ನ್ಯೂನತೆ ಮೆಟ್ಟಿ ಸಾಧನೆ ಮಾಡಿದ್ದ ಕುಮಟಾದ ಪ್ರತಿಭೆ ಕಣ್ಮರೆ
ಕಾರವಾರ, ಜುಲೈ 05 : ಹುಟ್ಟು ವಿಕಲಚೇತನನಾದರೂ ಸಹ ಎಸ್ಎಸ್ಎಲ್ಸಿಯಲ್ಲಿ ಶೇ. 93.76 ಅಂಕಗಳಿಸಿ ತನ್ನ ನ್ಯೂನತೆಯನ್ನು ಮೆಟ್ಟಿ ನಿಂತು ಸಾಧನೆಗೈದಿದ್ದ ಕುಮಟಾ ತಾಲ್ಲೂಕಿನ ದೀವ್ಗಿಯ ದಿನೇಶ ಗೌಡ ಸೋಮವಾರ ರಾತ್ರಿ ಇಹಲೋಕ ತ್ಯಜಿಸಿದ್ದಾನೆ.
ಅನಾರೋಗ್ಯದಿಂದ ಬಳಲುತ್ತಿದ್ದ ದಿನೇಶನನ್ನು ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಮೃತನಾಗಿದ್ದಾನೆ.
ಕನಸುಗಾರ : ದಿನೇಶ ಗೌಡ ಹುಟ್ಟುವಾಗಲೇ ತನ್ನ ಎರಡು ಕೈಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ. ಎಲ್ಲದಕ್ಕೂ ತನ್ನ ತಂದೆ ತಾಯಿಯನ್ನೇ ಅವಲಂಬಿಸಿದ್ದ ಈತ ತೀವ್ರ ಬಡತನದಲ್ಲಿಯೂ ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೇರಬೇಕೆಂಬ ಕನಸು ಕಂಡಿದ್ದ. ಈತನ ತಂದೆ ಪ್ರತಿದಿನ ದಿನೇಶನನ್ನು ಹೊತ್ತು ಮೈಲುಗಟ್ಟಲೇ ನಡೆದು ಶಾಲೆಗೆ ಸೇರಿಸಿ ಬರುತ್ತಿದ್ದರು. ಶಾಲೆ ಮುಗಿದ ಮೇಲೆಯೂ ದಿನೇಶನಿಗೆ ತಂದೆಯೇ ಆಸರೆ.
2015-16ನೇ ಸಾಲಿನ ಎಸ್ಎಸ್ಎಲ್ಸಿಯಲ್ಲಿ ಶೇ. 93.76 ಅಂಕಗಳಿಸಿದ್ದ ಈತನಿಗೆ ಇನ್ನೂ ಕಲಿಯುವ ಹಂಬಲ ಇತ್ತು. ಆದರೆ ಬಡತನದಿಂದ ಆತನ ಓದು ಪೂರ್ಣಗೊಳಿಸುವುದು ಕಷ್ಟವಾಗಿದ್ದಾಗ ಕುಮಟಾದ ಬೆಳಕು ಟ್ರಸ್ಟ್ನ ಅಧ್ಯಕ್ಷ ನಾಗಾರಾಜ ನಾಯಕ ಅವರು ಆತನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸಿ, ಮುಂದಿನ ಓದಿಗೆ ಆಸರೆಯಾಗಿದ್ದರು. ಜತೆಗೆ ಮನೆಯಿಂದ ಕಾಲೇಜಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಮಾಡಿಕೊಡಿಸಿದ್ದರು.
ಹೀಗಾಗಿ ದಿನೇಶ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತ, ಪ್ರಥಮ ವರ್ಷದಲ್ಲೇ ಶೇ. 90ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣನಾಗಿ, ದ್ವಿತೀಯ ಪಿಯುಸಿ ಓದುತ್ತಿದ್ದ. ಈತ ಊರಿನ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದ್ದ. ತಂದೆ-ತಾಯಿಯ ಮುದ್ದಿನ ಮಗನಾಗಿ, ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದ ದಿನೇಶ ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿರುವುದು ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗುವಂತಾಗಿದೆ.
ಓದಿಗೆ ಯಾವುದೇ ನ್ಯೂನತೆ ಅಡ್ಡಿ ಅಲ್ಲ ಎಂದು ದಿನೇಶ ಗೌಡ ತೋರಿಸಿಕೊಟ್ಟು, ಬಾರದ ಲೋಕಕ್ಕೆ ಎಲ್ಲರನ್ನೂ ಅಗಲಿ ತೆರಳಿದ್ದಾನೆ.