ಕೌಶಲ್ಯ ಕಲಿಕೆ ವ್ಯವಸ್ಥೆ: ರಾಜ್ಯದ ಸಾಧನೆಗೆ ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ
ಬೆಂಗಳೂರು, ಏಪ್ರಿಲ್ 28: ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕೌಶಲ್ಯಗಳನ್ನು ಕಲಿಸಲು ರೂಪಿಸಿರುವ ಕಾರ್ಯಕ್ರಮಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎನ್ಇಪಿ ಜಾರಿ, ಪಠ್ಯಕ್ರಮ ರಚನೆ ಮತ್ತು ರೂಪಿಸಿರುವ ಚೌಕಟ್ಟು ಇತ್ಯಾದಿಗಳನ್ನು ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜತೆ ಅವರು ಗುರುವಾರ ವಿಚಾರ ವಿನಿಮಯ ನಡೆಸಿದರು.
ಕಾಂಗ್ರೆಸ್ನ ಕಣ ಕಣದಲ್ಲೂ ಭ್ರಷ್ಟಾಚಾರ ತುಂಬಿದೆ; ಸಚಿವ ಅಶ್ವಥ್ ನಾರಾಯಣ
ನಂತರ ಮಾತನಾಡಿದ ಪ್ರಧಾನ್ ಅವರು, "ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಉದ್ಯೋಗದ ಖಾತ್ರಿಯೊಂದಿಗೆ ಬೆಸೆದು, ಕೈಗಾರಿಕಾ ಕ್ರಾಂತಿ 4.0ಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಿರುವುದು ಕ್ರಾಂತಿಕಾರಕವಾಗಿದೆ. ಜತೆಗೆ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ಈ ವರ್ಷ ರಾಜ್ಯದಲ್ಲಿ 2.50 ಲಕ್ಷ ಯುವಜನರಿಗೆ ಉಚಿತವಾಗಿ ಕೌಶಲ್ಯ ಪೂರೈಕೆ ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ," ಎಂದರು.
"ಡಿಪ್ಲೊಮಾ, ಪಾಲಿಟೆಕ್ನಿಕ್ ಮತ್ತು ಜಿಟಿಟಿಸಿ, ಕರ್ನಾಟಕ-ಜರ್ಮನ್ ತಂತ್ರಜ್ಞಾನ ಕೇಂದ್ರಗಳೆಲ್ಲವೂ ಸುಸ್ಥಿರ ಮಾದರಿಯಲ್ಲಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇಲ್ಲಿ ಭವಿಷ್ಯದ ತಂತ್ರಜ್ಞಾನಗಳಾದ ಕ್ಲೌಡ್ ಕಂಪ್ಯೂಟಿಂಗ್, ರೋಬೋಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಅನಿಮೇಷನ್, ಆಟೋಮೇಷನ್ ಮುಂತಾದ ಕೋರ್ಸುಗಳನ್ನು ರೂಪಿಸಿರುವುದು ಗಮನಾರ್ಹವಾಗಿದೆ. ಈ ಮಾದರಿಯನ್ನು ಉಳಿದವರೂ ಅನುಸರಿಸಬಹುದು," ಎಂದು ಅವರು ಅಭಿಪ್ರಾಯಪಟ್ಟರು. ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಿಂದ ಎನ್ಇಪಿ ಜಾರಿಗೊಳಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ನಾಗೇಶ್ ಅವರು ವಿವರಿಸಿದರು.
ಪ್ರತಿಪಕ್ಷಗಳದು ಬರೀ ವೋಟ್ ಬ್ಯಾಂಕ್ ರಾಜಕಾರಣ: ಅಶ್ವತ್ಥನಾರಾಯಣ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸಿ, ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ಮೋದಿ ನೀಡಿದ ರಾಷ್ಟ್ರಹಿತದ ಕರೆಗೆ ಬಿಜೆಪಿಯೇತರ ರಾಜ್ಯ ಸರಕಾರಗಳು ಸ್ಪಂದಿಸುವ ಅವಕಾಶವನ್ನು ಕ್ಷುಲ್ಲಕ ರಾಜಕಾರಣಕ್ಕಾಗಿ ಕೈಚೆಲ್ಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ರಾಜ್ಯ ಮಟ್ಟದಲ್ಲಿ ಕನ್ನಡ, ರಾಷ್ಟ್ರಮಟ್ಟದಲ್ಲಿ ಹಿಂದಿ ಎಂದ ಅಶ್ವತ್ಥನಾರಾಯಣ
ಗುರುವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರತಿಪಕ್ಷಗಳು ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಗಂಭೀರವಾಗಿಲ್ಲ. ಬದಲಿಗೆ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಅವು ಮುಳುಗಿವೆ. ಕೋವಿಡ್ ಸಂಕಷ್ಟದ ನಡುವೆಯೂ ಮೋದಿಯವರು ಅಭಿವೃದ್ಧಿಪರ ರಾಜಕಾರಣಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ," ಎಂದರು.
"ಹಿಂದೊಮ್ಮೆ ಕೇಂದ್ರ ಸರಕಾರ ತೈಲೋತ್ಪನ್ನಗಳ ಮೇಲಿನ ತೆರಿಗೆ ಇಳಿಸಿತ್ತು. ಆಗ ಕರ್ನಾಟಕ ಸರಕಾರ ಕೂಡ ಅದಕ್ಕೆ ಪೂರಕವಾಗಿ ಸ್ಪಂದಿಸಿ, ತನ್ನ ಜನಪರತೆಯನ್ನು ತೋರಿಸಿತ್ತು. ದೇಶವು ಕಳೆದ ಎಂಟು ವರ್ಷಗಳಲ್ಲಿ ವಿಶ್ವದ ಮೂರನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 10 ಟ್ರಿಲಿಯನ್ ಮೊತ್ತದ ಆರ್ಥಿಕತೆಯನ್ನು ಬೆಳೆಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ. ಇದು ಕೆಲವೇ ವರ್ಷಗಳಲ್ಲಿ ಸಾಕಾರಗೊಳ್ಳಲಿದೆ," ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
"ಬಿಜೆಪಿ ನೇತೃತ್ವದಲ್ಲಿ ದೇಶವು ರಕ್ಷಣಾ ವ್ಯವಸ್ಥೆ, ಸೌರಶಕ್ತಿ, ಪರಿಸರಸ್ನೇಹಿ ಇಂಧನ, ಸೆಮಿ ಕಂಡಕ್ಟರ್, ಮೂಲಸೌಕರ್ಯ ಇತ್ಯಾದಿ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿದೆ. ಈ ಮೂಲಕ ಆತ್ಮನಿರ್ಭರ ಭಾರತದ ನಿರ್ಮಾಣದ ಹೊಂಗನಸನ್ನು ನನಸು ಮಾಡುವತ್ತ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಕಲ್ಪನೆಯೂ ಇರಲಿಲ್ಲ," ಎಂದು ಅವರು ವಾಗ್ದಾಳಿ ನಡೆಸಿದರು.
"ಕೋವಿಡ್ ಸಂದರ್ಭದ ಎರಡು ವರ್ಷಗಳಲ್ಲಿ ಅನೇಕ ದೇಶಗಳು ತತ್ತರಿಸಿ ಹೋಗಿವೆ. ಆದರೆ ಮೋದಿಯವರ ನೇತೃತ್ವದಲ್ಲಿ ದೇಶವು ಶೇ.7.8ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. ಹಣದ ಸದ್ವಿನಿಯೋಗ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿರುವುದೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಇದನ್ನು ಕಂಡು ಪ್ರತಿಪಕ್ಷಗಳು ದಿಕ್ಕೆಟ್ಟು ಹೋಗಿದ್ದು, ಹತಾಶ ರಾಜಕಾರಣದ ದಿವಾಳಿತನವನ್ನು ಪ್ರದರ್ಶಿಸುತ್ತಿವೆ," ಎಂದು ಅಶ್ವತ್ಥನಾರಾಯಣ ಹೇಳಿದರು.
Recommended Video