ಐಪಿಎಸ್ ಅಧಿಕಾರಿ ಡಾ ಪಿ ರವೀಂದ್ರನಾಥ್ ಹೈಡ್ರಾಮಾ: ಡಿಜಿ ಕಚೇರಿವರೆಗೆ ಕಾಲ್ನಡಿಗೆ
ಬೆಂಗಳೂರು, ಮೇ 12: ಹಿರಿಯ ಐಪಿಎಸ್ ಅಧಿಕಾರಿ ಡಾ ಪಿ ರವೀಂದ್ರನಾಥ್ ರವರ ಆವೇಶ ಇನ್ಸ್ಪೆಕ್ಟರ್ ಮೇಲೆ ಬಿದ್ದಿತ್ತು. ರವೀಂದ್ರನಾಥ್ ರವರು ರಾಜೀನಾಮೆ ಕೊಟ್ಟ ಕಾರಣಕ್ಕೆ ಅವರನ್ನು ಮನವೊಲಿಸಲು ಮತ್ತು ಸಾಂತ್ವನ ಹೇಳಲು ಬಂದಿದ್ದ ಕಾರ್ಯಕರ್ತರೇ ಅವಕ್ಕಾಗಾಗುವ ಘಟನೆ ನಡೆಯಿತು. ಅದೇನಾಗುತ್ತಿದೆ ಎಂದು ಅರಿವಿಗೆ ಬರುವ ಮುನ್ನವೇ ಡಿಜಿಪಿ ಸಾಹೇಬರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಡೆಯಲು ಪ್ರಾರಂಭಿಸಿಯೇ ಬಿಟ್ಟರು.
ಸಿಐಡಿ ಕಚೇರಿಯ ಮುಂದೆ ನಡೆಯಿತು ಹೈಡ್ರಾಮ..
ತರಬೇತಿ ವಿಭಾಗದ ಡಿಜಿಯಾಗಿರುವ ಡಾ. ಪಿ ರವೀಂದ್ರನಾಥ್ ಅವರು ಎರಡು ದಿನದ ಹಿಂದೆ ತನ್ನ ಹುದ್ದೆಗೆ ರಾಜೀನಾಮೆ ನೀಡಿರೋದಾಗಿ ಹೇಳಿಕೆ ನೀಡಿದ್ದರು . ಹಾಗೆ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿ ಕೆಲ ಅಧಿಕಾರಿಗಳ ಮೇಲೆ ಸಿಟ್ಟು ಹೊರಹಾಕಿದ್ದರು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ರಾಜಕಾರಣಿಗಳು ಪಿ ರವೀಂದ್ರನಾಥ್ ಪರವಾಗಿ ಮಾತನಾಡಿದ್ದರು. ಎಎಪಿ ಪಕ್ಷದ ಕೂಡ ಹಿಂದೆ ಬೀಳಲಿಲ್ಲ. ರವೀಂದ್ರನಾಥ್ ರವರ ಮನವೊಲಿಸಿ ರಾಜಿನಾಮೆ ವಾಪಾಸ್ ಪಡೆಯುವಂತೆ ಮನವಿ ಮಾಡಲೆಂದೇ ನಿವೃತ್ತ ಕೆಎಎಸ್ ಅಧಿಕಾರಿ ಮಥಾಯ್ ಹಾಗು ಆಪ್ ಕಾರ್ಯಕರ್ತರು ಸಿಐಡಿ ಕಚೇರಿಗೆ ಆಗಮಿಸಿದ್ದರು. ಸಿಐಡಿ ಕಚೇರಿಯ ಒಳಭಾಗಕ್ಕೆ ಆಪ್ ಕಾರ್ಯಕರ್ತರನ್ನು ಬಿಡದೇ ಭದ್ರತೆಗೆ ನಿಯೋಜಿಸಿದ್ದ ಕಾರ್ಯಕರ್ತರು ತಡೆದಿದ್ದಾರೆ. ಅವರನ್ನು ಒಳ ಬಿಡದ ಹಿನ್ನಲೆ ಒಂದಷ್ಟು ಹೊತ್ತು ಹೈಡ್ರಾಮವೇ ನಡೆದಿತ್ತು.
ಇನ್ಸ್ ಪೆಕ್ಟರ್ ಮೇಲಿನ ಸಿಟ್ಟಿಗೆ ವಾಕಿಂಗ್ ಮಾಡಿದ ಡಿಜಿಪಿ:
ಡಿಜಿಪಿ ಪಿ ರವೀಂದ್ರನಾಥ್ ರವರ ರಾಜೀನಾಮೆ ಅಂಗೀಕಾರವಾಗಿಲ್ಲ. ರವೀಂದ್ರನಾಥ್ ರವರು ವರ್ಗಾವಣೆಯಾಗಿದ್ದ ತರಬೇತಿ ವಿಭಾಗವೂ ಕೂಡ ಸಿಐಡಿಯಲ್ಲಿದೆ. ಯಾರನ್ನಾದರು ಭೇಟಿಯಾಗಬೇಕಿದ್ದರೆ ಯಾರನ್ನು ಭೇಟಿಯಾಗಬೇಕೋ ಅವರನ್ನ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿ ಪಡೆದ ಬಳಿಕ ಒಳಗೆ ಹೋಗಲು ಅನುವು ಮಾಡಿಕೊಡಲಾಗುತ್ತದೆ. ಸದ್ಯ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವ ಹಿನ್ನಲೆ ಹಿರಿಯ ಅಧಿಕಾರಿಗಳು ಸುಖಾಸುಮ್ಮನೆ ಯಾರನ್ನೂ ಒಳ ಬಿಡದಂತೆ ಆದೇಶ ನೀಡಿದ್ದರು. ಈ ಹಿನ್ನಲೆ ಸಿಐಡಿ ಕಚೇರಿಯಲ್ಲಿ ಸ್ವಲ್ಪ ಬಿಗಿಯಾದ ನಿಯಮಗಳಿವೆ. ಇತ್ತ ಆಪ್ ಕಾರ್ಯಕರ್ತರು ಪ್ರತಿಭಟನೆ ಮಾಡಲು ಬಂದಿದ್ದಾರೆಂಬ ಕಾರಣಕ್ಕೆ ಹೈಗ್ರೌಂಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಸ್ವಾಮಿಯವರನ್ನ ಆ ಜಾಗಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಅದಾಗಲೆ ಡಾ. ರವೀಂದ್ರನಾಥ್ ಅವರನ್ನ ಸಂಪರ್ಕಿಸಿದ್ದ ಆಪ್ ಕಾರ್ಯಕರ್ತರನ್ನು ಒಳ ಬಿಡುವಂತೆ ಡಾ. ರವೀಂದ್ರನಾಥ್ ಅವರು ಸೆಕ್ಯೂರಿಟಿ ಪೊಲೀಸರಿಗೆ ಸೂಚನೆ ನೀಡಿ ಒಳ ಹೋಗಿದ್ದರು. ಇತ್ತ ಸಿಐಡಿ ಹಿರಿಯ ಅಧಿಕಾರಿಗಳ ಆದೇಶದ ಪಾಲನೆ ಮಾಡ್ತಿದ್ದ ಪೊಲೀಸರು ಆಪ್ ಕಾರ್ಯಕರ್ತರನ್ನು ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಮಥಾಯಿ ಅವರನ್ನ ಒಳಗೆ ಬಿಡಲಿಲ್ಲ. ವಿಚಾರ ತಿಳಿದ ರವೀಂದ್ರನಾಥ್ ಅವರು ಗೇಟ್ ಬಳಿ ಬಂದು ಶಿವಸ್ವಾಮಿಯವರ ಮೇಲೆ ರೇಗಾಡಿದ್ದರು. ಸಸ್ಪೆಂಡ್ ಮಾಡೋದಾಗಿ ಹೇಳಿ ನಿಮ್ಮ ಮೇಲೆ ರಿಪೋರ್ಟ್ ಬರೀತಿನಿ ಎಂದು ಹೇಳಿ, ಸ್ಥಳದಲ್ಲೇ ಡಿಜಿಪಿ ಪ್ರವೀಣ್ ಸೂದ್ ಅವರಿಗೂ ಕರೆ ಮಾಡಿದರು.
ಇನ್ಸ್ ಪೆಕ್ಟರ್ ಮೇಲಿನ ಸಿಟ್ಟಿನಿಂದ ಕಾಲ್ನಡಿಯಲ್ಲೇ ಸಾಗಿದ ಹಿರಿಯ ಐಪಿಎಸ್ ಅಧಿಕಾರಿ
ಇನ್ಸ್ ಪೆಕ್ಟರ್ ಮೇಲಿನ ಸಿಟ್ಟಿನಿಂದಾಗಿ ಡಿಜಿ, ಐಜಿಪಿ ಪ್ರವೀಣ್ ಸೂದ್ ರವರಿಗೆ ಕರೆ ಮಾಡಿದ ರವೀಂದ್ರನಾಥ್ ರಿಪೋರ್ಟ್ ಬರೆಯಲು ಬರೋದಾಗಿ ಕಾಲ್ನಡಿಗೆಯಲ್ಲೇ ಸಿಐಡಿ ಕಚೇರಿಯಿಂದ ನೃಪತುಂಗ ರಸ್ತೆಯಲ್ಲಿರುವ ಡಿಜಿ ಕಚೇರಿಗೆ ಬಂದಿದ್ದರು. ಅಲ್ಲಿ ಡಿಜಿ ಇರದ ಕಾರಣ ಎಡಿಜಿಪಿ ಸಲೀಂ ಅವರಿಗೆ ಮೌಖಿಕವಾಗಿ ಹೇಳಿ ಸಂಜೆಯೊಳಗೆ ರಿಪೋರ್ಟ್ ಕಳಿಸೋದಾಗಿ ಹೇಳಿದ್ದಾರೆ. ಈ ಹಿಂದೆ ತಮ್ಮ ಮೇಲೆ ಕೆಲವು ಆರೋಪಗಳು ಬಂದಾಗಲು ಹಿರಿಯ ಐಪಿಎಸ್ ಅಧಿಕಾರಿ ಕೆಲವರ ವಿರುದ್ದ ದೂರು ನೀಡಲು ನಡೆದುಕೊಂಡು ಓಡಾಡಿದ್ದನ್ನು ಉಲ್ಲೇಖಿಸಬಹುದಾಗಿದೆ.