ಶ್ರೀಮಂತರ ಮಕ್ಕಳಿಗೊಂದು ನ್ಯಾಯ, ರಾಜ್ಯ ಪಠ್ಯ ಕ್ರಮ ಬಡ ವಿದ್ಯಾರ್ಥಿಗಳೊಂದು ನ್ಯಾಯ
ಬೆಂಗಳೂರು, ಮೇ. 11: ಸಿಬಿಎಸ್ಸಿ ಪಠ್ಯ ಕ್ರಮ ಅಭ್ಯಾಸ ಮಾಡುತ್ತಿದ್ದ ರಾಜ್ಯದ ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಯಿಲ್ಲದೇ ಪಾಸು ! ಅದೇ ರಾಜ್ಯ ಪಠ್ಯ ಕ್ರಮದ ಮಕ್ಕಳು ಪರೀಕ್ಷೆ ಬರೆದು ಉತ್ತೀರ್ಣ ರಾಗಬೇಕು. ರಾಜ್ಯ ಶಿಕ್ಷಣ ಇಲಾಖೆ ದ್ವಂದ್ವ ನೀತಿಯಿಂದ ವಿದ್ಯಾರ್ಥಿಗಳ ಪರೀಕ್ಷಾ ವಿಚಾರದಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಶಿಕ್ಷಣ ಸಚಿವರ ಒಣ ಪ್ರತಿಷ್ಠೆ ಈ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸಿಬಿಎಸ್ಸಿ ಮತ್ತು ಐಸಿಎಸ್ಸಿ ಬೋರ್ಡ್ ಗಳು ಈ ಸಲವೂ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಿವೆ. ಇನ್ನೇನು ಫಲಿತಾಂಶ ಪ್ರಕಟಣೆ ಮಾಡುವ ತವಕದಲ್ಲಿದ್ದು, ಕಾಲೇಜು ದಾಖಲಾತಿ ಪ್ರಕ್ರಿಯೆ ಕೂಡ ಶುರುವಾಗಲಿದೆ. ನೆರೆ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ಕೂಡ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಈ ವರ್ಷವೂ ಸಂಪೂರ್ಣ ರದ್ದು ಮಾಡಿವೆ. ಆದರೆ ರಾಜ್ಯದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಎದುರಾಗಿರುವ ಸಮಸ್ಯೆಗಿಂತಲೂ ಅವರು ಪರೀಕ್ಷೆ ನಡೆಸಿದ ವೀರ ಎನಿಸಿಕೊಳ್ಳಲು ಪರದಾಡುವಂತಿದೆ.
ತಾರತಮ್ಯ ಶಿಕ್ಷಣ ಹಕ್ಕು ಉಲ್ಲಂಘನೆ ?
ಸಿಬಿಎಸ್ಸಿ ಪಠ್ಯ ಕ್ರಮ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಅಗ್ರ ಶ್ರೇಯಾಂಕ ಗಳಿಸಿದ್ದಾರೆ. ಪರೀಕ್ಷೆ ಇಲ್ಲದೇ ಅವರು ಪಡೆಯುವ ಅಂಕಗಳನ್ನು ಎಲ್ಲಾ ಕಾಲೇಜುಗಳು ಪರಿಗಣಿಸಿ ಸೀಟು ಮಂಜೂರು ಮಾಡುತ್ತವೆ. ಆದರೆ ರಾಜ್ಯ ಪಠ್ಯ ಕ್ರಮ ಓದುತ್ತಿರುವ ಅಭ್ಯರ್ಥಿಗಳು ಪರೀಕ್ಷೆ ಬರೆದೇ ಉತ್ತೀರ್ಣ ಆಗಬೇಕು. ನೆರೆ ರಾಜ್ಯ ತೆಲಂಗಾಣ ಮತ್ತು ತಮಿಳುನಾಡಿನಿಂದಲೂ ಪಿಯುಸಿ ಓದಲು ರಾಜ್ಯಕ್ಕೆ ಬರುತ್ತಾರೆ. ಪರೀಕ್ಷೆ ಇಲ್ಲದೇ ಪಾಸಾದ ಅವರಿಗೂ ಮೊದಲ ಆದ್ಯತೆಯಲ್ಲಿ ಕಾಲೇಜುಗಳಲ್ಲಿ ಸೀಟುಗಳು ಲಭ್ಯವಾಗುತ್ತವೆ. ಆದರೆ ಪರೀಕ್ಷೆ ಬರೆದು ಪಾಸಾದ ರಾಜ್ಯ ಪಠ್ಯ ಕ್ರಮ ಅಭ್ಯಸಿಸಿದ ವಿದ್ಯಾರ್ಥಿಗಳ ಪಾಡೇನು ? ಶಿಕ್ಷಣ ಎಲ್ಲರಿಗೂ ಒಂದೇ. ಒಬ್ಬರಿಗೊಂದು ನ್ಯಾಯ. ಇನ್ನೊಬ್ಬರಿಗೊಂದು ನ್ಯಾಯ. ಇದು ಶಿಕ್ಷಣ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಸಿಬಿಎಸ್ಸಿ ಬೋರ್ಡ್ ಪರೀಕ್ಷೆ ಮಾಡಲಿ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀಮಂತರಿಗೆ ಪರೀಕ್ಷೆ ಇಲ್ಲದೇ ಪಾಸು; ಬಡವರ ಮಕ್ಕಳು ?
ಸಾಮಾನ್ಯವಾಗಿ ಸಿಬಿಎಎಸ್ಸಿ ಶಾಲೆಗಳಲ್ಲಿ ಓದುವರು ಶ್ರೀಮಂತರ, ರಾಜಕಾರಣಿಗಳ ಮಕ್ಕಳು. ಅವರು ಪರೀಕ್ಷೆ ಇಲ್ಲದೇ ಪಾಸಾಗಲು ಈ ರಾಜ್ಯದಲ್ಲಿ ಅರ್ಹತೆ ಪಡೆದಿದ್ದಾರೆ. ರಾಷ್ಟ್ರದ 18 ಲಕ್ಷ ಮಕ್ಕಳು ಪರೀಕ್ಷೆ ಇಲ್ಲದೇ ಪಾಸು ಮಾಡಲಾಗಿದೆ. ಇದರಲ್ಲಿ ರಾಜ್ಯದ ಪಾಲು ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳು ಎಂದು ಅಂದಾಜಿಸಲಾಗಿದೆ. ಅದೇ ಬಡವರು, ಮಧ್ಯಮ ವರ್ಗದ ಜನರ ಮಕ್ಕಳು ಓದುವ ರಾಜ್ಯದ ಖಾಸಗಿ ಮತ್ತು ಸರ್ಕಾರಿ ಶಾಲೆ ಮಕ್ಕಳು ಮಾತ್ರ ಪರೀಕ್ಷೆ ಬರೆದೇ ತೀರಬೇಕು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಇದರಿಂದ ಆಗುವ ಅನ್ಯಾಯವನ್ನು ಯಾವ ರೀತಿ ಸರಿಪಡಿಸುತ್ತೀರಿ ? ಪರೀಕ್ಷೆ ಇಲ್ಲದೇ ಸಿಬಿಎಸ್ ಸಿ ಪಠ್ಯ ಕ್ರಮ ಓದಿದ ವಿದ್ಯಾರ್ಥಿಗಳ ಉತ್ತೀರ್ಣವನ್ನು ರಾಜ್ಯದ ಶಾಲೆಗಳಲ್ಲಿ ದಾಖಲಾತಿ ನೀಡದಂತೆ ಆದೇಶ ಮಾಡುವಿರಾ ? ಯಾಕೆ ಪರೀಕ್ಷೆ ವಿಚಾರದಲ್ಲಿ ಈ ಪರಿಯ ತಾರತಮ್ಯ ? ಇಡೀ ದೇಶದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿದ ಕೀರ್ತಿ ಪಡೆಯುವ ಮಹದಾಸೆಯೇ ? ಎಂದು ಪ್ರಶ್ನಿಸಬೇಕಾದ ಸಂದರ್ಭ ಎದುರಾಗಿದೆ.
ಪರೀಕ್ಷೆ ಬಗ್ಗೆ ಮತ್ತೆ ಅನಿಶ್ಚಿತತೆ
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಭೀಕರ ಸ್ವರೂಪ ಪಡೆದುಕೊಂಡಿದೆ. ದಿನಕ್ಕೆ ಐವತ್ತು ಸಾವಿರ ಪ್ರಕರಣ ವರದಿಯಾಗುತ್ತಿವೆ. ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಸದ್ಯ ನಿಗದಿಯಂತೆ ಜೂನ್ ನಲ್ಲಿ ಪರೀಕ್ಷೆ ನಿಗದಿ ಗೊಳಿಸಲಾಗಿದೆ. ಕೊರೊನಾ ಭೀಕರತೆ ನೋಡಿ ಮತ್ತೆ ಪರೀಕ್ಷೆ ಮುಂದೂಡುವ ಲಕ್ಷಣ ಗೋಚರಿಸುತ್ತಿದೆ. ಹೀಗಾಗಿ ಬಹುತೇಕ ವಿದ್ಯಾರ್ಥಿಗಳು ಓದಿನಲ್ಲಿ ನಿರಾಸಕ್ತಿ ತಳೆದಿದ್ದಾರೆ. ಈಗಾಗಲೇ ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಮತ್ತೆ ಮುಂದೂಡಿದ್ದಲ್ಲಿ ಮಕ್ಕಳ ಮೇಲೆ ತುಂಬಾ ಗಂಭೀರ ಪರಿಣಾಮ ಬೀರಲಿದೆ. ಈಗಿನ ಕೊರೊನಾ ಪರಿಸ್ಥಿತಿ ನೋಡಿದರೆ, ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ. ಮತ್ತೊಮ್ಮೆ ಪರೀಕ್ಷೆ ಮುಂದೂಡಿದಲ್ಲಿ ವಿದ್ಯಾರ್ಥಿಗಳು ಮತ್ತಷ್ಟು ಒತ್ತಡಕ್ಕೆ ಸಿಲುಕಲಿದ್ದಾರೆ. ಆನ್ಲೈನ್ ನಂಬಿಕೊಂಡು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನೆಟ್ ವರ್ಕ್, ಮೊಬೈಲ್ ಸಮಸ್ಯೆಗೆ ಒಳಗಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳ ಪರಿಸ್ಥಿತಿಯಂತೂ ಹೇಳ ತೀರಲಾಗದು. ಬಹುತೇಕ ಹಿರಿಯ ಶಿಕ್ಷಕರು ಈಗಲು ಆನ್ಲೈನ್ ಕ್ಲಾಸ್ ಮಾಡಲಾಗದ ಸ್ಥಿತಿ. ಇನ್ನು ಶಿಕ್ಷಣ ಸಚಿವರು ಒದಗಿಸಿದ ಟಿವಿ- ರೇಡಿಯೋ ಪಾಠ ಕೇಳಿ ಈ ಭಾರಿ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಯನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಎದುರಿಸಲೇಬೇಕಾದ ಸಂಕಷ್ಟದಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇದರ ಬಗ್ಗೆ ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ.
Recommended Video
ಎಸ್ಎಸ್ ಎಸ್ ಎಲ್ ಸಿಯಿಂದ ಯಾವ ಹುದ್ದೆ ಸಿಗುತ್ತೆ
ಸದ್ಯ ರಾಜ್ಯದಲ್ಲಿರುವ ಉದ್ಯೋಗ ನೀತಿ ನೋಡಿದರೆ ಎಸ್ಎಸ್ಎಲ್ಸಿ ಪರೀಕ್ಷೆ ಆಧರಿಸಿ ಯಾವ ಉದ್ಯೋಗವೂ ಸಿಗುವುದಿಲ್ಲ. ಪಿಯುಸಿ ಪ್ರವೇಶ ಬಿಟ್ಟರೆ ಯಾವ ಉದ್ಯೋಗವೂ ಲಭ್ಯವಾಗುವುದಿಲ್ಲ. ಸರ್ಕಾರಿ ಶಾಲೆಯ ಮಕ್ಕಳಂತೂ ಶಾಲೆಗಳ ಸಂಬಂಧವೇ ಕಳೆದುಕೊಂಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಕೊರೊನಾ ಭೀಕರತೆ ನೋಡಿದರೆ ಬಹುಶಃ ಪರೀಕ್ಷೆ ಅನಿರ್ಧಿಷ್ಟ ಅವಧಿಗೆ ಮುಂದೂಡಬೇಕಾಗುತ್ತದೆ. ನಿಜವಾಗಿಯೂ ಮಕ್ಕಳು ತಾಳ್ಮೆಯಿಂದ ಓದಿನಲ್ಲಿಯೇ ಮಗ್ನರಾಗಿರಲು ಸಾಧ್ಯವೇ ? ಈಗಾಗಲೇ ಸಿಬಿಎಸ್ಸಿ ಓದಿದ ಮಕ್ಕಳಿಗೆ ಪರೀಕ್ಷೆ ಇಲ್ಲ. ನಮಗೆ ಮಾತ್ರ ಯಾಕೆ ? ಪರೀಕ್ಷೆ ಬರೆದು ಉತ್ತೀರ್ಣರಾದ ನಮಗೆ ಏನು ವಿಶೇಷ ಸೌಲಭ್ಯ ಕೊಡುತ್ತಾರೆಯೇ ಎಂಬ ಪ್ರಶ್ನೆಗಳು ವಿದ್ಯಾರ್ಥಿ ಸಮುದಾಯದಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಶಿಕ್ಷಣ ಸಚಿವರು ಯಾವಾಗ ನ್ಯಾಯ ಸಮ್ಮತ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಕಾದು ನೋಡುತ್ತಿದ್ದಾರೆ.