Big Breaking: ಅನರ್ಹ ಶಾಸಕರು ಉಪ ಚುನಾವಣೆ ಸರ್ಧಿಸಲು ಅವಕಾಶವಿಲ್ಲ
ಬೆಂಗಳೂರು, ಸೆಪ್ಟೆಂಬರ್ 21: ಅನರ್ಹ ಶಾಸಕರಿಗೆ ಭಾರಿ ಆಘಾತವನ್ನು ಚುನಾವಣೆ ಆಯೋಗ ನೀಡಿದ್ದು, ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹೇಳಿದ್ದಾರೆ.
ಉಪಚುನಾವಣೆ ಘೋಷಣೆಯಾದ ವಿಧಾನಸಭೆ ಕ್ಷೇತ್ರಗಳ ಪಟ್ಟಿ
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು, ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಬಹುಪಾಲು ಮಸುಕಾದಂತಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜೀವ್ ಕುಮಾರ್, 'ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸ್ಪೀಕರ್ ಅವರು ತಡೆ ಒಡ್ಡಿದ್ದಾರೆ. ಅನರ್ಹ ಶಾಸಕರ ಮರುಪರಿಶೀಲನಾ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲವೆಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ಅನರ್ಹ ಶಾಸಕರ ವಿಚಾರವಾಗಿ ನಾನು ಈಗ ಏನೂ ಹೇಳಲಾರೆ. ಆದರೆ ಪ್ರಸ್ತುತ ಸನ್ನಿವೇಶದ ಪ್ರಕಾರ ಅವರು ಉಪ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಇಲ್ಲದವರಾಗಿದ್ದಾರೆ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ಅನರ್ಹತೆ ಬಗ್ಗೆ ಮರುಪರೀಶಲನೆ ಅರ್ಜಿಯನ್ನು ಅನರ್ಹ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಹಾಕಿದ್ದು, ಅದರ ವಿಚಾರಣೆ ಸೋಮವಾರ ನಡೆಯಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ತಡೆ ಆಜ್ಞೆ ನೀಡಿದರೆ, ಚುನಾವಣೆ ತಡೆ ಆಗಲಿದೆ. ಹಾಗೊಂದು ವೇಳೆ ವಿಚಾರಣೆ ಇನ್ನಷ್ಟು ತಡವಾದರೆ ಅನರ್ಹ ಶಾಸಕರು ಚುನಾವಣೆ ಸ್ಪರ್ಧಿಸಲಾಗುವುದಿಲ್ಲ.