ಕೆಎಸ್ಆರ್ಟಿಸಿಯ ನಾಲ್ಕೂ ನಿಗಮಗಳ ನೌಕರರಿಗೆ ಸರ್ಕಾರದ ಶಾಕ್!
ಬೆಂಗಳೂರು, ನ. 15: ಕೆಎಸ್ಆರ್ಟಿಸಿಯ ನಾಲ್ಕೂ ನಿಗಮಗಳ ನೌಕರರಿಗೆ ರಾಜ್ಯ ಬಿಜೆಪಿ ಸರ್ಕಾರ ದೀಪಾವಳಿ ಶಾಕ್ ಕೊಟ್ಟಿದೆ. ಸಾರಿಗೆ ಇಲಾಖೆ ನೌಕರರಿಗೆ ವೇತನ ಕೊಡದಿರುವುದು ಸಾರಿಗೆ ಇಲಾಖೆ ಮತ್ತು ಸರ್ಕಾರದ ಆಡಳಿತ ವೈಫಲ್ಯದ ಕೈಗನ್ನಡಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಸ್ವತಃ ಡಿಸಿಎಂ ಲಕ್ಷ್ಮಣ ಸವದಿ ಅವರ ಕೈಯಲ್ಲೇ ಸಾರಿಗೆ ಇಲಾಖೆಯಿದೆ. ಆದರೂ ಸುಮಾರು 1.35 ಲಕ್ಷ ಸಾರಿಗೆ ನೌಕರರಿಗೆ ಸಂಬಳವೇ ಆಗಿಲ್ಲ ಎಂದು ಟ್ವಿಟರ್ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಬಳ ಇಲ್ಲದೆ ದೀಪಾವಳಿಯಂತಹ ಸಡಗರದ ಹಬ್ಬವನ್ನೂ ಸಾರಿಗೆ ನೌಕರರು ಕತ್ತಲಿನಲ್ಲಿ ಆಚರಿಸದಂತಾಗಿದೆ. ಬಿಜೆಪಿ ಸರ್ಕಾರ ಈ ಕೂಡಲೇ ಗಮನ ಹರಿಸಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ಸಾರಿಗೆ ನೌಕರರ ಸಂಬಳ ಆಗದಿರುವದಕ್ಕೆ ಸಚಿವ ಸವದಿ ಕೋವಿಡ್ ನೆಪ ಹೇಳಿದ್ದಾರೆ. ಕೋವಿಡ್ ಬಿಸಿ ಕೇವಲ ಸಾರಿಗೆ ಇಲಾಖೆಗೆ ಮಾತ್ರ ತಟ್ಟಿಲ್ಲ.
ಕೋವಿಡ್ ನೆಪ ಹೇಳುವುದು ಬಿಟ್ಟು ಸಾರಿಗೆ ಇಲಾಖೆ, ಸಂಪನ್ಮೂಲ ಕ್ರೋಡೀಕರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಈಗ ಹಣಕಾಸು ಇಲಾಖೆ ಕಡೆ ಬೊಟ್ಟು ತೋರಿಸಿದರೆ ಸಾರಿಗೆ ನೌಕರರ ಜೀವನ ನಡೆಯುವುದು ಹೇಗೆ? ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ದಿನೇಶ್ ಗುಂಡೂರಾವ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.