ಮುಖ್ಯಮಂತ್ರಿ 'ಯಡಿಯೂರಪ್ಪ'ರನ್ನು ಕೌರವರಿಗೆ ಹೋಲಿಸಿದ ಶಾಸಕ ಯತ್ನಾಳ್!
ಬೆಂಗಳೂರು, ಜೂ. 30: ಇನ್ನೇನು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವುದು ಮುಗಿಯಿತು ಎನ್ನುತ್ತಿರುವಾಗಲೇ ರಾಜ್ಯದಲ್ಲಿ ಮತ್ತೊಮ್ಮೆ ಅದೇ ಚರ್ಚೆ ರಂಗೇರಿದೆ. "ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಮುಗಿದ ಅದ್ಯಾಯ" ಎಂದು ಮೈಸೂರಿನಲ್ಲಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಯನ್ನು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಅವರನ್ನು ಕೌವರವರೊಂದಿಗೆ ಹೋಲಿಕೆ ಮಾಡುವ ಮೂಲಕ ಮತ್ತೊಂದು ಹಂತದ ಚರ್ಚೆಗೆ ನಾಂದಿ ಹಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವ ಮುರುಗೇಶ್ ನಿರಾಣಿ ಅವರ ಮೇಲೆ ಪರೋಕ್ಷ ವಾಗ್ದಾಳಿಯನ್ನು ಯತ್ನಾಳ್ ಅವರು ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿಯ ಔಚಿತ್ಯವನ್ನೇ ಪ್ರಶ್ನೆ ಮಾಡಿದ್ದಾರೆ. ಅರುಣ್ ಸಿಂಗ್ ಅವರನ್ನು ಪ್ರಶ್ನೆ ಮಾಡುವ ಮೂಲಕ ಶಾಸಕ ಯತ್ನಾಳ್ ಅವರು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ
ಅಷ್ಟಕ್ಕೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಅವರು ಪರಸ್ಪರ ವಾಗ್ದಾಳಿ ಮಾಡಿಕೊಂಡಿದ್ದು ಯಾಕೆ? ಮುಂದಿದೆ ಸಂಪೂರ್ಣ ಮಾಹಿತಿ!
ಮತ್ತೆ ನಾಯಕತ್ವ ಪ್ರಶ್ನೆ ಮಾಡಿದ ಶಾಸಕ ಯತ್ನಾಳ್!
"ಉಳಿದ ಅವಧಿಗೆ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ"ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ ಬಳಿಕ ಬಿಜೆಪಿ ಬಿಕ್ಕಟ್ಟು ಶಮನವಾಗಲಿದೆ ಎಂದುಕೊಳ್ಳಲಾಗಿತ್ತು. ಆದರೆ ಆ ಬಿಕ್ಕಟ್ಟು ಶಮನವಾಗುವ ಬದಲು ಒಳಗೊಳಗೆ ಮತ್ತಷ್ಟು ಪ್ರಬಲವಾಗುತ್ತಿದೆ. ಅದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೊಟ್ಟಿರುವ ಹೇಳಿಕೆಯೆ ಸಾಕ್ಷಿಯಾಗಿದೆ. ವಿಧಾನಸಭೆ ಹಕ್ಕು ಬಾದ್ಯತಾ ಸಮಿತಿ ಸಭೆಯಲ್ಲಿ ಭಾಗವಹಿಸಲು ವಿಧಾನಸೌಧಕ್ಕೆ ಆಗಮಿಸಿದ್ದ ಸಮಿತಿ ಅಧ್ಯಕ್ಷ, ಶಾಸಕ ಯತ್ನಾಳ್ ಅವರು ಸಭೆ ಬಳಿಕ ಮಾತನಾಡಿದ್ದಾರೆ. ವಿಜಯೇಂದ್ರ ಅವರ, "ನಾಯಕತ್ವ ಬದಲಾವಣೆ ಮುಗಿದ ಅದ್ಯಾಯ" ಎಂಬ ಹೇಳಿಕೆಗೆ ಯತ್ನಾಳ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕೌರವರ ನಾಶ ಹೇಗಾಯಿತು?
ಮುಖ್ಯಮಂತ್ರಿಯ ಮಗನಾಗಿದ್ದರೆ ನಾನೂ ಹಾಗೆ ಹೇಳುತ್ತಿದ್ದೆ ಎಂದು ವಿಜಯೇಂದ್ರ ಅವರ ಹೇಳಿಕೆಗೆ ಶಾಸಕ ಯತ್ನಾಳ್ ಲೇವಡಿ ಮಾಡಿದ್ದಾರೆ. ಹಕ್ಕು ಬಾದ್ಯತಾ ಸಮಿತಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಜಕಾರಣದಲ್ಲಿ ಎಲ್ಲವೂ ನಡೆಯುತ್ತದೆ. ವಿಜಯೇಂದ್ರ, ಯಡಿಯೂರಪ್ಪ ಅವರ ಮಗ ಆಗಿರುವುದರಿಂದ ಹಾಗೇ ಹೇಳಿದ್ದಾರೆ ಅಷ್ಟೇ" ಎಂದಿದ್ದಾರೆ.
"ಹಿಂದಿನ ಇತಿಹಾಸ ತೆಗೆದುನೋಡಿ, ಹಾಲಿ ಮುಖ್ಯಮಂತ್ರಿ ಜೈಲಿಗೆ ಹೋದ ಉದಾಹರಣೆಗಳಿವೆ. ರಾಜಾಹುಲಿ ಅಂತ ಹೊಗಳಬೇಡಿ. ಯಾರು ಯಾರು? ಜೈಲಿಗೆ ಹೋಗಿದ್ದರು ಪಟ್ಟಿ ತೆಗೆಯಿರಿ. ಪ್ರಧಾನಿ ಮೋದಿ ಅವರಿಂದ ಭವಿಷ್ಯದ ಭಾರತ ನಿರ್ಮಾಣವಾಗುತ್ತಿದೆ, ಇಲ್ಲಿ ಭ್ರಷ್ಟಾಚಾರಕ್ಕೆ ನಮ್ಮ ಪಕ್ಷ ಯಾವತ್ತೂ ಬಿಡಲ್ಲ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಕೌರವರ ನಾಶ ಹೇಗಾಯಿತು? ದುಷ್ಟರಿಗೆ ಏನು ಶಿಕ್ಷೆಯಾಗುತ್ತದೆ ಎಂಬುದು ಮುಂದೆ ಗೊತ್ತಾಗುತ್ತದೆ." ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಚ್ಚರಿಸಿದ್ದಾರೆ. ಆ ಮೂಲಕ ನಾಯಕತ್ವ ಬದಲಾವಣೆ ವಿಚಾರ ಮುಗಿದ ಅದ್ಯಾಯವಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.
ಜು.8 ರಂದು ಬಿಎಎಸ್ವೈ ಭವಿಷ್ಯ ನಿರ್ಧಾರ ಪ್ರಕಟಿಸಲಿರುವ ವಿಶೇಷ ನ್ಯಾಯಾಲಯ
ಹೊರಗೆ 'ಜೈ' ಒಳಗೆ 'ಬೈ'
"ಕೆಲವರು ಸಿಎಂ ಯಡಿಯೂರಪ್ಪ ಅವರೇ ನಮ್ಮ ನಾಯಕ ಅಂತ ಹೊರಗಡೆ ಹೇಳುತ್ತಾರೆ. ಅದೇ ಒಳಗಡೆ ಯಾವಾಗ ಬೇಕಾದರೂ ಯಡಿಯೂರಪ್ಪ ಅವ್ರನ್ನು ಬದಲಾವಣೆ ಮಾಡಿ ಅಂತಾರೆ. ಆದಷ್ಟು ಬೇಗ ಬದಲಾಯಿಸಿ ಅಂತಾ ಒಳಗೋಗಿ ಹೇಳುತ್ತಾರೆ, ಹೊರಗೆ ಬಂದು ಜೈಕಾರ ಹಾಕುತ್ತಾರೆ. ಆದರೆ ಆ ತರಹ ನಾನಲ್ಲ." ಎಂದು ಮತ್ತೊಮ್ಮೆ ನಾಯಕತ್ವ ಬದಲಾವಣೆ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಅರುಣ್ ಸಿಂಗ್ ಅವರ ಭೇಟಿಯನ್ನೇ ಲೇವಡಿ ಮಾಡಿದ್ದಾರೆ. "ಅವರು ಬರುವಾಗಲೇ ಗೊತ್ತಿತ್ತು, ಅವರು ಏನು ಹೇಳುತ್ತಾರೆ ಅಂತ. ವಿಮಾನ ನಿಲ್ದಾಣದಲ್ಲಿಯೇ ಹೇಳಿಕೊಂಡು ಬಂದರು. ಅವರೇನು ಪ್ರಧಾನಿ ಮಂತ್ರಿನಾ? ಆ ಮಟ್ಟಕ್ಕೆ ಬಿಲ್ಡಪ್ ಕೊಡುವುದುದಕ್ಕೆ? ವಿಮಾನ ನಿಲ್ದಾಣದಿಂದ ಬಂದಿದ್ದೇನು? ಕುಮಾರಕೃಪಾ ಅತಿಥಿಗೃಹದಲ್ಲಿ ಕೈ ಬೀಸಿದ್ದೇನು? ಇದೆಲ್ಲ ಗೊತ್ತಿದ್ದೇ ಅವರನ್ನು ಭೇಟಿ ಮಾಡಲಿಲ್ಲ" ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನೇ ಲೇವಡಿ ಮಾಡಿದ್ದಾರೆ.
'ಪಂಚಮಸಾಲಿ' ಹೋರಾಟಲ್ಲಿ 'ಬಿರುಕು'?
"ಪಂಚಮಸಾಲಿ ಮೀಸಲಾತಿ ಹೋರಾಟ ಹಾಗೂ ಪಂಚಮಸಾಲಿ ಸಮುದಾಯದಲ್ಲಿ ಮೂರನೇ ಪೀಠ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಅದೇ ಸಮುದಾಯದ ಸಚಿವ ಮುರುಗೇಶ್ ನಿರಾಣಿ ಅವರ ಮೇಲೆ ಯತ್ನಾಳ್ ಹರಿಹಾಯ್ದಿದ್ದಾರೆ. "ಪಂಚಮಸಾಲಿ ಹೋರಾಟದಲ್ಲಿ ನಗ್ನ ಪ್ರದರ್ಶನ ಮಾಡಿದ ರಾಜಕಾರಣಿ ಸಂಪೂರ್ಣ ನಗ್ನರಾಗಿದ್ದಾರೆ. ಒಬ್ಬ ರಾಜಕಾರಣಿ ತಮ್ಮ ರಾಜಕೀಯಕ್ಕೆ ಪಂಚಮಸಾಲಿ ಮೀಸಲಾತಿ ಹೋರಾಟ ಉಪಯೋಗಿಸಿಕೊಂಡಿದ್ದಾರೆ. ಒಬ್ಬ ಸಚಿವ, ದೊಡ್ಡ ಉದ್ಯಮಿ ಅದರ ಹಿಂದೆ ಇದ್ದಾರೆ" ಎಂದು ತಮ್ಮದೆ ಸಮುದಾಯಕ್ಕೆ ಸೇರಿದ ಸಚಿವ ಮುರುಗೇಶ್ ನಿರಾಣಿ ಅವರ ಮೇಲೆ ಹರಿಹಾಯ್ದಿದ್ದಾರೆ. ಯತ್ನಾಳ್ ಹೇಳಿಕೆಗೆ ನಿರಾಣಿ ಅವರೂ ತಿರುಗೇಟು ಕೊಟ್ಟಿದ್ದಾರೆ.
Recommended Video
ಹೈಕಮಾಂಡ್ ತೀರ್ಮಾನಕ್ಕೆ ಬದ್ದ!
ಬಿಜೆಪಿ ಹಿರಿಯ ಶಾಸಕ ಹಾಗೂ ತಮ್ಮದೆ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿದ್ದ ಆರೋಪಗಳಿಗೆ ಸಚಿವ ಮುರುಗೇಶ್ ನಿರಾಣಿ ಅವರು ತಿರುಗೇಟು ಕೊಟ್ಟಿದ್ದಾರೆ. "ಪಂಚಮಸಾಲಿ ಹೋರಾಟ ಮಾತ್ರವಲ್ಲ ಇಡೀ ವೀರಶೈವ ಲಿಂಗಾಯತ ಸಮುದಾಯದ ಸಮಸ್ಯೆಗಳ ಬಗ್ಗೆ ನಾವು ಹೋರಾಟ ಮಾಡಬೇಕಾಗುತ್ತದೆ. ಕೇವಲ ಪಂಚಮಸಾಲಿ ಮಾತ್ರವಲ್ಲ, ಇಡೀ ವೀರಶೈವ ಲಿಂಗಾಯತ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿದ್ದಾರೆ. ಇಡೀ ಸಮುದಾಯದಲ್ಲಿ ಸಣ್ಣ ಉಪಜಾತಿಗಳಿವೆ. ಅವರೆಲ್ಲರ ಮೇಲೆ ನಾವು ಅಧಿಕಾರದಲ್ಲಿ ಇರುವವರು ಗಮನ ಹರಿಸಬೇಕು. ನಾವು ಸರ್ಕಾರದಲ್ಲಿ ಇರುವವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಹೋರಾಟ ಮಾಡಿದರೆ ಸಾಕಾಗುವುದಿಲ್ಲ. ಮುಂದೆ ಅಗತ್ಯ ಬಿದ್ದರೆ ಪಂಚಮಸಾಲಿ ಹೋರಾಟಕ್ಕೆ ಜೊತೆಗೂಡುತ್ತೇನೆ. ಈಗ ಯಾರೋ ಮಾತನಾಡಿದರೂ ಅಂತ ಉತ್ತರ ಕೊಡೋದಕ್ಕೆ ಹೋಗಲ್ಲ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಹರಿಹಾಯ್ದಿದ್ದಾರೆ.
ಜೊತೆಗೆ "ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾವು ಬದ್ದ. ನನಗೆ ಇರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಶಾಸಕ ಯತ್ನಾಳ್ ಆಗಲಿ, ಇನ್ನೊಬ್ಬರಾಗಲಿ ಹೇಳಿದ ಮಾತಿಗೆ ನಾನು ಉತ್ತರ ಕೊಡುವುದಿಲ್ಲ" ಎಂದು ಸಚಿವ ನಿರಾಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೀಗ ನಾಯಕತ್ವ ಬದಲಾವಣೆಯಿಂದ ಚರ್ಚೆ 'ಪಂಚಮಸಾಲಿ ಸಮುದಾಯದ'ಲ್ಲಿ ಬಿರುಕು ಮೂಡಿಸಿದೆ. ಹೀಗಾಗಿ ಇದು ಮುಂದೆ ಯಾವ ತಿರುವುದು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.