ಅನಂತಮೂರ್ತಿಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು
ಬೆಂಗಳೂರು, ಆ. 23 : ಅಗಲಿದ ಸಾಹಿತಿ ಯು.ಆರ್.ಅನಂತಮೂರ್ತಿಗೆ ಸಾಹಿತಿಗಳು, ರಾಜಕಾರಣಿಗಳು, ಚಿಂತಕರು, ರಂಗಕರ್ಮಿಗಳು ಅಂತಿಮ ನಮನ ಸಲ್ಲಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗ ಮಂದಿರದಲ್ಲಿ ಅನಂತಮೂರ್ತಿಯವರ ಪಾರ್ಥಿವ ಶರೀರವನ್ನು ಶನಿವಾರ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಸಿಎಂ ಸಿದ್ದರಾಮಯ್ಯ, ಸಚಿವರಾದ ದಿನೇಶ್ ಗೂಂಡುರಾವ್, ಉಮಾಶ್ರೀ, ಆರ್.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಎಸ್.ಆರ್.ಪಾಟೀಲ್ ಸ್ಥಳದಲ್ಲೇ ಒಂದು ಗಂಟೆ ಕಾಲ ಉಪಸ್ಥಿತರಿದ್ದು ಅನಂತಮೂರ್ತಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್, ಆರ್.ಆಶೋಕ್, ವಿ.ಸೋಮಣ್ಣ "ಸಂಸ್ಕಾರ'ವಂತನಿಗೆ ನಮನ ಸಲ್ಲಿಸಿದರು. ದುಖಃಪತ್ತರಾಗಿದ್ದ ಅನಂತಮೂರ್ತಿ ಪತ್ನಿ ಎಸ್ತರ್, ಪುತ್ರ ಶರತ್, ಪುತ್ರಿ ಅನುರಾಧಾ ಅವರಿಗೆ ಕ್ರಿಶ್ಚಿಯನ್ ಧರ್ಮಗುರುಗಳು ಧೈರ್ಯ ತುಂಬಿದರು.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಹಿರಿಯ ನಟ ಶಿವರಾಂ, ದ್ವಾರಕೀಶ್ ಸ್ವಾಭಿಮಾನದ ಸಾಹಿತಿಯ ದರ್ಶನ ಪಡೆದರು. ರಂಗಕರ್ಮಿ ಬಿ.ಜಯಶ್ರೀ ಸಣ್ಣ ಕಥೆಗಳ ಹರಿಕಾರನ ದರ್ಶನ ಪಡೆದರು.
ರವೀಂದ್ರ ಕಲಾಕ್ಷೇತ್ರದಲ್ಲಿಟ್ಟಿದ್ದ ಪಾರ್ಥಿವ ಶರೀರದ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಆಗಮಿಸಿದ್ದರು.
ಗೊಂದಲ ಉಂಟುಮಾಡಿದ ಕರೆಂಟ್ ಶಾಕ್: ಪಾರ್ಥಿವ ಶರೀರ ಇಟ್ಟಿದ್ದ ಪೆಟ್ಟಿಗೆ ಶಾಕ್ ಹೊಡೆಯುತ್ತಿದೆ ಎಂದು ಒಂದು ಕ್ಷಣ ಗೊಂದಲ ಉಂಟಾಯಿತು, ಮೇಲ್ವಿಚಾರಣೆ ಹೊತ್ತುಕೊಂಡಿದ್ದ ನಾಗರಾಜ ಮೂರ್ತಿ ಮತ್ತು ಸಿಬ್ಬಂದಿ ತಕ್ಷಣ ಪರೀಕ್ಷಿಸಿ ಯಾವ ಸಮಸ್ಯೆಯಾಗಿದೆ ಎಂದು ದೃಢಪಡಿಸಿಕೊಂಡರು. ಕೂಡಲೇ ಶವಪೆಟ್ಟಿಗೆಗೆ ಸಂಪರ್ಕಿಸಿದ್ದ ವೈರ್ ಪರಿಶೀಲಿಸಲಾಯಿತು.
ಅಗಲಿದ ಸ್ನೇಹಿತನಿಗೆ ಸುಬ್ಬಣ್ಣ ಗಾಯನ ನಮನ: ಸ್ನೇಹಿತನಿಗೆ ಶಿವಮೊಗ್ಗ ಸುಬ್ಬಣ್ಣ ಗಾಯನದ ಮೂಲಕ ನಮಿಸಿದರು. ಕುವೆಂಪು ವಿರಚಿತ ' ಓ ನನ್ನ ಚೇತನ, ಆಗು ನೀ ಅನೀಕೇತನ' ಗೀತೆ ನೆರೆದಿದ್ದವರ ಮನ ಕಲಕುವಂತೆ ಮಾಡಿತು.
ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಜೆ ನಾಲ್ಕು ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಜ್ಞಾನಭಾರತಿ ಆವರಣದ ಕಲಾಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.