ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ದೆಹಲಿಗೆ ಅನರ್ಹ ಶಾಸಕರು!
ಬೆಂಗಳೂರು, ಆಗಸ್ಟ್ 22 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಅನರ್ಹ ಶಾಸಕರು ದೆಹಲಿ ವಿಮಾನ ಹತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಆಗುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸಂಜೆಯೇ ಎಚ್. ವಿಶ್ವನಾಥ್, ಎಸ್. ಟಿ. ಸೋಮಶೇಖರ್, ಬೈರತಿ ಬಸವರಾಜ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಉಚ್ಛಾಟನೆಗೊಂಡಿರುವ ಅನರ್ಹ ಶಾಸಕರು ದೆಹಲಿ ತಲುಪಿದ್ದಾರೆ.
17 ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ
ಇಂದು ಶಾಸಕರು ವಕೀಲರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಗಳು ಸುಪ್ರೀಂಕೋರ್ಟ್ ಮುಂದಿವೆ. ತುರ್ತಾಗಿ ಅರ್ಜಿಗಳನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕರ್ನಾಟಕ ಕಾಂಗ್ರೆಸ್ನ 14 ಮಾಜಿ ಶಾಸಕರು ಉಚ್ಛಾಟನೆ
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣರಾದ ಶಾಸಕರಿಗೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. "ನಿಮ್ಮ ಪರವಾಗಿ ತೀರ್ಪು ಬಂದರೆ 10 ದಿನದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳುವೆ" ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
14 ಶಾಸಕರ ಅನರ್ಹತೆ : ಎಚ್. ವಿಶ್ವನಾಥ್ ಹೇಳಿದ್ದೇನು?
ಬಿಜೆಪಿ ಅನರ್ಹ ಶಾಸಕರನ್ನು ಕಡೆಗಣಿಸಿಲ್ಲ. ಮಾಜಿ ಸಚಿವ ಸಿ. ಪಿ. ಯೋಗೇಶ್ವರ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪ ಸಂಪುಟಕ್ಕೆ ಈಗ 17 ಶಾಸಕರು ಮಾತ್ರ ಸೇರ್ಪಡೆಯಾಗಿದ್ದು, ಅನರ್ಹ ಶಾಸಕರಿಗಾಗಿಯೇ ಸ್ಥಾನಗಳನ್ನು ಉಳಿಸಿಕೊಳ್ಳಲಾಗಿದೆ.
ಶಾಸಕರು ಅನರ್ಹಗೊಂಡಿದ್ದರೂ ಕ್ಷೇತ್ರಗಳ ಕಾಮಗಾರಿ ಟೆಂಡರ್, ವರ್ಗಾವಣೆ ವಿಚಾರದಲ್ಲಿ ಅವರ ಸಲಹೆ ಪಡೆಯಬೇಕು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.
"ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಬಂದಿಲ್ಲ. ವಕೀಲರನ್ನು ಭೇಟಿ ಮಾಡುತ್ತೇವೆ" ಎಂದು ಯಶವಂತಪುರ ಕ್ಷೇತ್ರದ ಅನರ್ಹ ಶಾಸಕ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.
ಬಿಜೆಪಿ ಅನರ್ಹ ಶಾಸಕರಿಗೆ ಕಾನೂನು ಹೋರಾಟದಲ್ಲಿ ಅಗತ್ಯ ನೆರವನ್ನು ನೀಡುವ ಭರವಸೆ ಕೊಟ್ಟಿದೆ. ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಎಂದು ನಡೆಯಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.