ತಮಿಳುನಾಡು ರಾಜ್ಯಪಾಲರಾಗಿ ಡಿ.ಎಚ್.ಶಂಕರಮೂರ್ತಿ ಆಯ್ಕೆ?
ಬೆಂಗಳೂರು, ಆಗಸ್ಟ್ 11 : ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ತಮಿಳುನಾಡು ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ಇದೆ. ಸಂಸತ್ ಅಧಿವೇಶನ ಮುಗಿದ ಬಳಿಕ ಈ ಕುರಿತು ಆದೇಶ ಹೊರಬೀಳುವ ನಿರೀಕ್ಷೆ ಇದೆ.
ನೈಋತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿರುವ ಡಿ.ಎಚ್.ಶಂಕರಮೂರ್ತಿ (76) ಅವರ ಸದಸ್ಯತ್ವದ ಅವಧಿ 2018ಕ್ಕೆ ಅಂತ್ಯಗೊಳ್ಳಲಿದೆ. ಅಷ್ಟರೊಳಗೆ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡುವ ಸಾಧ್ಯತೆ ಇದೆ.[ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈ ಕುರಿತು ಶಂಕರಮೂರ್ತಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಸದ್ಯ, ತಮಿಳುನಾಡು ರಾಜ್ಯಪಾಲರಾಗಿರುವ ರೋಸಯ್ಯ ಅವರ ಅವಧಿ ಆಗಸ್ಟ್ 31ಕ್ಕೆ ಅಂತ್ಯಗೊಳ್ಳಲಿದೆ.[ಕರ್ನಾಟಕ ಮಾಜಿ ರಾಜ್ಯಪಾಲ ಠಾಕೂರ್ ವಿಧಿವಶ]
ರೋಸಯ್ಯ ಅವರಿಂದ ತೆರವಾಗುವ ಸ್ಥಾನಕ್ಕೆ ಶಂಕರಮೂರ್ತಿ ಅವರನ್ನು ನೇಮಿಸಲು ಕೇಂದ್ರ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಸದ್ಯ ನಡೆಯುತ್ತಿರುವ ಸಂಸತ್ ಅಧಿವೇಶನ ಅಂತ್ಯಗೊಂಡ ಬಳಿಕ ಈ ಕುರಿತು ಆದೇಶ ಹೊರಬೀಳುವ ಸಾಧ್ಯತೆ ಇದೆ.[ಕರ್ನಾಟಕದ ಪ್ರಥಮ ಪ್ರಜೆಗಳ ಪಟ್ಟಿ 1956-2014]
1988ರಿಂದ ಶಂಕರಮೂರ್ತಿ ಅವರು ನೈಋತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆ ಯಾಗುತ್ತಿದ್ದಾರೆ. ಪರಿಷತ್ ಸಭಾಪತಿಯಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿ, ಪರಿಷತ್ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ.