಜ್ಯ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.
ಪರಿಶಿಷ್ಟ ಜಾತಿಯ ಎಡಗೈ ಬಣದ ಆರ್.ಬಿ. ತಿಮ್ಮಾಪೂರ ಅವರಿಗೆ ಸಚಿವ ಸ್ಥಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರದಿಂದಾಗಿ ಬಲಗೈ ಸಮುದಾಯದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಾ, ಜಿ ಪರಮೇಶ್ವರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವರಾಗಿ ಗೀತಾ, ರೇವಣ್ಣ, ತಿಮ್ಮಾಪುರ ಪ್ರಮಾಣ ವಚನ ಸ್ವೀಕಾರ
ಪರಮೇಶ್ವರ ಅವರು ಶುಕ್ರವಾರ ನಡೆದ ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಇಣುಕು ಹಾಲಿಲ್ಲ. ಇದರೊಂದಿಗೆ ಮುಖ್ಯಮಂತ್ರಿ ಹಾಗೂ ಪರಮೇಶ್ವರ್ ಅವರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.
ದಲಿತರ ಕೋಟಾದಡಿ ಎಂಲ್ಸಿ ಮೋಟಮ್ಮ ಅಥವಾ ನರೇಂದ್ರ ಸ್ವಾಮಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಪರಮೇಶ್ವರ್ ಅವರ ಒತ್ತಾಯವಾಗಿತ್ತು.
ಇನ್ನು ಲಿಂಗಾಯತದಿಂದ ಕೆ. ಷಡಕ್ಷರಿ ಅವರಿಗೆ ಮಂತ್ರಿ ಸ್ಥಾನ ಕೊಡಿಸುವ ಇಚ್ಛೆ ಇತ್ತು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಜತೆ ಚರ್ಚೆ ಮಾಡಿದ್ದರು.
ಆದರೆ, ಕೊನೆಗಳಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರ ಮಾತಿಗೆ ಸೊಪ್ಪು ಹಾಕದ ಹಿನ್ನಲೆಯಲ್ಲಿ ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆಗೆ ಪರಮೇಶ್ವರ್ ಅವರು ತಮ್ಮ ಆಪ್ತ ಜಿ.ಸಿ. ಚಂದ್ರಶೇಖರ್ ಹೆಸರು ಶಿಫಾರಸು ಮಾಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಿ.ಎಂ ಇಬ್ರಾಹಿಂಗೆ ಪರಿಷತ್ ಸದಸ್ಯ ಸ್ಥಾನ ನೀಡಿದ್ದರಿಂದ ಪರಮೇಶ್ವರ್ ಅಸಮಾಧಾನಕ್ಕೆ ಇದು ಒಂದು ಕಾರಣ ಎನ್ನಲಾಗಿದೆ.