ಬಿಜೆಪಿಯ ಚಾರ್ಜ್ಶೀಟ್ ರಾಜಕಾರಣಕ್ಕೆ ಕಾಂಗ್ರೆಸ್ ಕೌಂಟರ್
ಬೆಂಗಳೂರು, ಮಾರ್ಚ್ 02: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳ ಬಗೆಗೆ ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್ಶೀಟ್(ದೋಷಾರೋಪ ಪಟ್ಟಿ)ಗೆ ಕಾಂಗ್ರೆಸ್ ಪಕ್ಷ ಎದಿರೇಟು ನೀಡಿದೆ.
'ಬಿಜೆಪಿ ಏನನ್ನು ಚಾರ್ಜ್ ಶೀಟ್ ಎಂದು ಕರೆದು ಬಿಡುಗಡೆ ಮಾಡಿದೆಯೋ ಅದೆಲ್ಲಾ ಒಂದು ಸುಳ್ಳಿನ ಕಂತೆ ಅಷ್ಟೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 'ಬಿಜೆಪಿ ಸಾಕ್ಷ್ಯ ಇಲ್ಲದೆ ಆರೋಪಗಳನ್ನು ಮಾಡುತ್ತಿದೆ, ಆದರೆ ಕಾಂಗ್ರೆಸ್ ಹಾಗಲ್ಲ ಬಿಜೆಪಿಯ ಎಲ್ಲಾ ಹಗರಣಗಳಿಗೂ ನಮ್ಮ ಬಳಿ ಸಾಕ್ಷ್ಯ ಇದೆ' ಎಂದು ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್ಶೀಟ್ ಬಿಡುಗಡೆ ಮಾಡಿದ ಬಿಜೆಪಿ
ಬಿಜೆಪಿ ಪದೇ ಪದೇ ತಾನೊಂದು ಸುಳ್ಳು ಹೇಳುವ ಪಕ್ಷ ಎಂದು ಸಾಬೀತು ಮಾಡಿಕೊಳ್ಳುತ್ತಿದೆ, ಅವರದು ಕೇವಲ ಹಿಟ್ ಆಂಡ್ ರನ್ ಸಂಸ್ಕೃತಿ ಅಷ್ಟೆ, ಅವರ ಬಳಿ ಸಾಕ್ಷ್ಯ ಇದ್ದರೆ ನೇರವಾಗಿ ಲೋಕಾಯುಕ್ತಕ್ಕೊ ಅಥವಾ ರಾಜ್ಯಪಾಲರಿಗೊ, ಪೊಲೀಸ್ ಠಾಣೆಗೊ, ಎಸಿಬಿಗೋ ಹೋಗಿ ದೂರು ದಾಖಲಿಸಿ ಹೋರಾಡಲಿ ಅದನ್ನು ಬಿಟ್ಟು ಸುಮ್ಮನೆ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಧ್ಯಮಗಳ ಮುಂದೆ ಆರೋಪ ಮಾಡುವುದು ಕೀಳು ರಾಜಕೀಯ' ಎಂದು ಆವೇಶ ಪೂರಿತವಾಗಿ ಹೇಳಿದರು.
ಇನ್ನೂ ನಡೆಯುತ್ತಿದೆ ಕೇಸು
ಬಿಜೆಪಿ ಕಾಲದ ಹಗರಣಗಳ ಪಟ್ಟಿ ಬಿಚ್ಚಿಟ್ಟ ದಿನೇಶ್ ಗುಂಡೂರಾವ್ ಅವರು 'ಯಡಿಯೂರಪ್ಪ ಅವರ ಮೇಲೆ ಡಿನೋಟಿಫೈ ಕೇಸುಗಳು ಇನ್ನೂ ನಡೆಯುತ್ತಿವೆ, ಚೆಕ್ಕಿನಲ್ಲಿ ಲಂಚ ಸ್ವೀಕರಿಸಿದ ಭಾರತ ಪ್ರಥಮ ವ್ಯಕ್ತಿ ಅವರೇ' ಎಂದು ವ್ಯಂಗ್ಯ ಮಾಡಿದರು.
ಕಾಂಗ್ರೆಸ್ ಕಾಲದಲ್ಲಿ ಹೀಗಾಗಿಲ್ಲ
'ಕೆಐಬಿಡಿ ಹಗರಣದಲ್ಲಿ ಕಟ್ಟಾ ಸುಬ್ರಹ್ಮಣ್ಯನಾಯ್ಡು ಮತ್ತು ಅವರ ಮಗ ಜೈಲು ಮಾಲಾದರು. ಭೂಮಿ ಮೌಲ್ಯದ ಏರುಪೇರು ಹಗರಣದಲ್ಲಿ ಕೃಷ್ಣಯ್ಯ ಶೆಟ್ಟಿ, ಡಿನೋಟಿಫೈ ಹಗರಣದಲ್ಲಿ ಸೋಮಣ್ಣ ಇವರೆಲ್ಲರೂ ಜೈಲಿಗೆ ಹೋಗಿ ಬಂದರು, ಅದೂ ಅಧಿಕಾರದಲ್ಲಿ ಇದ್ದಾಗಲೇ, ಆದರೆ ಕಾಂಗ್ರೆಸ್ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂಬುದು ಗಮನಿಸತಕ್ಕ ವಿಷಯ ಎಂದು ಅವರು ಹೇಳಿದರು.
ನಿರಾಧಾರ ಆರೋಪಗಳು
ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ 'ನನ್ನ ವಿರುದ್ಧ ಬಿಜೆಪಿಯವರು ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡಿದ್ದಾರೆ, ಈ ಹಿಂದೆಯೂ ಮಾಡಿದ್ದಾರೆ ಆದರೆ ಎಲ್ಲವೂ ನಿರಾಧಾರ' ಎಂದರು.
ಬೆಂಗಳೂರನ್ನು ಬಿಜೆಪಿ ಹಾಳುಗೆಡವಿದೆ
ಬೆಂಗಳೂರನ್ನು ಗಾರ್ಬೆಜ್ ಸಿಟಿ ಮಾಡಿದ್ದೇ ಬಿಜೆಪಿ ಎಂದು ಜಾರ್ಜ್ ಹರಿಹಾಯ್ದರು. ಬಿಜೆಪಿ ಕಾಲದಲ್ಲಿ ಯುಟಿಲಿಟಿ ಬಿಲ್ಡಿಂಗ್ ಸೇರಿದಂತೆ ಹಲವು ಸರ್ಕಾರಿ ಆಸ್ತಿಗಳನ್ನು ಅಡವಿಟ್ಟಿದ್ದರು, ನಾವದನ್ನು ರಿಕವರಿ ಮಾಡುತ್ತಿದ್ದೇವೆ. ಅವರ ಕಾಲದಲ್ಲಿ 6 ಕಿ.ಮೀ ಆಗಿದ್ದ ಮೆಟ್ರೋ ಅನ್ನು ನಾವು ವಿಸ್ತಾರಗೊಳಿಸಿದೆವು. ಮಂಡೂರಿನ ಕಸದ ಸಮಸ್ಯೆ ತಪ್ಪಿಸಿದೆವು. ಸ್ಲಂಗಳಿಗೆ ನೀರು ಒದಗಿಸಿದೆವು. ಲೆಕ್ಕವಿಲ್ಲದಷ್ಟು ಸ್ಕೈವಾಕರ್, ಫ್ಲೈ ಓವರ್ಗಳನ್ನು ನಿರ್ಮಿಸಿ ಟ್ರಾಫಿಕ್ ಸಮಸ್ಯೆ ತಹಬದಿಗೆ ತಂದೆವು ಎಂದು ಅವರು ಲೆಕ್ಕ ನೀಡಿದರು.
ಎಲ್ಲಕ್ಕೂ ದಾಖಲೆ
ಬಿಜೆಪಿ ಅವರು ಮಾಡಿರೂವ ಎಲ್ಲಾ ಆರೋಪಗಳನ್ನು ಕ್ರೂಢೀಕರಿಸಿ ಅದರ ಪಕ್ಕದಲ್ಲೇ ಅದಕ್ಕೆ ಸಂಭಂದಿಸಿದ ದಾಖಲೆಗಳನ್ನು ಕಾಂಗ್ರೆಸ್ ಇಂದು ನೀಡಿತು. ಅಪರಾಧ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪಕ್ಕೆ ಬಿಜೆಪಿ ಕಾಲದಲ್ಲಿ ನಡೆದ ಅತ್ಯಾಚಾರ, ಕೊಲೆ ಎಲ್ಲವನ್ನು ಲೆಕ್ಕದ ಸಮೇತ ಕಾಂಗ್ರೆಸ್ ನೀಡಿತು. ಇದೊಂದೆ ಅಲ್ಲದೆ ಬಿಜೆಪಿಯ ಬಹುತೇಕ ಆರೋಪಕ್ಕೆ ಕಾಂಗ್ರೆಸ್ ಲೆಕ್ಕ ನೀಡಿತು.
'ಬಿಜೆಪಿಯವರು ಮೊದಲು ಅವರನ್ನು ರಕ್ಷಣೆ ಮಾಡಿಕೊಳ್ಳಬೇಕು'