ಆತಂಕದಲ್ಲಿಯೇ ದೆಹಲಿ ವಿಮಾನ ಹತ್ತಿದ ಅನರ್ಹ ಶಾಸಕರು
ಬೆಂಗಳೂರು, ನವೆಂಬರ್ 12 : ಉಪ ಚುನಾವಣೆ ಅಧಿಸೂಚನೆ ಪ್ರಕಟ, ಬಿಜೆಪಿಯಲ್ಲಿ ಟಿಕೆಟ್ ನೀಡುವುದಕ್ಕೆ ವಿರೋಧ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಇರುವ ಆತಂಕ ಎಲ್ಲದರ ನಡುವೆಯೇ ಅನರ್ಹ ಶಾಸಕರು ಇಂದು ದೆಹಲಿಗೆ ತೆರಳಿದ್ದಾರೆ.
ಕರ್ನಾಟಕದ 14 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ನವೆಂಬರ್ 13ರ ಬೆಳಗ್ಗೆ ತೀರ್ಪು ಪ್ರಕಟವಾಗಲಿದ್ದು, ಶಾಸಕರು ಮಂಗಳವಾರ ದೆಹಲಿ ವಿಮಾನವೇರಲಿದ್ದಾರೆ.
17 ಅನರ್ಹ ಶಾಸಕರ ಅರ್ಜಿ; ಸುಪ್ರೀಂ ತೀರ್ಪಿಗೆ ದಿನಾಂಕ ನಿಗದಿ
ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಬುಧವಾರ ಬೆಳಗ್ಗೆ 10.30ಕ್ಕೆ ತೀರ್ಪನ್ನು ಪ್ರಕಟಿಸಲಿದೆ. ಅನರ್ಹ ಶಾಸಕರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ತೀರ್ಪು ಮಹತ್ವ ಪಡೆದಿದೆ.
ಅನರ್ಹ ಶಾಸಕರಿಗೆ ಮತ್ತೊಂದು ಆಘಾತ ನೀಡಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಕರ್ನಾಟಕದ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಈಗಾಗಲೇ 15 ಅನರ್ಹ ಶಾಸಕರ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಅಧಿಸೂಚನೆ ನವೆಂಬರ್ 11ರಂದು ಪ್ರಕಟವಾಗಿದೆ.
ಮುಖ್ಯಮಂತ್ರಿ ಸ್ಥಾನ ಬೇಕಿರಲಿಲ್ಲ, ಅನರ್ಹ ಶಾಸಕರನ್ನು ನಂಬಿಸಿ ತಪ್ಪು ಮಾಡಿದೆ: ಯಡಿಯೂರಪ್ಪ
ಉಪ ಚುನಾವಣೆಗೆ ಸ್ಪರ್ಧಿಸಬಹುದೇ?
ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಜುಲೈ ತಿಂಗಳಿನಲ್ಲಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಆದೇಶ ಅನ್ವಯ 15ನೇ ವಿಧಾನಸಭೆ ಅವಧಿ ಮುಗಿಯುವ ತನಕ ಅನರ್ಹಗೊಂಡಿರುವ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇದನ್ನು ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಉಪ ಚುನಾವಣಾ ಕಣದ ಕುತೂಹಲ
ಒಂದು ವೇಳೆ ಸುಪ್ರೀಂಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದರೆ ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಗೆ ಶಾಸಕರು ಸ್ಪರ್ಧೆ ಮಾಡುವಂತಿಲ್ಲ. ಆಗ ಕುಟುಂಬ ಸದಸ್ಯರನ್ನು ಕಣಕ್ಕಿಳಿಸಲು ಅವರು ಚಿಂತನೆ ನಡೆಸಿದ್ದಾರೆ. ನವೆಂಬರ್ 18ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ.
ಟಿಕೆಟ್ ನೀಡಲು ವಿರೋಧ
ಹಲವು ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಉಪ ಚುನಾವಣೆ ಬಿಜೆಪಿ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗುತ್ತಿದೆ. ಆದ್ದರಿಂದ, ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿಯೇ ಬರಲಿದೆ ಎಂದು ಅನರ್ಹರು ಭರವಸೆ ಹೊಂದಿದ್ದಾರೆ. ಕರ್ನಾಟಕವೇ ತೀರ್ಪಿಗಾಗಿ ಕಾದು ಕುಳಿತಿದೆ.
ಯಡಿಯೂರಪ್ಪಗೆ ಸಂಕಟ
ಒಂದು ವೇಳೆ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದರೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೇಲೆ ಸಂಪುಟ ವಿಸ್ತರಣೆಯ ಒತ್ತಡ ಬೀಳಲಿದೆ. 17 ಅನರ್ಹ ಶಾಸಕರು ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಯಡಿಯೂರಪ್ಪ ಮೇಲೆ ಒತ್ತಡ ಹೇರಲಿದ್ದಾರೆ.