ಕರ್ನಾಟಕ ಕೊರೊನಾ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿರ್ವಹಿಸಿದೆ; ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ
ನವದೆಹಲಿ, ಜೂನ್ 22: ಉಕ್ಕು, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಕರ್ನಾಟಕದಲ್ಲಿ ಸಾರ್ವಜನಿಕ ವಲಯದ ಉಕ್ಕು ಘಟಕ ʻಕೆಐಒಸಿಎಲ್ʼ ಕಾರ್ಯಗತಗೊಳಿಸಿದ ಹಲವಾರು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಿದರು.
ಕರ್ನಾಟಕದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ಆಮ್ಲಜನಕ ಉತ್ಪಾದನಾ ಘಟಕʼ, ಮಂಗಳೂರಿನ ಮೂಡಬಿದರೆಯ ಸರ್ಕಾರಿ ಆಸ್ಪತ್ರೆಯಲ್ಲಿನ 50 ಹಾಸಿಗೆಗಳ ದೇಣಿಗೆ, ತುಮಕೂರು ಜಿಲ್ಲೆಯ 5 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ, ಮಂಗಳೂರು ಪೈಲಟ್ ಸ್ಥಾವರದಲ್ಲಿ ಬ್ಯಾರೆಲ್ ಮಾದರಿಯ ಬ್ಲೆಂಡರ್ ರೀಕ್ಲೈಮರ್ ಇವೆಲ್ಲವನ್ನೂ ವರ್ಚುಯಲ್ ಆಗಿ ಉದ್ಘಾಟನೆ ಮಾಡಿದರು.
ಉಕ್ಕು ಘಟಕಗಳಿಂದ 4076 ಎಂಟಿ ದ್ರವೀಕೃತ ವೈದ್ಯಕೀಯ ಆಮ್ಲಜನಕ ಪೂರೈಕೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ಅಭೂತಪೂರ್ವ ಸವಾಲುಗಳು ಎದುರಾಗಿವೆ. ಆರೋಗ್ಯ ವ್ಯವಸ್ಥೆಯ ಮೇಲೆ ಅಪಾರ ಒತ್ತಡ ಉಂಟಾಗಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಅವಶ್ಯಕತೆ ಭಾರಿ ಪ್ರಮಾಣದಲ್ಲಿ ಹೆಚ್ಚಿತು. ಖಾಸಗಿ ಮತ್ತು ಸರ್ಕಾರಿ ಎರಡೂ ವಲಯದ ಉಕ್ಕು ಮತ್ತು ಪೆಟ್ರೋಲಿಯಂ ಕಂಪನಿಗಳು ಈ ಸಂದರ್ಭಕ್ಕೆ ತುರ್ತಾಗಿ ಸ್ಪಂದಿಸಿ ದ್ರವ ರೂಪದ ವೈದ್ಯಕೀಯ ಆಮ್ಲಜನಕ ಪೂರೈಸಿದವು. ಕಳೆದ ತಿಂಗಳಲ್ಲಿ ದೇಶದಲ್ಲಿ ಆಮ್ಲಜನಕದ ಅವಶ್ಯಕತೆಯು ದಿನಕ್ಕೆ 10,000 ಮೆಟ್ರಿಕ್ ಟನ್ಗೆ ಏರಿತ್ತು. ದೇಶದ ಬೇಡಿಕೆಯನ್ನು ಪೂರೈಸಲು ಉಕ್ಕು ಕಂಪನಿಗಳು ಉಕ್ಕಿನ ಉತ್ಪಾದನೆಯನ್ನೂ ತಗ್ಗಿಸಲು ಮುಂದಾದವು" ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಮುಂದೆ ಓದಿ...
ಕರ್ನಾಟಕವನ್ನು ಶ್ಲಾಘಿಸಿದ ಸಚಿವರು
"ಆಮ್ಲಜನಕ ಉತ್ಪಾದನಾ ಘಟಕಗಳು ದೇಶದ ಪೂರ್ವ ಭಾಗಗಳಲ್ಲಿವೆ. ಆದರೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಗರಿಷ್ಠ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿತ್ತು. ಆದರೂ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಲಾಯಿತು ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಯಿತು. ಇಂದು ದೇಶದಲ್ಲಿ ಆಮ್ಲಜನಕ ಸಾಂದ್ರಕಗಳು, ಸಿಲಿಂಡರ್ಗಳು ಮತ್ತು ಪಿಎಸ್ಎ ಘಟಕಗಳಿಗೆ ಕೊರತೆಯಿಲ್ಲ. ಕರ್ನಾಟಕ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿರ್ವಹಿಸಿದೆ" ಎಂದು ಕರ್ನಾಟಕ ಸರ್ಕಾರವನ್ನು ಅಭಿನಂದಿಸಿದರು. ಕರ್ನಾಟಕ ಆರಂಭಿಕ ದಿನಗಳಲ್ಲಿ ತನ್ನ ನೆರೆಯ ರಾಜ್ಯಗಳಿಗೆ ಸಹ ಆಮ್ಲಜನಕ ಒದಗಿಸಿತು ಎಂದರು.
"ಡಿಸೆಂಬರ್ ವೇಳೆಗೆ ಅರ್ಹರೆಲ್ಲರಿಗೂ ಲಸಿಕೆ"
ದೇಶದ ಲಸಿಕೆ ಅಭಿಯಾನದ ಸಾಧನೆ ಕುರಿತು ವಿವರಿಸಿದ ಪ್ರಧಾನ್, "ಸೋಮವಾರ ಒಂದೇ ದಿನ 8.2 ದಶಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಪ್ರಧಾನಿ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ದೇಶ ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ. ಈಗ ದೇಶದಲ್ಲಿ ಲಸಿಕೆಗಳು ಹೇರಳವಾಗಿ ಲಭ್ಯವಿದ್ದು, ಡಿಸೆಂಬರ್ ವೇಳೆಗೆ ಎಲ್ಲಾ ಅರ್ಹ ವಯಸ್ಕರು ಲಸಿಕೆ ಪಡೆಯುವ ಸಾಧ್ಯತೆಯಿದೆ. ಲಸಿಕೆಯ ಬಗ್ಗೆ ಜನರಲ್ಲಿ ಇರುವ ಯಾವುದೇ ರೀತಿಯ ಹಿಂಜರಿಕೆ ಅಥವಾ ನಿರ್ಲಕ್ಷ್ಯವನ್ನು ತೊಡೆದು ಹಾಕಲು ಹಾಗೂ ಅವರಲ್ಲಿರುವ ಅನುಮಾನಗಳನ್ನು ಪರಿಹರಿಸಿ ಜಾಗೃತಿ ಮೂಡಿಸಲು ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ಆರೋಗ್ಯ ವೃತ್ತಿಪರರು ಮತ್ತು ಅಧಿಕಾರಿಗಳು ಸೇರಿದಂತೆ ಎಲ್ಲರೂ ಬೆಂಬಲಿಸಬೇಕು" ಎಂದು ಕರೆ ನೀಡಿದರು.
ದೇಶದಲ್ಲಿ ಇಂಧನ ಬೆಲೆ ಏರಿಕೆ; ಕಚ್ಚಾ ತೈಲ ಬೆಲೆಯತ್ತ ಬೊಟ್ಟು ಮಾಡಿದ ಸಚಿವರು
"ಭಾರತವನ್ನು ಮುಂದಿನ ಅಲೆಯಿಂದ ರಕ್ಷಿಸಬೇಕಿದೆ"
"ಲಸಿಕೆ ಪಡೆಯಲು ಹಿಂಜರಿಕೆ ನಾವು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಸಮಾಜದಲ್ಲಿ ಲಸಿಕೆ ಹಿಂಜರಿಕೆಯನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಕೋವಿಡ್ನ 3ನೇ ಅಲೆಯಿಂದ ಭಾರತವನ್ನು ರಕ್ಷಿಸಬೇಕಾಗಿದೆ ಮತ್ತು ಅದಕ್ಕೆ ಲಸಿಕೆಯೊಂದೇ ಏಕೈಕ ಮಾರ್ಗವಾಗಿದೆ" ಎಂದು ಹೇಳಿದರು. ಲಸಿಕೆ ಆಂದೋಲನದಲ್ಲಿ ರಾಜ್ಯ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಹಾಗೂ ಒಂದೇ ದಿನ 8.7 ಲಕ್ಷ ಜನರಿಗೆ ಲಸಿಕೆ ನೀಡುವ ಮೂಲಕ ಅತಿ ಹೆಚ್ಚು ಲಸಿಕೆ ನೀಡಿದ ದೇಶದ ಎರಡನೇ ರಾಜ್ಯವಾಗಿ ಹೊರಹೊಮ್ಮಿದ್ದಕ್ಕಾಗಿ ಕರ್ನಾಟಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ʻಕೆಐಒಸಿಎಲ್ʼ ಯೋಜನೆಗಳು
ಕರ್ನಾಟಕದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ʻಕೆಐಒಸಿಎಲ್ʼ, ಸುಮಾರು 90 ಲಕ್ಷ ರೂ.ಗಳ ಹೂಡಿಕೆಯೊಂದಿಗೆ ದಿನಕ್ಕೆ 1000 ಕ್ಯೂಬಿಕ್ ಮೀಟರ್(m3) ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ದಾನ ಮಾಡಿದೆ. ಈ ಘಟಕವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಡೆಸುತ್ತಿರುವ ಕರ್ನಾಟಕದ ʻಎಐಎಂಎಸ್ʼಗೆ ಹಸ್ತಾಂತರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ʻಕೆಐಒಸಿಎಲ್ʼ 50 ಹಾಸಿಗೆಗಳನ್ನು ವಿತರಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಒದಗಿಸಲು ಕಂಪನಿಯು ಸುಮಾರು 18 ಲಕ್ಷ ರೂ. ಖರ್ಚು ಮಾಡಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಕತ್ರಿಕೆಹಾಳ್ ಗ್ರಾಮದಲ್ಲಿ 5 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಒಟ್ಟು 24.44 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಕಂಪನಿಯ ಒಟ್ಟು ಸಾಮರ್ಥ್ಯ ಈಗ 6.35 ಮೆಗಾವ್ಯಾಟ್ಗೆ ಏರಿದೆ. ʻಕೆಐಒಸಿಎಲ್ ಲಿಮಿಟೆಡ್ʼನ ವಿದ್ಯುತ್ ಅಗತ್ಯವನ್ನು ಪೂರೈಸಲು ಸೌರ ವಿದ್ಯುತ್ ಉತ್ಪಾದನೆ ಸಹಾಯ ಮಾಡುತ್ತದೆ.
ʻಕೆಐಒಸಿಎಲ್ ಲಿಮಿಟೆಡ್ʼ ಮಂಗಳೂರಿನಲ್ಲಿರುವ ತನ್ನ ವಾರ್ಷಿಕ 3.5 ಮೆಟ್ರಿಕ್ಟನ್ ಸಾಮರ್ಥ್ಯದ ಪೈಲೆಟ್ ಸ್ಥಾವರದ ಆಧುನೀಕರಣದ ಭಾಗವಾಗಿ, 17.50 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಗಂಟೆಗೆ 1000 ಟನ್ ಸಾಮರ್ಥ್ಯದ ಬ್ಯಾರೆಲ್ ಮಾದರಿಯ ಬ್ಲೆಂಡರ್ ರೀಕ್ಲೈಮರ್ ಅಳವಡಿಸಿದೆ.
Recommended Video