ಕೋವಿಡ್ ಸೋಂಕು ತಡೆಯಲು ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿ ಜೈವಿಕ ಸುರಂಗ
ಬೆಂಗಳೂರು, ಏ. 10: ಕೊರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಲಾಕ್ಡೌನ್ ಜಾರಿಗೆ ತಂದಿದೆ. ಆದರೆ ರೇಷ್ಮೆ ಬೆಳೆಯುವ ರೈತರು ರೇಷ್ಮೆ ಮಾರಾಟ ಮಾಡಲು ಮಾರುಕಟ್ಟೆಗೆ ಬರಲೇಬೇಕಾದ ಅನಿವಾರ್ಯತೆ ಇರುತ್ತದೆ. ಕೊರೊನಾ ವೈರಸ್ ಆತಂಕದಲ್ಲಿ ಮಾರುಕಟ್ಟೆಗೆ ಬರುವ ರೈತರ ಸಹಾಯಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಬಂದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಬೆಂಗಳೂರಿನ ಮಲ್ಟಿಫ್ಲೆಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಸಹಾಯದಿಂದ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಿಸಿರುವ ಜೈವಿಕ ಸೋಂಕು ನಿವಾರಣಾ ಸುರಂಗವನ್ನು ಸಚಿವ ಡಾ. ಸುಧಾಕರ್ ಉದ್ಘಾಟನೆ ಮಾಡಿದ್ದಾರೆ.
ರಾಜ್ಯದ ಹಲವೆಡೆಡ ಇಂತಹ ಸೋಂಕು ನಿವಾರಣಾ ಸುರಂಗಗಳನ್ನು ನಿರ್ಮಿಸಲಾಗಿದೆ. ಆದರೆ ಶಿಡ್ಲಘಟ್ಟದಲ್ಲಿ ನಿರ್ಮಾಣ ಮಾಡಿರುವ ಸುರಂಗ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಮುನುಷ್ಯರ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
ಸಂಪೂರ್ಣ ಜೈವಿಕ ಉತ್ಪನ್ನಗಳನ್ನ ಬಳಸಿ ಫಾಗಿಂಗ್: ಸಾಮಾನ್ಯವಾಗಿ ಸೋಂಕು ನಿವಾರಣಾ ಸುರಂಗಗಳಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ಫಾಗಿಂಗ್ ಮಾಡಲಾಗುತ್ತದೆ. ಇದರಿಂದ ಅಡ್ಡಪರಿಣಾಮಗಳು ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ಸೋಂಕು ನಿವಾರಣಾ ಸುರಂಗದಲ್ಲಿ ಸಂಪೂರ್ಣ ಜೈವಿಕ ಉತ್ಪನ್ನಗಳನ್ನು ಬಳಿಸಿ ಫಾಗಿಂಗ್ ಮಾಡುಲಾಗುತ್ತದೆ. ಇದರಿಂದ ಮನುಷ್ಯರ ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಜೈವಿಕ ಉತ್ಪನ್ನಗಳನ್ನು ಬಳಸಿ ಸುರಂಗದಲ್ಲಿ ಫಾಗಿಂಗ್ ಮಾಡುವುದರಿಂದ ರೋಗಕಾರಕ ಸೂಕ್ಷ್ಮಾಣುಗಳನ್ನು ನಿವಾರಣೆ ಮಾಡಬಹುದು, ಇದರಿಂದ ಪರಿಸರದ ಮೇಲೆಯೂ ಹಾನಿಯಾಗುವುದಿಲ್ಲ.
ಇನ್ನು ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ಜನರ ಮೇಲೆ ಫಾಗಿಂಗ್ ಮಾಡುವುದರಿಂದ ತಲೆ ಸುತ್ತುವುದು, ಚರ್ಮದ ತುರಿಕೆ ಜೊತೆಗೆ ಕೋವಿಡ್ 19 ಸೋಂಕಿನ ಲಕ್ಷಣಗಳಾದ ಗಂಟಲು ಕೆರೆತ ಮತ್ತು ಕೆಮ್ಮು ಬರುವ ಸಾಧ್ಯತೆಗಳಿರುತ್ತವೆ. ಆದರೆ ಇಲ್ಲಿ ಜೈವಿಕ ವಸ್ತುಗಳ ಬಳಕೆ ಮಾಡುತ್ತಿರುವುದರಿಂದ ಅಂತಹ ಅಡ್ಡಪರಿಣಾಮಗಳು ಆಗುವುದಿಲ್ಲ. ಸಚಿವ ಡಾ. ಸುಧಾಕರ್ ಸ್ವತಃ ವೈದ್ಯರಾಗಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಜೈವಿಕ ಉತ್ಪನ್ನ ಬಳಸುವ ಸುರಂಗ ನಿರ್ಮಾಣಕ್ಕೆ ಸೂಚಿಸಿದ್ದರು.