ಕನಕನ ಕಿಂಡಿ: ಪೇಜಾವರ ಶ್ರೀ ಹೇಳಿದ್ದೇನು, ಬನ್ನಂಜೆ ಅಭಿಪ್ರಾಯವೇನು?
Recommended Video
ಉಡುಪಿಯ ಕೃಷ್ಣ ಇದ್ದದ್ದೇ ಪಶ್ಚಿಮಕ್ಕೆ. ಅಲ್ಲಿರುವ ಅಷ್ಟ ಮಠಗಳೆಲ್ಲದರ ಮುಖ್ಯದ್ವಾರ ಪಶ್ಚಿಮಕ್ಕೇ ಇದೆ. ಉಡುಪಿ ಕೃಷ್ಣ ಮಠದ ರಚನೆಯನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿದರೆ ಖಾತ್ರಿ ಆಗಿಬಿಡುತ್ತದೆ, ಕೃಷ್ಣ ಪಶ್ಚಿಮಕ್ಕೆ ತಿರುಗುವ ಸಾಧ್ಯತೆ ಕೂಡ ಇಲ್ಲ ಎಂದರು ವಿದ್ವಾಂಸರು ಹಾಗೂ ಧಾರ್ಮಿಕ ಚಿಂತಕರಾದ ಬನ್ನಂಜೆ ಗೋವಿಂದಾಚಾರ್ಯರು.
ಕನಕರ ಭಕ್ತಿಗೆ ಒಲಿದು ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಸತ್ಯ: ಪೇಜಾವರ ಶ್ರೀ
ಕನಕ ದಾಸರ ಭಕ್ತಿಗೆ ಮೆಚ್ಚಿ ಉಡುಪಿಯ ಕೃಷ್ಣ ಪಶ್ಚಿಮಕ್ಕೆ ತಿರುಗಿದ ಎಂಬ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಒನ್ಇಂಡಿಯಾ ಗೋವಿಂದಾಚಾರ್ಯರನ್ನು ಫೋನ್ ಮೂಲಕ ಸಂಪರ್ಕಿಸಿತು. ಆಗ ಪ್ರತಿಕ್ರಿಯೆ ನೀಡಿದ ಅವರು, ಕುರುಬರನ್ನು ಮೆಚ್ಚಿಸುವ ಸಲುವಾಗಿ ಇಂಥ ಮಾತುಗಳನ್ನು ಆಡಬಾರದು ಎಂದರು.
ಉಡುಪಿಯ ಕೃಷ್ಣ ಕನಕರ ಭಕ್ತಿಗೆ ಪಶ್ಚಿಮಕ್ಕೆ ತಿರುಗಿದ್ದು ಹೌದೆ?
ಇಷ್ಟು ಕಾಲ ಇಲ್ಲದ ವಾದಿರಾಜರ ಹಾಡಿನ ಪ್ರಸ್ತಾಪ ಈಗೆಲ್ಲಿಂದ ಬಂತು? ಮಧ್ವಾಚಾರ್ಯರ ಕಾಲದಿಂದ ಇರುವ ಉಡುಪಿಯ ಹಲವು ದೇವಾಲಯಗಳ ವಾಸ್ತುವನ್ನು ಗಮನಿಸಿದರೆ ವಾಸ್ತವ ಏನು ಎಂಬುದು ಗೊತ್ತಾಗುತ್ತದೆ ಎಂಬುದನ್ನೂ ತಿಳಿಸಿದ ಅವರು, ತಾವೇ ಬರೆದಿರುವ 'ಬನ್ನಂಜೆ ಬರಹಗಳು- 1' ಹಾಗೂ ಕನಕೋಪನಿಷತ್ ಪುಸ್ತಕಗಳ ಅಂಶಗಳನ್ನು ಬಳಸಿಕೊಳ್ಳಲು ಅನುಮತಿ ಕೂಡ ನೀಡಿದ್ದಾರೆ.
ಬನ್ನಂಜೆ ಗೋವಿಂದಾಚಾರ್ಯರು ಕನಕದಾಸರ ಬಗ್ಗೆ ಬರೆದಿರುವ ಆಯ್ದ ಅಂಶಗಳು ಹೀಗಿವೆ.
ಕೃಷ್ಣ ಗುಡಿಯ ಎದುರು ಕನಕರ ಜೋಪಡಿ
ಕನಕದಾಸರು ಉಡುಪಿಗೆ ಬಂದಿದ್ದು ವಾದಿರಾಜರು ಅಲ್ಲಿದ್ದ ಕಾಲ. ಪ್ರಾಯಶಃ ಅವರ ಪರ್ಯಾಯ ಕಾಲ. ಕೃಷ್ಣ ಗುಡಿಯ ಎದುರು- ಈಗ ಕನಕ ದಾಸ ಮಂಟಪ ಇರುವೆಡೆ ಜೋಪಡಿ ಕಟ್ಟಿಕೊಂಡು ಕನಕರು ವಾಸವಿದ್ದರು. ಚಂದ್ರಶಾಲೆಯ ಅಡ್ಡಗೋಡೆಯಿಂದಾಗಿ ಕೃಷ್ಣನ ಎದುರೇ ನಿಂತರೂ ಅವರ ಹೊರಗಣ್ಣಿಗೆ ಕೃಷ್ಣ ದರ್ಶನವಿಲ್ಲ. ಕನಕದಾಸರ ಒಳಗಣ್ಣು ತೆರೆದಿತ್ತು, ಅಲ್ಲಿ ಮಾತ್ರ ನಿರಂತರ ಕೃಷ್ಣ ದರ್ಶನ.
ಬಿರುಕು ಬಿಟ್ಟ ಜಾಗದಲ್ಲಿ ಕಿಂಡಿ
ಒಂದು ದಿನ ರಾತ್ರಿ ಉಡುಪಿಯಲ್ಲಿ ಚಿಕ್ಕ ಭೂಕಂಪವಾಯಿತಂತೆ. ಚಂದ್ರಶಾಲೆಯ ಗೋಡೆ ಕೃಷ್ಣನ ನೇರಕ್ಕೆ ಬಿರುಕು ಬಿಟ್ಟಿತಂತೆ. ಆ ಬಿರುಕಿನಲ್ಲಿ ಇಣುಕಿದರೆ ಕನಕದಾಸರಿಗೆ ರಸ್ತೆಯಲ್ಲೆ ಕೃಷ್ಣ ದರ್ಶನ. ಇದರ ನೆನಪಿಗಾಗಿ ವಾದಿರಾಜರು ಈ ಬಿರುಕು ಬಿಟ್ಟ ಜಾಗವನ್ನು ಮುಚ್ಚುವ ಬದಲು ಅಲ್ಲೊಂದು ಕಿಂಡಿನ್ನಿಡಿಸಿದರು. ಅದೇ ಈಗಣ ಕನಕನ ಕಿಟಕಿ.
ಪೂರ್ವಾಭಿಮುಖ ಪ್ರತಿಷ್ಠಾಪನೆ ಸಾಧ್ಯವೆ ಇಲ್ಲ
ಕನಕದಾಸರಿಗೆ ದರ್ಶನ ನೀಡಲು ಕೃಷ್ಣ ತಿರುಗಿದ ಎನ್ನುವ ಕಥೆ ಆನಂತರ ಸ್ಥಳ ಪುರಾಣದ ಚಪಲಚಿತ್ತದಿಂದ ನಿರ್ಮಾಣಗೊಂಡ ಕಥೆ. ಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಪಶ್ಚಿಮಾಭಿಮುಖವಾಗಿ ಪ್ರತಿಷ್ಠೆ ಮಾಡಿದ್ದರು ಎನ್ನುವುದಕ್ಕೆ ದಾಖಲೆಗಳಿವೆ. ಮಠದ ವಾಸ್ತುವನ್ನು ಪರಿಶೀಲಿಸಿದರೆ ಅಲ್ಲಿ ಪೂರ್ವಾಭಿಮುಖವಾಗಿ ಪ್ರತಿಷ್ಠೆ ಮಾಡುವ ಸಾಧ್ಯತೆಯೇ ಇಲ್ಲ.
ಅದ್ಭುತವಾದ ತಲೆಬುಡವಿಲ್ಲದ ಕಥೆ
ಕನಕದಾಸರು ಒಮ್ಮೆ ಕೃಷ್ಣ ದರ್ಶನಕ್ಕೆಂದು ಉಡುಪಿಗೆ ಬಂದರು. ಆದರೆ ಅಲ್ಲಿಯ ಕರ್ಮಠರು ಒಳಗೆ ಬಿಡಲಿಲ್ಲ. ಆಗ ಪಶ್ಚಿಮದಲ್ಲಿ ನಿಂತು ಕೃಷ್ಣರು ಹಾಡಿದರು. ದಾಸರ ಭಕ್ತೊಗೊಲಿದ ಕೃಷ್ಣ ಪಶ್ಚಿಮಕ್ಕೆ ತಿರುಗಿದ. ಅಲ್ಲೊಂದು ಕಿಂಡಿ ನಿರ್ಮಾಣವಾಯಿತು. ಕಿಂಡಿಯಲ್ಲಿ ದಾಸರಿಗೆ ದರ್ಶನ ಕೊಟ್ಟ ಎಂಬ ಅದ್ಭುತವಾದ ಹಾಗೂ ತಲೆ ಬುಡವಿಲ್ಲದ ಕಥೆ ಹೆಣೆಯಲಾಯಿತು.
ಸುರೋತ್ತಮ ತೀರ್ಥರಿಂದ ಪ್ರಸ್ತಾವ
ಕೃಷ್ಣನನ್ನು ಆಚಾರ್ಯ ಮಧ್ವರು ಪ್ರತಿಷ್ಠೆ ಮಾಡಿದ್ದೇ ಪಶ್ಚಿಮಾಭಿಮುಖವಾಗಿ. ಹಾಗೆಂದು ಸುರೋತ್ತಮತೀರ್ಥರು ತಾವು ರಚಿಸಿದ ವಿಷ್ಣುತೀರ್ಥೀಯ ಸಂನ್ಯಾಸ ಪದ್ಧತಿಯ ಟೀಕೆಯಲ್ಲಿ ಉಲ್ಲೇಖಿಸಿದ್ದನ್ನು ನಾನು ನೋಡಿದ್ದೇನೆ. ಸುರೋತ್ತಮ ತೀರ್ಥರು ವಾದಿರಾಜರ ಸೋದರ. ಕನಕದಾಸರ ಸಮಕಾಲೀನರು ಎಂದ ಮೇಲೆ ಅವರ ಮಾತಿಗೆ ತುಂಬ ಮಹತ್ವವಿದೆ. ಈ ಕಥೆಯನ್ನು ನಂಬುವವರಿಗೆ ಅದು ನುಂಗಲಾರದ ತುತ್ತು.
ಕೃಷ್ಣ ಮಠದ ವಾಸ್ತು ಪರಿಶೀಲಿಸಲಿ
ಕೃಷ್ಣ ಮಠದ ವಾಸ್ತುವನ್ನು ಪರಿಶೀಲಿಸಿದರೂ ಇದು ಸ್ಫುಟವಾಗುತ್ತದೆ. ಮುಖ ಮಂಟಪವಿರುವುದು ಪಶ್ಚಿಮದಲ್ಲಿ: ಪುರಾಣ ಪ್ರವಚನ ಚಂದ್ರಶಾಲೆಯಿರುವುದು ಪಶ್ಚಿಮದಲ್ಲಿ. ಎಲ್ಲಾದರೂ ದೇವರ ಹಿಂದುಗಡೆ ಮುಖಮಂಟಪ ಇರುವುದುಂಟಾ? ದೇವರ ಬೆಂಗಡೆ ಕೂತು ಪುರಾಣ ಕೇಳುವುದುಂಟಾ?
ಯತಿಗಳು ಜಪಕ್ಕೆ ಕೂಡುವ ಕೋಣೆ
ಪೂರ್ವದ ಬಾಗಿಲಿಗೆ ಎದುರಾಗಿ ಕೃಷ್ಣ ಇದ್ದ ಎನ್ನುತ್ತಾರೆ. ಪೂರ್ವದಲ್ಲಿ ಬಾಗಿಲೇನೋ ಇದೆ. ಈಗ ಆ ಬಾಗಿಲನ್ನು ಮುಚ್ಚಿ ಚೆನ್ನಕೇಶವ ವಿಗ್ರಹ ಇಟ್ಟಿದ್ದಾರೆ. ವರ್ಷಕ್ಕೊಮ್ಮೆ ಕದಿರು ಕಟ್ಟುವ ದಿನ ಮಾತ್ರ ಆ ಬಾಗಿಲನ್ನು ತೆರೆಯುತ್ತಾರೆ. ಆದರೆ ಅದು ಗರ್ಭ ಗುಡಿಯ ಬಾಗಿಲಲ್ಲ. ಯತಿಗಳು ಜಪಕ್ಕೆ ಕೂಡುವ ಕೋಣೆಯ ಬಾಗಿಲು. ಕೃಷ್ಣ ಇರುವುದು ಅದರಾಚೆಯ ಕೋಣೆಯಲ್ಲಿ.
ನಂಬುವವರಿಗೆ ತರ್ಕ ಬೇಕಿಲ್ಲ
ಹಾಗಾಗಿ ಕೃಷ್ಣ ಬರಿದೆ ತಿರುಗಿದರೆ ಸಾಲದು. ಈ ಕೋಣೆಯಿಂದ ಆಚೆಯ ಕೋಣೆಗೆ ನೆಗೆಯಬೇಕು. ನೆಗೆದು ತಿರುಗಿ ನಿಲ್ಲಬೇಕು. ಅವನು ತಿರುಗಿ ನಿಂತ ಜಾಗದಲ್ಲಿ ಗರ್ಭಗುಡಿಯ ಗೋಡೆ ಒಡೆಯಬೇಕು. ಮತ್ತು ಬೀದಿಯ ಬದಿಯ ಪಶ್ಚಿಮ ಗೋಡೆ ಒಡೆಯಬೇಕು. ಎಷ್ಟೆಲ್ಲ ಅಧ್ವಾನಗಳು. ಕೃಷ್ಣನಿಗಾಗಿ, ಕನಕರಿಗಾಗಿ ಇಷ್ಟೆಲ್ಲ ಕಥೆ ಕಟ್ಟಬೇಕಾ? ಆದರೆ ನಂಬುವವರಿಗೆ ತರ್ಕ ಬೇಕಿಲ್ಲ. ಅವರು ತರ್ಕಾತೀತರು! ಎಲ್ಲ ಅಸಂಭವವೂ ದೇವರ ಮಹಿಮೆಯಿಂದ ಸಂಭವವಾಗಿ ಬಿಡುತ್ತದೆ.