ಅನರ್ಹ ಶಾಸಕರಿಗೆ ಬಿಜೆಪಿಯಲ್ಲೂ ವಿರೋಧ: ಅನರ್ಹತೆಯಿಂದ ಅತಂತ್ರದ ಕಡೆಗೆ
ಬೆಂಗಳೂರು, ಸೆಪ್ಟೆಂಬರ್ 28: ಭಾರಿ ಹುರುಪಿನಲ್ಲಿ ರಾಜೀನಾಮೆ ನೀಡಿ ಸರ್ಕಾರವನ್ನು ಕೆಡವಿ ಬಿಜೆಪಿ ನೆರಳಲ್ಲಿ ಸಚಿವ ಸ್ಥಾನದ ಕನಸು ಕಾಣುತ್ತಾ ಹಾಯಾಗಿದ್ದ ಅನರ್ಹ ಶಾಸಕರಿಗೆ ದಿನಗಳು ಕಳೆದಂತೆ ಭ್ರಮನಿರಸನವಾಗುತ್ತಿದೆ.
ಆರಂಭದಲ್ಲಿ ಅನರ್ಹ ಶಾಸಕರನ್ನು ತಲೆಯ ಮೇಲೆ ಹೊತ್ತು ಮೆರೆಸಿದ್ದ ಬಿಜೆಪಿ ಅಧಿಕಾರ ದೊರಕಿ ಸಂಪುಟ ವಿಸ್ತರಣೆ ಮುಗಿಯುತ್ತಿದ್ದಂತೆ ನಿಧಾನಕ್ಕೆ ಪಕ್ಕಕ್ಕೆ ಸರಿಸುತ್ತಿದೆ. ಇದು ಅನರ್ಹ ಶಾಸಕರಿಗೂ ಅರಿವಿಗೆ ಬಂದಿದೆ.
ಅನರ್ಹ ಶಾಸಕರಿಗೆ ಎರಡು ತಿಂಗಳ ಹಿಂದೆ ಇದ್ದ ಮೌಲ್ಯ ಈಗ ಇಲ್ಲ, ಇದಕ್ಕೆ ತಾಜಾ ಉದಾಹರಣೆಯೆಂದರೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವಧಿ ನಿನ್ನೆ ನೀಡಿರುವ ಹೇಳಿಕೆ.
ಉಪ ಚುನಾವಣೆ ದಿನ ಮರುನಿಗದಿ: ಡಿ. 5ಕ್ಕೆ ಚುನಾವಣೆ
ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರ ಬಗ್ಗೆ ಮಾತನಾಡಿದ್ದ ಡಿಸಿಎಂ ಲಕ್ಷ್ಮಣ ಸವದಿ, 'ಅವನೊಬ್ಬ ದರಿದ್ರ ಅವನ ಬಗ್ಗೆ ಏಕೆ ಮಾತನಾಡುತ್ತೀರಿ' ಎಂದಿದ್ದಾರೆ. ಲಕ್ಷ್ಮಣ್ ಸವದಿ ಅವರಿಗೆ ಅನರ್ಹರ ಬಗ್ಗೆ ಇರುವ ಅಸಹನೆಯೇ ಬಿಜೆಪಿಯ ಬಹುತೇಕ ಶಾಸಕರಿಗೆ ಇದೆ ಎನ್ನಲಾಗುತ್ತಿದೆ.
ಅನರ್ಹರ ಬಗ್ಗೆ ಅಸಮಾಧಾನ ನಳಿನ್ ಕಟೀಲ್ಗೆ?
ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಂತೂ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಅವರ ಬೆನ್ನೆಲುಬಾಗಿರುವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಶ್ ಸಹ ಅನರ್ಹ ಶಾಸಕರ ವಿರುದ್ಧ ನಿಂತವರೇ ಆಗಿದ್ದಾರೆ.
ಅನರ್ಹರ ಪರ ಯಡಿಯೂರಪ್ಪ ಅಚಲ
ಯಡಿಯೂರಪ್ಪ ಅವರು ಅನರ್ಹ ಶಾಸಕರ ಪರವಾಗಿ ಅಚಲವಾಗಿದ್ದಾರೆಯಾದರೂ, ಅನರ್ಹ ಶಾಸಕರ ವಿರುದ್ಧ ಬಣದ ಶಕ್ತಿ ಕಡಿಮೆಯಾದದ್ದೇನೂ ಅಲ್ಲ. ಅನರ್ಹ ಶಾಸಕರ ವಿರುದ್ಧ ಬಣವು ಬಿಜೆಪಿ ಶಾಸಕರಲ್ಲಿ ಇವರ ಬಗ್ಗೆ ಅಸಡ್ಡೆಯನ್ನು ಅಸಮಾಧಾನವನ್ನು ಹುಟ್ಟುಹಾಕಲು ಸಫಲವಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್
ಅನರ್ಹ ಶಾಸಕರಿಂದಾಗಿ ಬಿಜೆಪಿ ಹಿರಿಯರು ಅವಕಾಶ ವಂಚಿತ
ಅನರ್ಹ ಶಾಸಕರ ದೆಸೆಯಿಂದಾಗಿ ಬಿಜೆಪಿಯ ಹಲವು ಹಿರಿಯ ಶಾಸಕರು ಸಚಿವ ಸ್ಥಾನ ವಂಚಿತರಾಗಿದ್ದಾರೆ. ಹಲವು ಬಿಜೆಪಿಯ ನಿಷ್ಠಾವಂತ ಮುಖಂಡರು ಉಪಚುನಾವಣೆಯಲ್ಲಿ ಟಿಕೆಟ್ ಕಳೆದುಕೊಳ್ಳುವಂತಾಗಿದೆ. ಕೆಲವು ಹಿರಿಯ ಶಾಸಕರು ಈಗಾಗಲೇ ಬಹಿರಂಗವಾಗಿಯೇ ಅನರ್ಹರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಚುನಾವಣೆ ನಡೆದಿದ್ದರೆ ಒಳ್ಳೆಯದಿತ್ತು: ರಮೇಶ್ ಜಾರಕಿಹೊಳಿ
ಮುಂದಾಳತ್ವ ವಹಿಸಿದ್ದವರು ಹಿಂದೆ ಸರಿದಿದ್ದಾರೆ
ಮೈತ್ರಿ ಸರ್ಕಾರ ಕೆಡವುವ ಸಮಯದಲ್ಲಿ ಮುಂದಿನ ಸಾಲಿನಲ್ಲಿ ನಿಂತು ಜವಾಬ್ದಾರಿ ಹೊತ್ತಿದ್ದ ಬೆಂಗಳೂರಿನ ಹಲವು ಬಿಜೆಪಿ ನಾಯಕರು ಆ ನಂತರ ಸಂಪುಟ ವಿಸ್ತರಣೆಯಲ್ಲಿ ತಮಗೆ ಆದ ಹಿನ್ನೆಡೆಯಿಂದಾಗಿ ನಿಧಾನಕ್ಕೆ ಹಿಂದೆ ಸರಿದಿದ್ದು, ಅನರ್ಹರ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.
ಹಲವು ಪ್ರಮುಖ ನಾಯಕರು ದೂರ ಉಳಿದಿದ್ದಾರೆ
ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಸಿಪಿ ಯೋಗೇಶ್ವರ್, ಶ್ರೀರಾಮುಲು, ಪ್ರೀತಂ ಗೌಡ ಇನ್ನೂ ಕೆಲವರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮ ನಿರೀಕ್ಷಿಗೆ ತಕ್ಕ ಸ್ಥಾನ ಸಿಗದ ಕಾರಣ ಅವರು ಉತ್ಸಾಹ ಕಳೆದುಕೊಂಡಿದ್ದು. ಅನರ್ಹರಿಗೂ ತಮಗೂ ಸಂಬಂಧಿವಿಲ್ಲದಂತೆ ಕೆಲವರು ವರ್ತಿಸುತ್ತಿದ್ದಾರೆ.
ದನಿ ಎತ್ತಲು ಅಶಕ್ತರಾಗಿದ್ದಾರೆ ರಮೇಶ್ ಜಾರಕಿಹೊಳಿ
ಅನರ್ಹ ಶಾಸಕರ ಪರಿಸ್ಥಿತಿ ಹೇಗಾಗಿದೆಯೆಂದರೆ. ಸಿದ್ದರಾಮಯ್ಯ ವಿರುದ್ಧವೇ ಉರಿದು ಬಿದ್ದು ಹೇಳಿಕೆ ನೀಡುತ್ತಿದ್ದ ರಮೇಶ್ ಜಾರಕಿಹೊಳಿಯಂತಹಾ ಗಟ್ಟಿ ನಾಯಕರೇ, ತಮ್ಮ ಆಪ್ತ ಮಹೇಶ್ ಕುಮಟ್ಟಳ್ಳಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಲಕ್ಷ್ಮಣ್ ಸವದಿ ವಿರುದ್ಧ ಹೇಳಿಕೆ ನೀಡದಂತಹ ಸ್ಥಿತಿ ತಲುಪಿದ್ದಾರೆ. ಸವದಿ ವಿರುದ್ಧ ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ರಮೇಶ್ ಜಾರಕಿಹೊಳಿ.
ಯಡಿಯೂರಪ್ಪ ಬಿಟ್ಟರೆ ಬೇರೆ ಆಪ್ತರಿಲ್ಲ ಅನರ್ಹರಿಗೆ
ಅನರ್ಹ ಶಾಸಕರಿಗೆ ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟು ಇನ್ನಾರೂ ಆಪ್ತರಿಲ್ಲದಾಗಿದ್ದಾರೆ. ಅನರ್ಹ ಶಾಸಕರಿಗೆ ಅವರ ಕ್ಷೇತ್ರದಲ್ಲಿಯೇ ಬಿಜೆಪಿ ತಿರುಗಿ ಬೀಳುತ್ತಿದ್ದು, ಅಸಹಕಾರ ಅನುಭವಕ್ಕೆ ಬರುತ್ತಿದೆ. ಇದು ಅನರ್ಹರನ್ನು ಧೃತಿಗೆಡಿಸಿದ್ದು, ಅನರ್ಹರು ಬಿಜೆಪಿಗೆ ಒತ್ತೆಯಾಳಾದ ಭಾವ ಅನುಭವಿಸುತ್ತಿದ್ದಾರೆ. ಉಪಚುನಾವಣೆ ಡಿಸೆಂಬರ್ 5 ಕ್ಕೆ ನಡೆಯಲಿದ್ದು, ಆ ವೇಳೆಗೆ ಅನರ್ಹರ ಸ್ಥಿತಿ ಏನಾಗಿರುತ್ತದೆಯೋ ಕಾದು ನೋಡಬೇಕಿದೆ.