ಮೈತ್ರಿ ಸರಕಾರ ಬೀಳಲು ಸಿದ್ದರಾಮಯ್ಯ ಕಾರಣವೆಂದರೆ ರಾಹುಲ್ ಗಾಂಧಿ?
Recommended Video
'ಸ್ವಹಿತಾಸಕ್ತಿ' ಹಾಗೂ 'ಪಕ್ಷದೊಳಗಿನ ಕಾರಣಗಳು' ಸೇರಿ ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ವಿಶ್ವಾಸ ಮತ ಕಳೆದುಕೊಳ್ಳುವಂತೆ ಆಗಿದೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚನೆ ವೇಳೆ ಸೋಲೊಪ್ಪಿದ ಕೂಡಲೇ ರಾಹುಲ್ ಗಾಂಧಿ ಅವರು ತುಂಬ ಆಲೋಚನೆ ಮಾಡಿ, ತೂಕ ಹಾಕಿ ಪದಗಳ ಬಳಕೆ ಮಾಡಿದ್ದಾರೆ.
"ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಪಕ್ಷದೊಳಗಿನ ಹಾಗೂ ಹೊರಗಿನ ಸ್ವಹಿತಾಸಕ್ತಿಗಳಿಗೆ ಗುರಿಯಾಗಿದೆ. ಈ ಮೈತ್ರಿ ಕೂಟವನ್ನು ತಮ್ಮ ಅಧಿಕಾರದ ಹಾದಿಯ ಅಡೆತಡೆ, ಆತಂಕ ಎಂದು ಅವರು ಭಾವಿಸಿದ್ದರು. ಅವರ ದುರಾಸೆ ಇಂದು ಗೆದ್ದಿದೆ. ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಹಾಗೂ ಕರ್ನಾಟಕದ ಜನರು ಸೋತಿದ್ದಾರೆ" ಎಂದು ರಾಹುಲ್ ಹೇಳಿದ್ದಾರೆ.
ರಾಜಕೀಯದ ಪಗಡೆಯಾಟದಲ್ಲಿ ಬಿಎಸ್ ವೈ ಗೆದ್ದಿದ್ದು ಯಾಕೆ?
"ಪ್ರಭಾವಿಗಳೇ ಅಧಿಕಾರಕ್ಕೆ ಬರುವುದು ಭಾರತದಲ್ಲಿ ಅಭ್ಯಾಸ ಆಗಿಬಿಟ್ಟಿದೆ. ಯಾರೂ ಅಧಿಕಾರ ತ್ಯಾಗ ಮಾಡಲ್ಲ. ಆದರೆ ಅಧಿಕಾರದ ಆಸೆಯನ್ನು ತ್ಯಜಿಸದೆ ಹಾಗೂ ಗಟ್ಟಿಯಾದ ತಾತ್ವಿಕ ಹೋರಾಟ ಇಲ್ಲದಿದ್ದರೆ ನಮ್ಮ ವಿರೋಧಿಗಳನ್ನು ಮಣಿಸಲು ಸಾಧ್ಯವಿಲ್ಲ" ಎಂದು ಲೋಕಸಭಾ ಚುನಾವಣೆ ಸೋಲಿನ ನಂತರ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದರು.
ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಅತೃಪ್ತಿ
ಸಿದ್ದರಾಮಯ್ಯ ಅವರು ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೇವೇಗೌಡರು, ಕುಮಾರಸ್ವಾಮಿ ದೂರಿದ್ದರು. ಅದೇ ವೇಳೆ, ಈಗ ರಾಜಕೀಯ ಬಿಕ್ಕಟ್ಟು ತಲೆದೋರಲು ಹಾಗೂ ಕುಮಾರಸ್ವಾಮಿ ಸರಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಡಿ. ಕೆ. ಶಿವಕುಮಾರ್ ಕೂಡ ಹೈ ಕಮಾಂಡ್ ಗೆ ಹೇಳಿದ್ದಾರೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಅತೃಪ್ತಿ ಇದೆ ಎಂಬುದು ರಾಹುಲ್ ಗಾಂಧಿ ಅವರು ಟ್ವೀಟ್ ನಲ್ಲಿರುವಂತೆಯೇ ಸತ್ಯ. ಗುಂಪುಗಳಾಗಿ ಕಾಂಗ್ರೆಸ್ ಛಿದ್ರವಾಗಿದ್ದು, ಪ್ರಬಲ ಗುಂಪು ಸಿದ್ದರಾಮಯ್ಯ ಅವರ ಮಾತನ್ನು ಕೇಳುತ್ತದೆ. "ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಮುಗಿಸಿಬಿಡುತ್ತದೆ" ಎಂಬುದು ಆ ಗುಂಪಿನ ವಾದವಾಗಿದೆ. ಅಂದ ಹಾಗೆ ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರ ಹಿಡಿತ ಪ್ರಬಲವಾಗಿದೆ. ಆದರೆ ಕೇಂದ್ರ ನಾಯಕರ ವಿಶ್ವಾಸಾರ್ಹ ನಾಯಕರಾಗಿರುವ ಡಿ. ಕೆ. ಶಿವಕುಮಾರ್ ಮೈತ್ರಿ ಉಳಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಇನ್ನು ತಳ ಮಟ್ಟದಲ್ಲೂ ಎರಡೂ ಪಕ್ಷಗಳ ಬೆಂಬಲಿಗರನ್ನು ಒಗ್ಗೂಡಿಸಲು ಆಗಲೇ ಇಲ್ಲ.
ಲೋಕಸಭೆ ಸೋಲಿನ ಹೊಣೆ ಸಿದ್ದು ತಲೆಗೆ ಕಟ್ಟಿದ ಬೇಗ್
ಪರಿಸ್ಥಿತಿ ಹೀಗಿದ್ದಾಗಲೇ ಲೋಕಸಭಾ ಚುನಾವಣೆ ಎದುರಾಯಿತು. ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನದಲ್ಲಿ ಜಯಿಸಿದವು. ಇಂಥ ಹೀನಾಯ ಸೋಲನ್ನು ಕಾಂಗ್ರೆಸ್ ನಾಯಕ ರೋಶನ್ ಬೇಗ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ, ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಹೊಣೆಯನ್ನು ಸಿದ್ದು ತಲೆಗೆ ಕಟ್ಟಿದರು. ಸಾರ್ವಜನಿಕವಾಗಿ ಬಯ್ದುಕೊಂಡು ಓಡಾಡಿದರು. ಆ ನಂತರ ಬೇಗ್ ಅವರನ್ನು ಅಮಾನತು ಮಾಡಲಾಯಿತು. ಅತೃಪ್ತಿ- ಅಸಮಾಧಾನ ಮತ್ತೂ ಹೆಚ್ಚಾಯಿತು. ಲೋಕಸಭಾ ಚುನಾವಣೆ ಸೋಲಿನ ನಂತರ ದೆಹಲಿಯಲ್ಲಿ ಜೂನ್ ನಲ್ಲಿ ರಾಹುಲ್ ಗಾಂಧಿ ಜತೆ ಎರಡು ಸಭೆ ನಡೆಯಿತು. ಮೊದಲಿಗೆ ದೇವೇಗೌಡರು ದೂರಿದರು. ಸರಕಾರಕ್ಕೆ ಸಿದ್ದರಾಮಯ್ಯ ನಿಯಮಗಳನ್ನು ಹಾಕುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಸರಕಾರ ನಡೆಸಲು ಕುಮಾರಸ್ವಾಮಿಗೆ ಬಿಡುತ್ತಿಲ್ಲ. ಸಿದ್ದು ಮತ್ತು ಬೆಂಬಲಿಗರನ್ನು ಹದ್ದುಬಸ್ತಿನಲ್ಲಿ ಇಡಲಿಲ್ಲ ಅಂದರೆ ಮೈತ್ರಿ ಸರಕಾರ ನಡೆಯುವುದು ಕಷ್ಟ ಎಂದಿದ್ದರು.
ತೃಪ್ತಿ ಇಲ್ಲ ಎಂದಿದ್ದ 'ಅತೃಪ್ತ'ರಿಗೆ ಎಚ್ಡಿಕೆ ಹರಿಸಿದ್ದ ಅನುದಾನದ ಹೊಳೆ
ಭೇಟಿಗಾಗಿ ಎರಡು ದಿನ ಸಿದ್ದರಾಮಯ್ಯರನ್ನು ಕಾಯಿಸಿದ್ದ ರಾಹುಲ್
ಎರಡನೇ ಭೇಟಿಯು ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಮಧ್ಯೆ ನಡೆದಿತ್ತು. ಈ ಇಬ್ಬರ ಮಧ್ಯೆ ನಡೆದ ಮಾತುಕತೆ ಬಗ್ಗೆ ವಿವರ ಸಂಪೂರ್ಣ ಹೊರಬರಲಿಲ್ಲ. ಆದರೆ ಭೇಟಿಗಾಗಿಯೇ ಸಿದ್ದರಾಮಯ್ಯ ಅವರನ್ನು ಎರಡು ದಿನ ಕಾಯಿಸಿದ್ದ ರಾಹುಲ್ ಗಾಂಧಿ, ತಮ್ಮ ಅಸಮಾಧಾನವನ್ನು ಆ ರೀತಿ ಹೊರಹಾಕಿದ್ದರು. ಭೇಟಿ ಆಗಿ ಕೆಲ ಗಂಟೆಗಳನ್ನು ಕರ್ನಾಟಕ ಕಾಂಗ್ರೆಸ್ ಸಮಿತಿಯನ್ನು ವಿಸರ್ಜಿಸಿದ್ದರು. ಅದಾಗಿ ಎರಡು ವಾರಕ್ಕೆ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಶುರುವಾಯಿತು. ಜುಲೈ ಆರನೇ ತಾರೀಕಿನ ಹೊತ್ತಿಗೆ ರಾಜೀನಾಮೆ ನೀಡಿದವರ ಸಂಖ್ಯೆ; ಕಾಂಗ್ರೆಸ್ ನಿಂದ ಹತ್ತು ಹಾಗೂ ಜೆಡಿಎಸ್ ನಿಂದ ಮೂರು ಸೇರಿ, ಒಟ್ಟು ಹದಿಮೂರಾಗಿತ್ತು. ಎಲ್ಲರೂ ತಮ್ಮ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ಸಲ್ಲಿಸಿದರು. ಕುಮಾರಸ್ವಾಮಿ ನೇತೃತ್ವದ ಸರಕಾರ ಪತನ ಆಗಲು ಕ್ಷಣಗಣನೆ ಆರಂಭವಾಯಿತು.
ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡುವ ಪ್ರಸ್ತಾವ ಒಪ್ಪಲಿಲ್ಲ
ಯಾವಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತೋ ಮೂರನೇ ಭೇಟಿ ದೇವೇಗೌಡ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯೆ ನಡೆಯಿತು. ಆ ವೇಳೆಗೆ, ಜೆಡಿಎಸ್ ನಾಯಕರಿಗೆ ಸ್ವತಃ ಶಿವಕುಮಾರ್ ಹೇಳಿದ್ದರು: ಈ ಅತೃಪ್ತರ ಹಿಂದಿರುವುದು ಸಿದ್ದರಾಮಯ್ಯ. "ನನಗೆ ಗೊತ್ತಿದೆ, ರಾಜ್ಯದ ರಾಜಕೀಯ ಬಿಕ್ಕಟ್ಟಿನ ಹಿಂದೆ ಇರುವುದು ಸಿದ್ದರಾಮಯ್ಯ. ಯಾರು ಈಗ ರಾಜೀನಾಮೆ ನೀಡಿದ್ದಾರೋ ಅವರೆಲ್ಲ ಸಿದ್ದರಾಮಯ್ಯ ಬೆಂಬಲಿಗರು" ಎಂದು ದೇವೇಗೌಡರು ಜುಲೈ ಏಳರಂದು ಘೋಷಿಸಿದರು. "ಸರಕಾರವನ್ನು ಉಳಿಸಿಕೊಳ್ಳಬೇಕು ಅಂದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು" ಎಂದು ಡಿಕೆಶಿ ಹೇಳಿದ ಸಲಹೆಗೆ ಕೂಡ ದೇವೇಗೌಡರು ಒಪ್ಪಲಿಲ್ಲ. ನೂರಾ ಹದಿನೆಂಟರ ಸಂಖ್ಯೆ ಹೊಂದಿದ್ದ ಕುಮಾರಸ್ವಾಮಿ ಸರಕಾರವು ಮಂಗಳವಾರ ಸಂಜೆ ಹೊತ್ತಿಗೆ ತೊಂಬತ್ತೊಂಬತ್ತು ತಲುಪಿತು. ವಿಶ್ವಾಸ ಮತ ಸಾಬೀತು ಪಡಿಸಲು ಆಗಲೇ ಇಲ್ಲ.
ಸಿಎಂ ಆಗುವ ಉತ್ಸಾಹದ ಬೆನ್ನಲ್ಲೇ ಮತ್ತೆ ಹೆಸರು ಬದಲಿಸಿಕೊಂಡ ಯಡಿಯೂರಪ್ಪ?