ಅನರ್ಹರ ತೀರ್ಪು; ಸುಪ್ರೀಂಕೋರ್ಟ್ ಮುಂದಿದ್ದ 4 ಪ್ರಶ್ನೆಗಳು
ಬೆಂಗಳೂರು, ನವೆಂಬರ್ 13 : ಬುಧವಾರ ಬೆಳಗ್ಗೆ ಕರ್ನಾಟಕದ ರಾಜಕೀಯ ಲೆಕ್ಕಾಚಾರವೇ ಬೇರೆಯಾಗಿತ್ತು. ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಳಿಕ ಮಧ್ಯಾಹ್ನದ ಲೆಕ್ಕಾಚಾರವೇ ಬದಲಾಗಿ ಹೋಗಿದೆ. ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಾಲಯ ಅನರ್ಹ ಶಾಸಕರಿಗೂ ರಿಲೀಫ್ ನೀಡಿದೆ.
ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಅನರ್ಹ ಶಾಸಕರ ಬಗ್ಗೆ ತೀರ್ಪು ನೀಡಿದೆ. 109 ಪುಟಗಳ ತೀರ್ಪಿನಲ್ಲಿ ವಿವಿಧ ಅಂಶಗಳನ್ನು ನ್ಯಾಯಾಲಯ ಉಲ್ಲೇಖ ಮಾಡಿದೆ. ಅನರ್ಹಗೊಂಡ ಶಾಸಕರು ಚುನಾವಣಾ ಕಣಕ್ಕಿಳಿಯಲು ಅವಕಾಶವನ್ನು ನೀಡಲಾಗಿದೆ.
15 ಕ್ಷೇತ್ರದ ಉಪ ಚುನಾವಣೆ ಚಿತ್ರಣ ಬದಲಿಸಿದ ತೀರ್ಪು; 5 ಅಂಶಗಳು
ಅನರ್ಹ ಶಾಸಕರು, ಸ್ಪೀಕರ್, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಒಟ್ಟು 9 ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದವು. ಸುಮಾರು 1 ತಿಂಗಳ ಕಾಲ ವಾದ ಮಂಡನೆಯನ್ನು ಆಲಿಸಿದ ನ್ಯಾಯಾಲಯ ಇಂದು ಅಂತಿಮ ತೀರ್ಪನ್ನು ನೀಡಿದೆ. ಅರ್ಜಿಗಳನ್ನು ಇತ್ಯರ್ಥಗೊಳಿಸಿದೆ.
ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ತೀರ್ಪು: ಮುಖ್ಯಾಂಶಗಳು
ತನ್ನ ಆದೇಶವನ್ನು ನೀಡುವ ಮೊದಲು ನ್ಯಾಯಾಲಯ ನಾಲ್ಕು ಪ್ರಶ್ನೆಗಳನ್ನು ಹಾಕಿಕೊಂಡಿತ್ತು. ಇಡೀ ತೀರ್ಪಿನಲ್ಲಿ ಈ ನಾಲ್ಕು ಪ್ರಶ್ನೆಗಳಿಗೆ ಕೋರ್ಟ್ ಉತ್ತರಗಳನ್ನು ನೀಡುತ್ತಾ ಹೋಗಿದೆ. ಬೇರೆ-ಬೇರೆ ಪ್ರಕರಣದಲ್ಲಿ ಇದುವರೆಗೂ ಪ್ರಕಟವಾದ 120ಕ್ಕೂ ಅಧಿಕ ತೀರ್ಪುಗಳನ್ನು ಉಲ್ಲೇಖ ಮಾಡಿದೆ.
ಸುಪ್ರೀಂ ತೀರ್ಪು; ಅನರ್ಹರಿಗೆ ಸಂತೋಷ, ಸವದಿಗೆ ಸಂಕಷ್ಟ!
ಆರ್ಟಿಕಲ್ 32ರ ಅನ್ವಯ ಪ್ರಶ್ನೆ ಮಾಡಬಹುದೇ?
ಶಾಸಕರು ವಿಧಾನಸಭೆಯ ಸ್ಫೀಕರ್ ನೀಡಿದ ಆದೇಶವನ್ನು ಸಂವಿಧಾನದ ಆರ್ಟಿಕಲ್ 32ರ ಅನ್ವಯ ಪ್ರಶ್ನೆ ಮಾಡಬಹುದೇ? ಎಂಬುದು ಸುಪ್ರೀಂಕೋರ್ಟ್ ಮುಂದಿನ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಸುಧೀರ್ಘ ತೀರ್ಪಿನಲ್ಲಿ ನ್ಯಾಯಾಲಯ ಉತ್ತರ ನೀಡಿದೆ. ಶಾಸಕರ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಸ್ಪೀಕರ್ ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ.
ರಾಜೀನಾಮೆ ಬದಿಗೊತ್ತಿ ಅನರ್ಹಗೊಳಿಸಬಹುದೇ?
ರಾಜೀನಾಮೆ ನೀಡಿರುವಾಗ ಅದನ್ನು ಬದಿಗೊತ್ತಿ, ಅರ್ಜಿದಾರರನ್ನು ಅನರ್ಹಗೊಳಿಸಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂಬುದು 2ನೇ ಪ್ರಶ್ನೆಯಾಗಿತ್ತು. ಹಲವು ಕೇಸುಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ ಸ್ಪೀಕರ್ ಅನರ್ಹಗೊಳಿಸಿರುವುದು ಸರಿಯಾಗಿದೆ ಎಂದು ಹೇಳಿದೆ. ಅನರ್ಹತೆ ಆದೇಶಕ್ಕೆ ಮನ್ನಣೆ ನೀಡಿದೆ.
ಸ್ಪರ್ಧಿಸದಂತೆ ತಡೆಯಬಹುದೇ?
ಕಾನೂನಿನ ಅನ್ವಯ ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಬಹುದು. ಆದರೆ, ಅವರು ಮುಂದೆ ಚುನಾವಣಾ ಕಣಕ್ಕಿಳಿಯದಂತೆ ನಿರ್ಬಂಧಿಸುವ ಹಕ್ಕು ಅವರಿಗೆ ಇದೆಯೇ? ಎಂಬುದು ಮತ್ತೊಂದು ಪ್ರಶ್ನೆಯಾಗಿತ್ತು. ಇಲ್ಲಿ ಸ್ಫೀಕರ್ಗೆ ಹಿನ್ನಡೆಯಾಗಿದ್ದು, ಶಾಸಕರು ಚುನಾವಣೆಗೆ ಸ್ಪರ್ಧಿಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ.
ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ?
ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುವಾಗಲೇ ಈ ಅರ್ಜಿಯನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಬೇಕೆ? ಎಂದು ವಾದ ನಡೆದಿತ್ತು. ಆಗಲೇ ತ್ರಿ ಸದಸ್ಯ ಪೀಠ ಅರ್ಜಿಯನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಿತ್ತು.