ಎಷ್ಟು ದಿನ ಬದುಕಿರುತ್ತೀನೋ ಗೊತ್ತಿಲ್ಲ: ಮುತ್ತಪ್ಪ ರೈ
Recommended Video
ಬೆಂಗಳೂರು, ಜನವರಿ 20: 'ಕ್ಯಾನ್ಸರ್ ಕಾಯಿಲೆ ಬಾಧಿಸುತ್ತಿರುವುದು ನಿಜ, ಇನ್ನೆಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ' ಎಂದು ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಹೇಳಿದ್ದಾರೆ.
ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಲೆಂದೇ ಸೋಮವಾರ ಸುದ್ದಿಗೋಷ್ಠಿ ಕರೆದು ಅವರು ಮಾತನಾಡಿದ್ದಾರೆ.
'ಕ್ಯಾನ್ಸರ್ ನನ್ನನ್ನು ಸಾವಿನ ಅಂಚಿಗೆ ತಳ್ಳಿರುವುದು ನಿಜ ಆದರೆ ಪವಾಡಸದೃಶ ರೀತಿಯಲ್ಲಿ ಹೇಗೋ ಬದುಕುತ್ತಿದ್ದೀನಿ' ಎಂದು ಕೃಶ ದನಿಯಲ್ಲಿ ಮುತ್ತಪ್ಪ ರೈ ಹೇಳಿದ್ದಾರೆ.
ಅನಾರೋಗ್ಯ: ಏಮ್ಸ್ ಆಸ್ಪತ್ರೆಗೆ ಮುತ್ತಪ್ಪ ರೈ ದಾಖಲು
ಹಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತಪ್ಪ ರೈ, ದೆಹಲಿ, ಚೆನ್ನೈ, ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಹೆಚ್ಚಿನ ಚೇತರಿಕೆ ಅವರ ಆರೋಗ್ಯದಲ್ಲಿ ಕಂಡು ಬಂದಿಲ್ಲ.
ಮೊದಲು ಬೆನ್ನು ನೋವು ಕಾಣಿಸಿಕೊಂಡಿತು: ರೈ
ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ ಮುತ್ತಪ್ಪ ರೈ, 'ಕೆಲವು ತಿಂಗಳುಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವಾಗ ಬೆನ್ನು ನೋವು ಕಾಣಿಸಿಕೊಂಡಿತು, ನಂತರ ಪರೀಕ್ಷೆ ಮಾಡಿಸಿದಾಗ ಯಕೃತ್ (ಲಿವರ್) ಕ್ಯಾನ್ಸರ್ ಇರುವುದು ಪತ್ತೆಯಾಯಿತು' ಎಂದರು.
ಮೆದುಳಿಗೆ ಕ್ಯಾನ್ಸರ್ ತಗುಲಿತ್ತು: ಮುತ್ತಪ್ಪ ರೈ
'ಲಿವರ್ ಕ್ಯಾನ್ಸರ್ ಗುಣವಾಯಿತು ಆದರೆ ಮೆದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಪತ್ತೆ ಆಯಿತು. ಕೆಲವು ತಿಂಗಳಷ್ಟೆ ಬದುಕುವುದಾಗಿ ವೈದ್ಯರು ಹೇಳಿಬಿಟ್ಟಿದ್ದಾರೆ ಹಾಗಾಗಿ ಕೊನೆಯ ದಿನಗಳನ್ನು ಕಳೆಯಲು ಬಿಡದಿಗೆ ಬಂದಿದ್ದೇನೆ' ಎಂದು ಕೊನೆಯ ದಿನಗಳನ್ನು ಎಣಿಸುತ್ತಿರುವುದಾಗಿ ಒಂದು ಕಾಲದ ಭೂಗತ ದೊರೆ ಮುತ್ತಪ್ಪ ರೈ ಹೇಳಿದರು.
ಐದು ಗುಂಡು ಬಿದ್ದರೂ ಬದುಕಿದ್ದೇನೆ: ಮುತ್ತಪ್ಪ ರೈ
'ನನಗೀಗ 68 ವರ್ಷ, ಐದು ಗುಂಡು ಬಿದ್ದಿದ್ದರೂ ಬದುಕಿ ಬಂದಿದ್ದೇನೆ, ಸಾವಿಗೆ ಎಂದೂ ಹೆದರಿದವನು ನಾನಲ್ಲ. ಅದೇ ಇಚ್ಛಾಶಕ್ತಿಯಿಂದ ಕ್ಯಾನ್ಸರ್ ಅನ್ನು ಎದುರಿಸಿ ಬದುಕುತ್ತಿದ್ದೇನೆ, ಜೀವ ಇರುವವರೆಗೂ ಸಮಾಜ ಸೇವೆ ಮುಂದುವರೆಸುತ್ತೀನಿ' ಎಂದು ಹೇಳಿದ್ದಾರೆ.
ಆಸ್ತಿ ಹಂಚಿಕೆ ಮಾಡಿದ್ದೇನೆ: ಮುತ್ತಪ್ಪ ರೈ
ತಮ್ಮ ಆಸ್ತಿ ಬಗ್ಗೆಯೂ ಮಾತನಾಡಿದ ಮುತ್ತಪ್ಪ ರೈ, 'ವರ್ಷಕ್ಕೆ 25-30 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ, ಆಸ್ತಿ ಕುರಿತಾಗಿ ಈಗಾಗಲೇ ವಿಲ್ ಮಾಡಿಸಿಟ್ಟಿದ್ದೀನಿ, ಮಕ್ಕಳಿಗೂ ವಿಷಯ ಹೇಳಿದ್ದೀನಿ' ಎಂದರು.
ಜೊತೆ ಗಿದ್ದವರಿಗೆ ನಿವೇಶನ ಹಂಚುತ್ತೇನೆ: ಮುತ್ತಪ್ಪ ರೈ
'ನನ್ನ ಜೊತೆಗೆ ಇಷ್ಟು ದಿನ ಇದ್ದ ಎಲ್ಲರಿಗೂ ಒಂದೊಂದು ನಿವೇಶನ ಕೊಡುತ್ತಿದ್ದೀನಿ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ' ಎಂದು ಹೇಳಿದರು.